ಕುಂಬ್ಳೆ ಸುಂದರ ರಾವ್ ಅವರದು ಪ್ರೇರಣಾದಾಯಿ ವ್ಯಕ್ತಿತ್ವ: ಭಾಸ್ಕರ ರೈ ಕುಕ್ಕುವಳ್ಳಿ
ಮಂಗಳೂರು: 'ಕುಂಬ್ಳೆ ಸುಂದರ ರಾವ್ ಅವರು ಯಕ್ಷಗಾನ, ಧಾರ್ಮಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಸರ್ವ ಕ್ಷೇತ್ರದ ಸಾಧಕರಾಗಿದ್ದರು. ಅವರದು ಪ್ರೇರಣಾದಾಯಿ ವ್ಯಕ್ತಿತ್ವ' ಎಂದು ಕರ್ನಾಟಕ ಜಾನಪದ- ಯಕ್ಷಗಾನ ಅಕಾಡೆಮಿ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಮತ್ತು ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣ ವೇದಿಕೆ ಜಂಟಿಯಾಗಿ ನಗರದ ಕೆನರಾ ಪದವಿ ಪೂರ್ವ ಕಾಲೇಜಿನ ತೆರೆದ ಸಭಾಂಗಣದಲ್ಲಿ ಆಯೋಜಿಸಿದ ಕುಂಬ್ಳೆ ಸುಂದರ ರಾವ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು.
'ಕುಂಬ್ಳೆ ಅವರು ವಾಕ್ ಸಾಹಿತಿ, ವಿದ್ವಾಂಸ, ಕಲಾವಿದರು; ಅವರ ಮಾತುಗಾರಿಕೆಯಲ್ಲಿ ಸಾಹಿತ್ಯಿಕ ಅಂಶ ಅಡಗಿತ್ತು. ತಾಳಮದ್ದಳೆಯಲ್ಲಿ ಅವರ ಮಾತುಗಾರಿಕೆ ಅಸಾಧಾರಣ. ಹವ್ಯಾಸಿ, ವೃತ್ತಿ ಕಲಾವಿದರೊಂದಿಗೆ ಒಡನಾಟ ಹೊಂದಿದ್ದ ಅವರದು ಸಾಮಾಜಿಕ ಜೀವನದಲ್ಲಿ ಸರಳ ವ್ಯಕ್ತಿತ್ವ, ಅವರ ಪಾತ್ರದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಅಂಶ ಅಡಗಿತ್ತು. ಯುವಕರಿಗೆ ಸ್ಫೂರ್ತಿಯಾಗಿದ್ದ ಅವರು ಯಕ್ಷಗಾನದ ಎಲ್ಲಾ ಪ್ರಕಾರಗಳಲ್ಲಿ ತೊಡಗಿಸಿ ಕುಂಬ್ಳೆತನವನ್ನು ಎತ್ತಿ ತೋರಿಸಿದ್ದಾರೆ' ಎಂದರು.
ಸಂಘ ಮತ್ತು ಸಾಂಸ್ಕೃತಿಕ ಒಡನಾಟ:
ಕುಂಬ್ಳೆ ಸುಂದರ ರಾವ್ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಮಾತನಾಡಿ, 'ಕುಂಬ್ಳೆ ಮತ್ತು ನಾನು ಹಳೆ ಕಾಲದ ಒಡನಾಡಿಗಳು. ಅವರಿಂದಲೇ ನನಗೆ ಸಂಘದ ಮತ್ತು ಸಾಂಸ್ಕೃತಿಕ ಒಡನಾಟ ಸಿಕ್ಕಿತ್ತು' ಎಂದು ಹೇಳಿದರು. ಕುಂಬ್ಳೆಯವರ ಸಹೋದರ ಮತ್ತು ಸಾಹಿತಿ ಡಾ.ನಾ. ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಗರಿ ಎಂಟರ್ಪ್ರೈಸಸ್ ಮಾಲಕ ಅಗರಿ ರಾಘವೇಂದ್ರರಾವ್, ಹಿರಿಯ ವಿದ್ವಾಂಸ ಡಾ. ಎಂ ಪ್ರಭಾಕರ ಜೋಶಿ, ಕುಂಬ್ಳೆ ಸುಂದರ್ ರಾವ್ ಕುಟುಂಬಸ್ಥರು ಇದ್ದರು.
ಕೆನರಾ ಪದವಿ ಪೂರ್ವ ಕಾಲೇಜು ಡೀನ್ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕರುಣಾಕರ ಬಳ್ಕೂರು ಸನ್ಮಾನ ಪತ್ರ ವಾಚಿಸಿದರು. ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಹಿರಿಯ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ 'ಸುಧನ್ವ ಮೋಕ್ಷ' ಎಂಬ ತಾಳಮದ್ದಳೆ ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ