ಯಕ್ಷಗಾನವೊಂದು ಜೀವಂತ ಕಲೆ, ಉಳಿಸಿಕೊಳ್ಳೋಣ: ಅಭಯಚಂದ್ರ ಜೈನ್

Upayuktha
0


ಮಂಗಳೂರು: ಯಕ್ಷಗಾನವು ಜೀವಂತ ಕಲೆ. ಕಲಾಶ್ರಯವನ್ನು ಬಯಸುತ್ತಾ ಅನೇಕ ಕಲಾವಿದರನ್ನು ರಂಗಸ್ಥಳಕ್ಕೆ ಪರಿಚಯಿಸುತ್ತದೆ. ಕಲಾವಿದರಲ್ಲಿನ ಸಂಪೂರ್ಣ ಪ್ರತಿಭೆಯನ್ನು ಹೊರಹಾಕಬಲ್ಲ ಸ್ವತಂತ್ರ ಕಲೆ. ಇದರಲ್ಲೇ ಸಂತೃಪ್ತಿ ಪಡೆದ ಕಲಾವಿದರ ಸಂಖ್ಯೆ ಅಸಂಖ್ಯ. ಈ ಕಲೆಯ ಉಳಿವಿಗಾಗಿ ಯಕ್ಷ ಮಿತ್ರರು, ಕುಡುಪು ಒಂದೂವರೆ ದಶಕಕ್ಕೂ ಮೀರಿ ಇಲ್ಲಿನ ಷಷ್ಠಿ ಉತ್ಸವದಂದು ಯಕ್ಷಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಸಂಪ್ರದಾಯದಂತೆ ಇಂದೂ ಒಬ್ಬ ಶ್ರೇಷ್ಠ ಕಲಾವಿದನನ್ನು ಗೌರವಿಸಿ-ಸನ್ಮಾನಿಸಿರುವುದು ಶ್ಲಾಘನೀಯ. ಇದು ಈ ಕ್ಷೇತ್ರದ ಪ್ರಸಾದ. ಸಂಸ್ಥೆಯ ಉನ್ನತಿಗೂ ಇದು ಕಾರಣವಾಗುತ್ತದೆ. ಉಭಯತ್ರರಿಗೂ ಶುಭವಾಗಲಿ ಎಂದು ಮೂಡಬಿದ್ರೆಯ ರಾಜಕೀಯ ನೇತಾರ, ಧಾರ್ಮಿಕ ಮುಂದಾಳು ಅಭಯಚಂದ್ರ ಜೈನ್ ಯಕ್ಷ ಮಿತ್ರರು ಕುಡುಪು ರವರ ಷಷ್ಠಿ ಮಹೋತ್ಸವ ಯಕ್ಷಗಾನ ವೇದಿಕೆಯಲ್ಲಿ ನುಡಿದರು.


ತಾನು ಕಟೀಲಿನ ಮೇಳದಲ್ಲಿ 35 ವರ್ಷಕ್ಕೂ ಮಿಕ್ಕಿ ತಿರುಗಾಟಗಳನ್ನು ನಡೆಸಿದ್ದೇನೆ. ನಿರಂತರ ಯಕ್ಷಯಾನ ಮತ್ತು ಮಹಾನ್ ಕಲಾವಿದರ ಒಡನಾಟ ನನಗೆ ತುಂಬಾ ಹೆಸರನ್ನು ತಂದುಕೊಟ್ಟಿದೆ. ಇಂದು ಕುಡುಪುವಿನ ಯಕ್ಷ ಮಿತ್ರರು ನನ್ನನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಅತ್ಯಂತ ಪ್ರೀತಿಪೂರ್ವಕವಾಗಿ ಸ್ವೀಕರಿಸುತ್ತೇನೆ. ಇನ್ನು ಮುಂದೆಯೂ ಈ ವೇದಿಕೆಯಲ್ಲಿ ಉತ್ತಮ ಯಕ್ಷಕಲಾವಿದರ ಸನ್ಮಾನ ನಡೆಯಲಿ. ಕಲೆ ಬೆಳೆಯಲಿ ಎಂದು ಸನ್ಮಾನ ಸ್ವೀಕರಿಸಿದ, ದೇವಿ ಭಟ್ರು ಎಂದೇ ಖ್ಯಾತಿಯನ್ನು ಪಡೆದ ಸರವು ರಮೇಶ ಭಟ್ಟರು ಸನ್ಮಾನಕ್ಕೆ ಉತ್ತರಿಸಿದರು.


ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ವೇ. ಮೂ. ಕೆ. ನರಸಿಂಹ ತಂತ್ರಿಗಳ ಗೌರವ ಉಪಸ್ಥಿತಿಯಿತ್ತು. ಕುಡುಪು ಶ್ರೀಕೃಷ್ಣರಾಜ ತಂತ್ರಿಗಳು ಸಂಸ್ಥೆಯ ಬಗ್ಗೆ ಪ್ರಸ್ತಾವನೆಯ ಮಾತುಗಳನ್ನಾಡಿದರು. ಕುಡುಪುವಿನ ಜನಾರ್ಧನ ಕೆ. ವಾಮಂಜೂರು ಅಮೃತೇಶ್ವರ ದೇವಸ್ಥಾನದ ಚಂದ್ರಹಾಸ ರೈ, ಪದ್ಮರಾಜ್ ಎಕ್ಕಾರ್, ಸುಧಾಕರ ರಾವ್ ಪೇಜಾವರ್ ಅತಿಥಿಗಳಾಗಿದ್ದರು.


ಯಕ್ಷಗುರು 'ಕಲಾವಿದ ವರ್ಕಾಡಿ ರವಿ ಅಲೆವೂರಾಯ ಅಭಿನಂದನಾ ಭಾಷಣ ಮಾಡಿದರು. ಕುಡುಪು ರಾಘವೇಂದ್ರ ಭಟ್ ಸನ್ಮಾನ ಪತ್ರ ವಾಚಿಸಿದರು. ಅಧ್ಯಾಪಕ, ಸಂಘಟಕ ಕುಡುಪು ವಾಸುದೇವ ರಾವ್ ನಿರ್ವಹಿಸಿದರು.

ಸಭೆಯ ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ, ಯಕ್ಷಮಿತ್ರರು ಕುಡುಪು ರವರ ನೇತೃತ್ವದಲ್ಲಿ ಇಂದ್ರಜಿತು ಕಾಳಗ ಎಂಬ ಯಕ್ಷಗಾನ ಬಯಲಾಟ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top