ಸೃಷ್ಟಿಕರ್ತ ಆರ್ಥಿಕತೆಯಿಂದ ಬಲಿಷ್ಠ ಭಾರತ: ಜೆಎನ್‌ಯು ಪ್ರೊಫೆಸರ್ ಡಾ. ರಮೇಶ್ ಸಾಲಿಯಾನ್

Upayuktha
0


ಉಜಿರೆ: ಈಗಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಬೇರೆ ಬೇರೆ ವಿಷಯಾಧಾರಿತ ಮಾಹಿತಿಗಳನ್ನು ದಾಖಲಿಸಿ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್‌ಗಳಲ್ಲಿ ಅವುಗಳನ್ನು ಬಿತ್ತರಿಸಿದರೆ ಅದರಿಂದ ನಿರುದ್ಯೋಗವನ್ನು ಹೋಗಲಾಡಿಸುವುದರ ಜೊತೆಗೆ ನಾವು ತುಂಬಾ ದುಡಿಮೆಯನ್ನು ಮಾಡಬಹುದು.  ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಔಷಧಿಗಳು, ಆಹಾರ ಪದ್ಧತಿಗಳು ಮತ್ತು ಅವುಗಳಲ್ಲಿರುವ ವೈಜ್ಞಾನಿಕ ದೃಷ್ಟಿಕೋನವನ್ನು ಹೊರಗಿನ ಜಗತ್ತಿಗೆ ಪರಿಚಯಿಸಬಹುದು ಎಂದು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಅರ್ಥಶಾಸ್ತ್ರ ಪ್ರೊಫೆಸರ್ ಪ್ರೊ. ರಮೇಶ್ ಸಾಲಿಯಾನ್ ಅವರು ಹೇಳಿದರು.


ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ವಿಭಾಗ ಹಾಗೂ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಸೃಷ್ಟಿಕರ್ತ ಆರ್ಥಿಕತೆ ಮತ್ತು ಕೃತಕ ಬುದ್ಧಿಮತ್ತೆ- ಆರ್ಥಿಕ ಅಭಿವೃದ್ಧಿಯ ಕಡೆಗೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.


ಕೃತಕ ಬುದ್ಧಿಮತ್ತೆ (AI) ಅಳವಡಿಕೆಯಿಂದ ತಯಾರಿಕಾ ಕ್ಷೇತ್ರ, ಸೇವಾ ವಲಯ, ಹಣಕಾಸು ವ್ಯವಸ್ಥೆ, ಶಿಕ್ಷಣ, ಆರೋಗ್ಯ ಸೇವೆ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಅಪಾರ ಬದಲಾವಣೆಗಳಾಗುತ್ತಿವೆ ಎಂದು ವಿವರಿಸಿದರು.


"ಭವಿಷ್ಯದ ಆರ್ಥಿಕತೆ ಸೃಜನಶೀಲತೆಯನ್ನು ತಂತ್ರಜ್ಞಾನ ಜೊತೆಗೊಳಿಸುವ ಮೂಲಕ ಹೊಸ ಅವಕಾಶಗಳನ್ನೇನೋ ಕೊಡಲಿದೆ. ಆದರೆ ಈ ಜಾಗದಲ್ಲಿ ಮನುಷ್ಯನ ನೈತಿಕತೆ ಮತ್ತು ಮಾನವೀಯ ಮೌಲ್ಯಗಳು ಸಹ ಪ್ರಮುಖವಾಗುತ್ತವೆ" ಎಂದು ಅವರು ಒತ್ತಿ ಹೇಳಿದರು. ಅವರು AIಯ ಸರಿಯಾದ ಬಳಕೆ ಹಾಗೂ ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳ ನಡುವಿನ ಸಮತೋಲನವನ್ನು ಕಾಪಾಡುವುದು ಆರ್ಥಿಕತೆಯ ಸಮಗ್ರ ಅಭಿವೃದ್ಧಿಗೆ ಅವಶ್ಯಕ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಬೃಹತ್ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದರು. ಉಪನ್ಯಾಸವು ವಿದ್ಯಾರ್ಥಿಗಳಿಗೆ ಹೊಸ ಆರ್ಥಿಕ ಪರಿಕಲ್ಪನೆಗಳನ್ನು ತಿಳಿಯಲು ಹಾಗೂ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಚಿಂತನ ಮಂಥನಕ್ಕೆ ಪ್ರೇರಣೆ ನೀಡಿತು.


ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ವಿಭಾಗದ ಮುಖ್ಯಸ್ಥರಾದ ಡಾ. ಗಣರಾಜ ಕೆ ಗಣ್ಯರನ್ನು ಸ್ವಾಗತಿಸಿದರು. ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ರವಿಶಂಕರ್ ಕೆ.ಆರ್. ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ದ್ವಿತೀಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ ತೇಜಸ್ವಿನಿ ಕೋಟ್ಯಾನ್ ನಿರೂಪಿಸಿದರು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top