ಉಜಿರೆ ಎಸ್.ಡಿ.ಎಂ. ಕಾಲೇಜು ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ
ಉಜಿರೆ, ಡಿ. 6: ಉಜಿರೆ ಶ್ರೀ ಧ. ಮಂ. ಕಾಲೇಜಿನ ಎನ್ನೆಸ್ಸೆಸ್ ಘಟಕಗಳ ಒಂದು ವಾರದ ವಾರ್ಷಿಕ ವಿಶೇಷ ಶಿಬಿರವು ಬಂಗಾಡಿಯ ಇಂದಬೆಟ್ಟು (ಕಲ್ಲಾಜೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದು, ಮೊದಲ ದಿನವಾದ ಡಿ. 5ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ನಿಕಟಪೂರ್ವ ಕಾರ್ಯದರ್ಶಿ ದಿ. ಡಾ. ಬಿ. ಯಶೋವರ್ಮ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ನಾವೂರಿನ ಆರೋಗ್ಯ ಕ್ಲಿನಿಕ್ ನ ವೈದ್ಯ ಪ್ರದೀಪ್ ನಾವೂರು ಅವರು, “ಅಹಂಕಾರ ಭಾವ ಎಂದಿಗೂ ನಮ್ಮಲ್ಲಿ ಬರಬಾರದು ಎಂಬ ಗೀತೆಯ ಸಾರವನ್ನು ಆದರ್ಶವಾಗಿ ತೆಗೆದುಕೊಂಡು ತನ್ನ ಜೀವನದಲ್ಲಿ ಆಳವಾಗಿ ಅಳವಡಿಸಿಕೊಂಡಿದ್ದ ವ್ಯಕ್ತಿ ಡಾ. ಬಿ. ಯಶೋವರ್ಮ” ಎಂದರು.
“ಯಶೋವರ್ಮ ಅವರು ಸದಾ ಹಸನ್ಮುಖಿಯಾಗಿದ್ದವರು. ಒಮ್ಮೆ ಅವರ ಬಳಿ ಮಾತನಾಡಿದರೆ ಸಾಕು, ಅದೆಷ್ಟೋ ವರ್ಷಗಳ ಪರಿಚಯ ಇದೆಯೇನೋ ಎಂದೆನಿಸುವಂತಿರುತ್ತಿತ್ತು. ಅವರು ಇಂದು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೇ ಇದ್ದರೂ ಅವರ ನೆನಪುಗಳೇ ನಮಗೆ ಎಂದಿಗೂ ಸ್ಫೂರ್ತಿ. ಅವರು ಬದುಕಿದ ರೀತಿ ನಮಗೆಲ್ಲರಿಗೂ ಆದರ್ಶ” ಎಂದರು.ತಮ್ಮ ವಿದ್ಯಾರ್ಥಿ ಜೀವನದಲ್ಲಿ ಭಾಗವಹಿಸಿದ ವಿವಿಧ ಶಿಬಿರಗಳ ನೆನಪುಗಳನ್ನು ಹಂಚಿಕೊಂಡರು.
ಅತಿಥಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮತ್ತು ಬೆಳ್ತಂಗಡಿ ಲಯನ್ಸ್ ಕ್ಲಬ್ ಕೋಶಾಧಿಕಾರಿ ಅಮಿತಾನಂದ ಹೆಗ್ಡೆ ಮಾತನಾಡಿದರು. “ಯಶೋವರ್ಮ ಅವರದ್ದು ಬಹಳ ದೊಡ್ಡ ವ್ಯಕ್ತಿತ್ವ. ಅವರ ಜನ್ಮಸ್ಮರಣೆ ಕಾರ್ಯಕ್ರಮ ನಮ್ಮ ಊರಿನ ಶಾಲೆಯಲ್ಲಿ ನಡೆಯುತ್ತಿರುವುದು ನಮಗೆ ಬಹಳ ಹೆಮ್ಮೆಯ ವಿಷಯ” ಎಂದರು.
ವಿದ್ಯಾರ್ಥಿಗಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಸಿಕ್ಕಿರುವ ಅವಕಾಶ ಬಹಳ ಉತ್ತಮವಾದುದು. ಹಾಗಾಗಿ, ಇಲ್ಲಿ ಸಿಗುವ ಪಾಠಗಳನ್ನು, ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಖಂಡಿತ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.
ಇನ್ನೋರ್ವ ಅತಿಥಿ, ಉದ್ಯಮಿ ರಘುರಾಮ ಶೆಟ್ಟಿ ಶುಭ ಹಾರೈಸಿದರು. ಡಾ. ಬಿ. ಯಶೋವರ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿದರು. ಸ್ವಯಂಸೇವಕ ವಂಶಿ ನಿರೂಪಿಸಿದರು. ಸ್ವಯಂಸೇವಕಿ ನಿಶಾ ಧನ್ಯವಾದಗೈದರು. ಸ್ವಯಂಸೇವಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಗ್ರಾಮ ಸಮೀಕ್ಷೆ - ಸಂವಾದ ಕಾರ್ಯಕ್ರಮ
ಇದಕ್ಕೂ ಮೊದಲು, ಶಿಬಿರದ ಉದ್ಘಾಟನ ಸಮಾರಂಭದ ಬಳಿಕ ಗ್ರಾಮ ಸಮೀಕ್ಷೆ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಉಜಿರೆಯ ಶ್ರೀ ಧ. ಮಂ. ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಧನೇಶ್ವರಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಶಿಬಿರದ ಶೀರ್ಷಿಕೆ ‘ಯೂತ್ ಫಾರ್ ಮೈ ಭಾರತ್ - ಯೂತ್ ಫಾರ್ ಡಿಜಿಟಲ್ ಲಿಟ್ರಸಿ’ ಸಂಬಂಧಿಸಿದಂತೆ ಅವರು ಮಾತನಾಡಿದರು.ಎನ್ನೆಸ್ಸೆಸ್ ಸ್ವಯಂಸೇವಕರಿಗೆ ಸಮೀಕ್ಷೆ ಮತ್ತು ಸಂದರ್ಶನದ ನಡುವಿನ ವ್ಯತ್ಯಾಸ ತಿಳಿಸಿಕೊಟ್ಟರು.
ಯೋಜನಾಧಿಕಾರಿ ಪ್ರೊ. ದೀಪ ಆರ್. ಪಿ. ಉಪಸ್ಥಿತರಿದ್ದರು.
ಸ್ವಯಂಸೇವಕರಾದ ಶ್ರೇಯಾಂಕ್ ಸ್ವಾಗತಿಸಿ, ಕವನ ನಿರೂಪಿಸಿ, ಮಧುರ ವಂದಿಸಿದರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ