ಮಂಗಳೂರು: ಸಂಗೀತ, ದೇಶ ಭಾಷೆಗಳ ಹಂಗಿಲ್ಲದೆ ಸರ್ವರ ಮನವನ್ನು ಮುಟ್ಟಬಲ್ಲುದು ತಟ್ಟಬಲ್ಲುದು, ವಿಶ್ವವನ್ನೇ ಸುತ್ತಿ ಬರಬಲ್ಲುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನುಡಿದರು.
ನಗರದ ಯೆಯ್ಯಾಡಿ, ಬಾಂದೊಟ್ಟು ಗುತ್ತು ಮನೆಯಂಗಳದಲ್ಲಿ ವಿದುಷಿ ಸ್ವಾತಿ ರೈ ಯವರ ಅಮೃತವರ್ಷಿಣಿ ಮ್ಯೂಸಿಕ್ ಅಕಾಡೆಮಿಯ ಸಂಗೀತ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಗೀತ ನಮ್ಮ ಜೀವನವನ್ನು ಮಧುರವಾಗಿಸುತ್ತಾ, ಮನಸ್ಸನ್ನು ಶುಚಿಗೊಳಿಸುತ್ತಾ, ಏಕಾಗ್ರತೆಯನ್ನು ಬಲಪಡಿಸುತ್ತಾ ನಮ್ಮಲ್ಲಿ ಉನ್ನತವಾದ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಸ್ವಾತಿ ರೈಯವರು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮತ್ತು ಸಾಧನೆಗೈಯುವುದರೊಂದಿಗೆ ಸಂಗೀತ ಶಿಕ್ಷಣವನ್ನೂ ನೀಡುತ್ತಿರುವುದು ಅಭಿನಂದನೀಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಯೋಧ ಬೆಳ್ಳಾಲ ಗೋಪಿನಾಥ ರಾವ್ ಮಾತನಾಡಿ, ಶಾಸ್ತ್ರೀಯ ಸಂಗೀತದ ಅಭ್ಯಾಸ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿ ಅವರ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ, ಮಹಾನ್ ಸಾಧಕರನ್ನು ಉದಾಹರಿಸಿ, ನಿರಂತರ ಅಭ್ಯಾಸವೇ ಸಾಧನೆಗೆ ಹಾದಿ ಎಂದು ಮಕ್ಕಳಲ್ಲಿ ಸ್ಫೂರ್ತಿ ತುಂಬಿದರು.
ಸಂಸ್ಥೆಯ ಸಂಸ್ಥಾಪಕಿ ಸ್ವಾತಿ ರೈ ವರದಿ ಮಂಡಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ಕೊಡುವುದು ಇಷ್ಟದ ಕೆಲಸ, ಅವರ ಆಸಕ್ತಿ ಮತ್ತು ಹೆತ್ತವರ ಪ್ರೋತ್ಸಾಹ ಆಶಾದಾಯಕವಾಗಿದೆ, ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ, ಜೊತೆಗೆ ಧ್ವನಿ ತರಬೇತಿಯನ್ನೂ ನೀಡಲಾಗುತ್ತಿದೆ ಎಂದರು. ಉಷಾ ಎನ್. ರೈ ಸ್ವಾಗತಿಸಿದರು. ನವೀನ್ ಚಂದ್ರ ರೈ ವಂದಿಸಿದರು. ನಿಹಾಲ್ ಸಹಕರಿಸಿದರು. ಕವಿತಾ ಪಕ್ಕಳ ನಿರೂಪಿಸಿದರು.
ಸಂಸ್ಥೆಯ ಸುಮಾರು ಐವತ್ತು ಮಂದಿ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ವಿವಿಧ ಸಂಗೀತ ಕೃತಿಗಳನ್ನು ಪ್ರಸ್ತುತಪಡಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ