ಮಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾದ ಆಶ್ರಯದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ (ದಿವ್ಯ ಭವ್ಯ ಹವ್ಯ ಲೋಕ)ವು ಬೆಂಗಳೂರಿನ ಅರಮನೆ ಮೈದಾನದ ರಾಯಲ್ ಸೆನೆಟ್ ಹಾಗೂ ಗ್ರ್ಯಾಂಡ್ ಕ್ಯಾಸಲ್ನಲ್ಲಿ ಡಿ.27, 28, 29ರ ಶುಕ್ರವಾರ, ಶನಿವಾರ, ಭಾನುವಾರಗಳಂದು ನಡೆಯಲಿದೆ ಎಂದು ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ್ ಕಜೆ ತಿಳಿಸಿದ್ದಾರೆ.
ಅವರು ಭಾನುವಾರ ನಂತೂರಿನ ಶಂಕರಶ್ರೀಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ವಿವರಗಳನ್ನು ನೀಡಿದರು. ವಿಶಿಷ್ಟ ಸಂಸ್ಕೃತಿ-ಪರಂಪರೆಗಳನ್ನು ಹೊಂದಿರುವ ಹವ್ಯಕರ ಭವ್ಯ ಪರಂಪರೆಯನ್ನು ವಿಶ್ವಕ್ಕೆ ಅನಾವರಣಗೊಳಿಸುವ ಸಮ್ಮೇಳನ ಇದಾಗಿದ್ದು, ಒಂದೂವರೆ ಲಕ್ಷಕ್ಕೂ ಅಕ ಮಂದಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಐತಿಹಾಸಿಕ ದಾಖಲೆಯ ಸ್ಮರಣೀಯ 3 ದಿನಗಳ ಈ ಉತ್ಸವದಲ್ಲಿ, ಸಮುದಾಯ ಎದುರಿಸುತ್ತಿರುವ ವಿವಾಹ ಇತ್ಯಾದಿ ಸಮಸ್ಯೆ-ಸವಾಲುಗಳು ಹಾಗೂ ಸಾಧನೆಗಳನ್ನೊಳಗೊಂಡ 18 ವಿಷಯಗಳ ಚಿಂಥನ-ಮಂಥನಗಳು 8 ಗೋಷ್ಠಿಗಳ ಮೂಲಕ ನಡೆಯಲಿವೆ. ಈ ಸಮ್ಮೇಳನದ ಜ್ಯೋತಿಯನ್ನು ಹವ್ಯಕರ ಮೂಲವಾದ ಉತ್ತರಪ್ರದೇಶದ ಅಹಿಚ್ಛತ್ರದಿಂದಲೇ ತಂದು ಬೆಳಗುವುದು ಈ ಬಾರಿಯ ವಿಶೇಷತೆಯಾಗಿದೆ ಎಂದರು.
ಶ್ರೀರಾಮಚಂದ್ರಾಪುರ ಮಠದ ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, ಸ್ವರ್ಣವಲ್ಲೀ ಮಠಾಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳಲ್ಲದೆ ವಿವಿಧ ಮಠಾಶರು, ನಾಡಿನ ಗಣ್ಯಮಾನ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ನುಡಿದರು.
ಪ್ರತಿದಿನ ಲೋಕಕಲ್ಯಾಣಕ್ಕಾಗಿ ಹವ್ಯ-ಯಜ್ಞಗಳು ನಡೆಯಲಿದ್ದು, ಗಾಯತ್ರೀ ಥೀಮ್ ಪಾರ್ಕ್ ಮೂಲಕ ಈ ಮೂಲಮಂತ್ರದ ವಿರಾಟ್ ದರ್ಶನ, ದೇಶೀ ಗೋಲೋಕ-ಗೋಮಾತಾ ದರ್ಶನ, ಪೂಜನ, 108 ವರ್ಷಗಳ ಪಂಚಾಂಗ ದರ್ಶನ-ಖಗೋಳ ವಿಜ್ಞಾನದ ಸಿಂಚನ, 108 ಸಾಂಸ್ಕೃತಿಕ ಕಾರ್ಯಕ್ರಮಗಳು, 300ಕ್ಕೂ ಅಧಿಕ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ವೈಭವ, 6000 ಹವ್ಯಕ ಪುಸ್ತಕಗಳ ಪ್ರದರ್ಶನ, ಪೂಜಾ ವೈವಿಧ್ಯಗಳ ದರ್ಶನ, ಅಡಕೆ ಪ್ರಪಂಚ, ಯಕ್ಷ ಕಿರೀಟ, ಛಾಯಾ ಸಂಪ್ರದಾಯ, ‘ಸಹಸ್ರಚಂದ್ರ’ ಸ್ಮರಣ ಸಂಚಿಕೆ ಲೋಕಾರ್ಪಣೆ, ಖ್ಯಾತ ಕಲಾವಿದರಿಂದ ಸಂಗೀತ ಸಂಗಮ, ಸುಪ್ರಸಿದ್ಧ ಕಲಾವಿದರಿಂದ ಯಕ್ಷಯಾನ, ಭಾವರಾಗ, ವೈವಿಧ್ಯಮಯ ನಾಟ್ಯೋತ್ಸವ, ವಾದ್ಯ ವೈಭವ, ಭಕ್ತಿ ಭಜನೆ, ಶತಕಂಠಗಳಿಂದ ಭಗವದ್ಗೀತಾ ಪಠಣ, ಕಿರುತೆರೆ ಕಲಾವಿದರಿಂದ ಹವ್ಯಕ ನಾಟಕ, ಸಮೂಹ ಜಾದೂ, ಚಿಣ್ಣರ ಮನೆಯಂಗಳದಲ್ಲಿ ಕುದುರೆ, ಒಂಟೆ ಸವಾರಿ, ಗೊಂಬೆಗಳ ಆಟ, ವಾಕಥಾನ್-ಹವ್ಯಕ ನಡಿಗೆ-ವಿಶ್ವದೆಡೆಗೆ, ಬೈಕ್ ರ್ಯಾಲಿ ಇತ್ಯಾದಿಗಳು ನಡೆಯಲಿವೆ.
ಹಾಗೆಯೇ ೫೬೭ಮಂದಿ ಶ್ರೇಷ್ಠ ಸಾಧಕರಿಗೆ ಪ್ರಶಸ್ತಿಯ ಗೌರವ ಇರಲಿದ್ದು, ಈ ಪೈಕಿ 81 ಶ್ರೇಷ್ಠ ಸಾಧಕರಿಗೆ ‘ಹವ್ಯಕ ಸಾಧಕ ರತ್ನ’ಪುರಸ್ಕಾರ, 81 ವೈದಿಕರಿಗೆ ‘ಹವ್ಯಕ ವೇದ ರತ್ನ’ ಸಮ್ಮಾನ, 81 ಕೃಷಿಕರಿಗೆ ‘ಹವ್ಯಕ ಕೃಷಿ ರತ್ನ’, 81 ಶಿಕ್ಷಕರಿಗೆ ‘ಹವ್ಯಕ ಶಿಕ್ಷಕ ರತ್ನ’, 81 ವಿದ್ಯಾರ್ಥಿಗಳಿಗೆ ‘ಹವ್ಯಕ ವಿದ್ಯಾರತ್ನ’, 81 ಯೋಧರಿಗೆ ‘ಹವ್ಯಕ ದೇಶ ರತ್ನ’, 81 ಸಾಧಕರಿಗೆ ‘ಹವ್ಯಕ ಸ್ಪೂರ್ತಿರತ್ನ’, ಪುರಸ್ಕಾರ ನೀಡಿ ಗೌರವಿಸಲಾಗುವುದು. 81 ಕಲಾವಿದರ ತಂಡದಿಂದ ನರ್ತನ ಸಂಕೀರ್ತನ, ಹವಿಗನ್ನಡ ಸಾಹಿತ್ಯ ಪ್ರದರ್ಶನ, ಸಾವಿರದ ರಕ್ತದಾನ, 81 ವಾಣಿಜ್ಯ ಮಳಿಗೆಗಳು, 81 ದೇಶೀ ಕರಕುಶಲ ಮಳಿಗೆಗಳು, ಇಕ್ಷು ರಸಾಸ್ವಾದ -ಸಿಹಿ ಸವಿಯ ಕಬ್ಬಿನ ಆಲೆಮನೆ, ಕರಕುಶಲ ವಸ್ತು ಪ್ರದರ್ಶನ-ಸ್ಪರ್ಧೆ-ಮಾರಾಟ, ಹವ್ಯಕ ಪಾರಂಪರಿಕ ವಸ್ತು ಪ್ರದರ್ಶನ, ಸ್ಪರ್ಧೆ, ಸವಿರುಚಿ ದರ್ಶಿನಿ (ಹವ್ಯಕರ ಆಹಾರ ಸ್ಪರ್ಧೆ-ಪ್ರದರ್ಶನ), ರಂಗೋಲಿ ಸ್ಪರ್ಧೆ, ಹವ್ಯಕ ಚಿತ್ರಕಲಾ ಸ್ಪರ್ಧೆ, ಹೂಕುಂಡ ಇಕಬಾನ ಕಲಾ ಸ್ಪರ್ಧೆ, ಮಕ್ಕಳಿಗಾಗಿ ಸಂಸ್ಕೃತಿ ಚಿತ್ರ ಸ್ಪರ್ಧೆ, ಹವಿ ಆರ್ಟ್ ಟಿ ಶರ್ಟ್, ಆಹಾರ ವಿಹಾರ,100ಕ್ಕೂ ಅಧಿಕ ಖಾದ್ಯಗಳ ಹವ್ಯಕ ಪಾಕೋತ್ಸವ ಇತ್ಯಾದಿಗಳು ಸಮ್ಮೇಳನದಲ್ಲಿ ಇರಲಿವೆ ಎಂದು ಅವರು ವಿವರಿಸಿದರು.
ಈ ಸಂದರ್ಭ ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಅಖಿಲ ಹವ್ಯಕ ಮಹಾಸಭಾದ ನಿರ್ದೇಶಕರಾದ ಸರವು ರಮೇಶ್ ಭಟ್, ಮಂಗಳೂರು ಹವ್ಯಕ ಸಭಾದ ಅಧ್ಯಕ್ಷೆ ಶ್ರೀಮತಿ ಗೀತಾ ದೇವಿ ಚೂಂತಾರು, ಮಂಗಳೂರು ಮಾತೃತ್ವಂನ ಅಧ್ಯಕ್ಷೆ ಶ್ರೀಮತಿ ಸುಮಾ ರಮೇಶ್, ಮಂಗಳೂರು ದಕ್ಷಿಣ ವಲಯ ಅಧ್ಯಕ್ಷ ಡಿ.ವಿಶ್ವೇಶ್ವರ ಭಟ್, ಮಧ್ಯವಲಯ ಅಧ್ಯಕ್ಷ ಕಬೆಕ್ಕೋಡು ಬಾಲಸುಬ್ರಹ್ಮಣ್ಯ ಭಟ್ ಮತ್ತಿತರರು ಪಾಲ್ಗೊಂಡಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ