ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಲಾರದಲ್ಲಿ ಸಂವಿಧಾನ ದಿನಾಚರಣೆ

Upayuktha
0

ಸಂವಿಧಾನವೇ ನಮ್ಮ ಧರ್ಮಗ್ರಂಥ: ಪಾ. ಶ್ರೀ ಅನಂತರಾಮು





ಕೋಲಾರ: ಭಾರತ ದೇಶಕ್ಕೆ ಸಂವಿಧಾನವೇ ಧರ್ಮಗ್ರಂಥ. ಅದರ ಆಶಯದಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಅದ್ಯ ಕರ್ತವ್ಯ ಎಂದು ಹಿರಿಯ ಪತ್ರಕರ್ತರು, ಅಂಕಣಕಾರರು ಮತ್ತು ಕೋಲಾರದ ಮನ್ವಂತರ ಪ್ರಕಾಶನದ ಅಧ್ಯಕ್ಷ ಪಾ.ಶ್ರೀ. ಅನಂತರಾಮು ಅವರು ಹೇಳಿದರು.


"ಸಂವಿಧಾನ ದಿನಾಚರಣೆ" ಪ್ರಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಲಾರದ ರಾಜ್ಯಶಾಸ್ತç ವಿಭಾಗದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಅಂತರ ಕಾಲೇಜು ಭಾಷಣ ಸ್ಪರ್ಧೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅನಂತರಾಮು ಅವರು ಸಂವಿಧಾನ ನಮಗೆ ಎಲ್ಲವನ್ನೂ ಕೊಟ್ಟಿದೆ. ಅದರ ಆಶಯದಂತೆ ನಡೆದುಕೊಳ್ಳುವುದು ಮುಖ್ಯ ಎಂದರು.


ಸಂವಿಧಾನ ಇರುವುದರಿಂದಲೇ ಪ್ರತಿಯೊಬ್ಬ ಭಾರತೀಯ ಕೂಡ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಪಡೆದುಕೊಳ್ಳುವುದು ಸಾಧ್ಯವಾಗಿದೆ. ಪ್ರತಿ ದಿನ ಕೂಡ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ನಮ್ಮಲ್ಲಿ ಹೊಸ ರೀತಿಯ ಹುಮ್ಮಸ್ಸು, ಚೈತನ್ಯ ಮೂಡುವಂತೆ ಮಾಡಬಹುದು ಎಂದು ಅನಂತರಾಮು ನುಡಿದರು.


ಭಾರತದಲ್ಲಿ ಸಮಸ್ಯೆಗಳು ನೂರಾರು. ರಾಜಕಾರಣಿಗಳ ಸ್ವಾರ್ಥದಿಂದ ಸಮಸ್ಯೆಗಳು ಸೃಷ್ಟಿಯಾಗಿವೆಯೇ ಹೊರತ್ತು ಜನಸಾಮಾನ್ಯರಿಂದಲ್ಲ. ಸಂವಿಧಾನದ ವಿರುದ್ಧ ಮಾತನಾಡುವವರು ರಾಜಕಾರಣಿಗಳೇ. ಮೌನಕ್ಕೆ ಜಾರದೆ ಇಂತಹವರ ಬಗ್ಗೆ ಇಂದಿನ ಯುವ ಪೀಳಿಗೆ ಸದಾ ಎಚ್ಚರಿಕೆಯಿಂದ ಇರಬೇಕು. ಇದಕ್ಕಾಗಿ ಸಂವಿಧಾನದ ಮೂಲ ಆಶಯಗಳನ್ನು ನಾವೆಲ್ಲರೂ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಅನಂತರಾಮು ಅಭಿಪ್ರಾಯಪಟ್ಟರು.


ನಮ್ಮ ದೇಶ ಎತ್ತ ಸಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ರೀತಿ ಇರಬೇಕು. ಸಾಮಾಜಿಕ ನ್ಯಾಯ-ನೀತಿ ಸೇರಿದಂತೆ ಪ್ರತಿಯೊಂದು ವಿಚಾರದ ಬಗ್ಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬೆಳಕು ಚೆಲ್ಲಿದ್ದಾರೆ. ಜೀವನದಲ್ಲಿ ನೋವು-ಅವಮಾನ, ಅಪಮಾನಗಳನ್ನು ಎದುರಿಸಿದರೂ ಭಾರತ ದೇಶಕ್ಕಾಗಿ ಅದ್ಭುತವಾದ ಸಂವಿಧಾನ ರಚಿಸಿಕೊಟ್ಟ ಅಂಬೇಡ್ಕರ್ ಅವರಿಗೆ ನಾವೆಲ್ಲರೂ ಋಣಿಯಾಗಿರಬೇಕಾಗಿದೆ ಎಂದು ಅವರು ತಿಳಿಸಿದರು.


ಸಂವಿಧಾನದ ಮಹತ್ವ ತಿಳಿಸಬೇಕು: ಡಾ. ತ್ಯಾಗರಾಜ್

ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕುಗಳ ಬಗ್ಗೆ ದೇಶದ ಪ್ರತಿಯೊಬ್ಬ ಪ್ರಜೆಗೂ ಅರಿವಿರಬೇಕು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಲಾರದ ಪ್ರಾಂಶುಪಾಲರಾದ ಡಾ. ತ್ಯಾಗರಾಜ್. ಎಸ್ ಅವರು ಅಭಿಪ್ರಾಯಪಟ್ಟರು.


ದೇಶದ ಅಭಿವೃದ್ಧಿಯಲ್ಲಿ ಸಂವಿಧಾನದ ಪಾತ್ರ ಬಲು ದೊಡ್ಡದು. ನಾವೆಲ್ಲರು ನೆಮ್ಮದಿಯಿಂದ ಇದ್ದೇವೆ ಎಂದರೆ ಅದಕ್ಕೆ ಸಂವಿಧಾನ ಕಾರಣ. ಇಂತಹ ಸಂವಿಧಾನದ ಮಹತ್ವದ ಬಗ್ಗೆ ನಮಗೆಲ್ಲರಿಗೂ ಅರಿವಿರಬೇಕು ಎಂದು ತ್ಯಾಗರಾಜ್ ತಿಳಿಸಿದರು.


ಭೂಮಿಯಲ್ಲಿರುವ ಪ್ರತಿಯೊಂದು ಜೀವಿಯನ್ನು ಕೂಡ ಪ್ರಕೃತಿ ಸಮವಾಗಿ ಕಾಣುತ್ತದೆ. ಪ್ರಕೃತಿ ಮುನಿದರೆ ನಾವ್ಯಾರು ಇರುವುದಿಲ್ಲ. ಅದೇ ರೀತಿ ಸಂವಿಧಾನ ಇಲ್ಲದಿದ್ದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದರ ಬಗ್ಗೆ ನಾವೆಲ್ಲರೂ ಜಾಗರೂಕತೆಯಿಂದ ಇರಬೇಕು ಎಂದು ಸಮಾರಂಭದ ಅತಿಥಿಯಾಗಿದ್ದ ಹಿರಿಯ ಪರಿಸರವಾದಿ ಪುರುಷೋತ್ತಮ ಅವರು ಎಚ್ಚರಿಸಿದರು.


ಸಮಾರಂಭದಲ್ಲಿ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ಪ್ಯಾಟ್ರಿಕ್ ರಾಜ್‌ಕುಮಾರ್, ಸಹ ಪ್ರಾಧ್ಯಾಪಕರಾದ ವೆಂಕಟರಮಣ, ಅಧ್ಯಾಪಕ ಕಾರ್ಯದರ್ಶಿ ಡಾ. ಸತೀಶ್ ಕೆ.ವಿ ಮುಂತಾದವರು ಉಪಸ್ಥಿತರಿದ್ದರು.


ಅಕ್ಷಿತಾಗೆ ಮೊದಲ ಸ್ಥಾನ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾಲೂರಿನ ಅಕ್ಷಿತಾ ಎಂ ಅವರು ಸಂವಿಧಾನ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗೆದ್ದುಕೊಂಡರು. ಎರಡನೆ ಸ್ಥಾನವನ್ನು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಚಿಂತಾಮಣಿಯ ಮಧುಶ್ರೀ ಮತ್ತು ಮೂರನೇ ಸ್ಥಾನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಲಾರದ ಮನೋಜ್ ಎಚ್.ಕೆ. ಅವರು ಪಡೆದುಕೊಂಡರು. 


ಸ್ಪರ್ಧೆಯ ತೀರ್ಪುಗಾರರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾಲೂರಿನ ಪ್ರೊಫೆಸರ್ ರಾಧಮ್ಮ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕೋಲಾರದ ಡಾ. ಚೈತ್ರಾ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಲಾರದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕರಾದ ರಾಮಕೃಷ್ಣಯ್ಯ ಅವರು ಭಾಗವಹಿಸಿದ್ದರು. ರಾಜ್ಯಶಾಸ್ತç ವಿಭಾಗದ ಸಹ ಪ್ರಾಧ್ಯಾಪಕರುಗಳಾದ ಹೇಮ ಮಾಲಿನಿ ಬಿ.ವಿ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಡಾ. ನಂದೀಶ್ ಗಣ್ಯರನ್ನು ಸ್ವಾಗತಿಸಿದರು.


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top