"ನಿಮ್ಮ ಆಸ್ತಿ ವಕ್ಫ್ ಬೋರ್ಡ್ ವಶಪಡಿಸಿಕೊಂಡ್ರೆ ಏನು ಮಾಡಬೇಕು!? ಹೆದರಬೇಡಿ, ದಾಖಲೆಗಳೊಂದಿಗೆ ಜಯನಗರದ ನನ್ನ ಕಛೇರಿಗೆ ಬನ್ನಿ" - ವಕ್ಫ್ JPC ಸದಸ್ಯ ತೇಜಸ್ವಿ ಸೂರ್ಯ
ರೈತರಿಗೆ ವಕ್ಫ್ ನೋಟೀಸ್, ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದು ಇತ್ಯಾದಿ ಸಾಂಕ್ರಾಮಿಕ ಸಮಸ್ಯೆಗಳ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ.
ಮೊನ್ನೆ ಒಂದು ಜಿಲ್ಲೆಯಲ್ಲಿ ಹರಡಿದ್ದ ಈ ಸಾಂಕ್ರಾಮಿಕ ಸಮಸ್ಯೆ, ನಿನ್ನೆ ಮತ್ತೆರಡು ಜಿಲ್ಲೆಗೆ ಹಬ್ಬಿ, ಈಗ ಆರು ಜಿಲ್ಲೆಗಳ ರೈತರ ನಿದ್ದೆ ಕೆಡಿಸಿ ವ್ಯಾಪಿಸಿದೆ!!!
ವಕ್ಫ್ ನೋಟೀಸ್, ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದುಗಳ ಸಾಂಕ್ರಾಮಿಕ ಸಮಸ್ಯೆ ಈಗ ದಲಿತರ ಜಮೀನು, SC-ST ಜಮೀನು, ಮಠ-ದೇವಸ್ಥಾನಗಳ ಜಮೀನುಗಳಿಗೂ ವ್ಯಾಪಿಸುತ್ತಿದೆ.
ನಾಳೆ ರಾಜ್ಯಾದ್ಯಂತ ಹರಡುವ ಸಾಧ್ಯತೆ ಸ್ಪಷ್ಟವಾಗಿ ಕಾಣಿಸ್ತಾ ಇದೆ.
ಇಡೀ ರಾಜ್ಯದ ರೈತರು ಕಂಗಲಾಗಿದ್ದಾರೆ, ಆತಂಕದಲ್ಲಿದ್ದಾರೆ.
ರಾಜ್ಯ ಘನ ಸರಕಾರದ ಗೌರವಾನ್ವಿತ ಸಚಿವರು "ನೋಟೀಸ್ ಕೊಟ್ಟೇ ಇಲ್ಲ, ವದಂತಿಗಳಿಗೆ ಕಿವಿ ಕೊಡಬೇಡಿ, ತಹಸೀಲ್ದಾರ್ ಒಬ್ಬರ ಅಚಾತುರ್ಯದಿಂದ ಎಲ್ಲೋ ಒಂದು 'ನಲವತ್ತೊಂದು' ಪಹಣಿಯಲ್ಲಿ ಸಣ್ಣ ಲೋಪ ಆಗಿದೆ" ಅಂತ ಪತ್ರಿಕಾಗೋಷ್ಟಿ ನೆಡೆಸಿ ಕಾಗೆ ಹಾರಿಸುತ್ತಿದ್ದಾರೆ!!!
"ನೋಟೀಸ್ ಕೊಟ್ಟಿದ್ದು ಹೌದು, ಗಮನಿಸುತ್ತೇವೆ, ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ" ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ಯಾವುದೋ ಒತ್ತಡಕ್ಕೆ ಸಿಲುಕಿದ DC ಅಸ್ಪಷ್ಟ ಮಾಹಿತಿ ಕೊಡ್ತಾರೆ!!
ಸತ್ಯಕ್ಕೆ ಸಂಪೂರ್ಣ ದೂರವಾದ!! (ಸುಳ್ಳು ಅನ್ನುವ ಅಸಂವಿಧಾನಿಕ ಪದ ಬಳಸಬಾರದು, ಅದರ ಬದಲಿಗೆ ಸತ್ಯಕ್ಕೆ ದೂರವಾದ ಎಂದು ಬಳಸಲು ಸೂಚನೆ ಇರುವುದರಿಂದ ಈ ಪದಗಳನ್ನು ಬಳಸಲಾಗಿದೆ!!) ಮಾಹಿತಿಗಳು ಆತಂಕದಿಂದ ಸಣ್ಣ ಕಂಪನಗಳೊಂದಿಗೆ ಮೊಬೈಲ್ ಹಿಡಿದಿರುವ ರೈತರ ಕೈಗೆ ತಲುಪುತ್ತಿವೆ.
"ಡೋಂಟ್ ವರಿ, ನಾವಿದ್ದೇವೆ, 24 ಗಂಟೆಗಳಲ್ಲಿ ಈ ಎಲ್ಲಾ ಸಾಂಕ್ರಾಮಿಕ ಸಮಸ್ಯೆಗಳನ್ನು ಸರಿ ಪಡಿಸಿ, ಕ್ಲಿಯರನ್ಸ್ ಕೊಡ್ತೇವೆ" ಅಂತ ಸಾಮಾನ್ಯ ರೈತರ, ಹಿಂದುಳಿದ ರೈತರ, SC-ST ರೈತರ, ಮಠಗಳ, ದೇವಸ್ಥಾನಗಳ ಪರವಾಗಿ ನಿಂತು ಬೆಂಬಲಿಸುವ, 'ಸತ್ಯ' ಹೇಳಿ ಧೈರ್ಯ ತುಂಬುವ ಒಬ್ಬನೇ ಒಬ್ಬ ಜನಪ್ರತಿನಿಧಿ, ಶಾಸಕ, ಸಚಿವ ಈ ರಾಜ್ಯದಲ್ಲಿ ಕಾಣಿಸುತ್ತಿಲ್ಲ.
ನೋಟೀಸ್ ಬಂದರೆ ರೈತರು ದಾಖಲೆಗಳನ್ನು ಕೊಟ್ರಾಯ್ತು ಅನ್ನುವ ಉಡಾಫೆಯವರೇ ಟಿವಿಯಲ್ಲಿ ಠೀವಿಯಿಂದ ಕಾಣಿಸಿಕೊಳ್ತಾ ಇದ್ದಾರೆ!!!
**
ಅಷ್ಟಕ್ಕೂ ಸರಕಾರದ ಬಳಿಯೇ ರೈತರ ಜಮೀನಿನ ಪ್ರತೀ ಸರ್ವೇ ನಂಬರ್ಗಳ:
ಪಹಣಿ,
EC, (ಎನ್ಕಂಬರೆನ್ಸ್ ಸರ್ಟಿಫಿಕೇಟ್)
ಮ್ಯುಟೇಷನ್,
ಖಾತಾ,
ಪಟ್ಟಾ,
ಕಂದಾಯ ಕಟ್ಟಿದ ಪೇಮೆಂಟ್ ದಾಖಲೆ,
ಆಧಾರ್,
ಆಧಾರ್ ಸೀಡಿಂಗ್,
KYC,
ಹಕ್ಕುಪತ್ರ,
ಪರಭಾರೆ ಪತ್ರ,
ನೊಂದಣಿ ಆಗಿರುವ ಚಾಪಾ ಪತ್ರಗಳು,
ಸೇಲ್ ಡೀಡ್
ಮದರ್ ಡೀಡ್....
ಹೀಗೆ ಎಲ್ಲಾ ಇರುತ್ತೆ ಮತ್ತು ಇರಬೇಕು.
ಈಗ ಅದನ್ನೆಲ್ಲ ರೈತರಿಂದ ನೋಟೀಸ್ ಕೊಟ್ಟು ಕೇಳುವ ಬದಲು ತಾನೇ ತನ್ನ ಇಲಾಖೆಗಳಲ್ಲಿ ಕಡತಗಳ ಕಟ್ಟು ಬಿಚ್ಚಿ ತೆಗೆಯುವುದಕ್ಕಾಗುವುದಿಲ್ಲವಾ?
50 ವರ್ಷಗಳ ಹಿಂದಿನ ದಾಖಲೆಗಳೆಲ್ಲ ಈಗ ಎಲ್ಲ ರೈತರ ಬಳಿ ಇರ್ತಾವಾ?
ಅಕಸ್ಮಾತ್ ರೈತರ ಬಳಿ ಇತ್ತೀಚಿನ (10-20 ವರ್ಷಗಳ) ಕೆಲವೇ ದಾಖಲೆಗಳು ಮಾತ್ರ ಇದ್ದರೆ ಅವೆಲ್ಲ ಸಾಕಾ?
1974 ಕ್ಕಿಂತ ಹಿಂದನ ದಾಖಲೆಗಳು ರೈತರ ಬಳಿ ಇಲ್ಲದಿದ್ದರೆ ರೈತರ ಕತೆ ಏನು? ಬಹುತೇಕ ಯಾವ ರೈತರ ಬಳಿಯೂ ಅಷ್ಟು ಹಿಂದಿನ ದಾಖಲೆಗಳು ಇರುವುದಿಲ್ಲ. ರೈತರು ಬೀದಿಗೆ ಬರಬೇಕಾ? ಸಾಯಬೇಕಾ?
ಇನ್ನು ಕಂದಾಯ ಇಲಾಖೆಗಳಲ್ಲಿ ಅಷ್ಟು ಹಿಂದಿನ EC ದಾಖಲೆ ಇಟ್ಟುಕೊಳ್ಳುವಷ್ಟು ಕಂದಾಯ ಇಲಾಖೆಯ ರೆಕಾರ್ಡ್ ರೂಮು ಸುಭದ್ರವಾಗಿದೆಯಾ? ರೈತರು ಕೇಳಿದ ತಕ್ಷಣ ಕಂದಾಯ ಇಲಾಖೆಗೆ ಅದನ್ನು ಕೊಡಲು ಸಾಧ್ಯವಾ? "ನಾಳೆ ಬನ್ನಿ" ಅಂತ ಕತೆ ಹೇಳಿ ದಿನ ತಳ್ಳುವ ಕಂದಾಯ ಇಲಾಖೆಗೆ ರೈತರು ದಿನಾ ಅಲೆಯಬೇಕಾ? ವಕ್ಫ್ ಬೋರ್ಡ್ ದಾಖಲೆ ಕೇಳಿದೆ ಅಂತ, ದಿನಾ ಅಲ್ಲಿಗೆ ಅಲೆಯುತ್ತಿದ್ರೆ ಕೃಷಿ ಕೆಲಸ ಮಾಡುವುದು ಯಾರು? ರೈತರು
ಕಂದಾಯ ಇಲಾಖೆ,
ವಕ್ಫ್ ಇಲಾಖೆ,
ಗ್ರಾಮ ಒನ್,
ಬಾಪೂಜಿ ಕೇಂದ್ರ,
ನಾಡ ಕಚೇರಿ,
VA ಆಫೀಸ್,
RI ಆಫೀಸು,
ಭೂ ಮಾಪನ ಇಲಾಖೆ,
ನೋಟರಿ ಆಫೀಸು,
ಗ್ರಾಮ ಪಂಚಾಯತಿ,
ತಹಸೀಲ್ದಾರ್,
ಲಾಯರ್ ಆಫೀಸು,
ಜೆರಾಕ್ಸ್ ಸೆಂಟ್ರು,
ಗಳಿಗೆ ಅಲಿತಾ ಇದ್ರೆ ಜಮೀನಲ್ಲಿ ಬೇಸಾಯ ಮಾಡುವುದು ಯಾರು?,
ಫಸಲು ತೆಗೆಯುವುದು ಯಾವಾಗ?
**
ಇಷ್ಟು ಅದ್ವಾನಗಳ ನಡುವೆ, ರೈತರಿಗೆ ಸಮಾಧಾನಕರ ನೈತಿಕ ಬೆಂಬಲ ಒಂದು ಸಿಕ್ಕಿದೆ!? "ಯಾರಾದರು ರೈತರಿಗೆ ವಕ್ಫ್ ನೋಟೀಸ್, ವಕ್ಫ್ ಪಹಣಿ ಸಾಂಕ್ರಾಮಿಕ ಬಂದರೆ, ನೇರವಾಗಿ ನನ್ನ ಜಯನಗರ ಕಛೇರಿಗೆ ಬನ್ನಿ, ನಿಮ್ಮ ಪರವಾಗಿ ಹೈಕೋರ್ಟಿನಲ್ಲಿ ಉಚಿತವಾಗಿ ಕೇಸ್ ನೆಡೆಸಿ ನ್ಯಾಯ ಕೊಡಿಸುತ್ತೇನೆ" ಅಂತ ಸಂಸದ ತೇಜಸ್ವಿ ಸೂರ್ಯ ಒಂದು ಭರವಸೆಯ ಮಾತಾಡಿದ್ದಾರೆ. (ಇದರೊಂದಿಗಿರುವ ಪೂರ್ತಿ ವೀಡಿಯೋ ಗಮನಿಸಿ)
https://youtu.be/ZI4YoLBTHZQ?si=wkSi6oPPeRjptzms
ಇಲ್ಲೂ ಒಂದು ಅನುಮಾನದ ಪ್ರಶ್ನೆ ಇದೆ!!: ವಕ್ಫ್ ಕೇಸ್ಗಳನ್ನು ವಕ್ಫ್ ಟ್ರಿಬ್ಯುನಲ್ಲಿ ಮಾತ್ರ ಪ್ರಶ್ನಿಸಲು ಅವಕಾಶ ಇರುವುದು ಅಂತ ಹೇಳಿದ ತೇಜಿಸ್ವಿ ಸೂರ್ಯರವರೇ, ಹೈಕೋರ್ಟಿನಲ್ಲಿ ಉಚಿತವಾಗಿ ಕೇಸ್ ನೆಡೆಸಿ ನ್ಯಾಯ ಕೊಡಿಸುತ್ತೇನೆ ಅಂತ ಹೇಗೆ ಹೇಳೋಕೆ ಸಾಧ್ಯ?
ಆದರೂ ಸ್ವತಃ ಲಾಯರ್ರೂ ಆಗಿರುವ ಜೊತೆಗೆ ವಕ್ಫ್ JPC (ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ) ಸದಸ್ಯರೂ ಆಗಿರುವ ತೇಜಸ್ವಿ ಸೂರ್ಯರವರ ಬಳಿ, ಸದರಿ ಸಮಸ್ಯೆಯಿಂದ ರೈತರನ್ನು ಬಚಾವ್ ಮಾಡಲು ಯಾವುದಾದರು ಒಂದು ದಾರಿ ಇರಬಹುದು ಎಂದು ನಂಬೋಣ.
ಯಾವುದಕ್ಕೂ ತೇಜಸ್ವಿ ಸೂರ್ಯರವರ ಈ ವೀಡಿಯೋ ಲಿಂಕ್ನ್ನು ಪಹಣಿ ಜೊತೆ ಇಟ್ಕೊಂಡಿರಿ. ಜಯನಗರ ಹೋಗುವ ಪರಿಸ್ಥಿತಿ ಬಂದಾಗ ಉಪಯೋಗಕ್ಕೆ ಬರಬಹುದು!!
ಅವಧಿ ಕಮ್ಮಿ ಇರುವುದರಿಂದ, ರಜೆಗಳು ಇರುವುದರಿಂದ, ಈ ದೀಪಾವಳಿಗೆ ಮಲೆನಾಡಿನ ರೈತರ ಜಮೀನಿಗೆ ವಕ್ಫ್ ನೋಟೀಸ್, ವಕ್ಫ್ ಪಹಣಿ ಸಾಂಕ್ರಾಮಿಕಗಳು ಬರಲಿಕ್ಕಿಲ್ಲ ಎಂಬ ಭರವಸೆಯಲ್ಲಿ ಸದ್ಯಕ್ಕೆ ನಮ್ಮದೇ ಆಗಿರುವ ಜಮೀನಿಗೆ ನಾವೇ ಪಟಾಕಿ ತ್ಯಜಿಸಿ ಬರಿ ಕೋಲು ಹಚ್ಚಿ ಸಂಭ್ರಮಿಸೋಣ.
ದೀಪಾವಳಿಯ ಹಾರ್ದಿಕ ಶುಭಾಶಯಗಳು
ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ