ನಮ್ಮೆಲ್ಲರ ಪಾಲಿಗೆ ಮಹಾ ವೃಕ್ಷದಂತಿರುವ ಯೋಗಿ

Upayuktha
0


ಈ ಸಮಾಜವು ನೆಮ್ಮದಿ ಶಾಂತಿಯಿಂದ ಸದಾಕಾಲ ಸಮೃದ್ಧವಾಗಿರಬೇಕಾದರೆ ಅಲ್ಲಿ ಆಧ್ಯಾತ್ಮದ ತಂಗಾಳಿ ನಿರಂತರವಾಗಿ ಸೂಸಬೇಕು. ಅದೇನಾದರೂ ಕ್ಷಣಕಾಲ ನಿಂತು ಬಿಟ್ಟರೆ ಆಗ ಸಮಾಜಘಾತುಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತಾ ಸಾಗುತ್ತದೆ. ಕೊಲೆ, ಸುಲಿಗೆ, ಮೋಸ ವಂಚನೆಗಳು ತಾಂಡವಾಡುತ್ತವೆ. ನಮ್ಮ ಸಮಾಜವು ಸುಭಿಕ್ಷೆಯಿಂದ ಕೂಡಿರಬೇಕಾದರೆ ಆಧ್ಯಾತ್ಮದ ಅವಶ್ಯಕತೆ ಬಹುಮುಖ್ಯವಾದದ್ದು. ಆ ಆಧ್ಯಾತ್ಮವನ್ನು ಉತ್ತಿ ಬಿತ್ತಿ ಬೆಳೆಯಬೇಕಾದರೆ ಸಂತ ಮಹಾತ್ಮರ ಜನನ ನಿರಂತರವಾಗಿ ಆಗುತ್ತಿರಬೇಕು. ಇಂದು ನಮ್ಮ ನಾಡಿನಲ್ಲೇನಾದರೂ ದೇವ ಚಿಂತನೆಗಳು ಉಳಿದಿದ್ದರೆ ಅದು ನಿಸ್ಸಂಶಯವಾಗಿ ಸಂತಮಹಾಂತರಿಂದ. ಅನೇಕ ಯೋಗಿ ವರೇಣ್ಯರು ತಮ್ಮ ಇಡೀ ಬದುಕನ್ನೇ ಗಂಧದಂತೆ ಸವಿಸಿ ಈ ಸಮಾಜಕ್ಕೆ ಸುಗಂಧದ ಪರಿಮಳ ಬೀರಿದರು ಕಬೀರರು ಸಂತನ ಬಗ್ಗೆ ಹೇಳುತ್ತಾರೆ. 


ವೃಕ್ಷದ ಫಲವು ವೃಕ್ಷಕಲ್ಲ 

ನದಿಯ ನೀರು ನದಿಗಲ್ಲ 

ಸಂತನ ಬದುಕು ಸಂತನಿಗಲ್ಲ

ಅದು ಲೋಕದಹಿತಕ್ಕೆ ಕಬೀರ ಅದು ಲೋಕದಹಿತಕ್ಕೆ   


ಭೂಮಿಯ ಮೇಲೆ ಬೆಳೆದ ಯಾವ ಮರವು ತಾನು ಕಷ್ಟಪಟ್ಟು ಬೆಳೆದ ಹಣ್ಣನ್ನು ತಾನೇ ಭಕ್ಷಿಸುವುದಿಲ್ಲ. ಹಾಗೆ ಯಾವ ನದಿಯು ತಾನು ಹರಿಸುತ್ತಿರುವ ನೀರನ್ನು ತಾನೇ ಕುಡಿಯುವುದಿಲ್ಲ. ಅದರಂತೆ ಒಬ್ಬ ಸಂತ ಮಹಾಂತನ ಬದುಕು ತನಗಾಗಿ ಆಗಿರುವುದಲ್ಲಾ ಬದಲಿಗೆ ಅದು ಲೋಕೋದಾರಕ್ಕೆ, ಹಾಗೆ ನಮ್ಮೆಲ್ಲರ ಉದ್ಧಾರಕ್ಕಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಅವತರಿಸಿದ ಯುವಸಂತ ಮರೇಗುದ್ದಿಯ ಶ್ರೀ ಅಡವಿಸಿದ್ದೇಶ್ವರ ಮಠದ ಪರಮಪೂಜ್ಯ ಶ್ರೀ ಮ.ನಿ.ಪ್ರ ಗುರುಪಾದ ಮಹಾಸ್ವಾಮಿಗಳು ಪೂಜ್ಯರು ಬಾಲ್ಯಾವಸ್ಥೆಯಲ್ಲೆ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿ 26.11.2001 ರಂದು ಶ್ರೀಮಠದ ಪಟ್ಟಾಧಿಕಾರಿಗಳಾಗಿ ನಿಯುಕ್ತಿ ಹೊಂದಿದರು.


ಇದೀಗ ನಾವುಗಳು ಪೂಜ್ಯರ ಪಟ್ಟಾಧಿಕಾರ ಬೆಳ್ಳಿ ಮಹೋತ್ಸವದಲ್ಲಿದ್ದೇವೆ. ಸುಧೀರ್ಘ 25 ವರ್ಷಗಳ ಕಾಲ ಪರಮಪೂಜ್ಯರು ಇಡೀ ನಾಡಿನದ್ದಕ್ಕೂ ಸಂಚರಿಸುತ್ತಾ ಸಮಾಜದೊಳಗೆ ಸುವಿಚಾರಗಳನ್ನು ಬಿತ್ತುತ್ತಾ ಭಕ್ತಿ ಭಾವವನ್ನು ಸರ್ವರೋಳಗೂ ತುಂಬುತ್ತಿದ್ದಾರೆ. ಬಡ ದೀನ ದುರ್ಬಲರ ಮಕ್ಕಳಿಗಾಗಿ ಶಿಕ್ಷಣವನ್ನ ನೀಡುತ್ತಾ ಅನೇಕರ ಬಾಳಿಗೆ ಬೆಳಕು ಕೊಟ್ಟವರು. ಮನೆಮನೆಗೂ ಹೋಗಿ ಭಿಕ್ಷೆ ಬೇಡುತ್ತಾ ಅದರಿಂದ ಬಂದ ದವಸ ಧಾನ್ಯದಿಂದ ಶ್ರೀಮಠದಲ್ಲಿ ನಿತ್ಯದಾಸೋಹ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಜನಮಾನಸವನ್ನು ಗೆದ್ದವರು. ಶ್ರೀಮಠಕ್ಕೆ ಬರುವ ಭಕ್ತಾದಿಗಳಿಗೆ ಉಳಿದುಕೊಳ್ಳಲು ಭಕ್ತ ನೀಲಯ ಕಟ್ಟಿ ಆಶ್ರಯದಾತರಾಗಿದ್ದಾರೆ. ಕಷ್ಟಗಳಿಂದ ಬಳಲಿ ಬೆಂಡಾದ ದುಃಖಿಗಳ ಕಣ್ಣೀರು ಒರೆಸುವ ಮಾತೃ ಸ್ವರೂಪಿಗಳಾದವರು.


ಎಲ್ಲ ಪರಂಪರೆ ಸಿದ್ದಾಂತಗಳ ಸನ್ಯಾಸಿಗಳನ್ನು ಗೌರವಿಸುತ್ತಾ ಯಾರಲ್ಲೂ ಭೇದಭಾವವನ್ನು ಕಾಣದೆ ಸರ್ವರ ಚಿಂತನೆಗಳನ್ನು ಗೌರವಿಸುತ್ತಿರುವವರು. ದೇಶದ ಸಂಪತ್ತಿನಂತಿರುವ ಯುವಸಮುದಾಯವನ್ನು ದುಶ್ಚಟಗಳಿಂದ ಮುಕ್ತಗೊಳಿಸುತ್ತಾ ಸಾಧನೆಯ ಪಥದೆಡೆಗೆ ನಡೆಸುತ್ತಿರುವ ಪೂಜ್ಯರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಅನರ್ಘ್ಯವಾದದ್ದು.


---- ಮುಂದುವರಿಯುವುದು---

           


-ಶ್ರೀರಾಮಕೃಷ್ಣ ದೇವರು

ಶ್ರೀ ಷಣ್ಮುಖಾರೂಢ  ಮಠ ವಿಜಯಪುರ  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top