ಗರ್ಭದಲ್ಲೇ ಗುಡಿಯ ಕಟ್ಟಿ, ರಕ್ತದಲ್ಲೇ ಅಭಿಷೇಕ ಮಾಡಿ, ಕರುಳ ಬಳ್ಳಿಯನ್ನೇ ಹಾರ ಮಾಡಿ ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿದ ಜಗನ್ಮಾತೆ ಆ ಮಹಾತಾಯಿ. ಯಾವ ದೇವರಿಗೂ ಕಡಿಮೆಯಲ್ಲ ಆಕೆ. ಅವಳ ಹೃದಯ ಮುತ್ತು ರತ್ನಗಳಿಗಿಂತ ಅಮೂಲ್ಯವಾದದ್ದು.
ತಾಯಿಯು ಒಂದು ಮಗುವಿಗೆ ಜನ್ಮ ನೀಡಬೇಕಾದರೆ ಪ್ರಾಣವನ್ನು ಒತ್ತೆಯಿಟ್ಟು ತನ್ನ ಮಗುವಿಗೆ ಪ್ರಪಂಚವನ್ನು ತೋರಿಸುತ್ತಾಳೆ. ಅವಳ ಜೀವನವಿಡೀ ತನ್ನ ಮಗುವನ್ನು ಆರೈಕೆ ಮಾಡುವುದರಲ್ಲೆ ಕಳೆದು ಹೋಗುತ್ತಾಳೆ.
ತಾಯಿಯ ಪ್ರೀತಿಯನ್ನು ವರ್ಣಿಸಲು ಸಾಧ್ಯವಿಲ್ಲ. ಏಕೆಂದರೆ ವರ್ಣಿಸಲಾಗದ ಮಮತೆಯನ್ನು ತೋರಿಸುತ್ತಾಳೆ. ಪ್ರತಿಯೊಂದು ತಾಯಿ ತನ್ನ ಮಗು ಕಾಣದಿದ್ದಾಗ ಆಕೆಯ ಹೃದಯ ಬಡಿತವು ಹೆಚ್ಚಾಗುತ್ತದೆ. ಏಕೆಂದರೆ ಮಗುವನ್ನು ಎಂದಿಗೂ ಕಳೆದುಕೊಳ್ಳಲಾಗದ ಜೀವ ಅವಳದ್ದು.ತನಗಾಗಿ ಏನನ್ನೂ ಬಯಸದವಳು ಸೋತಾಗ, ಸದಾ ಜೊತೆಗೆ ನಿಂತವಳು. ನಮ್ಮ ನಗುವಲ್ಲೇ ತನ್ನ ಖುಷಿಯನ್ನು ಕಂಡವಳು. ತನಗಾಗಿ ಏನನ್ನೂ ಬೇಡದವಳು. ತನಗಿಲ್ಲವೆಂದು ಕೊರಗದವಳು. ಮಗುವಿಗಾಗಿ ತನ್ನ ಜೀವನವನ್ನು ಮೀಸಲಿಟ್ಟವಳು ತಾಯಿ.
ಒಂದು ಜೀವಕ್ಕೆ ಜೀವನಪೂರ್ತಿ ಕಣ್ಣಾಗಿ ಕಾಪಾಡುವವಳು, ತನ್ನ ಜೀವವನ್ನು ಪಣಕ್ಕಿಟ್ಟು ಮಗುವಿನ ಜೀವವನ್ನು ರೂಪಿಸುವ ಮುಗ್ಧ ಮನಸ್ಸಿನ ದೇವತೆ ಅವಳು. ತಾಯಿಯನ್ನು ಗೋಮಾತೆಗೆ ಹೋಲಿಸಿದರೆ ತಪ್ಪಾಗದು. ಏಕೆಂದರೆ ಹೇಗೆ ಗೋಮಾತೆಯ ಕಣಕಣದಲ್ಲೂ ಮುಕ್ಕೋಟಿ ದೇವರು ನೆಲೆಸಿದ್ದಾರೋ ಅಂತೆಯೇ ತಾಯಿಯ ಕಣಕಣದಲ್ಲೂ ಆಕೆಯ ಮಗುವಿಗೆ ಮಮತೆಯೇ ತುಂಬಿಕೊಂಡಿದೆ. ಈ ಜಗತ್ತಿನಲ್ಲಿ ಅತ್ಯಂತ ಅಮೂಲ್ಯವಾದದ್ದು ತಾಯಿಯ ಹೃದಯ ಎಂದು ಹೇಳಬಹುದು.
ಒಂದು ಮಗು ತನ್ನ ತಾಯಿಗೆ ಕೆಟ್ಟದ್ದನ್ನು ಬಯಸಬಹುದು. ಆದರೆ ಒಂದು ತಾಯಿ ಯಾವತ್ತೂ ತನ್ನ ಮಗುವಿಗೆ ಕೆಟ್ಟದ್ದನ್ನು ಬಯಸುವವಳಲ್ಲ. ನಿಸ್ವಾರ್ಥ ಭಾವದಿಂದ ಪ್ರತಿಯೊಬ್ಬರ ಮನ ಗೆಲ್ಲುವವಳು. ಕಾಳಜಿಗೆ ಇನ್ನೊಂದ್ದು ಪದವೇ ತಾಯಿ ಎಂದರೆ ತಪ್ಪಾಗದು.
ತನ್ನ ಮಗುವನ್ನು ಸಾಕಲು ಅನೇಕ ಸಂಕಷ್ಟಗಳನ್ನು ಎದುರಿಸುತ್ತಾಳೆ. ಆಕೆಯ ನೋವು ಎಂದಿಗೂ ಕಾಣದು. ಆದರೆ ವಿಪರ್ಯಾಸ ಎಂದರೆ ಆ ಶಿಶುವು ಬೆಳೆಯುತ್ತಾ ಹೋದಂತೆ ಆಕೆಯನ್ನೇ ಬೈಯುವ, ಹೊಡೆಯುವ, ವೃದ್ಧಾಶ್ರಮಕ್ಕೆ ಸೇರಿಸುವ, ಕೊಲೆ ಮಾಡುವ ಅತ್ಯಾಚಾರ ಮಾಡುವ ಪ್ರಸಂಗವನ್ನು ಪ್ರಸ್ತುತ ಸಮಾಜದ ಮಕ್ಕಳಲ್ಲಿ ನಾವು ಕಾಣುತ್ತಿರುವುದು ಅಮಾನವೀಯವಾದ ಸಂಗತಿಯಾಗಿದೆ.
-ಅಕ್ಷತಾ ಪ್ರಭು
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ