ಮಂಗಳೂರು: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಹಿರಿಯ ಶಿಷ್ಯ ಹಾಗೂ ಮಠದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಂಪೂಜ್ಯ ಸ್ವಾಮಿ ಪೂರ್ಣಾಮೃತಾನಂದ ಪುರಿಯವರು ಡಿಸೆಂಬರ್ 14 ರಂದು ಶನಿವಾರ ಮಂಗಳೂರಿಗೆ ಆಗಮಿಸಲಿರುವರು.
ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಸಲಹೆಗಾರರಾದ ಡಾ. ವಸಂತಕುಮಾರ್ ಪೆರ್ಲ ಅವರು ನಗರದ ಪ್ರೆಸ್ ಕ್ಲಬ್ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಸಾಮೂಹಿಕ ಶನಿದೋಷ ನಿವಾರಣಾ ಪೂಜೆ:
ಅಂದು ಪೂರ್ವಾಹ್ನ 10 ಗಂಟೆಗೆ ಮಂಗಳೂರು ನಗರದ ಬೋಳೂರಿನಲ್ಲಿರುವ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಪ್ರತಿ ತಿಂಗಳ ಎರಡನೆಯ ಶನಿವಾರ ಜರುಗಲಿರುವ ಸಾಮೂಹಿಕ ಶನಿ ದೋಷ ನಿವಾರಣಾ ಪೂಜೆಗೆ ಚಾಲನೆ ನೀಡಲಿದ್ದಾರೆ.
ಅಮೃತ ವೈಭವ:
ಅಂದು ಸಂಜೆ 5.00 ಗಂಟೆಯಿಂದ 8 30ರ ತನಕ ಮಾತಾ ಅಮೃತಾನಂದಮಯಿ ಮಠದ ಆವರಣದಲ್ಲಿರುವ ಅಮೃತ ವಿದ್ಯಾಲಯಂನಲ್ಲಿ ಜರುಗುವ ಆಧ್ಯಾತ್ಮಿಕ ಕಾರ್ಯಕ್ರಮ 'ಅಮೃತ ವೈಭವ'ದಲ್ಲಿ ಭಾಗವಹಿಸಲಿರುವರು. ಪೂಜನೀಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ಉಪಸ್ಥಿತಿಯಲ್ಲಿ ಸ್ವಾಮೀಜಿಯವರ ಸಾರಥ್ಯದಲ್ಲಿ ಧ್ಯಾನ ಸತ್ಸಂಗ ಭಜನೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಹಾಗೂ ಗೌರವ ಅತಿಥಿಗಳಾಗಿ ಎಸ್.ಎಲ್ ಶೇಟ್ ಜ್ಯುವೆಲ್ಲರ್ಸ್ ಪಾಲುದಾರ ಪ್ರಶಾಂತ್ ಶೇಟ್ ಪಾಲ್ಗೊಳ್ಳಲಿದ್ದಾರೆ.
ಹೃದಯ ಸಂಬಂಧಿತ ಕಾಯಿಲೆ ಇರುವ ಮಕ್ಕಳಿಗೆ ಉಚಿತ ಶಿಬಿರ:
ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ತಮ್ಮ ಕೊಚ್ಚಿಯಲ್ಲಿರುವ ಅಮೃತಾ ಆಸ್ಪತ್ರೆಯ ವತಿಯಿಂದ ಹೃದಯ ಸಂಬಂಧಿತ ರೋಗಗಳಿಂದ ಸಂಕಷ್ಟ ಅನುಭವಿಸುತ್ತಿರುವ 18 ವರ್ಷಗಳ ಒಳಗಿನ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಸಹಿತ ಉಚಿತ ಸೇವೆ ಕಲ್ಪಿಸುವ ದೃಷ್ಟಿಯಿಂದ 2025 ರ ಜನವರಿ 19 ರಂದು ಮಂಗಳೂರಿನ ಅಮೃತ ವಿದ್ಯಾಲಯಂನಲ್ಲಿ ನಡೆಯುವ ಉಚಿತ ಶಿಬಿರದ ಪ್ರಚಾರ ಕಾರ್ಯಕ್ಕೆ ಸ್ವಾಮೀಜಿಯವರು ಚಾಲನೆ ನೀಡಲಿರುವರು ಕೊಚ್ಚಿಯಲ್ಲಿರುವ ಅಮೃತಾ ಆಸ್ಪತ್ರೆಯ ಮಕ್ಕಳ ಹೃದಯ ರೋಗ ತಜ್ಞರು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಮಕ್ಕಳಿಗಾಗಿ ಪ್ಲೇ ಪಾರ್ಕ್:
ಆಧುನಿಕ ಆಟದ ಉಪಕರಣಗಳನ್ನು ಅಳವಡಿಸಿ ಮಕ್ಕಳ ಮನೋರಂಜನೆ ಮತ್ತು ಕ್ರೀಡೆಗಾಗಿ ನಿರ್ಮಾಣಗೊಳ್ಳುವ ಪೈ ಪಾರ್ಕ್ ಸ್ವಾಮೀಜಿಯವರಿಂದ ಶುಭಾರಂಭಗೊಳ್ಳಲಿದೆ. ಪ್ರಕೃತಿ ಪ್ರೇಮಿಗಳ ಬಹುದಿನಗಳ ಬೇಡಿಕೆಯಾಗಿರುವ ಗುಬ್ಬಚ್ಚಿಗಳಿಗಾಗಿ Sparrow Park ನಿರ್ಮಾಣಕ್ಕೂ, ಸ್ವಾಮೀಜಿಯವರು ಚಾಲನೆ ನೀಡಲಿದ್ದಾರೆ.
ಸ್ವಾಮೀಜಿಯವರಿಗೆ ಮಾತಾ ಅಮೃತಾನಂದಮಯಿ ಮಠದ ಸೇವಾ ಸಮಿತಿಯ ವತಿಯಿಂದ ಪೂರ್ಣ ಕುಂಭ ಸ್ವಾಗತ, ಅಮೃತ ವಿದ್ಯಾಲಯಂ ವಿದ್ಯಾರ್ಥಿಗಳಿಂದ ವೇದ ಮಂತ್ರ ಪಠನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿರುವುದು. ಜಾತಿ, ಮತ, ಧರ್ಮ ಮತ್ತು ವರ್ಣ ಭೇದವಿಲ್ಲದೆ ಎಲ್ಲರಿಗೂ ಪ್ರವೇಶಾವಕಾಶವಿರುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಬೋಳೂರಿನ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಡಾ. ದೇವದಾಸ ಪುತ್ರನ್, ವೈದ್ಯಕೀಯ ಉಪಸಮಿತಿ ಸಂಚಾಲಕ ಡಾ. ದೇವಿಪ್ರಸಾದ್ ಎಸ್. ಹೆಜಮಾಡಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ