ಮನುಷ್ಯ ಕುಲ ತಾನೊಂದೇ ವಲಂ

Upayuktha
0


ಧರ್ಮಸ್ಥಳ: ಭಾಷೆ, ಕಾಲ, ದೇಶ, ಜಾತಿ ಧರ್ಮಗಳನ್ನು ಮೀರಿರುವ ತತ್ವಪದಗಳು ಒಳಿತಿನ ದಾರಿಯನ್ನು ತೋರಿಸುತ್ತವೆ ಎಂದು  ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ನುಡಿದರು. 


ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಪ್ರಯುಕ್ತ ನಡೆದ  92ನೇ ಸರ್ವಧರ್ಮ ಸಮ್ಮೇಳನದಲ್ಲಿ ಬಿಜಾಪುರ ಮೂಲದ ರಾಷ್ಟ್ರೀಯ ಬಸವಭೂಷಣ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಇಬ್ರಾಹಿಂ ಕಾಗವಾಡ ಉಪನ್ಯಾಸ ನೀಡಿದರು.  


ಪರಮಾತ್ಮನ ನಾಮಸ್ಮರಣೆಯನ್ನು ಮಾಡುವ ಹದಗೊಂಡ ಪದಗಳೇ ತತ್ವಪದಗಳು. ತತ್ವಪದಗಳು ಎಲ್ಲಾ ಕಾಲಕ್ಕೂ ಸಲ್ಲುವ ಸತ್ಯಗಳನ್ನು ಪ್ರತಿಪಾದಿಸುತ್ತವೆ. ಎಲ್ಲಾ ಧರ್ಮಗಳಲ್ಲೂ ಇಂತಹ ತತ್ವಪದಗಳನ್ನು ತಮ್ಮದೇ ಆದ ಭಾಷೆಯಲ್ಲಿ ರಚಿಸಿದ್ದಾರೆ ಎಂದರು.


ತತ್ವಪದಗಳಿಗೆ  ವಿಶೇಷ ವಿವರಣೆ ಬೇಕಿಲ್ಲ. ತತ್ವಪದಗಳು ಸ್ವಯಂ ವಿವರಣಾತ್ಮಕ ಸಾಲುಗಳಾಗಿರುತ್ತವೆ. ಕನಕದಾಸರ ಕೀರ್ತನೆ, ಕಡಕೋಳ ಮಡಿವಾಳಪ್ಪನವರ ಪದಗಳನ್ನು ಹಾಡಿ ಪ್ರೇಕ್ಷಕರಿಗೆ  ಶುದ್ಧ ಭಕ್ತಿಯ ರುಚಿ ಉಣಿಸಿದರು. 


ಕನಕದಾಸರ  " ತನುವು ನಿನ್ನದೆ, ಮನವು ನಿನ್ನದೇ, ಸುಖ ದುಃಖಂಗಳು ಎಲ್ಲವೂ ನಿನ್ನದೇ... " ಸಾಲುಗಳನ್ನು ಹಾಡಿ  ತತ್ವಪದಗಳು ಮನುಷ್ಯನ ಅಂತರಾತ್ಮವನ್ನು ಮಥಿಸುವುದು ಮಾತ್ರವಲ್ಲದೆ ಮನುಕುಲದ ಮಾನವೀಯ ಮೌಲ್ಯಗಳನ್ನು ಸಾರುವ ಬಗೆಯನ್ನು ವಿವರಿಸಿದರು. ಇದೇ ಚಿಂತನೆಗೆ ಪೂರಕವಾಗಿ ಕಡಕೋಳ ಮಡಿವಾಳಪ್ಪನವರ "ಯಾಕ್ ಚಿಂತಿ ಮಾಡುತ್ತಿ? ಯಾಕಾರ ಸುಖವಿಲ್ಲ ಎಲೆ ಮನವೇ?" ಪದಗಳನ್ನು ಹಾಡಿದರು.


ದೇವರ ಧ್ಯಾನ ಹೇಗೆ ಮಾಡುವುದು ಎನ್ನುವುದನ್ನು ಪುರಂಧರ ದಾಸರು ಬರೆದ "ನಾ ನಿನ್ನ ಧ್ಯಾನದೊಳ್ ಇರಲು ಸದಾ" ಕೀರ್ತನೆಯನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಹಾಡಿ ವಿವರಿಸಿದರು. 


ತತ್ವಪದಗಳು ಸಾಹಿತ್ಯಕ್ಕಾಗಿ ಮಾತ್ರವಲ್ಲದೆ ಕುಲ, ಜಾತಿ, ಮುಟ್ಟು, ಮೈಲಿಗೆಗಳನ್ನು ಮೀರಿ ಸಮಸ್ತ ಮಾನವ ಕುಲದ ಉದ್ಧಾರಕ್ಕಾಗಿ ಬರೆಯಲ್ಪಟ್ಟಿವೆ. ತತ್ವಧರ್ಮದ ತಳಹದಿಯಲ್ಲಿ ಜೀವನ ದರ್ಶನ ಆದಾಗ ಭಾವೈಕ್ಯತೆಗೆ ನೆಲೆ ಸಿಗುತ್ತದೆ. ಸ್ವಧರ್ಮದ ಚೌಕಟ್ಟಿನಲ್ಲಿ ಇದ್ದು ಪರಾಧರ್ಮವನ್ನು ಗೌರವಿಸುವುದೇ ಭಾವೈಕ್ಯತೆ ಎಂದು ಅಭಿಪ್ರಾಯಪಟ್ಟರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top