19 ದಿನದ ಬಳಿಕ ಸಹಜ ಸ್ಥಿತಿಗೆ ಬೀಚ್! ಜಲಕ್ರೀಡೆಗೆ ಅವಕಾಶ
ಕಾರವಾರ: ಅದು ರಾಜ್ಯದ ಜನರ ಪಾಲಿನ ಸ್ವರ್ಗದಂತಹ ಸ್ಥಳ. ಈಶ್ವರನ ದರ್ಶನದ ಜೊತೆಗೆ ಸಮುದ್ರದ ಕಿನಾರೆಯಲ್ಲಿ ಈಜಾಡಿ ಖುಷಿ ಪಡುತ್ತಿದ್ದರು. ಆದರೆ ಅದೊಂದು ದುರ್ಘಟನೆ ಅಲ್ಲಿ ಸೂತಕದ ವಾತಾವರಣ ನಿರ್ಮಾಣವಾಗುವಂತೆ ಮಾಡಿತ್ತು. ಆದರೀಗ 19 ದಿನಗಳ ಬಳಿಕ ಈಗ ಸಹಜ ಸ್ಥಿತಿಗೆ ಮರಳುತ್ತಿದೆ.
ಇಂದಿನಿಂದ ಜಲಕ್ರೀಡೆಗೆ ಜಿಲ್ಲಾಡಳಿತ ಅವಕಾಶ:
ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ. ರಾಜ್ಯದ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುವ ಕಡಲ ಕಿನಾರೆ. ಒಂದೆಡೆ ದೇವರು, ಮತ್ತೊಂದೆಡೆ ಪ್ರಕೃತಿ ದೇವಿಯ ಸೊಬಗನ್ನು ಸವಿಯುವ ಸ್ವರ್ಗ ಸದೃಶ ಸ್ಥಳವಿದು.
ಇಂತಹ ಸ್ಥಳದಲ್ಲಿ ಕಳೆದ 19 ದಿನಗಳಿಂದ ಸೂತಕದ ಛಾಯೆ ಆವರಿಸಿತ್ತು. ಶಾಲಾ ಪ್ರವಾಸಕ್ಕೆ ಬಂದಿದ್ದಾಗ ಕೋಲಾರ ಮೂಲದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಸಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಬಳಿಕ ಕಡಲತೀರಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಇದೀಗ ಅಧಿಕಾರಿಗಳ ಮೀನಮೇಷದ ನಂತರ ಇಂದಿನಿಂದ ಕಡಲತೀರ ಪ್ರವಾಸಿಗರಿಗೆ ಮುಕ್ತವಾಗಿದೆ. ಕಡಲತೀರದಲ್ಲಿ ಡೇಂಜರ್ ಜೋನ್ ಮತ್ತು ಸೇಫ್ ಜೋನ್ ಎಂದು ಎರಡು ವಿಭಾಗ ಮಾಡಿ ಗುರುತಿಸಲಾಗಿದೆ. ಜಿಲ್ಲಾಡಳಿತ ಗುರುತಿಸಿದ ಸೇಫ್ ಜೋನ್ನಲ್ಲಿ ಮಾತ್ರ ಪ್ರವಾಸಿಗರು ಈಜಾಡಬಹುದು.
ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಮತ್ತೆ ವ್ಯಾಪಾರ ನಡೆಸಲು ಅವಕಾಶ ನೀಡಿದೆ. ಬೀಚ್ ಓಪನ್ ಆಗಿರೋದು ಖುಷಿ ಕೊಟ್ಟಿದೆ ಎಂದು ಸ್ಥಳೀಯ ವ್ಯಾಪಾರಿ ಮಹ್ಮದ್ ಸಲೀಂ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಮುರುಡೇಶ್ವರ ಕಡಲತೀರಕ್ಕೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿದ್ದರು. ಆದ್ರೆ ಪ್ರವಾಸಿಗರಿಗೆ ನಿಷೇಧ ಇದ್ದುದರಿಂದ ಜಿಲ್ಲಾಡಳಿತವನ್ನು ಬೈದುಕೊಳ್ಳುತ್ತ ವಾಪಸ್ ಆಗುತ್ತಿದ್ದರು. ಇದರಿಂದ ಕೊನೆಗೂ ಗಾಢ ನಿದ್ರೆಯಿಂದ ಎಚ್ಚೆತ್ತು ಕೆಲ ಮುಂಜಾಗ್ರತಾ ಕ್ರಮಗಳೊಂದಿಗೆ ಇಂದಿನಿಂದ ಕಡಲ ಕಿನಾರೆಯನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿದೆ.
ಕಡಲತೀರಕ್ಕೆ ಪ್ರವಾಸಿಗರಿಗೆ ಮುಕ್ತ ಅವಕಾಶ ಸಿಕ್ಕರೂ ಕೂಡಾ ಜಿಲ್ಲಾಡಳಿತ ಗುರುತುಪಡಿಸಿದ ಜಾಗದಲ್ಲೆ ಈಜಾಡಿ ಮೋಜು ಮಸ್ತಿ ಮಾಡಬೇಕಿದೆ. ಸ್ವಲ್ಪ ಜಾಗರೂಕತೆ ತಪ್ಪಿದರೂ ಮತ್ತೆ ಅನಾಹುತ ಸಂಭವಿಸುವ ಸಾಧ್ಯತೆ ಇದ್ದು, ಪ್ರವಾಸಿಗರೂ ಕೂಡ ಮುಂಜಾಗ್ರತೆ ವಹಿಸುವುದು ಅಗತ್ಯವಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ