ತುಂಗಭದ್ರಾ ನದಿಯ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ಆಯೋಜಿಸಿರುವ ನಿರ್ಮಲ ತುಂಗಭದ್ರಾ ಅಭಿಯಾನ ನಮ್ಮ ಶೃಂಗೇರಿಯಿಂದ ಹನುಮ ಹುಟ್ಟಿದ ಕಿಷ್ಕಿಂಧೆಯವರೆಗೆ ನಡೆಯಲಿದೆ.
ಶುದ್ದ ಜಲ, ಶುದ್ದ ಪರಿಸರಗಳ ಉಳಿಯುವಿಕೆಗೆ ಹಮ್ಮಿಕೊಂಡ ಈ ಅಭಿಯಾನದಲ್ಲಿ ಶುದ್ದ ಮನಸ್ಸಿನಿಂದ ನಾವೂ ಕೈ ಜೋಡಿಸೋಣ.
**
ಒಳ್ಳೆ ಕೆಲಸಕ್ಕೆ ಹೊರಟಾಗ ವಿಘ್ನಗಳು ಸಹಜ ಎಂಬಂತೆ ತುಂಗಾ ಉಳಿಸಿ ಎಂಬದು ನಗರ ಪರಿಸರವಾದಿಗಳ ಮತ್ತು NGO ಗಳ ಹೊಸ ದಾಳ. ತುಂಗಾ ನದಿ ಮಲಿನವಾಗುತ್ತಿರುವುದು ಶಿವಮೊಗ್ಗ ಮತ್ತು ಅದರ ಆಚೆಗೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೊಪ್ಪದ ವಿಚಾರವಾದಿ ಜನಪ್ರತಿನಿಧಿಯೊಬ್ಬರೇ ಹೀಗೆ ಹೇಳಿಕೆ ಕೊಟ್ಟಿದ್ದಾರೆ ಕೂಡ. ಎಲ್ಲರೂ ಎಲ್ಲವನ್ನೂ ಅನುಮಾನದಿಂದ ನೋಡುವಂತಹ ಕಾಲದಲ್ಲಿ ಇದ್ದೇವೆ.
ಹೆಚ್ಚಿನ ಅಭಿಯಾನ, ಪ್ರತಿಭಟನೆಗಳು ಒಳ್ಳೆಯ ಉದ್ದೇಶದಿಂದಲೇ ಪ್ರಾರಂಭವಾದರೂ, ನಿಧಾನವಾಗಿ ಅದು ರಾಜಕೀಯ ತಿರುವು ಪಡೆದು, ಗಮ್ಯ ತಲುಪುವಾಗ ಅಭಿಯಾನವೇ ಶಿಥಿಲವಾಗುವುದೂ ಉಂಟು. ಹಾಗಾಗಿ, ಎಲ್ಲವನ್ನೂ ಅನುಮಾನದಿಂದ ನೋಡುವ ಪ್ರಾರಂಭಿಕ ಮನಸ್ಥಿತಿಯೂ ಸಹಜವಾಗಿದೆ ಮತ್ತು ತಪ್ಪಲ್ಲ. ಆದರೆ ನಿರ್ಮಲ ತುಂಗಭಧ್ರಾ ಅಭಿಯಾನ ಅಂತಹ ಅಭಿಯಾನ ಆಗದೆ, ರಾಜಕೀಯ ತಿರುವುಗಳಿಗೆ ಬಲಿಯಾಗದೆ, ಉದ್ದೇಶಿತ ಯಶಸ್ಸನ್ನು ಸಾಧಿಸಲಿದೆ ಎಂಬ ಭರವಸೆಯೊಂದಿಗೆ, ಯಶಸ್ಸನ್ನು ಸಾಧಿಸಲಿ ಎಂಬ ಹಾರೈಕೆಯೊಂದಿಗೆ ಅಭಿಯಾನಕ್ಕೆ ಪ್ರೀತಿಯಿಂದಲೇ ಜೊತೆಗೂಡಿ, ನಾಲ್ಕು ಹೆಜ್ಜೆ ಸೇರಿಸಿ ಬೆಂಬಲಿಸೋಣ.
**
ಕೊಪ್ಪದ ಸಮಸ್ತ ಗಾರ್ಬೇಜನ್ನು ತಂದು ಕೊಪ್ಪ ಘಾಟಿಯಲ್ಲಿ ಡಂಪ್ ಮಾಡಲಾಗುತ್ತಿದೆ. ಮಳೆ ಬಂದಾಗ ಆ ಡಂಪ್ ಯಾರ್ಡಿನ ತ್ಯಾಜ್ಯದ ರಸ ಕಪ್ಪು ನೀರಾಗಿ ಹಳ್ಳವಾಗಿ ಹರಿದು ತುಂಗ ನದಿಯನ್ನು ಸೇರುತ್ತಿದೆ. ಮೂರು ತಿಂಗಳ ಹಿಂದೆ ಕೊಪ್ಪ ತ್ಯಾಜ್ಯ ಘಟಕದಲ್ಲಿ ಸಂಸ್ಕರಣೆಗೆ ಟೆಂಡರ್ ನೀಡಲಾಗಿದೆಯಾದರೂ ಅದರ ಕೆಲಸ ಸರಿಯಾಗಿ ಟೇಕಾಫ್ ಆಗಿಲ್ಲ. ಹನ್ನೆರಡು ವರ್ಷಗಳಿಂದ ಈ ಡಂಪಿಂಗ್ ಯಾರ್ಡ್ನಲ್ಲಿ ತ್ಯಾಜ್ಯ ಅವೈಜ್ಞಾನಿಕವಾಗಿ ಡಂಪ್ ಮಾಡಲಾಗಿದೆ. ಪಟ್ಟಣ ಪಂಚಾಯತಿಯ ನಿರ್ಲಕ್ಷ್ಯ, ಕೌನ್ಸಿಲರ್ಗಳ ನಿಷ್ಕ್ರಿಯತೆಯಿಂದಾಗಿ ಕಸ ಘಟಕದ ವಾಸನೆ ಕೊಪ್ಪ-ಶೃಂಗೇರಿ ಹೈವೇಯಲ್ಲಿ ಕಿಲೋಮೀಟರ್ಗಟ್ಟಲೆ ವ್ಯಾಪಿಸಿದೆ. ಕಸ ನಿರ್ವಹಣೆಗೆ ಖರ್ಚಾಗುತ್ತಿರುವ ಕೋಟಿ ಕೋಟಿ ಹಣವೂ ಕಪ್ಪಾಗಿ ವಾಸನೆ ಬರುತ್ತಿರುವ ಸುದ್ದಿ ಇಡೀ ಕೊಪ್ಪ ವ್ಯಾಪಿಸಿದೆ. ತುಂಗೆ ಕಲುಷಿತವಾಗಲು ಕೊಪ್ಪ ಪಟ್ಟಣ ಪಂಚಾಯತಿಯ ಅಧಿಕಾರಿಗಳ, ನಿಷ್ಕ್ರಿಯತೆಯ, ಗೌರವಾನ್ವಿತ ಕೌನ್ಸಿಲರ್ಗಳ ನಿಷ್ಕ್ರಿಯತೆಯ ಕೊಡುಗೆ ದೊಡ್ಡದಿದೆ.
ಈ ವಿಚಾರವನ್ನು ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ತಿಳಿಸಿ, ಅಭಿಯಾನಕ್ಕೆ ಬೆಂಬಲ ಸೂಚಿಸಲಾಗಿದೆ. ಕೊಪ್ಪ ತಾಲೂಕಿನ ನೂರಾರು ನಾಗರಿಕರು ಅಭಿಯಾನದ ಜೊತೆ ನಾಲ್ಕು ಹೆಜ್ಜೆ ನೆಡೆದು ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಜೊತೆಯಾಗಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲರೂ ಅವರ ಜೊತೆ ಸೇರೋಣ. ಎರಡು ಹೆಜ್ಜೆ ಹಾಕೋಣ.
*
ಒಂದುವೇಳೆ NGO ಮತ್ತು ಏಕ ಮುಖ ಚಿಂತನೆಯ ನಗರ ಪರಿಸರವಾದಿಗಳೇ ಈ ಸಂಘಟನೆಯಲ್ಲಿ ಇದ್ದರೂ ನಿರ್ಮಲ ತುಂಗಭದ್ರಾ ಅಭಿಯಾನ ಕ್ಕೆ ಕೈ ಜೋಡಿಸುವುದರೊಂದಿಗೆ ನಮ್ಮಲ್ಲಿಯ ವಾಸ್ತವಾಂಶಗಳನ್ನು ಅವರ ಗಮನಕ್ಕೆ ತರಬಹುದು.
ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್, ನಿಷೇಧಿತ 60 ಮೈಕ್ರೋನ್ ಕಡಿಮೆ ಗೇಜಿನ ಪ್ಲಾಸ್ಟಿಕ್ ತಯಾರಾಗುವುದು ನಗರ ಪರಿಸರವಾದಿಗಳು ಮತ್ತು ಅದರ ಬೆಂಬಲಿತ NGO ಗಳ ಮನೆ/ಕಛೇರಿಗಳ ಪಕ್ಕದಲ್ಲೇ ಅಲ್ವಾ? ಅವುಗಳು ಬಂದು ತುಂಗಾ ನದಿ ನೀರನ್ನು ಸೇರುತ್ತಿವೆ ಅಂತಾದಾಗ ಅಭಿಯಾನದ ಭಾಗವಾಗಿ ನಗರ ಪರಿಸರವಾದಿಗಳು ತಮ್ಮ ಪಕ್ಕದಲ್ಲಿನ ಈ ಕಾರ್ಖಾನೆಗಳ ಬಗ್ಗೆಯೂ ಪ್ರತಿಭಟನೆ ಮಾಡುವಂತೆ ಒತ್ತಾಯಿಸಲಿಕ್ಕಾದರೂ ನಾವು ಅಭಿಯಾನದಲ್ಲಿ ಭಾಗವಹಿಸೋಣ.
ಪ್ಲಾಸ್ಟಿಕ್ ವಿಚಾರ ಮಾತ್ರ ಅಲ್ಲ, ಇಂತಹ ಅನೇಕ ಅಪಸವ್ಯಗಳನ್ನು ನಗರ ಪರಿಸರವಾದಿಗಳ-NGO ಗಳ ಗಮನಕ್ಕೆ ತರಬೇಕಾಗಿದೆ.
ಅಭಿಯಾನದಲ್ಲಿ ಒಂದುವೇಳೆ ನಗರ ಪರಿಸರವಾದಿಗಳು, NGO ಗಳು ಯಾರಾದರು ಇದ್ದರೆ ಅವರಿಗೆ ಈ ಮಾಹಿತಿಗಳನ್ನು ಹಂಚಿಕೊಳ್ಳುತ್ತ, ನಮ್ಮ ಭೂಮಿಯ ಹಕ್ಕನ್ನು, ನೆಮ್ಮದಿಯ ಬದುಕನ್ನು ಕಸ್ತೂರಿ ರಂಗನ್ ವರದಿ, ಗಾಡ್ಗಿಳ್ ವರದಿಗಳು ಕಿತ್ತುಕೊಂಡರೆ ನಮಗಾಗುವ ಪರಿಣಾಮಗಳನ್ನೂ ಅವರಿಗೆ ತಿಳಿಸಲಾದರೂ ನಾವು ಅವರ ಪಾದಯಾತ್ರೆಯಲ್ಲಿ ಎರಡು ಹೆಜ್ಜೆ ಸೇರಿಸೋಣ.
**
ಬನ್ನಿ ಇಂದು ಪ್ರಾರಂಭವಾಗಿರುವ ನಿರ್ಮಲ ತುಂಗಭದ್ರಾ ಅಭಿಯಾನ ವನ್ನು ಯಶಸ್ವಿಗೊಳಿಸೋಣ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ