ಸುರತ್ಕಲ್: ಹೃದಯದಿಂದ ಅರಳುವ ಭವ್ಯವಾದ ಸ್ವದೇಶಿ ಚಿಂತನೆ ನಮ್ಮ ಲಕ್ಷ್ಯವಾಗಬೇಕು. ಕಾಲಗತಿಯಿಂದ ಬದಲಾಗುತ್ತಿರುವ ನಮ್ಮ ಹಿರಿಯ ಪರಂಪರೆ ಪುನರ್ ಅರಳಬೇಕು. ಶಿಕ್ಷಣ ಕಲಿಕೆ ತರಗತಿಗಳಿಗಷ್ಟೇ ಸೀಮಿತವಾಗದೆ ನಾಗರಿಕ ಶಿಷ್ಟಾಚಾರ ಹಾಗೂ ಕೌಟುಂಬಿಕ ವ್ಯವಸ್ಥೆಯ ಮೂಲಕ ಬೆಳೆಯುವಂತೆ ಮಾಡಬೇಕು. ಶಾಲಾ ಶಿಕ್ಷಣದೊಂದಿಗೆ ಮನೆಯಲ್ಲಿಯೂ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡಿದಾಗ ಸಂಸ್ಕಾರವಂತ ಪ್ರಜೆಗಳು ರೂಪುಗೊಳ್ಳುತ್ತಾರೆ ಎಂದು ಅಖಿಲ ಭಾರತೀಯ ಕುಟುಂಬ ಪ್ರಬೋಧನ್ನ ನಿರ್ದೇಶಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನುಡಿದರು.
ಅವರು ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘ (ರಿ)ವು ತನ್ನ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರರು ಮತ್ತು ಸಂಘದ ಸದಸ್ಯರ ಸಮ್ಮಿಲನದೊಂದಿಗೆ ಆಯೋಜಿಸಿದ್ದ 108ನೇ ಸ್ಥಾಪಕರ ದಿನಾಚರಣೆಯಲ್ಲಿ ಜೀವನ ಮೌಲ್ಯಗಳು-ಶಿಕ್ಷಣ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಅವರು ಹಿಂದು ವಿದ್ಯಾದಾಯಿನೀ ಸಂಘದ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಹಾಗೂ ಏಳಿಗೆಗೆ ಶ್ರಮಿಸಿದ ಹಿರಿಯರ ಸ್ಮರಣೆಯೊಂದಿಗೆ ಅತ್ಯಾಧುನಿಕ ಸಂದರ್ಭಕ್ಕೆಅನುಗುಣವಾಗಿ ನೂತನ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ನುಡಿದರು.
ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್.ಸ್ವಾಗತಿಸಿದರು. ಉಪಾಧ್ಯಕ್ಷ ಬಾಲಕೃಷ್ಣ ಕೆ.ಸಂಘದ ಸ್ಥಾಪಕರ ಸಂಸ್ಮರಣೆ ನಡೆಸಿ ಹಿರಿಯರ ಕೊಡುಗೆಗಳನ್ನು ಸ್ಮರಿಸಿದರು. ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾಕರ್ ರಾವ್ ಪೇಜಾವರ ಹಾಗೂ ಸದಸ್ಯೆ ಜಯಂತಿ ಎಸ್. ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಎಂ.ಜಿ. ರಾಮಚಂದ್ರ ವಂದಿಸಿದರು.
ಕೋಶಾಧಿಕಾರಿ ಹೆಚ್.ಎಲ್. ರಾವ್, ಜೊತೆ ಕೋಶಾಧಿಕಾರಿ ಟಿ.ಎನ್. ರಮೇಶ್, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಯ್ ಆಚಾರ್ ಉಪಸ್ಥಿತರಿದ್ದರು.
ಸಂಸ್ಥಾಪಕ ಅಧ್ಯಕ್ಷ ಇಡ್ಯಾ ಕೃಷ್ಣಯ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮಾಜಿ ಕಾರ್ಯದರ್ಶಿ ವೆಂಕಟ್ರಾವ್ ಎಂ.ಅಭಿನಂದನಾ ನುಡಿಗಳನ್ನಾಡಿದರು.
ದಾನಿ ಪ್ರಕಾಶ್ಎಸ್. ಕರ್ಕೇರ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರನ್ನು ಅಭಿನಂದಿಸಲಾಯಿತು.
ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಶಿಕ್ಷಣ ಸಂಸ್ಥೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಹಳೆ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ