ತುಂಗಾ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸುರಿದು, ತರ್ಪಣ ಬಿಟ್ಟು, ಮಣ್ಣು ಮುಚ್ಚಿ ಸಮಾಧಿ ಕಟ್ಟಿದ ಅರಣ್ಯ ಇಲಾಖೆ

Upayuktha
0



ದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿನ (ಎಕೋ ಸೆನ್ಸಿಟಿವ್ ಏರಿಯಾ- ESA) ವ್ಯಾಪ್ತಿಯಲ್ಲಿ ಬರುವ, ನರಸೀಪುರ ಎಂಬ ಹಳ್ಳಿಯಲ್ಲಿನ ತುಂಗಾ ನದಿಗೆ, ಅಲ್ಲೇ ಇರುವ 'ನರಸೀಪುರ ಅರಣ್ಯ ಇಲಾಖೆಯ ಸಸ್ಯಕ್ಷೇತ್ರ- ನರ್ಸರಿಯವರು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕಾರ ಮಾಡಿ ಪುಣ್ಯ ಕಟ್ಟಿಕೊಂಡ ಕತೆಯ ಮೊದಲ ಭಾಗ!


ಮುಂದುವರೆದು, ನರ್ಸರಿಯ ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಯ ಬುಡದಲ್ಲಿ ಹಾಕಿದ್ದನ್ನು ಸಾರ್ವಜನಿಕರು ಪ್ರಶ್ನೆ ಮಾಡಿದ ತಕ್ಷಣ,  ಉಸಿರಾಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯ ರಾಶಿಗೆ, ಪೂರ್ಣ ಸದ್ಗತಿ ಕೊಡಿಸುವ ಹೊಣೆ ಹೊತ್ತ, ಅಪರ ಕ್ರಿಯೆ ಮಾಡುವ, ಪರಿಸರ ಸಂರಕ್ಷಕರಾದ, ಅರಣ್ಯ ಇಲಾಖಾ ನರ್ಸರಿಯವರು, ಮೊದಲು ಹಾಕಿದ ಪ್ಲಾಸ್ಟಿಕ್ ತ್ಯಾಜ್ಯದ ಮೇಲೆ ಮಣ್ಣು ಹಾಕಿ ಮುಚ್ಚಿ ಹಾಕಿದ್ದು! ಪುಣ್ಯ ಕತಾ ಕೋಟಿಯ ಎರಡನೇ ಭಾಗ!!


**


ಕೆಲವೇ ದಿನಗಳ ಹಿಂದಿ ಇದೇ ತುಂಗಾ ನದಿಯ ಮತ್ತೊಂದು ದಡದ ಕೆಲವೇ ಮೀಟರ್ ದೂರದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ ಮಾಡಿ, ನದಿ ಸ್ವಚ್ಛವಾಗಿಡಲು ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಗಿತ್ತು. ನದಿಯ ಎರಡೂ ಬದಿಗಳಲ್ಲಿ ಪಾದಯಾತ್ರೆ ಮಾಡಬೇಕಿತ್ತೋ ಏನೋ ಗೊತ್ತಿಲ್ಲ! ಜಾಗೃತಿಯ ಮಾತುಗಳು ನದಿಯ ಮತ್ತೊಂದು ದಡದವರಿಗೆ ಕೇಳಿಸಲೇ ಇಲ್ಲ ಅನಿಸುತ್ತೆ!?  


ಸರಕಾರದ ಅರಣ್ಯ ಇಲಾಖೆಯ ನರಸೀಪುರದ ನರಸೀಪುರ ಅರಣ್ಯ ಇಲಾಖೆ ಸಸ್ಯಕ್ಷೇತ್ರ ದವರು (ನರ್ಸರಿ) ಲೋಡ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಯ ಪಕ್ಕಕ್ಕೆ ಸುರಿದು, ಅದರ ಮೇಲೆ ಮಣ್ಣು ಸುರಿದು, ಬುಟ್ಟಿ ಬದಿಗಿಟ್ಟು ಸೋಪ್ ಹಾಕಿ ಕೈ ತೊಳೆದುಕೊಂಡು ಸ್ವಚ್ಛರಾಗಿದ್ದಾರೆ!


ಆದರೆ ಈಗ ಕಲ್ಮಶವಾಗುತ್ತಿರುವುದು ತುಂಗಾ ನದಿಯ ಜೀವ ಜಲ!


**


ಅರಣ್ಯ ಇಲಾಖೆಯ ಅಪರ ಅಧಿಕಾರಿಗಳಿಗೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕಾರ ಮಾಡುವ, ಪಂಚ ಭೂತಗಳಲ್ಲಿ ಲೀನವಾಗಿಸುವ ಈ ಸಾಂಪ್ರದಾಯಿಕ ಮಹಾಲಯ (ಮಾಲಯ) ಅಪರ ಪದ್ದತಿಯ ಬಗ್ಗೆ ಒಂದು ಅಷ್ಟ ಅಮಂಗಳ ಪ್ರಶ್ನೆ!!:


1) ಪ್ಲಾಸ್ಟಿಕ್ ತ್ಯಾಜ್ಯಕ್ಕೆ, ಮೇಲೆ ಹೇಳಿದಂತೆ ಮಾಡಲ್ಪಟ್ಟ, ಮೋಕ್ಷ ಕರುಣಿಸುವ ಶಾಸ್ತ್ರೋಕ್ತ ವಿಧಾನವಲ್ಲದೆ, ಬೇರೆ ವಿಧಿ ವಿಧಾನಗಳು ಅರಣ್ಯ ಇಲಾಖೆಯ ಧರ್ಮ ಶಾಸ್ತ್ರದಲ್ಲಿ ಇಲ್ಲವಾ!?


2) ನಾಳೆ ಮಳೆ ಬಂದು ನದಿಯ ನೀರಿನ ಮಟ್ಟ ಏರಿ ಹರಿಯುವಾಗ, ಪ್ಲಾಸ್ಟಿಕ್‌ನ ಪಾರ್ಥೀವ ಶರೀರಗಳು, ಮುಚ್ಚಿರುವ ಕುಂಕುಮ ಬಣ್ಣದ ಮಣ್ಣು ಸಮೇತವಾಗಿ ತುಂಗಾ ನದಿಯಲ್ಲಿ ಹರಿದು ಮುಂದಕ್ಕೆ ಹೋಗುವುದಿಲ್ಲವಾ!?  


3) ಈ ಪ್ಲಾಸ್ಟಿಕ್ ತ್ಯಾಜ್ಯದ ಅಸ್ತಿ ಪಂಜರಗಳ ಮೈಕ್ರೋ ಕಣಗಳು ಜಲಚರಗಳ, ನದಿಯಂಚಿನ ಜೀವಿಗಳ, ನದಿಯಂಚಿನ ಮಾನವ ಜೀವಿಗಳ ಉದರ ಸೇರುವ ಸಾಧ್ಯತೆ ಇಲ್ಲದಂತೆ ಸೂಕ್ತ ಮಂತ್ರ ಪಠಣಗಳನ್ನು ನರಸೀಪುರದಲ್ಲಿ ಅಂತ್ಯಕ್ರಿಯೆ ಸಂದರ್ಭದಲ್ಲಿ ಪಠಿಸಲಾಗಿದೆಯಾ!?


4) ಎಲ್ಲ ನರ್ಸರಿಗಳಲ್ಲೂ ಪ್ಲಾಸ್ಟಿಕ್ ತ್ಯಾಜ್ಯದ ಸದ್ಗತಿಗೆ ಇದೇ ರೀತಿಯ ಅಪರ ಕ್ರಿಯೆ ಮಾಡುವ ಕ್ರಿಯಾ ವಿಧಿಗಳ ನಿಯಮವೇ (SOP ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಇರುವುದಾ!?


5) ಎಷ್ಟು ವರ್ಷಗಳಿಂದ ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಈ ಕ್ರಮದ ತಿಥಿ, ಕ್ರಿಯೆ, ವೈಕುಂಠ ಮಾಡಲಾಗುತ್ತಿದೆ!?


6) ಉಸಿರು ನಿಲ್ಲಿಸಿ, ಅಸು ನೀಗಿದ ಪ್ಲಾಸ್ಟಿಕ್ ತ್ಯಾಜ್ಯ ಶರೀರವನ್ನು 'ಸರಕಾರಿ ಕೆಲಸ ದೇವರ ಕೆಲಸ' ಎಂದು ಪಲಕ ಬರೆದು ಕಾರ್ಯ ನಿರ್ವಹಿಸುವ ಗ್ರಾಮ ಪಂಚಾಯತಿಯಲ್ಲಿನ ಸಂಗ್ರಹ, ಸಂಸ್ಕರಣೆ, ವಿಲೇವಾರಿ ಮಾಡುವ ಪುರದ ಹಿತವನ್ನೇ ಬಯಸುವ PDO ಪುರೋಹಿತರಿಗೇ ವರ್ಗಾಯಿಸಬೇಕಲ್ವಾ!?


7) ಪ್ಲಾಸ್ಟಿಕ್‌ ಮತ್ತು ಅದರ ಮೈಕ್ರೋ ಕಣಗಳ ಆತ್ಮಕ್ಕೂ ನೂರಾರು ವರ್ಷಗಳಾದರೂ ಮೋಕ್ಷ ಸಿಗದೆ, ಪ್ರೇತಾತ್ಮ ಕಣಗಳಾಗಿ ನೀರು, ಮಣ್ಣು, ಗಾಳಿ, ಆಕಾಶ, ಬೆಂಕಿಗಳಲ್ಲಿ ಸಂಚರಿಸುತ್ತ ಇರುತ್ತವಂತೆ!! ನರಸೀಪುರದ ತುಂಗಾ ನದಿಯ ದಡದಲ್ಲಿ ಮಾಡಿದ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕಾರ ಎಂಬ ಅರಣ್ಯ ಇಲಾಖೆಯ ಪಿಂಡ ಪ್ರಧಾನ ಕಾರ್ಯದಲ್ಲಿ ಲೋಪಗಳಾಗಿ, ಪ್ಲಾಸ್ಟಿಕ್ ಕಣಗಳ ಪ್ರೇತಾತ್ಮಗಳು... ಪರಿಸರಕ್ಕೂ, ಪ್ರಾಣಿ ಪಕ್ಷಿಗಳಿಗೂ, ಮನುಷ್ಯರಿಗೂ ಅನಾರೋಗ್ಯದ ಭೂತಗಳಾಗಿ ಕಾಡುವುದಿಲ್ಲವಾ!?


8) ನರಸೀಪುರದ ನರ್ಸರಿಯ ನದೀ ನೀರಿನಲ್ಲಿ ನೆರವೇರಿಸಿದ ದಿವಂಗತ ಪ್ಲಾಸ್ಟಿಕ್ ತ್ಯಾಜ್ಯದ ನಿರ್ನಾಮ ಸಮಾರೋಪ ಸಮಾರಂಭದ ಬಗ್ಗೆ, ಅರಣ್ಯ ಇಲಾಖೆಯಿಂದ ಈ ಅಷ್ಟಾಮಂಗಳ ಪ್ರಶ್ನೆಗಳಿಗೆ ಒಂದು ಸ್ಪಷ್ಟವಾದ ಉತ್ತರ ಕೊಡುವ ಉತ್ತರಕ್ರಿಯೆ ನಿರೀಕ್ಷಿಸಬಹುದಾ!?


ಓಂ ಶಾಂತಿ


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top