ಶಿವಮೊಗ್ಗ ಜಿಲ್ಲೆ ಸಾಗರದ ಕರೂರು ಹೋಬಳಿಯ ಶರಾವತಿ ನದಿಯಲ್ಲಿರುವ ಸಿಗಂದೂರು ಕ್ಷೇತ್ರದಲ್ಲಿ ಚೌಡೇಶ್ವರಿ ದೇವಿಯು ವಾಸಿಸುತ್ತಾಳೆ. ದೇವಾಲಯದ ಒಂದು ಬದಿಯಲ್ಲಿ ಬೆಟ್ಟ ಇನ್ನೊಂದು ಬದಿಯಲ್ಲಿ ನದಿ ಇದ್ದು, ನದಿ ಮಧ್ಯದಲ್ಲಿ ದೇವಿಯ ದೇವಾಲಯವು ದ್ವೀಪದಂತಿದೆ. ಶೀಗೆ ಕಣಿವೆಯಲ್ಲಿ ದೇವಿಕಾಡಿನಲ್ಲಿ ಸದಾಕಾಲ ದೇವಿಯ ಸಂಚಾರವಿದೆ ಎಂದು ಹೇಳಲಾಗುತ್ತದೆ ನಾಗಸಂಪಿಗೆ ವೃಕ್ಷದ ಕೆಳಗೆ ದೊಡ್ಡ ಬಂಡೆಯೇ ಸಿಗಂದೇಶ್ವರಿಯ ದೇವಾಲಯವಾಗಿತ್ತು. ಆ ಸ್ಥಳವು ಶರಾವತಿ ನದಿಯು ತುಂಬಿ ಬಂದಾಗ ಮುಳುಗುತ್ತದೆ ನೀರಿನ ಹರಿವು ಕಡಿಮೆಯಾದಾಗ ಮತ್ತೆ ಕಾಣಿಸಿಕೊಳ್ಳುತ್ತದೆ.
ಚೌಡೇಶ್ವರಿ ದೇವಿಯ ಕಥೆ
ಚೌಡಮ್ಮ ದೇವಿಯು ಸಾವಿರಾರು ವರ್ಷಗಳಿಂದ ಅದೃಶ್ಯಳಾಗಿ ಇರುತ್ತಿದ್ದಳು. ದೇವ ಸಮುದಾಯದ ರೈತರೊಬ್ಬರ ಮನೆಯ ಹಿರಿಯರ ಕನಸಿನಲ್ಲಿ ಬಂದು ತನ್ನ ಶಕ್ತಿಯನ್ನು ಪವಾಡವನ್ನು ಕಳಸವಳ್ಳಿ ಗ್ರಾಮದಲ್ಲಿ ತೋರಿದಳು. ಕಳಸವಳ್ಳಿ ಶಿರಗಳ್ಳಿ ಗ್ರಾಮಗಳು ಹತ್ತಿರದಲ್ಲಿವೆ. ಹಕ್ಕಳಮನೆಯ ಪ್ರಸಿದ್ಧ ಮನೆತನದ ಕೊಳ್ಳನಾಯಕನು ಸಿಗಂದೂರಿನ ದೇವಕಾಡಿನಲ್ಲಿ ಜಮೀನನನ್ನು ಹೊಂದಿದ್ದನು. ಅಲ್ಲಿ ಒಂದು ಚೌಡಿ ಬನವೆಂಬ ಪ್ರದೇಶವಿದ್ದು ಆ ಸ್ಥಳದ ಸಂಪಿಗೆ ಮರದ ಕೆಳಗೆ ದೇವಿಯ ವಾಸವಿದ್ದು ಹಕ್ಕಳಮನೆಯವರ ಕುಲದೇವಿಯಾಗಿದ್ದಾಳೆ ತಲೆತಲಾಂತರಗಳಿಂದ ಪೂಜಿಸಲ್ಪಡುತ್ತಿದ್ದಾಳೆ. ಚೌಡಮ್ಮನ ಮಹಿಮೆಯನ್ನು ತಿಳಿದು ಸುತ್ತಮುತ್ತಲ ಜನರೆಲ್ಲ ಅವಳಿಗೆ ಪೂಜಿಸತೊಡಗಿದರು. ಕಷ್ಟದ ಸಮಯದಲ್ಲಿ ದೇವಿಗೆ ಪ್ರಾರ್ಥಿಸಿ ಪ್ರಸಾದವನ್ನು ಪಡೆದು ಹೋದಾಗ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇಲ್ಲಿಯ ಜನರಿಗೆ ಇದೆ. ಗ್ರಾಮಸ್ಥರು ತಮ್ಮ ಜಾನುವಾರುಗಳು ಕಳೆದಾಗ ಅವಕ್ಕೆ ಅನಾರೋಗ್ಯವಾದಾಗ ಬಂದು ದೇವಿಯನ್ನು ಪ್ರಾರ್ಥಿಸಿ ಪ್ರಸಾದವನ್ನು ಸ್ವೀಕಾರ ಮಾಡಿದಾಗ ಅವರ ಸಮಸ್ಯೆಗಳು ಪರಿಹಾರವಾಗುತ್ತವೆ. ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ವಿಶೇಷ ಪೂಜೆ ಮಾಡಿ ಹಾಲು, ಹಣ್ಣು ನೈವೇದ್ಯ ಮಾಡುತ್ತಾರೆ. ತಾಯಿಯು ಬೆಳೆಗಳ ಹಾಗೂ ಜಾನುವಾರುಗಳ ರಕ್ಷಣೆಯನ್ನು ಮಾಡುತ್ತಾಳೆ.
ಸಂತಾನ, ಸೌಭಾಗ್ಯ, ಸಮೃದ್ಧಿ, ಕಷ್ಟಗಳ ಪರಿಹಾರಕ್ಕಾಗಿ, ಧನಲಾಭಕ್ಕಾಗಿ ದೇವಿಯ ದರ್ಶನ ಆಶೀರ್ವಾದವನ್ನು ಪಡೆಯುತ್ತಾರೆ. ದರ್ಶನ ಪೂಜೆ ಮಾಡಿಸಿಕೊಂಡು ಹೋದ ಏಳು ತಿಂಗಳಿನ ನಂತರ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಪ್ರಾತಃ ಕಾಲ ಸೂರ್ಯೋದಯದ ಮೊದಲೇ ಮೂಲ ದೇವಿಯ ಬಂಡೆಗೆ ಅಭಿಷೇಕ ಪೂಜೆಗಳು ನಡೆಯುತ್ತವೆ. ನಿತ್ಯವೂ ಚಂಡಿಯಾಗ ನಡೆಯುತ್ತಿದ್ದು ಮಧ್ಯಾಹ್ನ ಸಮಯದಲ್ಲಿ ನೈವೇದ್ಯ ಪ್ರಸಾದ ವಿತರಣೆಯನ್ನು ಮಾಡುತ್ತಾರೆ. ಭಕ್ತರು ತಮ್ಮ ಮನೆಯಲ್ಲಿ ಬೆಳೆದ ಹಣ್ಣು ದೊರೆತ ಹಾಲುಗಳನ್ನು ಸಮರ್ಪಿಸಿ ದೇವಿಯ ಆಶೀರ್ವಾದವನ್ನು ಪಡೆದು ತಮ್ಮ ಮನೆಗಳಲ್ಲಿ ನಡುವೆಯುವ ಶುಭಕಾರ್ಯಗಳಿಗೆ ಆಶೀರ್ವಾದವನ್ನು ಪಡೆಯುತ್ತಾರೆ.
ಕೇವಲ ಸ್ಥಳೀಯ ಭಕ್ತರು ಮಾತ್ರವಲ್ಲದೆ ಚೌಡೇಶ್ವರಿಗೆ ದೇಶ ವಿದೇಶಗಳಿಂದ ಬರುತ್ತಾರೆ. ಲಾಂಜ್ ನಲ್ಲಿ ಹೋಗುವುದೇ ಇಲ್ಲಿಯ ವಿಶೇಷ ಬಸ್ ಮತ್ತು ಇತರ ವಾಹನಗಳನ್ನು ಕೂಡ ಲಾಂಜ್ ಮೂಲಕ ಕರೆದುಕೊಂಡು ಹೋಗುತ್ತಾರೆ. ಇಲ್ಲಿ ಆಷಾಢದಲ್ಲಿ ವಿಶೇಷ ಪೂಜೆ ಇರುತ್ತದೆ ಆದರೆ ನವರಾತ್ರಿಯಲ್ಲೂ ವಿಶೇಷ ಪೂಜೆ ನಡೆಯುತ್ತದೆ. ಚೌಡೇಶ್ವರಿ ದೇವಿಯ ಆಲಯದಲ್ಲಿ ದಿನವೂ ಚಂಡಿ ಯಾಗವು ನಡೆಯುವುದು ಹಾಗೂ 30 ಜನ ವೇದ ವಿದ್ಯಾ ಪಾರಂಗತ ಅರ್ಚಕರು ಹೋಮ ಹವನ ದಿನ ನಿತ್ಯ ಮಾಡಿಸುವುದು ವಿಶೇಷ.
-ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ