ಲೇಖಾ ಲೋಕ-24: ಆಧುನಿಕ ಕಥಾಲೋಕದ ಸರದಾರ ಕುಂ ವೀರಭದ್ರಪ್ಪ

Upayuktha
0


ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ವ್ಯವಸ್ಥೆಯನ್ನು ಕಂಡು, ಸಮಾಜದ ಸೂಕ್ಷ್ಮತೆ ಅರಿತು ಬರಹದಲ್ಲಿ ವ್ಯಕ್ತಪಡಿಸಿದ, ಓದುಗರನ್ನು ಸೆರೆಹಿಡಿಯಬಲ್ಲ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಕುಂ. ವೀರಭದ್ರಪ್ಪ ಶ್ರೇಷ್ಠ ಕಾದಂಬರಿಕಾರರು. ಬಳ್ಳಾರಿಯಂತಹ ಬಿಸಿಲಿನ ಸ್ನಾನದಿಂದ ಉದಯಿಸಿದ, ಶ್ರೇಷ್ಠ ವೈಚಾರಿಕ ಕಾದಂಬರಿಕಾರ ಕುಂ ವೀ ಅವರ ಬಂಡಾಯದ ಕೆಚ್ಚು, ಆವೇಶ, ಬಳ್ಳಾರಿ ಮಣ್ಣಿನ ಭಾಷೆ, ಶೈಲಿ, ತಿರುವುಗಳು, ಕಾದಂಬರಿಗಳಲ್ಲಿ ಅಡಕವಾಗಿ ಓದುಗರಿಗೆ ಮುದ ನೀಡುತ್ತದೆ. ಗ್ರಾಮಗಳಲ್ಲಿನ ಜಮೀನುದಾರನ ಆಷಾಢಭೂತಿತನ, ಕಾಮುಕತೆ, ದ್ವೇಷ, ಕ್ರೌಯ೯, ಬೆದರಿಕೆ, ಹಿಂಸೆ  ನೀಡಿದ್ದು ಕಾದಂಬರಿಗಳಲ್ಲಿ ಇವರ ಬರಹ ಅಭಿವ್ಯಕ್ತಿಗೊಂಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆ ಒಡ್ಡುವ ಪ್ರಯತ್ನವನ್ನು ಎದುರಿಸಿದ್ದು ಅವರ  ಎದೆಗಾರಿಕೆಯ ಸಂಕೇತ. ಸರಳ ಜೀವನ ನಡೆಸುತ್ತಾ, ವಿಜಯನಗರ ಜಿಲ್ಲೆಯ ಕೊಟ್ಟೂರು ಗ್ರಾಮದ ಸುತ್ತಮುತ್ತಲಿನ ಜನರ ಆಡುಭಾಷೆ ಬಳಸಿ, ಕಥೆಗಳಿಗೆ ಮೆರುಗು ನೀಡಿ, ಶ್ರೇಷ್ಠ ಸಾಹಿತಿ, ಕಥೆಗಾರರಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.


ಸರಳ ಜೀವನ, ಸಜ್ಜನಿಕೆ, ಅನೇಕ ಯುವ ಕಥೆಗಾರರಿಗೆ ಮಾಗ೯ದಶ೯ನ ನೀಡುತ್ತಾ, ಆಂಧ್ರಪ್ರದೇಶದ, ಅನಂತಪುರ ಜಿಲ್ಲೆಯ  ರಾಯದುಗ೯ ತಾಲೂಕಿನ ಡಿ. ಹಿರೇಹಾಳ್  ಗಡಿ ಗ್ರಾಮದಲ್ಲಿ ಶಾಲೆಯಲ್ಲಿ ಸಹ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಜನಪರ ಚಿಂತನೆ, ಆಂಧ್ರಪ್ರದೇಶದ ಗಡಿಭಾಗದ ಜಮೀನುದಾರರ ಶೋಷಣೆ, ದಬ್ಬಾಳಿಕೆ, ಸಾಮಾಜಿಕ  ಅಸಮಾನತೆ, ಅಸ್ಪೃಶ್ಯತೆಯನ್ನು ತಮ್ಮ ಕಾದಂಬರಿಗಳಲ್ಲಿ, ಕವನಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸುವ ಕಲೆಗಾರಿಕೆಯನ್ನು ಗುರುತಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರ "ಅರಮನೆ" ಕಾದಂಬರಿಗೆ 2007 ರಲ್ಲಿ, ಪುರಸ್ಕರಿಸಿರುವುದು ಕನ್ನಡಿಗರಿಗೆ ಸಂತಸದ ವಿಷಯ.


ಹಾಲಪ್ಪ ಮತ್ತು ಕುಂಬಾರ ಕೊಟ್ರಮ್ಮನವರ ಪುತ್ರನಾಗಿ 1-10-1953 ರಂದು ಕೊಟ್ಟೂರಿನಲ್ಲಿ ಜನಿಸಿದರು. ಸಿದ್ದಗಂಗಾ ಟಿಸಿಎಚ್ ಕನ್ನಡ ಸ್ನಾತಕೋತ್ತರ  ಪದವಿ ಪಡೆದರು. ಕೊಟ್ಟೂರು ಮತ್ತು ಡಿ ಹಿರೇಹಾಳ್ ಕುಂವೀ ಅವರಿಗೆ ಪ್ರಿಯವಾದ ತಾಣಗಳು! ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್  ಸಾಹಿತ್ಯ ಕೂಲಂಕಷವಾಗಿ ಅಧ್ಯಯನ ಮಾಡಿ, ಸಾಹಿತ್ಯದ 21 ಕಾದಂಬರಿಗಳು, 2 ಕಾವ್ಯಗಳು,16 ಕಥಾಸಂಕಲನಗಳು, 6 ಜೀವನಚರಿತ್ರೆ, 1 ಆತ್ಮಚರಿತ್ರೆ, 5 ಅನುವಾದ, 1 ವಿಮರ್ಶೆ, 1 ಸಂಪಾದಿತ ಕಥೆಗಳನ್ನು ಬರೆದು, ಸಂಪಾದಿಸಿ, ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.

ಆಜಾನುಬಾಹು, ಹರಿತವಾದ ಬರವಣಿಗೆ, ಬಂಡಾಯದ ಕೆಚ್ಚು, ಮಣ್ಣಿನ ಭಾಷೆ, ತೆಲುಗು ಕನ್ನಡ ಮಿಶ್ರಿತ ವಾಕ್ಯಗಳು ಓದುಗರಿಗೆ ತಮ್ಮ ಕಥೆಗಳಲ್ಲಿ ಪರಿಚಯಿಸುತ್ತಾರೆ. ಅನೇಕ ಕಥೆಗಳನ್ನು ಬರೆದು, ಸಮಾಜದ  ಜನರ ಬದುಕನ್ನು ನೈಜತೆಯನ್ನು ಓದುಗರಿಗೆ ಕನ್ನಡಿ ಹಿಡಿದಿದ್ದಾರೆ. ಅನುವಾದ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದ ಅತ್ಯುತ್ತಮ ಕೃತಿಗಳನ್ನು ಹಿಂದಿ, ಇಂಗ್ಲೀಷ್ ಭಾಷೆಗೆ ಅನುವಾದಿಸಿ, ವಿಶ್ವಕ್ಕೆ ಪರಿಚಯಿಸುವ  ಕಾಯಕ ಮಾಡಿದ್ದಾರೆ. ಬೇಟೆ, ಕಪ್ಪು, ಆಸ್ತಿ, ಬೇಲಿ ಮತ್ತು ಹೊಲ, ಬೇಲಿಯ ಹೂಗಳು, ಕೆಂಡದ ಮಳೆ, ಕೊಟ್ರ ಹೈಸ್ಕೂಲು ಸೇರಿದ್ದು, ಮುಂತಾದ  ಕಾದಂಬರಿಗಳು ಚಲನಚಿತ್ರಗಳಾಗಿವೆ. ಸಾಹಿತ್ಯಕ್ಕೆ ರಾಜಕಾರಣ, ಅಕಾಡೆಮಿಕ್ ಸಮುದಾಯದಿಂದ ದೂರವಿದ್ದು, ಕನ್ನಡ ಕಥೆ, ಕಾದಂಬರಿಗಳನ್ನು ಬರೆಯುತ್ತಾ, ಓದುಗರಿಗೆ ಸಮಾಜದ ಹಲವು ಮಜಲುಗಳನ್ನು ಪರಿಚಯಿಸುವ ಕಾರ್ಯ ಮಾಡುತ್ತಲಿದ್ದಾರೆ.

 

ಕುಂವೀ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದಾಗ, ಮತ್ತೊಬ್ಬ ಕನ್ನಡದ ಶ್ರೇಷ್ಠ ಕಾದಂಬರಿಕಾರರಾದ ಡಾ॥ ಎಸ್ ಎಲ್ ಭೈರಪ್ಪನವರು ಅಭಿನಂದಿಸಿದ್ದು, ಅವರ ಹೃದಯ ವೈಶಾಲ್ಯತೆ ಮತ್ತು ಕನ್ನಡಿಗರಿಗೆ ಸಂತಸದ ವಿಷಯವಾಗಿದೆ.


ಹೂವಿನ ಹಡಗಲಿಯಲ್ಲಿ ಜರುಗಿದ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷತೆ, ಹಂಪಿ ಉತ್ಸವದ ಕವಿಗೋಷ್ಠಿಯ ಉದ್ಘಾಟನೆ, ಹಲವಾರು ಗೋಷ್ಠಿಗಳ ಅಧ್ಯಕ್ಷತೆ ಇವರ ಪಾಲಾಗಿದೆ. ತಮ್ಮ ವೃತ್ತಿಯ ಗ್ರಾಮವಾದ ಡಿ. ಹಿರೇಹಾಳ್‌ನಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನ  ಇಬ್ರಾಹಿಂ ಸಾಬ್ ಅವರ ಜೊತೆಗೂಡಿ ಅತ್ಯಂತ ಯಶಸ್ವಿಯಾಗಿ ಜರುಗಿಸಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನೂ ಮೀರಿಸುವಂತಹ  ಇವರ ಪ್ರಯತ್ನ, ಸಂಘಟನೆ ಸ್ತುತ್ಯರ್ಹ.


ಕುವೆಂಪು, ನಿರಂಜನ, ಮಿರ್ಜಿ ಅಣ್ಣಾರಾಯರ ಅವರ ನಂತರ, ಕುಂವೀ ಅವರ ಬರವಣಿಗೆ, ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಆಯಾಮವನ್ನು ನಿರ್ಮಿಸಿತು ಎಂದರೆ, ಅತಿಶಯೋಕ್ತಿಯಾಗಲಾರದು. ಜನಪರ ಸಾಹಿತ್ಯ, ರಚನೆ, ಹಳೆಗನ್ನಡ ಸಾಹಿತ್ಯ ಅಧ್ಯಯನ ಮಾಡಬೇಕೆಂದು  ಯುವ ಕಥೆಗಾರರಿಗೆ ಕಿವಿಮಾತು ಕುಂವೀ ಅವರು ಹೇಳಿದ್ದಾರೆ. 15 ವರ್ಷಗಳ ಸಂಶೋಧನೆಯ ಫಲ, 600 ಪುಟಗಳ "ಅರಮನೆ" ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕರಿಸಿದ್ದು, ನೋಬೆಲ್ ಬಹುಮಾನಕ್ಕೆ ಸಮ ಎಂದು ಹೇಳಿದ್ದಾರೆ. ಇದು ಕುಂವೀ ಅವರ ಹೃದಯ ವೈಶಾಲ್ಯತೆ ಎಂದೇ ಹೇಳಬಹುದು. 

ವೀಚಿ ಪ್ರತಿಷ್ಠಾನ ಷ್ರಶಸ್ತಿ, ಲದ್ವಾ ಪ್ರತಿಷ್ಠಾನ  ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಸಂದೇಶ ಪ್ರಶಸ್ತಿ, ಗೌರೀಶ ಕಾಯ್ಕಿಣಿ  ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ರಾಜ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಲಂಕೇಶ್ ಪ್ರತಿಷ್ಠಾನ ಪ್ರಶಸ್ತಿ, ಪ್ರೊ. ಕುಂದಣಗಾರ ಗಡಿನಾಡು ಸಾಹಿತ್ಯ ಪ್ರಶಸ್ತಿ,  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮತ್ತು ಅನೇಕ ಪುರಸ್ಕಾರಗಳು ಇವರಿಗೆ ಲಭಿಸಿವೆ.

  

ಬೇರೆ ಬೇರೆ ಭಾಷೆಗಳ 300ಕ್ಕೂ ಕಥೆಗಳನ್ನು ಕುಂ ವೀ ಅವರು ಕನ್ನಡಕ್ಕೆ ಅನುವಾದಿಸಿ, ನಾಡಿಗೆ ನೀಡಿದ ಮಹನೀಯರು. ದಿನಕ್ಕೊಂದು ಪುಟ ಬರೆದ "ಶಾಮಣ್ಣ" ಕಾದಂಬರಿ ಜನರ ಮೆಚ್ಚುಗೆಗೆ ಪಾತ್ರವಾಯಿತು.


ಅನ್ನಪೂರ್ಣ ಸಂಗಾತಿ, ಮತ್ತು ಮೂರು ಮಕ್ಕಳ ಕುಟುಂಬ ಕುಂವೀ ಅವರದಾಗಿದ್ದು, ಕನ್ನಡ ಬರವಣಿಗೆಯಲ್ಲಿ ಸದಾ ನಿರತರಾಗಿದ್ದಾರೆ. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top