ನಾಡಿನೆಲ್ಲೆಡೆ ದಸರಾ ಸಂಭ್ರಮ ನೋಡ ಬನ್ನಿ

Upayuktha
0


ಸರಾ, ದಶಮಿ ಎಂದೇ ಪ್ರಸಿದ್ಧವಾಗಿರುವ ಶಕ್ತಿ ಸ್ವರೂಪಗಳ ಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವ ದಿನ. ಒಂಭತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದ ಕೊನೆಯ ದಿನವೇ ದಶಮಿ, ವಿಜಯ ದಶಮಿ ಎಂದೂ ಈ ದಿನವನ್ನು ಕರೆಯಲಾಗುತ್ತದೆ. 


ಈ ವೈಭವದ ವಿಜಯ ದಶಮಿಯ ಹಿಂದೆ ಅನೇಕ ಪುರಾಣ ಕಥೆಗಳಿವೆ ಈ ಕಥೆಗಳನ್ನು ಮೆಲುಕು ಹಾಕುದಾದರೆ,


ಮಹಿಷಾಸುರನ ಸಂಹಾರ:

ಅಸುರರ ದೊರೆಯಾದ ಮಹಿಷಾಸುರನು ದೀರ್ಘ ತಪಸ್ಸು ಮಾಡಿ, ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎಂದು ಬ್ರಹ್ಮನಿಂದ ವರವನ್ನು ಪಡೆದಿದ್ದನು. ವರ ಸಿಕ್ಕಿದ ಕೂಡಲೇ ಅಹಂಕಾರದಿಂದ ಜನರಿಗೆ ಮತ್ತು ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ಈತನ ಉಪಟಳವನ್ನು ತಾಳಲಾರದೇ ದೇವತೆಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನ ಮೊರೆ ಹೋಗುತ್ತಾರೆ.


ತ್ರಿಮೂರ್ತಿಗಳು ತಮ್ಮ ಶಕ್ತಿಯನ್ನು ಸೇರಿಸಿ ದುರ್ಗಾಮಾತೆಯನ್ನು ಸೃಷ್ಟಿಸುತ್ತಾರೆ. ಶಕ್ತಿಯ ಸಂಗಮದಿಂದ ಸೃಷ್ಟಿಯಾದ ದುರ್ಗಾದೇವಿಯನ್ನು ದೇವತೆಗಳು ಪೂಜಿಸಿ ಮಹಿಷನನ್ನು ಸಂಹರಿಸುವಂತೆ ಬೇಡಿಕೊಳ್ಳುತ್ತಾರೆ. ದೇವಿ ದುರ್ಗೆಯಾಗಿ ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಮಹಿಷಾಸುರನ ಸಂಹಾರಕ್ಕಾಗಿ ಧರೆಗಿಳಿಯುತ್ತಾಳೆ. ಒಂಭತ್ತು ದಿನಗಳ ಯುದ್ಧದ ನಂತರ ದಶಮಿಯ ದಿನ ದುರ್ಗೆಯು ಮಹಿಷಾಸುರನನ್ನು ಸಂಹಾರ ಮಾಡಿದಳು. ಅಂದಿನಿಂದ ದಶಮಿಯಂದು ಮಹಿಷಾಸುರನ್ನು ಕೊಂದು ವಿಜಯ ಸಿಕ್ಕಿದ್ದಕ್ಕೆ 'ವಿಜಯದಶಮಿ' ಎಂದು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ.


ಮತ್ತೊಂದು ಕಥೆಯ ಪ್ರಕಾರ- ರಾವಣನ ಸಂಹಾರ:

ರಾವಣನನ್ನು ಸಂಹಾರ ಮಾಡುವ ಮೊದಲು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು. ಹೀಗೆ ವಿಜಯ ದಶಮಿಯಂದೇ ರಾವಣನ ಸೋಲಾಯಿತು. 'ದಶಹರ'ದಂದು ದಶಕಂಠನಾಗಿದ್ದ ರಾವಣನನ್ನು ಶ್ರೀರಾಮನು ಸಂಹರಿಸಿದ ಬಳಿಕ ವಿಜಯೋತ್ಸವ ನಡೆಯಿತು ಎನ್ನುವ ಪ್ರತೀತಿ ಇದೆ.


ಪಾಂಡವರ ಮೊದಲ ಜಯ:

ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಪಾಂಡವರು ಒಂದು ವರ್ಷದ ಅಜ್ಞಾತವಾಸವನ್ನು ಮತ್ಸ್ಯದೇಶದಲ್ಲಿ ಕಳೆಯುತ್ತಾರೆ. ಈ ದೇಶದ ರಾಜನಾದ ವಿರಾಟನ ಆಸ್ಥಾನದಲ್ಲಿ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗನಾದ , ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕಿಯಾಗಿ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟನ ಪತ್ನಿಯಾದ ಸುದೇಷ್ಣೆಯ ಸೇವೆಯಲ್ಲಿ ನಿಲ್ಲುತ್ತಾಳೆ.


ಪಾಂಡವರ ಅಜ್ಞಾತವಾಸದ ಕೊನೆಯಲ್ಲಿ ಕುರುಸೇನೆ ವಿರಾಟನ ರಾಜ್ಯದಲ್ಲಿರುವ ಗೋವುಗಳನ್ನು ಅಪಹರಿಸಿತ್ತು. ಈ ಸಮಯದಲ್ಲಿ ವಿರಾಟನ ಪುತ್ರನಾದ ಉತ್ತರಕುಮಾರ ನಾನು ಕುರುಸೇನೆಯನ್ನು ಸೆದೆ ಬಡಿಯುತ್ತೇನೆ ಎಂದು ಹೇಳಿ ಜಂಬ ಕೊಚ್ಚಿಕೊಂಡು ಯುದ್ಧಕ್ಕೆ ಹೊರಟಿದ್ದ. ಬೃಹನ್ನಳೆಯನ್ನು ಸಾರಥಿಯನ್ನಾಗಿ ಮಾಡಿ ಯುದ್ಧಕ್ಕೆ ಕರೆದುಕೊಂಡು ಹೋದ. ಯುದ್ಧದಲ್ಲಿ ಸೋಲು ಸಮೀಪವಾಗುತ್ತಿದೆ ಎಂದಾಗ ಉತ್ತರ ಕುಮಾರ 'ಯುದ್ಧದಿಂದ ಹಿಂದಕ್ಕೆ ಸರಿಯುತ್ತೇನೆ. ದಯವಿಟ್ಟು ಇಲ್ಲಿಂದ ತೆರಳೋಣ' ಎಂದು ಹೇಳುತ್ತಾನೆ. ಈ ವೇಳೆ ಬೃಹನ್ನಳೆ ರೂಪದಲ್ಲಿದ್ದ ಅರ್ಜುನ ಅಜ್ಞಾತವಾಸದ ಸಮಯದಲ್ಲಿ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರವನ್ನು ತೆಗೆದು ವಿರಾಟರಾಜನ ಶತ್ರುಗಳನ್ನು ಸೋಲಿಸುತ್ತಾನೆ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಕುರುಸೇನೆಯನ್ನು ವಿರಾಟ ಸೇನೆ ಸೋಲಿಸುತ್ತದೆ. ಈ ವಿಜಯದ ಕುರುಹಾಗಿ ಒಂಭತ್ತನೇ ದಿನ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ


ಕಲಿಯುಗದಲ್ಲಿ ವಿಜಯದಶಮಿ: 

ಅರಸರ ಆಡಳಿತ ಕಾಲದಲ್ಲಿ ನವಮಿಯಂದು ಆಯುಧಗಳಿಗೆ ಪೂಜೆ ಮಾಡಿ ದಶಮಿಯಂದು ದಂಡಯಾತ್ರೆಗೆ ಹೊರಟರೆ ವಿಜಯ ದೊರೆಯುತ್ತದೆ ಎಂಬ ನಂಬಿಕೆ ಇತ್ತು. ಹೀಗಾಗಿ ದಶಮಿಯಂದು ಪೂಜೆ ಸಲ್ಲಿಸಿ ದಂಡಯಾತ್ರೆಗೆ ಹೊರಡುತ್ತಿದ್ದರು. ಈ ಪದ್ಧತಿ ಈಗಲೂ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ಕೆಲವು ರಾಜವಂಶಸ್ಥರು ಸಾಂಕೇತಿಕವಾಗಿ ತಮ್ಮ ರಾಜ್ಯದ ಗಡಿಯನ್ನು ದಾಟಿ ಮತ್ತೆ ಹಿಂದಿರುಗುತ್ತಾರೆ.

ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಪದ್ಧತಿಯು ಮೈಸೂರು ಒಡೆಯರ ಕಾಲದಲ್ಲೂ ಮುಂದುವರಿದಿದೆ.


ವಿಜಯದಶಮಿ ಆಚರಣೆ

ಆಶ್ವಯುಜ ಶುಕ್ಲ ದಶಮಿಗೆ ವಿಜಯದಶಮಿ ಎನ್ನುವ ಹೆಸರಿದೆ. ಇದು ನವರಾತ್ರಿಯ ನಂತರದ ದಿನವಾಗಿದ್ದು ಹಾಗಾಗಿ ಇದನ್ನು ನವರಾತ್ರಿಯ ಸಮಾಪ್ತಿ ದಿನವೆಂದು ಪರಿಗಣಿಸುತ್ತಾರೆ. ಈ ದಿನ ಸೀಮೋಲ್ಲಂಘನ, ಶಮೀ ಪೂಜೆ, ಅಪರಾಜಿತಾ ಪೂಜೆ ಮತ್ತು ಆಯುಧ ಪೂಜೆ ಮಾಡಲಾಗುತ್ತದೆ.


ಸೀಮೋಲ್ಲಂಘನ:

ಅಪರಾಹ್ನ ಕಾಲದಲ್ಲಿ ಊರಿನ ಗಡಿಯಾಚೆ ಈಶಾನ್ಯ ದಿಕ್ಕಿನ ಕಡೆ ಸೀಮೋಲ್ಲಂಘನಕ್ಕಾಗಿ ಹೋಗುತ್ತಾರೆ ಮತ್ತು ಶಮೀ ವೃಕ್ಷ ಹಾಗೂ ಮಂದಾರ ವೃಕ್ಷವಿರುವಲ್ಲಿ ನಿಲ್ಲುತ್ತಾರೆ. ನಂತರ ಶಮೀ ಪೂಜೆಯನ್ನು ಮಾಡಿ, ಆ ವೃಕ್ಷದ ಬುಡದಲ್ಲಿ ಅಕ್ಕಿ, ಅಡಿಕೆ ಮತ್ತು ಬಂಗಾರದ ನಾಣ್ಯಗಳನ್ನು ಇಡುತ್ತಾರೆ. ನಂತರ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಅದರ ಬುಡದಲ್ಲಿನ ಸ್ವಲ್ಪ ಮಣ್ಣು ಮತ್ತು ಮರದ ಎಲೆಗಳನ್ನು ಮನೆಗೆ ತರುತ್ತಾರೆ. ಶಮಿಯ ಎಲೆಗಳನ್ನಲ್ಲದೇ ಮಂದಾರದ ಎಲೆಗಳನ್ನು ಬಂಗಾರವೆಂದು ದೇವರಿಗೆ ಅರ್ಪಿಸುತ್ತಾರೆ. ಮತ್ತು ಆಪ್ತರಿಗೆ ನೀಡುತ್ತಾರೆ. ಈ ಬಂಗಾರವನ್ನು ಕಿರಿಯರು ಹಿರಿಯರಿಗೆ ಕೊಡಬೇಕೆನ್ನುವ ನಿಯಮವಿದೆ.


ಆಯುಧ ಪೂಜೆ -: ವಿಜಯದಶಮಿಯಂದು ರಾಜರು, ಸಾಮಂತರು ತಮ್ಮ ಶಸ್ತ್ರಾಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ನಡೆಸುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮ ಶಸ್ತ್ರಗಳ ಪೂಜೆ ಮಾಡುತ್ತಾರೆ. ಕೆಲವರು ಆಯುಧ ಪೂಜೆಯನ್ನು ನವಮಿಯಂದೂ ಆಚರಿಸಲಾಗುತ್ತದೆ.


ಅಪರಾಜಿತಾ ಪೂಜೆ: 

ವಿಜಯದಶಮಿಯಂದು ಅಪರಾಜಿತಾ ಪೂಜೆ ಮಾಡಲಾಗುತ್ತದೆ. ಶಮೀ ಪೂಜೆಯನ್ನು ಮಾಡಲಾದ ಜಾಗದಲ್ಲಿಯೇ ನೆಲದ ಮೇಲೆ ಅಷ್ಟದಳಗಳನ್ನು ಬರೆದು ಅದರ ಮೇಲೆ ಅಪರಾಜಿತಾ ದೇವಿಯ ಮೂರ್ತಿಯನ್ನಿಟ್ಟು ಪೂಜೆ ಮಾಡಲಾಗುತ್ತದೆ. ಅಷ್ಟದಳಗಳ ಮೇಲೆ ಆರೂಢಳಾದ ಅಪರಾಜಿತಾ, ಪ್ರಥ್ವಿಯ ಭೂಗರ್ಭ ಬಿಂದುವಿನಿಂದ ಉತ್ಪನ್ನಳಾದಾಗ ಅವಳ ಸ್ವಾಗತಕ್ಕಾಗಿ ಅಷ್ಟಪಾಲ ದೇವತೆಗಳ ಆಗಮನವಾಗುತ್ತದೆ. ಅಷ್ಟದಳದ ಅಗ್ರಬಿಂದುಗಳು ಅಷ್ಟಪಾಲ ದೇವತೆಗಳನ್ನು ಪ್ರತಿನಿಧಿಸುತ್ತದೆ. ಅಪರಾಜಿತಾ ದೇವಿಯ ಉತ್ಪತ್ತಿಯಿಂದ ಪ್ರಕ್ಷೇಪಿತವಾಗುವ ಮಾರಕ ಲಹರಿಗಳು, ಅಷ್ಟಪಾಲರ ಮಾಧ್ಯಮದಿಂದ ಅಷ್ಟದಿಕ್ಕುಗಳಿಗೆ ನಸುಗೆಂಪು ಬಣ್ಣದ ಪ್ರಕಾಶಲಹರಿಗಳ ಮಾಧ್ಯಮದಿಂದ ಪ್ರಕ್ಷೇಪಿತವಾಗಿ ಆಯಾ ಕೋನಗಳಲ್ಲಿ ಸಂಪುಟಿತವಾಗಿರುವ ರಜ-ತಮಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ. ಮತ್ತು ಪೃಥ್ವಿಯ ಮೇಲಿನ ಜೀವಿಗಳಿಗೆ ನಿರ್ವಿಘ್ನವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ವಾಯುಮಂಡಲವನ್ನು ಶುದ್ಧೀಕರಿಸುತ್ತದೆ. ಬನ್ನೀ ಎಲೆಗಳಲ್ಲಿ ತೇಜವನ್ನು ವೃದ್ಧಿಸುವ ಗುಣವಿರುವುದರಿಂದ ಬನ್ನೀ ಗಿಡದ ಬಳಿ ದುರ್ಗಾದೇವಿಯನ್ನು ಅಪರಾಜಿತಾ ರೂಪದಲ್ಲಿ ಆರಾಧಿಸುತ್ತಾರೆ.


ನಮ್ಮ ಜೀವನದಲ್ಲಿ ವಿಜಯವಾಗಬೇಕು:

ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಕೂಡ ವಿಜಯ ಪ್ರಾಪ್ತಿಯಾಗಬೇಕು ಎಂಬುವುದು ನಮ್ಮ ಅಪೇಕ್ಷೆ ಈ ಸಂದರ್ಭದಲ್ಲಿ ಕಷ್ಟಗಳನ್ನು ಎದುರಿಸಿ ಕೊನೆಗೆ ಖಂಡಿತವಾಗಿ ವಿಜಯ ಪ್ರಾಪ್ತಿಯಾಗುತ್ತದೆ. ಹೀಗಾಗಿ ನಮ್ಮ ಜೀವನದಲ್ಲಿ ದೈಯ೯ಕುಂದದೆ ಕತ೯ವ್ಯದಲ್ಲಿ ದೇವರನ್ನು ಕಾಣುವಂತಾಗಬೇಕು.ಈ ಹಬ್ಬದ ದೊಡ್ದದಾದ ಈ ಸಂದೇಶವನ್ನು ನಾವೆಲ್ಲರೂ ಪಾಲನೆ ಮಾಡೋಣ.


-ರಾಘವೇಂದ್ರ ಪ್ರಭು, ಕರ್ವಾಲು 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top