ಲೇಖಾ ಲೋಕ-19: ಅದ್ಭುತ ಭಾಷಾಂತರಕಾರರು ಬೆನಗಲ್ ರಾಮರಾಯರು

Upayuktha
0



ನ್ನಡ ಸಾಹಿತ್ಯಕ್ಕೆ ಅಪಾರ ಸೇವೆ ಮಾಡಿದ ಮಹನೀಯರಲ್ಲಿ ಒಬ್ಬರಾದ ಬೆನಗಲ್ ರಾಮರಾಯರು, ಅಧ್ಯಾಪಕರಾಗಿ, ಸಾಹಿತಿಯಾಗಿ ಭಾಷಾಂತಕಾರರಾಗಿ ಪ್ರಸಿದ್ಧರಾದ ಮಹನೀಯರು. ಬಹು ಭಾಷೆಗಳಲ್ಲಿ ಕಲಾವಿದರೆಂದೇ ಖ್ಯಾತಿ ಪಡೆದ ಬೆನಗಲ್ ರಾಮರಾಯರು, ಏಪ್ರಿಲ್ 3, 1876ರಂದು  ಮಂಜುನಾಥಯ್ಯ ಮತ್ತು ರಮಾಬಾಯಿ ದಂಪತಿಗಳಿಗೆ ಪುತ್ರನಾಗಿ ಮಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಮಂಜುನಾಥಯ್ಯನವರು ವಕೀಲತನ ಮಾಡುತ್ತಾ, ರಾಮರಾಯರಿಗೆ ಶಿಕ್ಷಣ ಮೂಲ್ಕಿ, ಮಂಗಳೂರು, ಪುತ್ತೂರಿನಲ್ಲಿ ಕೊಡಿಸಿದರು.


ರಾಮರಾಯರು ಮಂಗಳೂರಿನ ಸರಕಾರಿ ಕಾಲೇಜು ಮತ್ತು ಮದರಾಸು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಜೀವ ವಿಜ್ಞಾನ, ಭೂಗಭ೯ಶಾಸ್ತ್ರ, ಕನ್ನಡ ವಿಷಯಗಳಲ್ಲಿ, ಬಿ.ಎ. ಪದವಿಯನ್ನು 1896 ರಲ್ಲಿ ಪಡೆದರು. ಎಂಎ ಪದವಿ ಮದರಾಸು ವಿಶ್ವವಿದ್ಯಾಲಯದಿಂದ, ಎಲ್‌ಎಲ್‌ಬಿ ಪದವಿ ಮುಂಬಯಿ ವಿಶ್ವವಿದ್ಯಾಲಯದಿಂದ ಪಡೆದರು.

ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ರಾಮರಾಯರು, ತಮ್ಮ ಪದವಿಗಳಿಸಿದ ನಂತರ, ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ 1897 ರಿಂದ 1900 ರವರೆಗೆ ಸೇವೆ ಸಲ್ಲಿಸಿದರು. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಪ್ರವೀಣರಾಗಿದ್ದ ಬೆನಗಲ್ ರಾಮರಾಯರು, ಈ ಎರಡೂ ವಿಷಯಗಳನ್ನು ಆಯ್ಕೆ ಮಾಡಿಕೊಂಡು, ಎಂ.ಎ.ಪದವಿಯನ್ನು, ಮದರಾಸು ವಿಶ್ವವಿದ್ಯಾಲಯದಿಂದ ಪಡೆದರು. ನಂತರ ಮೈಸೂರಿಗೆ ಪುನಃ ಬಂದು ಸುವಾಸಿನಿ, ವಾಗ್ಭೂಷಣ ಪತ್ರಿಕೆಯ ಸಂಪಾದಕರಾಗಿ ಸಹ ಸೇವೆ ಸಲ್ಲಿಸಿದರು. ಮೈಸೂರಿನ ನಾರ್ಮಲ್ ಸ್ಕೂಲಿನಲ್ಲಿ, ಕನ್ನಡ ಅಧ್ಯಾಪಕರಾಗಿ ಎರಡು ವರ್ಷ ಸೇವೆ ಸಲ್ಲಿಸಿದ ಮಹನೀಯರು. ಎಂಟು ವಷ೯ಗಳ ಕಾಲ ಮುಂಬಯಿ ಸರಕಾರದ ಭಾಷಾಂತರ ಇಲಾಖೆಯಲ್ಲಿ ಕೆಲಸ ಮಾಡಿದರು.


ಮದರಾಸು ವಿಶ್ವವಿದ್ಯಾಲಯ ಸೆನೆಟ್ ಸದಸ್ಯರಾಗಿ ಕಾಯ೯ಗಳನ್ನು ನಿವ೯ಹಿಸಿದರು. ಕನಾ೯ಟಕ ಏಕೀಕರಣ ಸಂಘದ ಅಧ್ಯಕ್ಷರಾದ ಮಹನೀಯರು.  ಬಹುಶ್ರುತ ವಿದ್ವಾಂಸರಾಗಿ, ನಟನೆ, ಕನಾ೯ಟಕದ ನಕ್ಷೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸುಗುಣವಿಲಾಸ ನಾಟಕ ಸಭೆಯ ಕನ್ನಡ ವಿಭಾಗದ ಕಾಯ೯ದಶಿ೯ಯಾಗಿಯೂ ಕೆಲಸ ಮಾಡಿದರು.


ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ ಎಂದು ಕನ್ನಡ ನಾಡಿನಲ್ಲಿ ಪ್ರಸಿದ್ಧರಾಗಿ, ಅನೇಕ ಮೌಲ್ಯಯುತ ಕೃತಿಗಳನ್ನು ರಚಿಸಿದರು. ದ್ರಾವಿಡ ಭಾಷೆಯಲ್ಲಿ, ಅತಿ ಮುಖ್ಯವಾದ ಕನ್ನಡ ಭಾಷೆಯ ವಿವಿಧ ರೂಪಗಳಲ್ಲಿ ಆಡು ನುಡಿಯಾಗಿ ಬಳಸುವ ಕನಾ೯ಟಕ ಜನರ ಭಾಷೆಯು ವೈವಿಧ್ಯತೆಯಿಂದ ವಿಶಿಷ್ಟತೆ ಪಡೆದಿದೆ! ಬೆನಗಲ್ ರಾಮರಾಯರು ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಪಡೆದು, ತೆಲುಗು, ಸಂಸ್ಕೃತ, ಬಂಗಾಳಿ, ಮರಾಠಿ ಭಾಷೆಗಳಲ್ಲೂ ತಮ್ಮ ಪ್ರತಿಭೆ ತೋರಿದ ಮಹಾನುಭಾವರು. ಅನೇಕ ಇನ್ನಿತರ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರಿಸಿ, ಕೃತಿಗಳನ್ನು ಬಿಡುಗಡೆಗೊಳಿಸಿದರು.


ತೆಲುಗು ಭಾಷೆಯಿಂದ "ಕಲಹ ಪ್ರಿಯ" ಎಂಬ ನಾಟಕವನ್ನು ಹಾಗೆಯೇ, ಸತ್ಯರಾಜನ ಪೂರ್ವದೇಶದ ಯಾತ್ರೆಗಳು ಎಂಬ ಕಾದಂಬರಿ, ಮರಾಠಿ ಭಾಷೆಯ "ರಮಾ ಮಾಧವ" ಎಂಬ ಕಾದಂಬರಿ, ಸುಭದ್ರಾ ವಿಜಯಂ, ಸಂಸ್ಕೃತದಿಂದ ಅವಿಮಾರಕ, ದೂತಾಂಗ" ಎಂಬ ನಾಟಕವನ್ನು, ಬಂಗಾಳಿ ಭಾಷೆಯಿಂದ "ಕೃಷ್ಣ ಕುಮಾರಿ" ಎಂಬ ಕಾದಂಬರಿ ಮುಂತಾದವುಗಳನ್ನು ಭಾಷಾಂತರಿಸಿದರು.


ಸ್ವತಂತ್ರಕೃತಿಗಳಾಗಿ ಇರಾವತಿ, ಚಿಕ್ಕಕಥೆಗಳು, ಅನೇಕ ಮಹಾತ್ಮರ ಜೀವನ ಕಥೆಗಳ ಚರಿತ್ರೆಯನ್ನು ಪ್ರಕಟಿಸಿದರು. ಇತಿಹಾಸ ಸಂಶೋಧನೆ ಮಾಡಿ, ತಂಜಾವೂರು ಮನೆತನದ ಕೈಫಿಯತ್ತನ್ನು, ಹಳೇಬೀಡು ಮತ್ತು ಶಿವಮೊಗ್ಗ ಹತ್ತಿರದ ಹೊಳೆಹೊನ್ನೂರಿನ  ಕೈಫಿಯತ್ತನ್ನು ರಚನೆ ಮಾಡಿದರು. ಹೀಗಾಗಿ ಅನೇಕ ಕೈಫಿಯತ್ತನ್ನು ರಚನೆ ಮಾಡಿದ ಇವರಿಗೆ ಕೈಫಿಯತ್ತಿನ ರಾಮರಾಯರೆಂದೇ ಜನ ಸಮೂಹ ಸಂಬೋಧಿಸುತ್ತಿದ್ದರು. ಇವರು ಸಂಪಾದಿಸಿದ, ಪಾನ್ಯಂ  ಸುಂದರ ಶಾಸ್ತ್ರಿ ಅವರ "ಪುರಾಣನಾಮ ಚೂಡಾಮಣಿ" ಪ್ರಸಿದ್ಧ ಆಕರ ಗ್ರಂಥವಾಗಿದೆ.


1925ರಲ್ಲಿ ಬೆನಗಲ್ ರಾಮರಾಯರನ್ನು, 11ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷರನ್ನಾಗಿ ಮಾಡಿ, ಗೌರವವನ್ನು ಸೂಚಿಸಿ,ಕನ್ನಡ ಜನರು ಸಮ್ಮೇಳನ ಯಶಸ್ವಿಯಾಗಿ ಜರುಗಿಸಿದರು. ಕನ್ನಡ ನಾಡಿಗೆ ಅಪೂವ೯ ಕೃತಿಗಳನ್ನು ನೀಡಿ, ಬೆನಗಲ್ ರಾಮರಾಯರು 8-5-1943ರಂದು ನಿಧನರಾದರು. 


- ಶ್ರೀಧರ  ರಾಯಸಂ

ಗಿರಿನಗರ, ಬೆಂಗಳೂರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top