40 ಕಂಪೆನಿಗಳು 445 ಉದ್ಯೋಗಾಕಾಂಕ್ಷಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ
11 ಕಂಪೆನಿಗಳು 213 ಜನರಿಗೆ ಸ್ಥಳದಲ್ಲಿ ನಿಯೋಜನೆಯ ಆದೇಶ ಪತ್ರ ನೀಡಿವೆ
ಮೂಡುಬಿದಿರೆ: ಸಮಗ್ರ ಮರಾಟಿಗರ ಬಲವರ್ಧನೆ ಹಾಗೂ ಪ್ರಗತಿಗಾಗಿ ನವೆಂಬರ್ 10ರಂದು ನಡೆಯುತ್ತಿರುವ ‘ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ 2024ರ ಹಿನ್ನಲೆಯಲ್ಲಿ ಮರಾಟಿ ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಒಳ್ಳೆಯ ಉದ್ಯೋಗ ನೀಡುವ ಉದ್ದೇಶದಿಂದ ಕರ್ನಾಟಕ ಮರಾಟಿ ಸಂಘ (ರಿ.) ಬೆಂಗಳೂರಿನ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು.
ಉದ್ಯೋಗ ಮೇಳದಲ್ಲಿ ಪ್ರಮುಖ ಕಂಪೆನಿಗಳಾದ ಸ್ಪ್ಲೈಂಡರ್ ಇಲೆಕ್ಟ್ರಿಕ್ ಇಂಡಿಯಾ ಪ್ರೈಂ.ಲಿ, ಟಾಟಾ ಇಲೆಕ್ಟ್ರಾನಿಕ್ಸ್ ಸಿಸ್ಟಮ್ ಸೊಲ್ಯೂಷನ್ಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಮುತ್ತೂಟ್ ಫಿನಾನ್ಸ್ ಸೇರಿದಂತೆ ಒಟ್ಟು 40 ಕಂಪೆನಿಗಳು ಪಾಲ್ಗೊಂಡವು.
ಪಾಲ್ಗೊಂಡ ಒಟ್ಟು 40 ಕಂಪೆನಿಗಳು 445 ಉದ್ಯೋಗಾಕಾಂಕ್ಷಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿದರೆ, ಅವುಗಳಲ್ಲಿ 11 ಕಂಪೆನಿಗಳು 213 ಜನರಿಗೆ ಸ್ಥಳದಲ್ಲಿ ನಿಯೋಜನೆಯ ಆದೇಶ (ಆನ್ ದಿ ಸ್ಪಾಟ್ ಪ್ಲೇಸ್ಮೆಂಟ್ ಆರ್ಡರ್) ಪತ್ರವನ್ನು ನೀಡಿವೆ. 1400 ಜನರು ಉದ್ಯೋಗ ಮೇಳಕ್ಕೆ ನೋಂದಾವಣೆ ಮಾಡಿಕೊಂಡಿದ್ದರೆ, 684 ಜನರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡರು.
ಮರಾಟಿ ಸಮುದಾಯದ 800ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಕೌಶಲಭರಿತ ಆಕಾಂಕ್ಷಿಗಳಿಗೆ ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ವಿಫುಲ ಉದ್ಯೋಗ ಅವಕಾಶ ಲಭ್ಯವಿದೆ. ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಹಂತ ಹಂತವಾಗಿ ಜೀವನದಲ್ಲಿ ಉನ್ನತಿಯನ್ನು ಕಾಣಬೇಕು. ಒಮ್ಮೆಲೆ ಉನ್ನತ ಸ್ಥಾನದ ನಿರೀಕ್ಷೆ ಸಲ್ಲದು. ಮರಾಟಿ ಸಮುದಾಯದಲ್ಲೂ ಉನ್ನತ ಸ್ಥಾನ ಅಲಂಕರಿಸಿದವರ ಸಂಖ್ಯೆ ಬಹಳ ದೊಡ್ಡದಿದೆ. ಅವರ ಸಾಧನೆಯ ಹಾದಿ, ಮರಾಟಿ ಸಮುದಾಯದ ಯುವಜನತೆಗೆ ಪ್ರೇರಣೆಯಾಗಬೇಕು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಈ ಸಮುದಾಯದೊಂದಿಗೆ ಸದಾ ಇರುತ್ತದೆ. ಮುಂದಿನ ದಿನಗಳಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಬೃಹತ್ ಉದ್ಯೋಗ ಮೇಳದಲ್ಲಿ ಈ ಸಮುದಾಯದ ಆಕಾಂಕ್ಷಿಗಳಿಗೆ ಹೆಚ್ಚಿನ ತರಬೇತಿಯನ್ನು ನೀಡಿ ಉದ್ಯೋಗವನ್ನು ಪಡೆಯುವಲ್ಲಿ ಸಹಕರಿಸುವುದಾಗಿ ತಿಳಿಸಿದರು.
ಬೆಂಗಳೂರಿನ ಕರ್ನಾಟಕ ಮರಾಟಿ ಸಂಘ (ರಿ.)ದ ಗೌರವ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಪ್ರವೀಣ್ಕುಮಾರ ಮುಗುಳಿ ಪ್ರಸ್ತಾವಿಕ ಮಾತುಗಳನ್ನಾಡಿ ಮರಾಟಿ ಸಮುದಾಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲಕ ನಮ್ಮ ಸಮುದಾಯದ ನಿರುದ್ಯೋಗಿ ಯುವಕ ಯುವತಿಯರಿಗೆ ದೇಶದ ಉನ್ನತ ಕಂಪೆನಿಯಲ್ಲಿ ಉದ್ಯೋಗ ಪಡೆಯುವ ಅವಕಾಶ ಲಭಿಸಲಿದೆ ಎಂದರು. ಇಂತಹ ಅದ್ಭುತ ಕಾಯಕ್ರಮ ಯಶಸ್ವಿಗೊಳ್ಳಲು ಎಲ್ಲಾ ರೀತಿಯ ಸಹಕಾರ ನೀಡುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೆನರಾ ಬ್ಯಾಂಕ್ನ ಜನರಲ್ ಮ್ಯಾನೇಜರ್ ರಾಮ ನಾಯ್ಕ, ಚೆನ್ನೈನ ಉದ್ಯಮಿ ಉಮೇಶ ಕುಮಾರ್, ಕೇರಳ ಮಾರಾಟಿ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಸುಬ್ರಾಯ ನಾಯ್ಕ, ಮುಖ್ಯ ಅತಿಥಿಗಳ ನೆಲೆಯಲ್ಲಿ ಉಪಸ್ಥಿತರಿದ್ದರು.
ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಡಾ ಕೆ ಸುಂದರ ನಾಯ್ಕ ಐಎಫ್ಎಸ್, ಮಂಗಳೂರಿನ ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಡಾ ಬಾಲಕೃಷ್ಣ ಸಿ ಎಚ್, ಬಿ.ಇ.ಎಲ್ ಎಡಿಷನಲ್ ಜನರಲ್ ಮ್ಯಾನೇಜರ್ ನರಸಿಂಹ ನಾಯ್ಕ, ಮಾರಾಟಿ ಸಮುದಾಯದ ಪ್ರಮುಖರಾದ ದುರ್ಗಾ ಪ್ರಸಾದ ಮಜಕಾರ್, ಸದಾಶಿವ ನಾಯ್ಕ, ಡಾ ಸದಾಶಿವ ನಾಯ್ಕ ಇದ್ದರು.
ಉಪನ್ಯಾಸಕ ಪ್ರಕಾಶ ನಾಯ್ಕ ನಿರೂಪಿಸಿ, ಬೆಂಗಳೂರಿನ ಕರ್ನಾಟಕ ಮಾರಾಟಿ ಸಂಘ (ರಿ.)ದ ಅಧ್ಯಕ್ಷೆ ಶೋಭಾವತಿ ಎಂ.ಟಿ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ