ವಿವೇಕಾನಂದ ಕಾಲೇಜಿನಲ್ಲಿ 43ನೇ ವರ್ಷದ ಮಾನ್ಸೂನ್ ಚೆಸ್ ಪಂದ್ಯಾಟ
ಪುತ್ತೂರು: ಚದುರಂಗ ಎಂಬುದು ಕೇವಲ ಆಟ ಮಾತ್ರವಲ್ಲ, ಜೀವನದುದ್ದಕ್ಕೂ ಅರಿತುಕೊಳ್ಳುವ ಪಾಠ. ಇಲ್ಲಿ ಸ್ಪರ್ಧಾಳುಗಳಾಗಿ ಆಗಮಿಸಿರುವ ಎಲ್ಲಾ ಆಟಗಾರರು ಚದುರಂಗದ ಆಟದಲ್ಲಿ ಮಾತ್ರ ಚಾಂಪಿಯನ್ಸ್ ಆಗದೆ, ಜೀವನ ಎಂಬ ಚದುರಂಗದಲ್ಲೂ ಚಾಂಪಿಯನ್ಸ್ಗಳಾಗಬೇಕು. ಸಮಾಜದಲ್ಲಿ ಉತ್ತಮ ನಾಗರಿಕನಾಗಿ, ದೇಶಕ್ಕೆ ಉತ್ತಮ ಆಸ್ತಿಯಾಗಬೇಕು. ಸ್ವಾಸ್ಥ್ಯ ಮನಸ್ಸಿನೊಂದಿಗೆ, ಸ್ವಾಸ್ಥ್ಯ ಸಮಾಜಕ್ಕಾಗಿ ದುಡಿಯಬೇಕು ಎಂದು ದ್ವಾರಕಾ ಕನ್ಸ್ಟ್ರಕ್ಷನ್ ಪುತ್ತೂರು ಇದರ ಮಾಲೀಕ ಶ್ರೀ ಗೋಪಾಲಕೃಷ್ಣ ಭಟ್ ನುಡಿದರು.
ಇವರು ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ಇದರ ಸಹಯೋಗದೊಂದಿಗೆ ನಡೆದ ಅಂತರ್ ಜಿಲ್ಲೆ, ಅಂತರ್ ಕಾಲೇಜು ಮಟ್ಟದ 43ನೇ ಮಾನ್ಸೂನ್ ಚೆಸ್ ಪಂದ್ಯಾಟವು ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ, ಶ್ರೀಪತಿ ಕಲ್ಲೂರಾಯ ಮಾತನಾಡಿ, ಈ ಚದುರಂಗ ಸ್ಪರ್ಧೆಯು 43 ವರ್ಷಗಳಿಂದ ನಡೆಯುತ್ತಾ ಬಂದಿರುವುದು ಅತ್ಯಂತ ಸಂತಸದ ಸಂಗತಿ. ಇಲ್ಲಿ ತಂದೆ, ಮಕ್ಕಳು ಸೇರಿದಂತೆ ತಲೆಮಾರುಗಳೇ ಆಡಿರುವ ಪಂದ್ಯಾಟ ಇದಾಗಿದೆ. ಈ ಆಟದ ಜೊತೆಗೆ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು.
ಚದುರಂಗ ಆಟವು ಬೇರೆಯದಕ್ಕಿಂತ ಭಿನ್ನವಾಗಿದೆ, ಇದರಿಂದಾಗಿ ನಿರ್ಧಿಷ್ಟ ರೀತಿಯಲ್ಲಿ ಭೌದ್ಧಿಕ, ಮಾನಸಿಕ ಲಾಭಗಳು ಹಲವಾರಿವೆ. ಪ್ರಾಚೀನ ಪುರಾಣಗಳಲ್ಲಿ ಚದುರಂಗ ಸೇನೆಯೆಂಬ ಯುದ್ಧಕಲೆಯೂ ಇತ್ತು. ಇಡೀ ಜಗತ್ತಿನಲ್ಲಿ ಚೆಸ್ ಕ್ರೀಡೆಗೆ ಉತ್ತಮ ಸ್ಥಾನಮಾನವಿದ್ದು, ನೆರೆದಿರುವ ಎಲ್ಲರೂ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ವಿಷ್ಣುಗಣಪತಿ ಭಟ್, ಪರೀಕ್ಷಾಂಗ ಕುಲಸಚಿವ ಹಾಗೂ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಎಚ್.ಜಿ ಶ್ರೀಧರ್, ಉಪಸ್ಥಿತರಿದ್ದರು. ಒಟ್ಟು 13 ಕಾಲೇಜುಗಳಿಂದ ದೈಹಿಕ ಶಿಕ್ಷಕರು ಹಾಗೂ 85 ಸ್ಪರ್ಧಾಳುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕ ರವಿಶಂಕರ್ ಸ್ವಾಗತಿಸಿ, ಯತೀಶ್ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ