ಪುತ್ತೂರು: ಇತ್ತೀಚೆಗೆ ಅಗಲಿದ ಜಿಲ್ಲೆಯ ಹಿರಿಯ ನೃತ್ಯ ಗುರು ನಾಟ್ಯಾಲಯದ ವಿದುಷಿ ಕಮಲ ಭಟ್ ರವರಿಗೆ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ (ರಿ) ವತಿಯಿಂದ ಕದ್ರಿಯ ನೃತ್ಯ ವಿದ್ಯಾಲಯದ ಸಭಾಂಗಣದಲ್ಲಿ ನುಡಿನಮನವನ್ನು ಸಲ್ಲಿಸಲಾಯಿತು.
ಉಳ್ಳಾಲ ಮೋಹನ ಕುಮಾರರ ಹಿರಿಯ ಶಿಷ್ಯೆಯಾಗಿ ಶಾಸ್ತ್ರೀಯ ಚೌಕಟ್ಟಿನಲ್ಲಿ ಪಂದನಲ್ಲೂರು ಶೈಲಿಯ ನೃತ್ಯ ಭಾಣಿಯನ್ನು ಕರಗತಗೊಳಿಸಿಕೊಂಡು, ನಗರದಲ್ಲಿ ಸುಮಾರು 45 ವರ್ಷಗಳ ಹಿಂದೆ ನಾಟ್ಯಾಲಯ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ನೃತ್ಯ ಕಲೆಯನ್ನು ನಗರದಲ್ಲಿ ಪಸರಿಸಿದ ಕೀರ್ತಿ ಕಮಲ ಭಟ್ ರವರಿಗೆ ಸಲ್ಲಲೇಬೇಕು ಎಂದು ವಿದ್ವಾನ್ ಚಂದ್ರಶೇಖರ ನಾವಡ ಹೇಳಿದರು.
ಕಮಲ ಭಟ್ ರವರ ಹಿರಿಯ ಶಿಷ್ಯೆ ವಿದುಷಿ ಪ್ರತಿಮಾ ಶ್ರೀಧರ್ ಮಾತನಾಡುತ್ತಾ, ಗುರು ಮತ್ತು ತಾಯಿಯ ಪ್ರೀತಿಯನ್ನು ಕೊಟ್ಟು ನನ್ನನ್ನು ಪ್ರಬುದ್ಧ ಕಲಾವಿದೆಯನ್ನಾಗಿಸಿದ್ದರು. ಅಲ್ಲದೆ ನನ್ನಂತೆ ಹಲವಾರು ಕಲಾವಿದರನ್ನು ಸಮಾಜಕ್ಕೆ ಕೊಟ್ಟ ಕೀರ್ತಿ ಗುರುಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
ಎಲ್ಲರೊಂದಿಗೂ ಸದಾ ನಗುವಿನ ಮಾತುಗಳಿಂದಲೇ ಮಾತನಾಡಿಸುವ ಸರಳತೆ, ಕಲಾ ಸಹೃದಯತೆ, ಸಜ್ಜನಿಕೆ, ನಮಗೆಲ್ಲರಿಗೂ ಆದರ್ಶ ಎಂದು ಅವರ ಒಡನಾಡಿ ಪರಿಷತ್ ಉಪಾಧ್ಯಕ್ಷೆ ವಿದುಷಿ ರಾಜಶೀ ನುಡಿದರು.
ಪರಿಷತ್ ನ ಅಧ್ಯಕ್ಷ ಯು ಎಸ್ ಪ್ರವೀಣ್, ನೃತ್ಯ ಗುರುಗಳಾದ ಸುಲೋಚನಾ ಭಟ್, ಗೀತಾ ಸರಳಾಯ, ಭಾರತೀ ಸುರೇಶ್, ಭ್ರಮರಿ ಶಿವಪ್ರಕಾಶ್, ಸುದರ್ಶನ್ , ವಿದ್ಯಾ ಕುಂಬ್ಳೆ, ಕೋಶಾಧಿಕಾರಿ ಸುರೇಶ್ ಅತ್ತಾವರ್, ಸೌಮ್ಯ ಸುಧೀಂದ್ರ, ಸುಮಂಗಲ ರತ್ನಾಕರ್, ಸಂಘಟನಾ ಕಾರ್ಯದರ್ಶಿ ಶ್ರೀಧರ ಹೊಳ್ಳ ಮೊದಲಾದವರು ನುಡಿನಮನ ಸಲ್ಲಿಸಿದರು. ಕಾರ್ಯದರ್ಶಿ ಸುಧೀರ್ ಕೊಡವೂರು ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ