ಆಳ್ವಾಸ್ ವಿದ್ಯಾರ್ಥಿಗಳ ಸಾಧನೆಯ ಗುಟ್ಟು ಸಂಜೆ 5ರ ನಂತರದ ಕಲಿಕೆ: ವಿವೇಕ್ ಆಳ್ವ

Upayuktha
0

 



ಮೂಡುಬಿದಿರೆ: ವಿದ್ಯಾರ್ಥಿಗಳ ಸಾಧನೆಗೆ  ಪೋಷಕರ ಮತ್ತು ಶಿಕ್ಷಕರ ಕೊಡುಗೆ ಅಪಾರ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಪೋಷಕರ ಮತ್ತು ಶಿಕ್ಷಕರ ತ್ಯಾಗವನ್ನು ಮರೆಯಬಾರದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.



ಅವರು ಮಂಗಳವಾರ ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್  ಪ.ಪೂ ಕಾಲೇಜಿನ ಸಾಂಸ್ಕೃತಿಕ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ಕೆಲಸವನ್ನು ಶ್ರದ್ಧೆಯಿಂದ, ಮನಸ್ಸಿಟ್ಟು ನಿರ್ವಹಿಸಿ. ಆಗ ಅಭ್ಯುದಯ ಸಹಜವಾಗಿ  ನಮ್ಮಲ್ಲಿ ಮೂಡುತ್ತದೆ. ಕೆಲವು ಸಂಧರ್ಭದಲ್ಲಿ ನಮ್ಮ ನಡುವೆ ಇರುವ ವ್ಯವಸ್ಥೆ ನಮಗೆ ಕಟ್ಟುನಿಟ್ಟಾಗಿ ಇದ್ದಾಗ ಕಷ್ಟವೆನಿಸಿದರೂ, ಅವುಗಳು ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಆಳ್ವಾಸ್‌ನ ವಿದ್ಯಾರ್ಥಿಗಳು ಅದೃಷ್ಟಶಾಲಿಗಳು. ಡಾ ಎಂ ಮೋಹನ್ ಆಳ್ವರವರಂತವರ ಮಾರ್ಗದರ್ಶನ, ನಿಮ್ಮನ್ನು ಶ್ರೇಷ್ಠ ವಿದ್ಯಾರ್ಥಿಗಳನ್ನಾಗಿಸುತ್ತದೆ. ಎಳವೆಯಲ್ಲಿಯೆ  ಇಂಗ್ಲೆಂಡ್‌ನ ಆಕ್ಸಫರ್ಢ್ ವಿವಿಯಿಂದ ಅತ್ಯುತ್ತಮ ವಿದ್ಯಾರ್ಥಿ ಎಂಬ ಪ್ರಶಸ್ತಿಯನ್ನು ಪಡೆದವರು ಡಾ ಆಳ್ವರು.



ಆಳ್ವಾಸ್‌ನಲ್ಲಿ 5 ಗಂಟೆಯ ನಂತರ ಆರಂಭವಾಗುವ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಯೋಚನೆ ಮತ್ತು ಯೋಜನೆಯ ಹಿಂದಿನ ವ್ಯಕ್ತಿ ಡಾ ಎಂ ಮೋಹನ್ ಆಳ್ವರು.  ಪ್ರತಿ ವಿದ್ಯಾಸಂಸ್ಥೆಗೂ ಅರ್ಥ ಬರುವುದು ವಿದ್ಯಾರ್ಥಿಗಳಿಂದ. ನಾವು ಗೆಲುವಿನಿಂದ ಏನನ್ನು ಕಲಿಯಲು ಸಾಧ್ಯವಿಲ್ಲ. ಆದರೆ ಸೋಲು ನಮಗೆ ಹೆಚ್ಚಿನ ಪಾಠ ಕಲಿಸುತ್ತದೆ. ಆಳ್ವಾಸ್‌ನಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳು ಸಂಸ್ಥೆಯ ಹೆಸರಿಗಷ್ಟೇ ಅಲ್ಲ. ವಿದ್ಯಾರ್ಥಿಗಳು ಅದರಿಂದ ಶಿಕ್ಷಣವನ್ನು ಪಡೆಯಬೇಕು  ಎಂದರು.



ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರೊ. ಸದಾಕತ್, ಜಗತ್ತು ವೇಗವಾಗಿ ಬದಲಾವಣೆ ಹೊಂದುತ್ತಿದೆ. ಆ ಬದಲಾವಣೆಗೆ ನಾವು ಸಿದ್ದರಾಗಬೇಕಿದೆ.  ಡಾ. ಮೋಹನ್ ಆಳ್ವರ ಉದ್ದಾತ ಗುಣ ಎಂದರೆ ಅವರು  ಏನನ್ನು ಯೋಚಿಸಬೇಕೆಂದು ಹೇಳುವುದಿಲ್ಲ ಬದಲಾಗಿ ಹೇಗೆ ಯೋಚಿಸಬೇಕೆಂಬುದನ್ನು ತಿಳಿಸುತ್ತಾರೆ. ಅವರ ಅಂತರ್ಗತ ಗುಣಗಳನ್ನ ನಮ್ಮಲ್ಲಿ ಅಳವಡಿಸಿಕೊಂಡಾಗ ನಾವು 21 ನೇ ಶತಮಾನದ ಎಲ್ಲಾ ಸವಾಲುಗಳನ್ನು ಸ್ವೀಕರಿಸಲು ಸದೃಢರಾಗುತ್ತವೆ ಎಂದರು.

 

 

ಕಾರ್ಯಕ್ರಮದಲ್ಲಿ ಆಳ್ವಾಸ್ ಪ.ಪೂ ಕಾಲೇಜಿನ ವಿಜ್ಞಾನ ವಿಭಾಗದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.   ಜಪಾನ್‌ನ ಸೋಜೊ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಹಾಗೂ  ಗ್ರಾಜ್ಯುವೇಟ್ ಸ್ಕೂಲ್ ಆಫ್ ಎಂಜಿನಿಯರಿಂಗ್‌ನ ಪರಿಣಾಮಕಾರಿ ಎಂಜಿನಿಯರಿಂಗ್‌ನ ಪ್ರಗತಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ರುಚಿ ಥೋಮೊಶಿಗೆ, ಸೋಜೊ ಅಂತರ ರಾಷ್ಟ್ರೀಯ ಕೇಂದ್ರದ ವ್ಯವಸ್ಥಾಪಕಿ ಮಿಯೆ ಒಕುಬೊ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಡಾ.ಅಕಿಸಾ ಮೊರಿ ಬಹುಮಾನ ವಿತರಿಸಿದರು. ಕರ‍್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್ ಇದ್ದರು. ಉಪನ್ಯಾಸಕಿ ಡಾ ಸುಧಾರಾಣಿ ಕರ‍್ಯಕ್ರಮ ನಿರೂಪಿಸಿ, ಸಾಂಸ್ಕೃತಿಕ ಸಂಘದ ಸಹಸಂಚಾಲಕಿ ಪ್ರಿಯಾ ಎಚ್ ಎಸ್ ವಂದಿಸಿದರು.  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top