ಸ್ವಾತಂತ್ರ‍್ಯ ಕೇವಲ ಕಥೆಯಲ್ಲ, ಅದೊಂದು ದಂತಕಥೆ: ಡಾ. ಪಿ. ಅನಂತಕೃಷ್ಣ ಭಟ್

Upayuktha
0

 


ಮಂಗಳೂರು: ಸ್ವಾತಂತ್ರ‍್ಯ ಎಂಬುದು ಕೇವಲ ಕಥೆಯಷ್ಟೇ ಅಲ್ಲ, ಅದೊಂದು ದಂತಕಥೆ ಎಂದು ಕೆನರಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಪಿ. ಅನಂತಕೃಷ್ಣ ಭಟ್‌ ಹೇಳಿದರು.   


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ನೆಹರೂ ಚಿಂತನಕೇಂದ್ರ, ಹಾಗೂ ರಾಜ್ಯಶಾಸ್ತ್ರ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇದರ ವತಿಯಿಂದ ಆಯೋಜಿಸಿದ್ದ ಭಾರತದ ಸಂವಿಧಾನ ಅಮೃತ ಮಹೋತ್ಸವ: 75ರ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಭಾರತದ ಸಂವಿಧಾನ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಇಂದಿನ ಯುವಜನತೆ ವಿಕಸಿತ ಭಾರತದ ಪ್ರಜೆಗಳಾಗಿದ್ದಾರೆ. ಸಂವಿಧಾನ ಎಂದಿಗೂ ನಿಂತ ನೀರಲ್ಲ, ಅದು ಚಲಿಸುವ ನದಿಯ ಹಾಗೆ. ಸಂವಿಧಾನ ಎಂದಿಗೂ ಗಾಳಿ ಗೋಪುರವಲ್ಲ, ಐಕ್ಯತೆ ಮತ್ತು ಭಾವೈಕತೆ ಸಾರುವ ಶ್ರೇಷ್ಠ ಕಾನೂನಾಗಿದೆ ಎಂದು ಹೇಳಿದರು.


ಬ್ರಿಟನ್‌ ಸಂಸತ್ತಿನಲ್ಲಿ ಮಾಂಟೆಗೋ ಭಾರತಕ್ಕೆ ಹಂತಹಂತವಾಗಿ ಸುಭದ್ರ ಸರ್ಕಾರ ಒದಗಿಸುವುದೇ ಬ್ರಿಟಿಷ್‌ ಸರ್ಕಾರದ ಗುರಿ ಎಂದು ಘೋಷಿಸುತ್ತಾರೆ. ಅದರಂತೆ 1945ರಲ್ಲಿ ಮೌಂಟ್‌ಬ್ಯಾಟನ್‌ ಭಾರತಕ್ಕೆ ತನ್ನದೇ ಆದ ಸಂವಿಧಾನ ರೂಪಿಸಿಕೊಳ್ಳಲು ಕಾಲಾವಕಾಶ ಮಾಡಿಕೊಡುತ್ತಾರೆ. ಇದರಂತೆ ದೇಶದಲ್ಲಿ ಸಂವಿಧಾನ ರಚನಾ ಸಮಿತಿ ರಚನೆ ಮಾಡಲಾಗುತ್ತದೆ. ಈ ಸಮಿತಿಯ ಅಧ್ಯಕ್ಷತೆಯನ್ನು ಡಾ. ಬಿ. ಆರ್. ಅಂಬೇಡ್ಕರ್‌ಗೆ ವಹಿಸಲಾಗುತ್ತದೆ. ಅವರು ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಭಾರತಕ್ಕೆ ಸುಭದ್ರವಾದ ಸಂವಿಧಾನವನ್ನು ರಚನೆ ಮಾಡಲಾಗುತ್ತದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಂಗ ಎಂಬ ಮೂರು ಪ್ರಮುಖ ಅಂಗಗಳನ್ನು ಗುರುತಿಸಲಾಗುತ್ತದೆ. ಇದನ್ನೇ ಪೊಲಿಟಿಕಲ್‌ ಇಂಜಿನಿಯರಿಂಗ್‌ ಎಂದು ಹೇಳುತ್ತೇವೆ ಎಂದು ಅಭಿಪ್ರಾಯಪಟ್ಟರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿಗೌಡ, ಸಂವಿಧಾನವು ಕಾನೂನು ಪುಸ್ತಕ. ಡಾ. ಬಿ. ಆರ್. ಅಂಬೇಡ್ಕರ್‌ ಅವರು ತಮ್ಮ ಬದುಕಿನಲ್ಲಿ ಅನುಭವಿಸಿದ ಎಲ್ಲಾ ನೋವುಗಳಿಗೆ ಅಂತ್ಯ ಹಾಡಬೇಕು ಎಂಬ ನಿಟ್ಟಿನಲ್ಲಿ ಈ ಸಂವಿಧಾನವನ್ನು ಬರೆದಿದ್ದಾರೆ. ಇಂದು ನಾವೆಲ್ಲರೂ ಹಕ್ಕುಗಳ ಬಗ್ಗೆ ಮಾತ್ವೇ ಮಾತನಾಡುತ್ತೇವೆ, ಆದರೆ ಕರ್ತವ್ಯಗಳನ್ನು ಮರೆತುಬಿಡುತ್ತೇವೆ. ಇಂದಿನ ವಿದ್ಯಾರ್ಥಿಗಳು ಸಂವಿಧಾನದ ಕುರಿತು ಅರಿವು ಮೂಡಿಸಿಕೊಂಡು ಅದನ್ನುಸೂಕ್ತ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು. 


ಮಂಗಳೂರು ವಿಶ್ವವಿದ್ಯಾನಿಲಯದ ನೆಹರೂ ಚಿಂತನ ಕೇಂದ್ರದ ನಿರ್ದೇಶಕ ಪ್ರೊ. ದಯಾನಂದ ನಾಯ್ಕ್‌ ಪ್ರಾಸ್ಥಾವಿಕವಾಗಿ, ಸಂವಿಧಾನದ ಪೀಠಿಕೆ ಮುಂದಿನ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತದೆ. ಇಲ್ಲಿ ಯಾರೂ ಸ್ವಾರ್ಥಿಗಳಲ್ಲ, ಎಲ್ಲರೂ ನಿಸ್ವಾರ್ಥಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತ ಸಂವಿಧಾನಕ್ಕೆ ಅಡಿಪಾಯ ಹಾಕಿದ ಡಾ. ಬಿ. ಆರ್. ಅಂಬೇಡ್ಕರ್‌ ಹಾಗೂ ನೆಹರೂ ಅವರಂತಹ ಮುಂತಾದ ನೇತಾರರ ಚಿಂತನೆಗಳು ಇಡೀ ದೇಶದಲ್ಲಿ ಎಲ್ಲಾ ಕೋಮಿನ ಜನರನ್ನು ಒಗ್ಗೂಡಿಸುವ ಸದುದ್ದೇಶವನ್ನು ಒಳಗೊಂಡಿತ್ತು ಎಂದು ವಿವರಿಸಿದರು. 



ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಂಗಪ್ಪ ಟಿ., ಡಾ. ರುಕ್ಮಯ, ಶಿವಣ್ಣ, ಸುನಿಲ್‌ಕುಮಾರ್‌ ಸೇರಿದಂತೆ ವಿವಿಧ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top