ಜ್ಞಾನ ದರ್ಶಿನಿ ಮತ್ತು ಜ್ಞಾನ ವರ್ಷಿಣಿ ಪುಸ್ತಕಾಧಾರಿತ ಸ್ಪರ್ಧೆ ಉದ್ಘಾಟನೆ
ಬಂಟ್ವಾಳ: ಪುಸ್ತಕದಲ್ಲಿರುವ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ಪರ್ಧೆಗಳು ಸಾಂಕೇತಿಕವಾಗಿ ನಡೆಯುತ್ತವೆ. ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಅಧ್ಯಯನ ಮಾಡಬೇಕು. ಶಾಂತಿವನ ಟ್ರಸ್ಟ್ ವತಿಯಿಂದ ಕಳೆದ ಮೂವತೈದು ವರ್ಷಗಳಿಂದ ಯೋಗ ಮತ್ತು ನೈತಿಕ ಶಿಕ್ಷಣ ನೀಡುತ್ತಿದೆ. ದಶಂಬರ ತಿಂಗಳಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ಧರ್ಮಸ್ಥಳದಲ್ಲಿ ನಡೆಯಲಿದೆ ಎಂದು ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇದರ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ಹೇಳಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಜ್ಞಾನವರ್ಷಿಣಿ ಮತ್ತು ಜ್ಞಾನ ದರ್ಶಿನಿ ಪುಸ್ತಕಗಳ ಮೌಲ್ಯಾಧಾರಿತ ವಿವಿಧ ಸ್ಪರ್ಧೆಗಳನ್ನು ಶ್ರೀರಾಮಚಂದ್ರ ಪದವಿ ಪೂರ್ವ ಕಾಲೇಜು ಪೆರ್ನೆ ಇಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಶೇಖರ ರೈ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪುಸ್ತಕ ನಾಶವಾದರೆ ಇತಿಹಾಸ ನಾಶವಾಗುತ್ತದೆ. ಪುಸ್ತಕ ಶಾಶ್ವತವಾದ ಸಂಪತ್ತು ಸ್ಪರ್ಧೆಗಾಗಿ ಓದುವ ಬದಲು ಜೀವನದಲ್ಲಿ ಪ್ರೇರಣೆ ಸಿಗಲು ಓದುವ ಅಭ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸತ್ಯನಾರಾಯಣ ರೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿದ್ದ ನಿವೃತ್ತ ಶಿಕ್ಷಕ ತಾರನಾಥ ಶೆಟ್ಟಿ, ಸಿ.ಆರ್.ಪಿ. ಸತೀಶ ರಾವ್ ಮಾಣಿ ಶುಭ ಹಾರೈಸಿ ಮಾತನಾಡಿದರು. ಶಾಂತಿವನ ಟ್ರಸ್ಟ್ ಸ್ಪರ್ಧೆಯ ಸಂಯೋಜಕ ಯೋಗ ಶಿಕ್ಷಕ ಚೆನ್ನಕೇಶವ ಪೆರ್ನೆ ಸ್ವಾಗತಿಸಿದರು. ಶಿಕ್ಷಕಿ ಆಶಾಲತಾ ನಿರೂಪಿಸಿದರು.
ಪುಂಜಾಲಕಟ್ಟೆಯಲ್ಲಿ ನವೆಂಬರ್ 21ಕ್ಕೆ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ತಾಲೂಕು ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ವಿವರ ಕೆಳಗಿನಂತಿದೆ.
ಪ್ರೌಢ ಶಾಲಾ ವಿಭಾಗ: ಭಾಷಣ ಸ್ಪರ್ಧೆ- ಯಶಿತಾ ಎಸ್.ಎಲ್.ಎನ್.ಪಿ ವಿದ್ಯಾಲಯ ಪಾಣೆಮಂಗಳೂರು, ಪ್ರಬಂಧ ಸ್ಪರ್ಧೆ- ಅನನ್ಯ ಎಸ್. ಮತ್ತು ಕಂಠಪಾಠ ಸ್ಪರ್ಧೆ- ಕೀರ್ತಿ, ಶ್ರೀರಾಮ ಪ್ರೌಢ ಶಾಲೆ ಕಲ್ಲಡ್ಕ. ಚಿತ್ರಕಲಾ ಸ್ಪರ್ಧೆ -ಪೂರ್ವಿಕಾ ಯಂ .ಡಿ. ಸರಕಾರಿ ಪ್ರೌಢ ಶಾಲೆ ಕಾವಳಕಟ್ಟೆ.
ಪ್ರಾಥಮಿಕ ಶಾಲಾ ವಿಭಾಗ: ಭಾಷಣ ಸ್ಪರ್ಧೆ- ಪಿ.ಸುಸ್ಮಿತಾ ಭಟ್, ಪ್ರಬಂಧ ಸ್ಪರ್ಧೆ –ರಾಜೇಶ್ವರಿ ಭಟ್, ಚಿತ್ರಕಲಾ ಸ್ಪರ್ಧೆ- ನಿನಾದ್ ಕೈರಂಗಳ ಇವರು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ವಿದ್ಯಾರ್ಥಿಗಳು. ಕಂಠಪಾಠ ಸ್ಪರ್ಧೆ-ದೃಶ್ಯಾ ಎಸ್.ವಿ.ಎಸ್. ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಬಂಟ್ವಾಳ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ