ಬೋಟಿಂಗ್ ಗೆ ಇಂದು ಚಾಲನೆ: ಆರ್ ಸಿ ಕೃಷ್ಣ ಬಾಜಪೇಯಿ ಘೋಷಣೆ

Upayuktha
0

ಅಪ್ಪನ ಕೆರೆಯಲ್ಲಿ ದೋಣಿ ವಿಹಾರದ ಸಡಗರಕ್ಕೆ ಕ್ಷಣ ಗಣನೆ



ಕಲಬುರಗಿ :  ಶರಣಬಸವೇಶ್ವರ ಕೆರೆ (ಅಪ್ಪನ ಕೆರೆ)ಯಲ್ಲಿ ಜ.13ರಂದು ಸಾಯಂಕಾಲ 4 ಗಂಟೆಗೆ ದೋಣಿ ವಿಹಾರ ಮತ್ತೆ ಪ್ರಾರಂಭಗೊಳ್ಳಲಿದೆ ಎಂದು ಶರಣ ಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ. 


ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಪ್ರಕೃತಿ ರಮಣೀಯ ತಾಣ ಶರಣಬಸವೇಶ್ವರ ಕೆರೆಯನ್ನು ಅತ್ಯಾಧುನಿಕ ವಿನ್ಯಾಸಗಳೊಂದಿಗೆ ನವೀಕರಣಗೊಳಿಸಲಾಗಿದ್ದು ಈಗ ಬೋಟಿಂಗ್ ನಡೆಸಲು ಸಜ್ಜು ಮಾಡಲಾಗಿದೆ. ಇದರಿಂದ ಪ್ರವಾಸಿಗರ ಹಾಗೂ ದೋಣಿ ವಿಹಾರಿಗಳ ಬಹುದಿನಗಳ ಕನಸು ಸಾಕಾರಗೊಳ್ಳಲಿದೆ . 


ಮೋಟಾರ್ ಬೋಟ್ - ಪೆಡಲ್ ಬೋಟ್ ಸಿದ್ಧ

ಬೋಟಿಂಗ್ ನಡೆಸಲು ಈಗಾಗಲೇ ಪರವಾನಿಗೆ ಲಭ್ಯವಾಗಿದ್ದು ಕೆರೆಯಲ್ಲಿ ಈಗ  11 ಪೆಡಲ್ ಬೋಟ್ (ಕಾಲ್ತುಳಿತದ ದೋಣಿ)

ಮೂರು ಮೋಟಾರ್ ಬೋಟ್ (ಯಂತ್ರ ಚಾಲಿತ ದೋಣಿ) ಸಹಿತ ಒಟ್ಟು 14 ಬೋಟ್ ಗಳು ಸಾರ್ವಜನಿಕರ ವಿಹಾರಕ್ಕಾಗಿ ಸಿದ್ಧವಾಗಿದೆ.ಕೆರೆಯಲ್ಲಿ ದೋಣಿ ವಿಹಾರ ನಡೆಸುವವರಿಗೆ ನಿರೀಕ್ಷಣಾ ಸ್ಥಳ, ಟಿಕೆಟ್ ಕೌಂಟರ್, ಸುರಕ್ಷತಾ ಕಿಟ್ ಎಲ್ಲವೂ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ .


ಕೆರೆಗೆ ಹೊಸ ಮೆರುಗು

ಶರಣಬಸವೇಶ್ವರ ಕೆರೆ ಈಗ ಪೂರ್ಣ ಪ್ರಮಾಣದಲ್ಲಿ ಸೌಂದರೀಕರಣ  ಹೊಂದಿದ್ದು ಇಡೀ ಆವರಣದಲ್ಲಿ ಪ್ರತಿಯೊಂದು ಕಡೆಯಲ್ಲಿ ಕೂಡ ಆಕರ್ಷಕ ಮನರಂಜನಾತ್ಮಕ ಐಟಂಗಳೊಂದಿಗೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. 


ಪಕ್ಷಿಪ್ರಿಯರು, ಪ್ರಕೃತಿ ಪ್ರಿಯರು, ಸ್ವಾದಿಷ್ಟ ಆಹಾರ ಪ್ರಿಯರನ್ನು  ಮತ್ತು ಪ್ರವಾಸಿಗರನ್ನು ಸಂತಸಪಡಿಸುವ ತಾಣವಾಗಿ ಎಲ್ಲರನ್ನು ಸ್ವಾಗತಿಸುತ್ತಿದೆ .ಮಕ್ಕಳು ಹಾಗು ಹಿರಿಯರು ಈಗ ದೋಣಿ ವಿಹಾರದ ಮೂಲಕ ಕೆರೆಯಲ್ಲಿ ಪ್ರಕೃತಿ ಸೌಂದರ್ಯ ಆಸ್ವಾದಿಸಿ ಆನಂದ ಸವಿಯಲು ಸುವರ್ಣಾವಕಾಶ ಸಿಗಲಿದೆ ಎಂದು ಬಾಜಪೇಯಿ ತಿಳಿಸಿದರು.


ಇನ್ನಷ್ಟು ಬೋಟ್ ಗಳ ಸೇರ್ಪಡೆ

ನಗರ ಮಧ್ಯದಲ್ಲಿ ದ್ವೀಪವನ್ನು ಒಳಗೊಂಡ ಅಪ್ಪನ ಕೆರೆಯಲ್ಲಿ ನೀರಿನ ಸಂಗ್ರಹ ಚೆನ್ನಾಗಿದ್ದು ಶೀಘ್ರದಲ್ಲೇ ಬನಾನ ರೈಡ್ ಬೋಟ್ ಹಾಗೂ ವಾಟರ್ ಸ್ಕೂಟರ್ ಬೋಟ್ ಗಳನ್ನು ಸೇರ್ಪಡೆಗೊಳಿಸಲಾಗುವುದು. ಇದರಿಂದ ದೋಣಿ ವಿಹಾರಿಗಳಿಗೆ ಇನ್ನಷ್ಟು ಖುಷಿ ಸಿಗಲಿದೆ.


ಶಾಲೆಗಳಿಂದ ಪ್ರವಾಸ ಕೈಗೊಳ್ಳುವವರಿಗೆ ಕೆರೆ ನೆಚ್ಚಿನ ತಾಣವಾಗಲಿದೆ. ಸಾರ್ವಜನಿಕರು  ದೋಣಿ ವಿಹಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದ್ದಾರೆ.


ಕಲ್ಬುರ್ಗಿ ಜಿಲ್ಲೆಯ ಪ್ರವಾಸಿ ನಕ್ಷೆಗೆ ಕೆರೆ ಸೇರ್ಪಡೆ

ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಬಾಜಪೇಯಿ ಅವರ ಸತತ ಪ್ರಯತ್ನದಿಂದ ಕೋವಿಡ್ ಸಂದರ್ಭದಲ್ಲಿ ಸ್ಥಗಿತವಾಗಿದ್ದ  ಕೆರೆಯನ್ನು ಪುನರ್ನವೀಕರಣಗೊಳಿಸಲಾಗಿದೆ . ಕೆರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರು ಈಗಾಗಲೇ ಲೋಕಾರ್ಪಣೆ ಮಾಡಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ಇದೀಗ ಬೋಟಿಂಗ್ ಸೇರ್ಪಡೆಯು ಮತ್ತಷ್ಟು ಖುಷಿಯ ವಿಚಾರ ಎಂದು ಪ್ರಾಧಿಕಾರದ ತಾಂತ್ರಿಕ ಸಲಹೆಗಾರ ಭರತ್ ಭೂಷಣ್ ತಿಳಿಸಿದ್ದಾರೆ. 


ಬೋಟಿಂಗ್ ಪ್ರಾರಂಭವಾಗುವುದರಿಂದ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು ಮೂವರು ಸುರಕ್ಷಾ ವೀಕ್ಷಣಾಧಿಕಾರಿಗಳನ್ನು ಯೋಜಿಸಲಾಗಿದೆ. ಬೋಟಿಂಗ್ ಗೆ ಟಿಕೆಟ್ ಶುಲ್ಕ ವಿಧಿಸಿದ್ದು ಪೆಡಲ್ ಬೋಟ್ ಗೆ ಒಬ್ಬರಿಗೆ 50 ರೂ., ಮೋಟಾರ್ ಬೋಟಿಂಗ್ ಗೆ 80 ರಿಂದ 100 ರೂ. ನಿಗದಿಪಡಿಸಲಾಗಿದೆ. 


ಶುಚಿ-ರುಚಿಯಾದ ತಿಂಡಿ ತಿನಿಸುಗಳು ಕೆರೆಯ ಆವರಣದಲ್ಲಿ ಫುಡ್ ಕೋರ್ಟ್ ಲಭ್ಯವಿದ್ದು ಪ್ರವಾಸಿಗರಿಗೆ ಅನುಕೂಲ ವಾಗಲಿದೆ ಎಂದರು. ಈ ಎಲ್ಲ ಸೌಲಭ್ಯಗಳಿಂದಾಗಿ ಅಪ್ಪನ ಕೆರೆಯು ಈಗ ಕಲಬುರ್ಗಿ ಜಿಲ್ಲೆಯ ಪ್ರವಾಸಿ ನಕ್ಷೆಯಲ್ಲಿ ಸೇರ್ಪಡೆಗೊಂಡಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top