ಅಜ್ಞಾನ ತಿಮಿರಾಂಧಸ್ಯ ಜ್ಞಾನ ಅಂಜನಾ ಶಲಾಕಾಯ
ಚಕ್ಷುಹು ಉನ್ಮೀಲಿತಂ ಯೇನಂ ತಸ್ಮೈ ಶ್ರೀ ಗುರವೇ ನಮಃ II
ನನ್ನ ಅಂತರಂಗದ ಕಣ್ಣುಗಳನ್ನು ತೆರೆದು ಆತ್ಮಜ್ಞಾನವೆಂಬ ಜ್ಯೋತಿಯನ್ನು ಪ್ರಯೋಗಿಸಿ ನನ್ನ ಕುರುಡು ಕಣ್ಣುಗಳಿಂದ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿದ ಆ ಪೂಜ್ಯ ಗುರುವಿಗೆ ನನ್ನ ನಮನಗಳನ್ನು ಅರ್ಪಿಸುತ್ತೇನೆ.
ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯ ದೇವೋಭವ ಎಂದರೆ ತಾಯಿ, ತಂದೆ ಮತ್ತು ಗುರು ದೇವರಿಗೆ ಸಮಾನರು. ಪ್ರತೀ ವ್ಯಕ್ತಿಯ ಬದುಕಿನಲ್ಲಿ ಗುರು ಮೂರನೇ ಸ್ಥಾನದಲ್ಲಿ ಪೂಜಿಸಲ್ಪಟ್ಟಿದ್ದು ಗುರುವಿನ ಮಹತ್ವ ಅತ್ಯಮೂಲ್ಯವಾಗಿದೆ. ವಿಶ್ವವು ಗುರುವನ್ನು ಅತೀ ಎತ್ತರದ ಸ್ಥಾನದಲ್ಲಿಟ್ಟು ಗೌರವಿಸುತ್ತದೆ. ಭಾರತದ ಪರಂಪರೆಯಲ್ಲಿ ಗುರು ಅತ್ಯುನ್ನತ ಸ್ಥಾನದಲ್ಲಿ ಪೂಜನೀಯರಾಗಿದ್ದಾರೆ.
ಪ್ರತೀ ವರ್ಷ ಸೆಪ್ಟೆಂಬರ್ 5 ರಂದು ಡಾII ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಭಾರತಾದ್ಯಂತ ಶಿಕ್ಷಕರ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮೂಲಕ ತಮ್ಮ ನೆಚ್ಚಿನ ಗುರುಗಳ ಬಗ್ಗೆ ಪ್ರಶಂಸನೀಯತೆಯನ್ನು ವ್ಯಕ್ತಪಡಿಸುತ್ತಾರೆ.
ತಮ್ಮ ವಿದ್ಯಾರ್ಥಿಗಳ ಮೆಚ್ಚುಗೆಯ ಮಾತುಗಳೇ ಶಿಕ್ಷಕರ ಜೀವನಕ್ಕೆ ಸಾರ್ಥಕವೆನಿಸುತ್ತವೆ. ಡಾII ಸರ್ವೆಪಲ್ಲಿ ರಾಧಾಕೃಷ್ಣನ್ ರವರು ಶಿಕ್ಷಕರಾಗಿದ್ದು, ನಂತರ ಭಾರತದ ರಾಷ್ಟ್ರಪತಿಗಳಾಗಿ ಹತ್ತು ವರ್ಷ, ಉಪ ರಾಷ್ಟ್ರಪತಿಗಳಾಗಿ ಐದುವರ್ಷ ಸೇವೆ ಸಲ್ಲಿಸಿದ್ದರು. ಇವರ ಜನ್ಮ ದಿನಾಚರಣೆಯನ್ನು ತಮ್ಮ ವಿದ್ಯಾರ್ಥಿಗಳು ಬಹಳ ಅದ್ದೂರಿಯಾಗಿ ಆಚರಿಸಲು ಮುಂದಾದಾಗ ಸ್ವತಃ ಅವರೇ ಹೇಳಿರುವಂತೆ " ನಾನು ಮೂಲತಃ ಶಿಕ್ಷಕನಾಗಿದ್ದು ನಂತರದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿರುತ್ತೇನೆ. ಆದ್ದರಿಂದ ನಾನು ಹುಟ್ಟಿದ ದಿನವನ್ನು ಈ ರಾಷ್ಟದ ಶಿಕ್ಷಕರಿಗೆ ಅರ್ಪಿಸುತ್ತನೆ. ಈ ದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲು ಮನವಿ ಮಾಡುವೆನು." ಎಂದಿದ್ದಾರೆ. ಡಾII ಎಸ್. ರಾಧಾಕೃಷ್ಣನ್ ರವರು ಉತ್ತಮ ಶಿಕ್ಷಕರೂ ಮತ್ತು ತತ್ವಜ್ಞಾನಿಗಳು ಆಗಿದ್ದರು. ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಶಿಕ್ಷಕರು ಸಮಾಜದ ಗೌರವಾನ್ವಿತ ವ್ಯಕ್ತಿಗಳು, ನಾಡಿನ ಮಕ್ಕಳನ್ನು ತಿದ್ದಿ ಪಾಠ ಹೇಳಿ ಬೆಳೆಸುವವರು. ರಾಷ್ಟ್ರದ ಶಿಲ್ಪಿ , ರಾಷ್ಟ್ರ ನಿರ್ಮಾಪಕ, ಭಾವಿ ಪ್ರಜೆಗಳ ನಿರ್ಮಾಪಕ, ರಾಷ್ಟ್ರೋನ್ನತಿಯ ಬೆನ್ನೆಲುಬು, ಮಾನವ ಜನಾಂಗದ ದಾರಿದೀಪ, ಇತಿಹಾಸ ರೂಪಿಸುವವ, ವ್ಯಕ್ತಿ ಮತ್ತು ವ್ಯಕ್ತಿತ್ವ ನಿರ್ಮಾತೃ ಮುಂತಾದ ಗುಣಗಳನ್ನು ಹೊಂದಿರುವ ಉತ್ತಮ ಶಿಕ್ಷಕರಿಗೆ ರಾಜ್ಯಮಟ್ಟದ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನೂ ನೀಡಲಾಗುತ್ತದೆ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ದಕ್ಷಿಣ ಭಾರತದ ತಮಿಳುನಾಡಿನ ಚಿತ್ತೂರು ಜಿಲ್ಲೆಯ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್ 5, 1888 ರಲ್ಲಿ ಜನಿಸಿದರು. ಸರ್ವೆಪಲ್ಲಿ ಎನ್ನುವುದು ಮನೆತನದ ಹೆಸರಾದರೆ, 'ರಾಧಾಕೃಷ್ಣನ್' ಎನ್ನುವುದು ಅವರ ತಂದೆ-ತಾಯಿ ಇಟ್ಟ ಪ್ರೀತಿಯ ಹೆಸರು. ಇವರ ತಂದೆ ಸರ್ವೆಪಲ್ಲಿ ವೀರಸ್ವಾಮಿ ಮತ್ತು ತಾಯಿ ಸೀತಮ್ಮ. ಇವರು ಜಮೀನ್ದಾರರ ಬಳಿ ರೆವಿನ್ಯೂ ನೌಕರರಾಗಿ ಕೆಲಸ ಮಾಡುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು.
ರಾಧಾಕೃಷ್ಣನ್ ಅವರ ತಂದೆಗೆ ತಮ್ಮ ಮಗನನ್ನು ಪುರೋಹಿತನನ್ನಾಗಿ ಮಾಡುವ ಹಂಬಲವಿತ್ತು. 'ವಿದ್ಯಾರ್ಥಿ ವೇತನ ಹಣ' ದಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್ ನಲ್ಲಿ 'ತತ್ವಜ್ಞಾನ' ವಿಷಯದ ಮೇಲೆ 'ಬಿ.ಎ' ಮತ್ತು 'ಎಂ.ಎ. ಪದವಿಗಳನ್ನು ಪಡೆದುಕೊಂಡರು. 'ಸ್ನಾತಕೋತ್ತರ ಪದವಿ'ಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ 'ದಿ ಎಥಿಕ್ಸ್ ಆಫ್ ವೇದಾಂತ' ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ ಇಪ್ಪತ್ತು ವರ್ಷದ ಯುವಕನ ಮನಸ್ಸಿನಲ್ಲಿದ್ದ ವಿವಿಧ ಬಗೆಯ ಸಿದ್ಧಾಂತಗಳು 'ವೇದಾಂತ ಕುರಿತ ವಿಚಾರಧಾರೆಗಳು' ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ, ಎಂದು ಅವರ ಕಾಲೇಜು ಉಪನ್ಸಾಸಕರು ಆಗಲೇ ಗುರುತಿಸಿದ್ದರು ಎಂದು ಅಧ್ಯಯನದಿಂದ ತಿಳಿದು ಬರುತ್ತದೆ.
ವೆಲ್ಲೂರಿನಲ್ಲಿರುವಾಗಲೇ ತಮ್ಮ ಹದಿನಾರನೇ ವಯಸ್ಸಿನಲ್ಲಿ ಶಿವಕಾಮಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿ ಕೊಂಡ ರಾಧಾಕೃಷ್ಣನ್, 1909 ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ತಮ್ಮ ಅಚ್ಚುಮೆಚ್ಚಿನ ಶಿಕ್ಷಕ ಸೇವೆಯನ್ನಾರಂಭಿಸಿದರು. ವಿಶ್ವದ ಹಲವು ಮಹನೀಯರ ತತ್ವಜ್ಞಾನವನ್ನು ಹಾಗೂ ಭಾರತದ ಸನಾತನ ಧರ್ಮದ ತತ್ವಗಳ ಮೇಲೆ ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದರು. ರಾಧಾಕೃಷ್ಣನ್ 1918 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು.
ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದು ರವೀಂದ್ರನಾಥ ಟ್ಯಾಗೋರ್ ರವರಿಂದಲೇ ಪ್ರಶಂಸಿಲ್ಪಟ್ಟರು. ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶ ವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಮನಸೋತ ಆಕ್ಸ್ಫರ್ಡ್ ವಿಶ್ವವಿದ್ಯಾಲಯವು 'ಧರ್ಮ ಮತ್ತು ನೀತಿಶಾಸ್ತ್ರ' ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು.
ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದರು. ರಾಧಾಕೃಷ್ಣನ್ ಒಳ್ಳೆಯ ಗ್ರಂಥಕರ್ತರು ಆಗಿದ್ದರು. "ದಿ ಪ್ರಿನ್ಸಿಪಲ್ ಉಪನಿಷದ್ಸ್," "ದಿ ಹಾರ್ಟ್ ಆಫ್ ಹಿಂದುಯಿಸಂ" " ಇಂಡಿಯನ್ ಫಿಲಾಸಫಿ " "ಸರ್ಚ್ ಫಾರ್ ಟ್ರೂತ್ " " ದಿ ಹಿಂದೂ ವ್ಯೂ ಆಫ್ ಲೈಫ್ " " ಆ್ಯನ್ ಐಡಿಯಾಲಿಸ್ಟ್ ವ್ಯೂ ಆಫ್ ಲೈಫ್ " ಮೊದಲಾದ ಕೃತಿಗಳನ್ನು ಬರೆದಿರುವರು. ಆಂಧ್ರ ವಿಶ್ವವಿದ್ಯಾಲಯ, ಬನಾರಸ್ ವಿಶ್ವವಿದ್ಯಾಲಯಗಳಲ್ಲಿ ಉಪಕುಲಪತಿಗಳಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸಿದರು. ನಂತರ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಮೇರು ವ್ಯಕ್ತಿತ್ವವನ್ನು ಬೆಳೆಸಿಕೊಂಡರು.
1951-52 ರಲ್ಲಿ ಭಾರತದ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ ರಾಧಾಕೃಷ್ಣನ್ ರವರು ಎಲ್ಲ ಸಂಸತ್ ಸದಸ್ಯರ ಗಮನ ಸೆಳೆದರು. ರಾಧಾಕೃಷ್ಣನ್ ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ 1954 ರಲ್ಲಿ ಪ್ರತಿಷ್ಠಿತ 'ಭಾರತ ರತ್ನ ಪ್ರಶಸ್ತಿ' ನೀಡಿ ಗೌರವಿಸಿತು. ಡಾ|| ರಾಜೇಂದ್ರ ಪ್ರಸಾದ್ ನಂತರ, 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿ ಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ರಾಷ್ಟ್ರದ ಸರ್ವತೋಮುಖ ಏಳಿಗೆಗೆ ಅವಿರತವಾಗಿ ಶ್ರಮಿಸಿದರು.
ಭಾರತ ದೇಶ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೇರಿತು. ತಮ್ಮ ರಾಷ್ಟ್ರಪತಿ ಹುದ್ದೆಯ ಅಧಿಕಾರಾವಧಿ ಮುಗಿದ ನಂತರ 1967 ರಲ್ಲಿ ತಮ್ಮ ನಿವೃತ್ತಿ ಜೀವನವನ್ನು ಮದ್ರಾಸಿನಲ್ಲಿ ಕಳೆದ ರಾಧಾಕೃಷ್ಣನ್ ರವರು 1975 ರ ಏಪ್ರಿಲ್ 17 ರಂದು ಪಂಚಭೂತಗಳಲ್ಲಿ ಲೀನವಾದರು. ತಮ್ಮ ಜೀವಿತಾವಧಿಯಲ್ಲಿ ಹಲವಾರು ಬಿರುದಾವಳಿಗಳಿಂದ ಪುರಸ್ಕೃತರಾದರು. ಇವರ ಜನ್ಮದಿನವಾದ ಶಿಕ್ಷಕರ ದಿನಾಚರಣೆಯಂದು ಆಯಾ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಶಿಕ್ಷಕರು ಒಂದೆಡೆ ಸೇರಿ ಶಿಕ್ಷಕರ ಸ್ಥಿತಿಗತಿಗಳು, ಶಿಕ್ಷಕರ ಕರ್ತವ್ಯ,
ಶಿಕ್ಷಣದ ಇತಿಮಿತಿಗಳು ಮೊದಲಾದ ವಿಷಯಗಳ ಬಗೆಗೆ ವಿಚಾರ ವಿನಿಮಯ ಮಾಡಲು ಒಂದು ಸುಸಂದರ್ಭವಾಗಿದೆ. ಮಾನವನ ಜೀವನದಲ್ಲಿ ಶಿಕ್ಷಕನ ಸ್ಥಾನ ಬಹಳ ಮಹತ್ತರವಾದುದು. ಶಿಕ್ಷಣ ಯಾವುದೇ ವ್ಯಕ್ತಿಯ ಜೀವನದಲ್ಲಿ ಒಂದು ಮಹತ್ವದ ಘಟ್ಟ. ನಾವು ಪಡೆದ ಶಿಕ್ಷಣ ನಮ್ಮನ್ನು ರೂಪಿಸುತ್ತದೆ. ಉತ್ತಮ ಶಿಕ್ಷಣ ದೊರೆಯುವುದು ಒಂದು ಭಾಗ್ಯ. ಅದು ಲಭಿಸುವುದು ಸಚ್ಚಾರಿತ್ರ್ಯವುಳ್ಳ ಶಿಕ್ಷಕರಿಂದ. " ಭಾರತದ ಭವಿಷ್ಯವು ಅದರ ಶಾಲಾ ಕೊಠಡಿಗಳಲ್ಲಿ ರೂಪಿಸಲ್ಪಡುತ್ತದೆ " ಎಂದು ಒಂದು ಹೇಳಿಕೆ ಇದೆ. ಸತ್ಪ್ರಜೆಗಳ ನಿರ್ಮಾಣ ಶಿಕ್ಷಕನ ಕೈಲಿದೆ. " ಶಿಕ್ಷಣ ಮನುಷ್ಯನನ್ನು ಶ್ರೇಷ್ಠ ನಾಗರೀಕನನ್ನಾಗಿ ಮಾಡುತ್ತದೆ." ಎಂದು ರಾಧಾಕೃಷ್ಣನ್ ಹೇಳುತ್ತಿದ್ದರು.
ಶಿಕ್ಷಕ ಎಂಬ ಪದಕ್ಕೆ ಅನೇಕ ಪರ್ಯಾಯ ಪದಗಳಿವೆ. ಶಿಸ್ತಿನ ಸಿಪಾಯಿಯಾಗಿ ಕ್ಷಮಾಗುಣಶೀಲನಾಗಿ ಕರ್ಮವನ್ನು ಮಾಡುವವನೇ ಶಿಕ್ಷಕ. ಅಪರಂಜಿಯಾಗಿ ಧ್ಯಾನಾಸಕ್ತನಾಗಿ ಪರಂಜ್ಯೋತಿಯಾಗಿ ಕರ್ಮವನ್ನು ಮಾಡುವವನೇ ಅಧ್ಯಾಪಕನಾಗಿದ್ದಾನೆ. ಬೋಧ ನೋಪಾಯಗಳನ್ನು ಅರಿತು ಧನ್ಯತೆಯಿಂದ ಕರ್ಮವನ್ನು ಮಾಡುವ ವ್ಯಕ್ತಿಯೇ ಬೋಧಕನಾಗಿದ್ದಾನೆ. ಉಪಾಧ್ಯಾಯ ಅಂದರೆ ಉತ್ಸಾಹಭರಿತನಾಗಿ ಪಾಠ ಮಾಡುವವನಾಗಿ ಧ್ಯಾನಪರವಶನಾಗಿ ಯತಿಯಂತೆ ಕರ್ಮವನ್ನು ಎಸಗುವವನು ಉಪಾಧ್ಯಾಯನಾಗಿದ್ದಾನೆ.
ಸತ್ಯ, ಸಾಮಾರ್ಥ್ಯ, ಚತುರತೆ, ಸ್ಪಷ್ಟತೆ, ಪ್ರಾಮಾಣಿಕತೆ, ದಕ್ಷತೆ, ವಿವೇಚನೆ ಮುಂತಾದ ಗುಣಗಳನ್ನು ಹೊಂದಿರುವವನು ಶಿಕ್ಷಕನೆನಿಸಿಕೊಳ್ಳುತ್ತಾನೆ. ಶಿಕ್ಷಕ ಅಥವಾ ಗುರು - ಇದು ಅನಂತ. ಅತ್ಯದ್ಭುತ ಶಕ್ತಿ. ಶಾಶ್ವತ ಜ್ಞಾನದ ಗಣಿ. ಬ್ರಹ್ಮಾಂಡದ ಜ್ಞಾನಧಾರೆ. ಗುರು ಬ್ರಹ್ಮನಾಗಿ, ಮಹಾವಿಷ್ಣುವಾಗಿ, ಗುರುದೇವ ಮಹೇಶ್ವರನಾಗಿ ಇವರೆಲ್ಲರಿಗೂ ಮಿಗಿಲಾಗಿಯೂ ಇರುತ್ತಾನೆ.
ಆದ್ದರಿಂದಲೇ,
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ll
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ll
ಎನ್ನುತ್ತೇವೆ. ನಮಗೆ ತಿಳಿದಿದೆ, ಗುರು ಓರ್ವ ಅತ್ಯುತ್ತಮ ಸ್ನೇಹಿತ, ಮಾರ್ಗದರ್ಶಕ, ಅಷ್ಟಲ್ಲದೆ ಓರ್ವ ತತ್ವಜ್ಞಾನಿ. ಸಂಸ್ಕೃತದಲ್ಲಿ " ಗು " ಅಂದರೆ ಅಂಧಕಾರ ಮತ್ತು"ರು " ಅಂದರೆ ಬೆಳಕು. ಗುರು ಎಂದರೆ ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ಮಾರ್ಗದರ್ಶಕ. ಅರಿವು ಅಭಿವೃದ್ಧಿಯ ಒಂದು ಮೂಲತತ್ವವಾ ಗಿದ್ದು, ಇದು ಕಾಲ್ಪನಿಕತೆಯಿಂದ ನೈಜಸ್ಥಿತಿಯ ನಿರ್ಮಾಣಕ್ಕೆ ಸಾಕ್ಷಾತ್ಕರಿಸಲು ಬೇಕಾದ ಮಹೋನ್ನತ ಶಕ್ತಿ ಶಿಕ್ಷಕನಾಗಿದ್ದಾನೆ.
ನಾವು ತಾಯಿಯ ಗರ್ಭದಿಂದ ಈ ಹೊರ ಜಗತ್ತಿಗೆ ಹೊಸದಾಗಿ ಪಾದಾರ್ಪಣೆ ಮಾಡಿದಾಗ ಒಂದು ಮಣ್ಣಿನ ಮುದ್ದೆಯಂತೆ ಇರುತ್ತೇವೆ. ಹಾಗೂ ಈ ಮಣ್ಣಿನ ಮುದ್ದೆಗೆ "ಮಗು" ಎಂದು ಈ ಪ್ರಪಂಚ ಕರೆಯಿತು. ಮಗುವಿಗೆ ಮನೆಯೇ ಮೊದಲ ಪಾಠಶಾಲೆಯಾಗಿದ್ದು ಜನನಿ ಅಂದರೆ ತಾಯಿ ಮೊದಲ ಗುರುವಾಗಿ ನಿಲ್ಲುತ್ತಾಳೆ. ಆದ್ದರಿಂದಲೇ ಕವಿಯೊಬ್ಬ , " ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು " ಎಂದು ಅರ್ಥಗರ್ಭಿತವಾಗಿ ಹಾಡಿದ್ದಾನೆ. ತಾಯಿಯಿಂದ ಒಂದಷ್ಟು ಪ್ರಮಾಣದ ಜ್ಞಾನವನ್ನು ಪಡೆದುಕೊಂಡದ್ದರಿಂದ ತಾಯಿಯೇ ಮಗುವಿನ ಮೊದಲ ಗುರುವೆಂದು ಸರ್ವಶ್ರೇಷ್ಠ ಸ್ಥಾನವನ್ನು ಅಲಂಕರಿಸಿದ್ದಾಳೆ. ಮಗು ಒಂದು ನಿರ್ದಿಷ್ಟ ವಯಸ್ಸಿಗೆ ಗುರುವಿನ ಬಳಿ ಜ್ಞಾನವನ್ನು ಅರಸಿ ಬರುತ್ತದೆ.
ಗುರು ತನ್ನ ಅನುಭವದೊಂದಿಗೆ ತನ್ನಲ್ಲಿರುವ ವಿಶೇಷ ವೈವಿಧ್ಯಮಯ ಜ್ಞಾನವನ್ನು ಮಗುವಿಗೆ ಒಂದು ಶುಭ ಮುಹೂರ್ತದಲ್ಲಿ ಧಾರೆಯೆರೆಯುತ್ತಾನೆ. ಗುರು ಸದಾ ಶಿಷ್ಯನ ದೃಷ್ಟಿಯಲ್ಲಿ ಅಸಾಮಾನ್ಯ ಪ್ರತಿಭಾನ್ವಿತ ನಾಗಿರುತ್ತಾನೆ ಮತ್ತು ತನ್ನ ಶಿಷ್ಯರ ಶ್ರೇಯೋಭಿವೃದ್ಧಿಯನ್ನೇ ಬಯಸುವವನಾಗಿರು ತ್ತಾನೆ. ರಾಮಾಯಣದಲ್ಲಿ ರಾಮನ ದೃಷ್ಟಿಕೋನದಿಂದ ವಸಿಷ್ಠ ಮತ್ತು ವಿಶ್ವಾಮಿತ್ರರು ಅಸಾಮಾನ್ಯ ವಿದ್ಯಾಪಾರಂಗತರು, ಅವರೇ ವಿಶ್ವವಿದ್ಯಾಲಯ ಮತ್ತು ವಿಶ್ವಕೋಶಗಳಾಗಿ ರುತ್ತಾರೆ. ಮಹಾಭಾರತದಲ್ಲಿ ಕೌರವ ಮತ್ತು ಪಾಂಡವರ ದೃಷ್ಟಿಯಲ್ಲಿ ಗುರು ದ್ರೋಣಾಚಾರ್ಯ ರು ಜ್ಞಾನದ ಮತ್ತು ಬುದ್ಧಿಯ ಪ್ರಪಂಚವೇ ಆಗಿರುತ್ತಾರೆ. ಇದು ಗುರುವಿನ ಒಂದು ನೆಲೆಗಟ್ಟು. ಮತ್ತೊಂದು ನೆಲೆಗಟ್ಟು ಎಂದರೆ ಗುರು ಸಂಸ್ಕೃತಿಯ, ಪರಂಪರೆಯ ಮತ್ತು ಶಿಷ್ಟಾಚಾರದ ಸಂಕೇತವಾಗಿದ್ದು ವ್ಯಕ್ತಿಯ ವ್ಯಕ್ತಿತ್ವದ ನಿರೂಪಕನಾಗಿರುತ್ತಾನೆ.
ಇಂದಿನ ಆಧುನಿಕ ಸಮಾಜದಲ್ಲಿ ಗುರುವಿನ ಜವಾಬ್ದಾರಿ ಇಷ್ಟೆ ಎಂದು ಹೇಳಲು ಸಾಧ್ಯವಿಲ್ಲ. ಆದರೂ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಗುರುವಿನ ಪಾತ್ರವನ್ನು ಮಹೋನ್ನತವಾದುದು ಎಂದು ಪರಿಗಣಿಸಲಾಗಿದೆ. ಅಕ್ಷರ ಜ್ಞಾನವನ್ನು ನೀಡುವುದು : ವಿದ್ಯೆಯನ್ನು ಕಲಿಯಲು ಬರುವ ವಿದ್ಯಾರ್ಥಿಗಳ ಬುದ್ಧಿಶಕ್ತಿ ವಿಭಿನ್ನವಾಗಿರುತ್ತದೆ. ಸಾಮಾರ್ಥ್ಯ ಶಕ್ತಿ ವಿವಿಧ ಹಂತದಲ್ಲಿರುತ್ತದೆ. ಜ್ಞಾನವನ್ನು ಸ್ವೀಕರಿಸುವ ಮಟ್ಟವು ವೈಯಕ್ತಿಕ ಭಿನ್ನತೆಯಿಂದ ಬೇರೆ ಬೇರೆಯಾಗಿರುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ಕಲಿಕಾ ಅವಕಾಶವನ್ನು ಕಲ್ಪಿಸುವ ಮೂಲಕ ವಿಭಿನ್ನ, ವೈವಿಧ್ಯಮಯ ಅಕ್ಷರ ವಿನ್ಯಾಸಗಳನ್ನು ಪರಿಚಯಿಸುವ ಮೂಲಕ ಬಹಳ ಸುಂದರವಾದ ಅಕ್ಷರಜ್ಞಾನದ ಪ್ರಪಂಚವನ್ನು ಗುರು ಕಟ್ಟಿಕೊಡುತ್ತಾರೆ. ಮೌಢ್ಯತೆಯನ್ನು ತೊಲಗಿಸುವುದು : ವಿದ್ಯಾರ್ಥಿಗಳು ಸಮಾಜದ ವಿವಿಧ ಸ್ತರಗಳಿಂದ ಶಾಲೆಗೆ ಬರುವವರಾಗಿರು ತ್ತಾರೆ. ವಿಭಿನ್ನ ಕೌಟುಂಬಿಕ ಜೀವನದ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಶಾಲೆಗೆ ಬರುವವರಾಗಿರುತ್ತಾರೆ.
ಇಂತಹ ಹಲವು ವಿದ್ಯಾರ್ಥಿಗಳು ಪೂರ್ವಾಗ್ರಹ ಪೀಡಿತರಾಗಿ ಅಂಧಾನುಕರಣೆ, ಮೌಢ್ಯದ ಆಚರಣೆ ಮಾಡುವ ಮನೋಭಾವದವರೂ ಆಗಿರಬಹುದು. ಇಂತಹ ವಿದ್ಯಾರ್ಥಿಗಳಲ್ಲಿ ವೈಚಾರಿಕ, ವೈಜ್ಞಾನಿಕ, ತಾರ್ಕಿಕ ಮನೋಭಾವ ಮೂಡಿಸುವುದು ಗುರುವಿನ ಮಹತ್ತರ ಕರ್ತವ್ಯವಾಗಿರುತ್ತದೆ. ಸಂಸ್ಕೃತಿ, ಶಿಷ್ಠಾಚಾರ, ಇತಿಹಾಸ, ಪರಂಪರೆಗಳನ್ನು ಪರಿಚಯಿಸುವುದು : ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ವಿದ್ಯಾರ್ಥಿಗಳಿಗೆ ನಾಡು, ನುಡಿ, ನೆಲ- ಜಲ, ಸಂಸ್ಕೃತಿ, ಆಚಾರ, ವಿಚಾರ, ನೀತಿ, ನಿಯಮ, ರೀತಿ- ರಿವಾಜು , ಕಾನೂನು- ಕಟ್ಟಳೆ, ಸಹಕಾರ, ಹೊಂದಾಣಿಕೆ, ಸಹನೆ, ಸಹಬಾಳ್ವೆ, ಪ್ರೀತಿ, ವಿಶ್ವಾಸ, ನಂಬಿಕೆ, ತ್ಯಾಗ, ಹೆಣ್ಣಿನ ಬಗ್ಗೆ ಗೌರವ, ಗುರು-ಹಿರಿಯರಲ್ಲಿ ಭಕ್ತಿಯಭಾವ, ನಾವು-ನಮ್ಮವರು ಎಂಬ ಭಾವನೆ ಈ ರೀತಿಯ ಮನೋಭಾವವನ್ನು ವೃದ್ಧಿಸಿ, ಉತ್ತಮ ಶಿಷ್ಟಾಚಾರವನ್ನು ಕಲಿಸುವುದು, ನಮ್ಮದೇ ಆದ ಇತಿಹಾಸ, ಪರಂಪರೆಗಳನ್ನು ಗೌರವಿಸುವಂತೆ ಗುರುದರ್ಶನ ಮಾಡಿಸುವುದು.
ವಿದ್ಯಾರ್ಥಿಯು ಸ್ವಂತ ಬದುಕನ್ನು ಕಟ್ಟಿಕೊಳ್ಳುವಂತೆ ಪ್ರಭಾವೀಯುತ ಪ್ರೇರಣೆ ನೀಡುವುದು : ವಿದ್ಯೆಯನ್ನು ನೀಡುವ ಮೂಲ ಉದ್ದೇಶವೇ ವಿದ್ಯಾರ್ಥಿಯು ಸ್ವಯಂ ತಾನೇ ತನ್ನ ಬದುಕನ್ನು ರೂಪಿಸಿಕೊಳ್ಳುವುದು. ಸ್ವಂತ ದುಡಿಮೆ ಮಾಡಿ ದೇಶದ ಪ್ರಜ್ಞಾವಂತ ಪ್ರಜೆಯಾಗಿ ಹೊರಹೊಮ್ಮುವಂತೆ ಮಾಡವುದು. ಗುರುದರ್ಶನದಲ್ಲಿ ಅಂತಹ ಉತ್ತಮ ಪ್ರಭಾವ ಬೀರಿ ಉತ್ತಮ ಪ್ರೇರಣೆ ನೀಡುವುದು. ವಿದ್ಯಾರ್ಥಿಗಳು ತಮ್ಮ ಗುರುವಿನಿಂದ ತಾವು ಗಳಿಸಿದ ವಿದ್ಯೆಯನ್ನು ಪ್ರಾಯೋಗಿಕ ಜೀವನ ವಿಧಾನಕ್ಕೆ ಅನ್ವಯಿಸುವುದು. ಇಪ್ಪತ್ತೊಂದನೇ ಶತಮಾನದ ಸ್ಪರ್ಧಾತ್ಮಕ ಯುಗವನ್ನು ಗೆದ್ದು ಜೀವನ ಸಾಗಿಸಲು ಅನುಕೂಲವಾಗುವಂತೆ ಜ್ಞಾನವನ್ನು ಅನುಕೂಲಿಸುವುದು. ಸಮಾಜದಲ್ಲಿ ಗುರುವನ್ನು "ಗುರುದೇವೋ ಭವ" ಎಂದು ಹೇಳಿ ಉತ್ತಮ ಸ್ಥಾನವನ್ನು ನೀಡಲಾಗಿದೆ.
ಸಮಾಜದ ವಿಭಿನ್ನ ಕ್ಷೇತ್ರಗಳಲ್ಲಿ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಜನರಿಗೆ ಇಂದು ಸರಿಯಾದ ಗುರುವಿನ ಅಗತ್ಯವಿದೆ. ಗುರುದರ್ಶನದ ಮಹತ್ವ ದಿನೇ ದಿನೇ ಹೆಚ್ಚುತ್ತಿದೆ. ಇಂದಿನ ಕಾಲಧರ್ಮಕ್ಕೆ ತಕ್ಕಂತೆ ಗುರು ತನ್ನ ಮನೋಧರ್ಮವನ್ನು ಪರಿವರ್ತನೆಗೊಳಪಡಿಸಿ, ಸಮಾಜದ ವಿವಿಧ ಕ್ಷೇತ್ರಗಳಿಗೆ ಅಗತ್ಯವಾದ ವಿದ್ಯಾರ್ಥಿಗಳನ್ನು ರೂಪಿಸುವುದು ಗುರುವಿನ ಮಹತ್ತರ ಜವಾಬ್ದಾರಿಯಾಗಿದೆ. ಆಧುನಿಕ ಗುರುವಿನ ಜ್ಞಾನ ವಿಸ್ತರಿಸಿಕೊಂಡು, ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ಐತಿಹಾಸಿಕ, ವೈಜ್ಞಾನಿಕ, ತಾಂತ್ರಿಕ, ವೈಚಾರಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳ ವೈವಿಧ್ಯಮಯ ಅರಿವು ಮೂಡಿಸುವುದು, ಜೀವನದಲ್ಲಿ ಸಮಸ್ಯೆಗಳು ಎದುರಾದಾಗ , ಅವುಗಳನ್ನು ಪರಿಹರಿಸಿಕೊಳ್ಳುವುದು ಹೇಗೆ? ಧೈರ್ಯ, ದೃಢ ನಿರ್ಧಾರಗಳನ್ನು ಹೊಂದುವುದು ಹೇಗೆ? ಆತ್ಮವಿಶ್ವಾಸ, ನಂಬಿಕೆ, ಶ್ರದ್ಧೆ ಮತ್ತು ನಿಷ್ಠೆ ಇವುಗಳನ್ನು ಹೊಂದುವುದು ಹೇಗೆ? ಎಂಬುದನ್ನು ಕಲಿಸುವುದು ಇಂದಿನ ವಿದ್ಯಾರ್ಥಿ ಪೀಳಿಗೆಗೆ ಅವಶ್ಯವೆನಿಸಿದೆ. ಒಟ್ಟಾರೆ "ಗುರು"ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು ತನ್ನೆಲ್ಲಾ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾರೆ. ಇಲ್ಲಿ ನಾವು ತಿಳಿಯಬೇಕಾದದ್ದು ಎಂದರೆ ಒಂದಕ್ಷರಂ ಕಲಿಸಿದಾತಂ ಗುರು. ಅಂದರೆ ನಮಗೆ ಏನೊಂದೂ ತಿಳಿದಿರದ ವಯಸ್ಸಿನಲ್ಲಿ ಓಂಕಾರ ಮಂತ್ರಾಕ್ಷರದ ಅಕ್ಷರ ದೀಕ್ಷೆಯನ್ನು ನೀಡುವ ಮೂಲಕ ದೊರೆತ ಮಹಾನ್ ಜ್ಞಾನದ ಶಕ್ತಿ ಗುರು ಆಗಿರುತ್ತಾರೆ.
ಅಕ್ಷರವನ್ನು ತಿದ್ದಿ ತೀಡುವ ಮೂಲಕ ಬ್ರಹ್ಮಾಂಡದಲ್ಲಿನ ಭೂಮಿ, ಆಕಾಶ, ನೀರು, ಗಾಳಿ, ಬೆಂಕಿ ಈ ಪಂಚ ಭೂತಗಳನ್ನು ನಮ್ಮ ಅರಿವಿಗೆ ತರುತ್ತಾರೆ ಗುರು. ನಾವು ತಪ್ಪು ಮಾಡಿದಾಗ ನಮ್ಮನ್ನು ತಿದ್ದಿ ಬುದ್ಧಿ ಹೇಳಿ ಸರಿ ಮಾರ್ಗ ತೋರುತ್ತಾರೆ ಗುರು. ಆ ಮೂಲಕ ಸಮಾಜಕ್ಕೆ ಅಗತ್ಯವಾದ ಜ್ಞಾನದ ಕೊಡುಗೆಗಳನ್ನು ನೀಡುವವರು ಗುರು. ಸಮಾಜದ ಓರೆಕೋರೆಗಳನ್ನು ತಿದ್ದಲು ಸತತ ಪ್ರಯತ್ನಿಸಿದ ಹಾಗೂ ಅನುಭವ ಮಂಟಪದ ಮೂಲಕ ಅನುಭವ ವಿದ್ಯೆಯನ್ನು ಶರಣರಿಗೆ ನೀಡಿದ ಭಕ್ತಿ ಭಂಡಾರಿ ಬಸವಣ್ಣನವರು ವಿಶ್ವಗುರು ಎಂದೇ ಹೆಸರುವಾಸಿಯಾಗಿದ್ದಾರೆ. ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಗುರುಸ್ಥಾನದಿಂದಲೇ ಮಿಂಚಿದ ಧ್ರುವತಾರೆಯಾಗಿದ್ದು ತನ್ನ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆಗಾಗಿ ಮೀಸಲಾಗಿರಿಸಿದ ವರು.
ಡಾII ಎಸ್. ರಾಧಾಕೃಷ್ಣನ್ ಅವರ ಜೀವನಾದರ್ಶಗಳು ನೆಮ್ಮದಿಯ ಜೀವನಕ್ಕೆ ದಾರಿದೀಪದಂತೆ ಇದ್ದು, ಶಿಕ್ಷಕರು ಅವರ ಮಾರ್ಗದಲ್ಲಿ ಕ್ರಮಿಸಿ, ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಅವರ ಮನಸ್ಸಿಗೆ ಮುಟ್ಟುವಂತೆ ಹಾಗೂ ಮುಂದೆ ಅವರು ಸನ್ಮಾರ್ಗದಲ್ಲಿದ್ದು ಜಾತಿಮತ ಕುಲಗಳ ಭೇದಭಾವ ಬೆಳೆಸಿಕೊಳ್ಳದೆ ಉತ್ತಮ ಪ್ರಜೆಗಳಾಗಿ ಬಾಳಲು ಮತ್ತು ಬೆಳೆಯಲು ಭದ್ರ ಬುನಾದಿಯನ್ನು ಹಾಕಿಕೊಡಬೇಕಾದ ಜವಾಬ್ದಾರಿ ಶಿಕ್ಷಕ ಸಮೂಹದ ಮೇಲಿದೆ. ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಗುರುವಿನ ಸ್ಥಾನ ಅಮೋಘವೆನಿಸಿದೆ. ನಮ್ಮೆಲ್ಲರಿಗೂ ಅಕ್ಷರ ಜ್ಞಾನವನ್ನು ನೀಡಿದ ಗುರುಗಳು ನಮ್ಮೆಲ್ಲರ ಜೀವನದಲ್ಲಿ ಸರ್ವಶ್ರೇಷ್ಠರೇ ಆಗಿರುತ್ತಾರೆ.
ಏಕೆಂದರೆ " ಗುರು " - ಅನಂತ ಶಕ್ತಿ. ಮತ್ತು ಚೈತನ್ಯವಾಗಿರುವುದರಿಂದ ಎಷ್ಟೇ ಬರೆದರೂ, ಎಷ್ಟೇ ಓದಿದರೂ, ಎಷ್ಟೇ ತಿಳಿದರೂ ಕಡಿಮೆಯೇ ಅನ್ನಿಸುತ್ತದೆ. ಅಲ್ವೇನು ? ಇಂದು ಗುರು ಒಳ್ಳೆಯ ಸ್ನೇಹಿತರಾಗಿ, ತತ್ವಜ್ಞಾನಿಯಾಗಿ, ಮಾರ್ಗದರ್ಶಕರಾಗಿ, ಕಲಿಕೆಯನ್ನು ಅನುಕೂಲಿಸುವವರಾಗಿ ಪಾತ್ರನಿರ್ವಹಣೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಮಗೆ ಪ್ರಾರಂಭದ ಅಕ್ಷರ ಕಲಿಸಿದ ಗುರುವಿನಿಂದ ಹಿಡಿದು ಉನ್ನತ ಶಿಕ್ಷಣ ಪಡೆಯುವವರೆಗೂ ಮಾರ್ಗದರ್ಶಿಸಿದ ಎಲ್ಲಾ ಗುರುಗಳನ್ನು ವಿಶೇಷವಾಗಿ ಇಂದು ಸ್ಮರಿಸೋಣ. ಗುರುಬಲದಿಂದ ಶಾಂತಿ ನೆಮ್ಮದಿಯ ಜೀವನ ಪಡೆದು ಎಲ್ಲರೂ ಚೆನ್ನಾಗಿರೋಣ.
ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ ।
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ॥
ಅಂದರೆ ಛಿದ್ರವಿಲ್ಲದ, ಅನಂತವಾದ, ಕಾಲಾತೀತವಾದ ದೈವತ್ವವನ್ನು ಮತ್ತು ಇಡೀ ವಿಶ್ವವನ್ನು ವ್ಯಾಪಿಸಿರುವ - ಚಲಿಸಬಲ್ಲ ಅಥವಾ ಅಚಲವಾದ ಆ ಸತ್ಯವನ್ನು ನನಗೆ ಬಹಿರಂಗಪಡಿಸಿದ ಆ ಗುರುವಿಗೆ ನನ್ನ ನಮಸ್ಕಾರಗಳನ್ನು ಶಿರಸಾ ಸಮರ್ಪಿಸುತ್ತಾ ಭಾರತ ದೇಶದ ಎಲ್ಲಾ ಗುರುವೃಂದಕ್ಕೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಕೆ.ಎನ್. ಚಿದಾನಂದ , ಹಾಸನ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ