ಈ ವಿಷಯದ ಸಲುವಾಗಿ ಹೇಳಬೇಕೆಂದರೆ ಇಂದಿನ ಶಿಕ್ಷಣದಲ್ಲಿ ಮಕ್ಕಳಿಗೆ ಎಲ್ಲಾ ವಿಧದಲ್ಲೂ ಜ್ಞಾನಾರ್ಜನೆ ಆಗುತ್ತಿದೆ. ದೈಹಿಕ, ಮಾನಸಿಕ, ನೈತಿಕ ಶಿಕ್ಷಣವನ್ನು ಕೊಡುವಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಮುಂಚೂಣಿಯಲ್ಲಿಯೇ ಇವೆ. ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚು, ವಯಸ್ಸಿಗಿಂತ ಜಾಸ್ತಿಯೇ ಮಕ್ಕಳಿಗೆ ವಿಷಯಗಳು ಗೊತ್ತಾಗುತ್ತಿದೆ ಎಂದರೂ ತಪ್ಪಿಲ್ಲ. ಆದರೆ ಅದರೊಂದಿಗೆ ಶಿಕ್ಷಣ ವ್ಯಾಪಾರಿಕರಣವೂ ಆಗುತ್ತಿದೆ.
ಶಾಲಾ-ಕಾಲೇಜುಗಳು ಪ್ರಸ್ತುತ ಬರಿ ವಿದ್ಯಾ ದೇಗುಲಗಳಾಗಿ ಉಳಿಯದೇ, ಅದನ್ನು ಪ್ರಾರಂಭಿಸಿದ ವ್ಯಕ್ತಿಗಳಿಗೆ ಲಾಭವನ್ನು ತಂದುಕೊಡುವ ಅಂಗಡಿಗಳಂತಾಗಿವೆ. ಕೆಲವೊಮ್ಮೆ ಶಿಕ್ಷಣದ ಮಟ್ಟ ಕುಸಿಯುತ್ತಿದೆಯೇ ಎಂದೆನಿಸಿದರೂ ಅದು ಉತ್ಪ್ರೇಕ್ಷೆಯ ಮಾತಲ್ಲ!
ಜ್ಞಾನದೇಗುಲವೆನಿಸಿದ ಶಾಲಾ-ಕಾಲೇಜುಗಳಲ್ಲಿರುವ ಶಿಕ್ಷಕರು ಕೆಲವೊಮ್ಮೆ ತಮ್ಮ ವಿದ್ಯಾರ್ಥಿಗಳ ಬುದ್ಧಿ ಮಟ್ಟಕ್ಕಿಂತಲೂ ಕಡಿಮೆ ಬುದ್ಧಿವಂತರಾಗಿರುತ್ತಾರೆ ಎಂದರೆ ನಂಬಲೇಬೇಕಾಗಿದೆ. ಇದಕ್ಕೆ ನೇರವಾಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹೊಣೆಗಾರರು. ಎಲ್ಲಾ ಚೆನ್ನಾಗಿ ಓದಿಕೊಂಡ, ವಿಷಯ ಗ್ರಹಿಸಿದ ಶಿಕ್ಷಕರನ್ನು ನೇಮಿಸಿಕೊಂಡರೆ ಸಂಬಳ ಜಾಸ್ತಿ ಕೊಡಬೇಕಾಗುತ್ತದೆಯೋ, ತಮ್ಮ ಜಾಗಕ್ಕೆ ಸಂಚಕಾರ ಬರಬಹುದೇನೋ ಎಂದು ತಿಳಿದುಕೊಂಡು, ಕಡಿಮೆ ಓದಿದ, ವಿಷಯಗಳ ಮೇಲೆ ಅಷ್ಟಾಗಿ ಹಿಡಿತವಿರದ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಾರೆ.
ಶಿಕ್ಷಕರಿಗೆ ಕಡಿಮೆ ಸಂಬಳ ಕೊಡುತ್ತಾರೆ ಹಾಗಾಗಿ ಮಕ್ಕಳಿಂದ ಪಡೆಯುವ ಫೀಸ್, ಡೊನೇಷನ್ ಕಡಿಮೆ ಇರಬಹುದೇನೋ ಎಂದು ತಿಳಿದರೆ ನಮ್ಮ ಊಹೆ ತಪ್ಪು! ಪೋಷಕರಿಂದ ಪಡೆಯುವ ಫೀಸ್ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಲೇ ಇರುತ್ತದೆ. ಆದರೆ ಕಷ್ಟಪಟ್ಟು ಮಕ್ಕಳನ್ನು ಸಂಭಾಳಿಸುತ್ತಾ, ಪಾಠಗಳನ್ನು ಮಾಡುವ ಶಿಕ್ಷಕರಿಗೆ ಸಿಗುವುದು ಚಿಕ್ಕ ಸಂಬಳ ಎಂಬುದೇ ವಿಪರ್ಯಾಸ!
ಇದರಿಂದ ಶಿಕ್ಷಣ ಸಂಸ್ಥೆಯ ಬೊಕ್ಕಸಕ್ಕೆ ಜಾಸ್ತಿ ಹೊರೆಯಾಗದೇ ಇರಬಹುದು. ಆದರೆ ಇಂಥವರನ್ನು ಗುರುಗಳು ಎಂದು ಕರೆಯುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗದೇ ಹೋಗುತ್ತದೆ. ಇಂತಹ ವಿದ್ಯಾರ್ಥಿಗಳೇ ದೊಡ್ಡವರಾದ ಮೇಲೆ, ನಾಗರಿಕ ಸಮಾಜದಲ್ಲಿ ನಕಾರಾತ್ಮಕ ಬೆಳವಣಿಗೆಗೆ ಪ್ರಮುಖ ಕಾರಣಕರ್ತರಾಗುತ್ತಾರೆ. ಈ ರೀತಿ ತಮ್ಮ ಒಂದು ತಪ್ಪಾದ ನಡೆ ಸಮಾಜಕ್ಕೆ ಆಘಾತಕಾರಿ ಬೆಳವಣಿಗೆಯನ್ನು ನೀಡಬಲ್ಲದು ಎಂದು ಇಂದಿನ ಶಿಕ್ಷಣ ಸಂಸ್ಥೆಗಳು ಮರೆಯುತ್ತಿರುವುದು ನಿಜಕ್ಕೂ ಖೇದನೀಯ.
ಮಕ್ಕಳಿಗೆ ಯೂನಿಫಾರಂ, ಪಠ್ಯಪುಸ್ತಕ, ಸಾರಿಗೆ ವ್ಯವಸ್ಥೆ, ಕರಾಟೆ, ಚಿತ್ರಕಲೆ, ಯೋಗ, ಈಜು, ಚಿತ್ರಕಲೆ, ಕುದುರೆ ಸವಾರಿ, ಸಂಗೀತ, ವಾದ್ಯ ಸಂಗೀತ ಹೀಗೆ ಒಂದೊಂದಕ್ಕೂ ಎಣಿಕೆ ಹಾಕಿ ದುಡ್ಡನ್ನು ಎಣಿಸುವ ಇಂದಿನ ಶಿಕ್ಷಣ ಸಂಸ್ಥೆಗಳು, ಅದರಿಂದ ಮಕ್ಕಳಿಗೆ ಉಪಯೋಗವಾಗುತ್ತಿದೆಯೇ ಅಥವಾ ಅತಿಯಾದ ಪಠ್ಯೇತರ ಚಟುವಟಿಕೆ ಅವರಿಗೆ ಹೊರೆಯಾಗಿ ಪರಿಣಮಿಸುತ್ತಿದೆಯೇ ಎಂಬುದನ್ನು ತಿಳಿಯುವಲ್ಲಿ ವಿಫಲರಾಗುತ್ತಿದ್ದಾರೆ.
ಪರಿಣಾಮವಾಗಿ ಮಕ್ಕಳು ಈ ಎಲ್ಲ ಚಟುವಟಿಕೆಗಳಲ್ಲೂ ಪ್ರಾರಂಭಿಕ ಹಂತದಲ್ಲೇ ಇದ್ದು ಸಮಯ ವ್ಯರ್ಥ ಮಾಡುತ್ತಿದ್ದಾರೆ. "Jack of all. Master of none" ಎಂಬಂತೆ ಎಲ್ಲವನ್ನು ಒಟ್ಟಿಗೆ ಕಲಿಯುವ ಧಾವಂತದಲ್ಲಿ ಯಾವುದನ್ನು ಸರಿಯಾಗಿ ಕಲಿಯದ ಪರಿಸ್ಥಿತಿ ಇಂದಿನ ಮಕ್ಕಳಲ್ಲಿ ನಿರ್ಮಾಣವಾಗುತ್ತಿದೆ. ಆದರೆ ಇದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ, ಎಲ್ಲದಕ್ಕೂ ಪ್ರತ್ಯೇಕ ಶುಲ್ಕವನ್ನು ಪಡೆದುಕೊಂಡು ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳುತ್ತಿದ್ದಾರೆ ಶಾಲಾ ಕಾಲೇಜುಗಳ ಸಂಸ್ಥೆಗಳು.
ಇದಕ್ಕೆ ಅಪವಾದವೆಂಬಂತೆ ಕೆಲವು ಸಂಸ್ಥೆಗಳಲ್ಲಿ ಮಕ್ಕಳಿಗೆ ಆಯೋಜಿಸುವ ಚಟುವಟಿಕೆಗಳಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೇರ ಕಾರಣವಾಗುತ್ತಿವೆ. ಹಾಗೆ ಆಗಿದ್ದಲ್ಲಿ ಆ ಸಂಸ್ಥೆಗಳು ನಿಜಕ್ಕೂ ವಿದ್ಯಾದೇಗುಲಗಳೇ ಎಂಬುದರಲ್ಲಿ ಎರಡು ಮಾತಿಲ್ಲ.
ಮಕ್ಕಳು ಓದಿ ಒಳ್ಳೆಯ ಕೆಲಸ ಹಿಡಿಯಲಿ ಎಂಬ ಆಸೆಯಿಂದ ಎಷ್ಟೇ ಖರ್ಚಾದರೂ ಪರವಾಗಿಲ್ಲ ತಾನು ಇಂತಹ ದೊಡ್ಡ ಸಂಸ್ಥೆಗಳಲ್ಲಿ ಓದಿಸುತ್ತೇನೆ ಎಂಬ ಪೋಷಕರ ಮನಸ್ಥಿತಿ ಬದಲಾಗಬೇಕಾಗಿದೆ. ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಇಂಜಿನಿಯರಿಂಗ್, ವೈದ್ಯಕೀಯಕ್ಕೆ ಸಂಬಂಧಿಸಿದ ಕೋಚಿಂಗ್ ಕೊಟ್ಟು ಬುದ್ಧಿವಂತರನ್ನಾಗಿ ಮಾಡುತ್ತೇವೆ, ಅಂತರರಾಷ್ಟ್ರೀಯ ಕ್ರೀಡಾಪಟುವನ್ನಾಗಿ ಮಾಡುತ್ತೇವೆ ಹಾಗಾಗಿ ಲಕ್ಷಗಟ್ಟಲೇ ಹಣ ಕೊಡುತ್ತೇವೆ ಎಂದು ಆಮಿಷ ತೋರಿಸುವ ಸಂಸ್ಥೆಗಳಿಗೆ ಮರುಳಾಗದೇ ಇದ್ದಲ್ಲಿ, ಗಣನೀಯವಾಗಿ ಇಂತಹ ಸಂಸ್ಥೆಗಳು ಕಡಿಮೆಯಾಗುತ್ತಾ ಬರುತ್ತವೆ.
- ಅಚಲ ಬಿ ಹೆನ್ಲಿ, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ