ಖ್ಯಾತ ಮನೋವೈದ್ಯ ಸಿ. ಆರ್ ಚಂದ್ರಶೇಖರ್ ಅಭಿಮತ
ಬೆಂಗಳೂರು: ಹಲವು ಋಣಗಳಲ್ಲಿ ಆಚಾರ್ಯ ಋಣ ಎನ್ನುವುದು ತನ್ನದೇ ಆದ ಮಹತ್ವವನ್ನು ಪಡೆದಿದೆ ಎಂಬುದನ್ನು ನಾವುಗಳು ಸೂಕ್ಷ್ಮವಾಗಿ ಅರಿತುಕೊಳ್ಳಬೇಕಾಗಿದೆ ಎಂದು ಕನ್ನಡ ವೈದ್ಯ ಬರಹಗಾರ ಡಾ.ನಾ.ಸೋಮೇಶ್ವರ ಹೇಳಿದರು.
ಜಯನಗರದ ಯುವಪಥ ವಿವೇಕ ಸಭಾಂಗಣದಲ್ಲಿ ಪಾಂಚಜನ್ಯ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ‘ಪಾಂಚಜನ್ಯ ಪುರಸ್ಕಾರ 2024’ವನ್ನು ಸ್ವೀಕರಿಸಿ ಮಾತನಾಡಿದರು. ದೈವ, ಮಾತೃ, ಆಚಾರ್ಯ ಹಾಗೂ ಸಮಾಜ ಈ ನಾಲ್ಕು ಋಣಗಳಲ್ಲಿ ಆಚಾರ್ಯ ಋಣಕ್ಕೂ ಹೆಚ್ಚಿನ ಮನ್ನಣೆ ಇದ್ದು, ನನ್ನ ಕೈಲಾದ ಮಟ್ಟಿಗೆ ಬರಹ, ಮಾತುಗಳ ಮೂಲಕವಾಗಿ ಈ ಋಣವನ್ನು ತೀರಿಸುತ್ತಿದ್ದೇನೆ. ಅಕ್ಷರಂ ಕಲಿಸಿದಾತಂ ಗುರು ಹಾಗೆಯೇ ಆಚಾರ್ಯ ಋಣ ಕುರಿತಾಗಿ ಉಪನಿಷತ್ನಲ್ಲಿ ವಿಶೇಷತೆಯಿಂದ ಹೇಳಲಾಗಿದೆ ಎಂದು ತಿಳಿಸಿದರು.
‘ಪಾಂಚಜನ್ಯ ಪುರಸ್ಕಾರ’ ನನ್ನ ಕಾರ್ಯಭಾರವನ್ನು ಇನ್ನಷ್ಟು ಹೆಚ್ಚಿಸಿದೆ. 1971ರಲ್ಲಿ ಮೊದಲ ಬಾರಿಗೆ ಕನ್ನಡಪ್ರಭದಲ್ಲಿ ಲೇಖನ ಬರೆಯಲು ಪ್ರಾರಂಭಿಸಿ, ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದುಕೊಂಡು ಸಾಗಿದ್ದು ವಿಶೇಷ ಅನುಭವಗಳನ್ನು ನೀಡಿತು. ಹೀಗೆ ಹಲವು ವಿಭಾಗಗಳಲ್ಲಿ ತೊಡಗಿಸಿಕೊಳ್ಳುತ್ತಾ ದೂರದರ್ಶನ ಚಂದನವಾಹಿನಿಯ "ಥಟ್ ಅಂತ ಹೇಳಿ" ಕಾರ್ಯಕ್ರಮ ನಡೆಸಿಕೊಡುವಿಕೆ ಅತ್ಯುತ್ತಮ ಅವಕಾಶ ಎಂದೇ ತಿಳಿದಿರುವೆ. ಪ್ರಸ್ತುತ 4,750 ಕಂತುಗಳು ಪೂರ್ಣಗೊಂಡಿದ್ದು, ಇದರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೇಳುತ್ತಿರುವ ವೀಕ್ಷಕರಿಗೂ ಅನಂತ ಧನ್ಯವಾದ ಅರ್ಪಿಸಿದರು. ಈ ಕಾರ್ಯಕ್ರಮದ ಮೂಲಕ ಕೊಂಚ ಉತ್ತಮ ಮನ್ನಣೆ ಬಂದಿದ್ದರೆ ಅದು ನನ್ನ ಪತ್ನಿ ಮತ್ತು ಪುತ್ರ ಕಾರಣಕರ್ತರು ಎಂದರು.
ಗ್ರಾಮೀಣ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರೆ ಶಿಕ್ಷಕರ ಶ್ರಮ ಕೂಡ ವಿಶೇಷತೆಯಿಂದ ಕೂಡಿದೆ. ಗ್ರಾಮೀಣ ಶಾಲೆಗಳಲ್ಲಿ ಹಲವು ವಿಷಯಗಳ ಶಿಕ್ಷಕರು ಕೂಡ ಮಕ್ಕಳನ್ನು ವಿಭಿನ್ನ ತರಹದಲ್ಲಿ ಸಿದ್ಧಪಡಿಸುವಿಕೆ ಕೂಡ ಶ್ಲಾಘನೀಯವಾದದ್ದು. ಈ ನಿಟ್ಟಿನಲ್ಲಿ ಪಾಂಚಜನ್ಯ ಪ್ರತಿಷ್ಠಾನ ಕೂಡ ಯಲಹಂಕ ಸಮೀಪದ ಕಾಕೋಳು ಗ್ರಾಮದ ಸರ್ಕಾರಿ ಶಾಲೆಯನ್ನು ದತ್ತುಪಡೆದು ಹಲವು ಕಾರ್ಯಚಟುವಟಿಕೆಗಳ ಮೂಲಕ ಶಾಲೆಯ ಶೈಕ್ಷಣಿಕ ಪ್ರಗತಿಯನ್ನು ಹೆಚ್ಚಳ ಮಾಡಿರುವಿಕೆ ಮೆಚ್ಚುವಂತಹದ್ದು ಎಂದು ತಿಳಿಸಿದರು.
ನಿಮಾನ್ಸ್ ನಿವೃತ್ತ ಮನೋವಿಜ್ಞಾನ ಪ್ರಾಧ್ಯಾಪಕ ಡಾ.ಸಿ.ಎಸ್.ಚಂದ್ರಶೇಖರ್ ಮಾತನಾಡಿ, ಅನೇಕ ಸರ್ಕಾರಿ ಶಾಲೆಗಳು ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ. ಕೆಲವು ಪಠ್ಯಪಠ್ಯೇತರ ಸಾಮಾಗ್ರಿಗಳು ಇರುವುದಿಲ್ಲ. ನಮ್ಮ ದೇಶದಲ್ಲಿ ಸಾಕಷ್ಟು ಉದ್ಯಮ ಸಂಸ್ಥೆಗಳಿವೆ ಅವರು ಸರ್ಕಾರಿ ಶಾಲೆಗಳನ್ನು ದತ್ತುಪಡೆದು ಶೈಕ್ಷಣಿಕ ಬೆಳವಣಿಗೆಗೆ ಕಾರಣವಾಗಬೇಕು. ಬೆಂಗಳೂರಿನಲ್ಲಿ ಸಾಕಷ್ಟು ಬಿಬಿಎಂಪಿ ಶಾಲೆಗಳಿದ್ದು ಅವುಗಳಿಗೆ ಉದ್ಯಮ ಸಂಸ್ಥೆಗಳ ನೆರವು ಅವಶ್ಯಕವಾಗಿದೆ. ನಾ.ಸೋಮೇಶ್ವರ ವೈದ್ಯ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ವಿಶೇಷ. ನಮ್ಮ ರಾಜ್ಯದಲ್ಲಿ ಲಕ್ಷಕ್ಕೂ ಹೆಚ್ಚು ವೈದ್ಯರಿದ್ದರು ಅವರ ಕನ್ನಡ ಪ್ರೀತಿ ಅಷ್ಟಕ್ಕಷ್ಟೇ ಎಂದು ಆತಂಕ ವ್ಯಕ್ತಪಡಿಸಿದರು.
ಆರ್.ವಿ. ಶಿಕ್ಷಣ ಸಮೂಹ ಸಂಸ್ಥೆಗಳ (ಯೋಜನೆ) ನಿರ್ದೇಶಕ ಡಾ.ಟಿ.ವಿ.ರಾಜು, ಪಾಂಚಜನ್ಯ ಪ್ರತಿಷ್ಠಾನದ ಸಲಹೆಗಾರ ಡಾ.ಕೆ.ಎಸ್.ಸಮೀರ ಸಿಂಹ, ಸಂಸ್ಥಾಪಕ ಗೌರವ ಕಾರ್ಯದರ್ಶಿ ಮುರಳಿ ಕಾಕೋಳು, ಟ್ರಸ್ಟಿಗಳಾದ ಅನಂತ ವೇದ ಗರ್ಭಮ್, ಎಸ್.ವಿ.ಸುಬ್ರಹ್ಮಣ್ಯ ವೆಂಕಟೇಶ್ ವೇದಾಂತಿ ಇತರರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ