ಯಾವುದೇ ಧರ್ಮವಿರಲಿ, ಅದನ್ನು ಶ್ರದ್ಧೆಯಿಂದ ಒಪ್ಪಿ, ಅಪ್ಪಿಕೊಳ್ಳುವರು ಅನೇಕರಿದ್ದಾರೆ. ಗಣಪತಿಯ ವಿಚಾರದಲ್ಲೂ ಅಷ್ಟೇ ಭಕ್ತಿ ಭಾವದ ಜೊತೆ ಸಂಭ್ರಮೋಲ್ಲಾಸಗಳು ಗರಿಗೆದರುತ್ತದೆ. ಒಂದು ದೃಷ್ಠಿಯಿಂದ ನೋಡಿದರೆ ನಮ್ಮ ಗಣಪನಿಗೆ ಮೂರು ಮುಖ. ಒಂದು ಆಧ್ಯಾತ್ಮಿಕ, ಇನ್ನೊಂದು ಸಾಮಾಜಿಕ ಮತ್ತೊಂದು ಆಚರಣೆ. ಆಧ್ಯಾತ್ಮಿಕ ಅರ್ಥವನ್ನು ಗಟ್ಟಿಗೊಳಿಸಲು ಪುರಾಣ-ಕಥೆಗಳು ಈ ತಳಹದಿಯ ಮೇಲೆಯೇ ಅಚರಣೆ ಬೆಳೆದು ಬಂದಿದೆ. ಈ ಮೂರು ಮುಖಗಳು ಬೇರೆ ಬೇರೆಯಾಗಿ ಕಂಡು ಬಂದರೂ ಅವು ಒಟ್ಟಿನಲ್ಲಿ ಒಂದಕ್ಕೊಂದು ಪ್ರೇರಕ, ಪೂರಕ.
ಬೆಂಗಳೂರು ಜಯನಗರ 4ನೇ ಬ್ಲಾಕ್ನ ಶ್ರೀ ವಿನಾಯಕ ಸೇವಾ ಸಮಿತಿಯವರು ಶಿಲಾ ದೇಗುಲ ರಾಜಗೋಪುರ ಲೋಕಾರ್ಪಣೆ ಮತ್ತು ಕುಂಭಾಭಿಷೇಕದ ಪರ್ವಕಾಲದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವೀರಾಪುರ ಹಿರೇಮಠದ ಡಾ|| ಷ. ಬ್ರ. ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರ ಪ್ರಧಾನ ಸಂಪಾದಕತ್ವದಲ್ಲಿ "ಜಗದೇಕ ಸುಮುಖ"ವೆಂಬ ಚಿರಸ್ಮರಣೀಯ ಸಂಪುಟವೊಂದನ್ನು ಸಿದ್ಧಪಡಿಸಿ ಆಸ್ತಿಕರಿಗೊಂದು ಆಸ್ತಿಯನ್ನಾಗಿ ತ್ರಿಕರಣಪೂರ್ವಕವಾಗಿ ನೀಡಿರುತ್ತಾರೆ.
ಪೂಜೆ ಪುನಸ್ಕಾರಗಳು, ದೇವಾಲಯಗಳೆಂದರೇ ಮೂಗು ಮುರಿಯುವ ಇಂದಿನ ಯುವ ಜನಾಂಗಕ್ಕೆ, ನಮ್ಮ ಅನಾದಿಕಾಲದಿಂದ ನಡೆದುಕೊಂಡು ಬಂದಿರುವ ಪೂಜಾ ಪದ್ಧತಿಗಳು, ಕೇವಲ ಮೂಢ ನಂಬಿಕೆಗಳಾಗಿರದೆ ವೈಜ್ಞಾನಿಕವಾಗಿ ಅವು ಹೇಗೆ ಮಾನವ ಜನಾಂಗದ ಮೇಳೆ ಪ್ರಭಾವ ಬೀರಬಲ್ಲವು ಎಂಬುದಕ್ಕೂ ಒತ್ತು ಕೊಡಲಾಗಿದೆ.
ಇಂತಹ ಶಿಲಾ ದೇಗುಲವೊಂದು ಜಗದೇಕ ಸುಮುಖನಿಗೆ ಪ್ರಧಾನ ಅರ್ಚಕರಾದ ಶ್ರೀ ಚನ್ನವೀರದೇವರ ಮಾರ್ಗದರ್ಶನದಲ್ಲಿ ಭಕ್ತಸ್ತೋಮದ ಸಲಹೆ ಸಹಕಾರಗಳಿಂದ ಹಾಗೂ ಹಿಂದಿನ ಮತ್ತು ಇಂದಿನ ಸೇವಾಸಮಿತಿಯ ಸದಸ್ಯರೆಲ್ಲರ ನಿಸ್ವಾರ್ಥ ಸೇವೆಯಿಂದಾಗಿ ಪೂರ್ಣಗೊಂಡು, ಗುರುಹಿರಿಯರ ಹಾಗೂ ಭಕ್ತ ಸಮೂಹದೆದುರು ಲೋಕಾರ್ಪಣೆಗೊಳಿಸಿದೆ.
ಇಲ್ಲಿ ಅನಾವರಣಗೊಂಡಿರುವ ವಿಷಯ ಮತ್ತು ವಿಚಾರಗಳು ಪರಂಪರಾಗತ ಓದುಗರಿಗೆ ಮಾತ್ರವಲ್ಲದೆ ನವೀನ ದೃಷ್ಠಿಯ ಓದುಗರಿಗೂ ಹೊಸ ಅನುಭವವೊಂದನ್ನು ತಂದು ಕೊಡುತ್ತವೆಯೆಂದರೆ ಅತಿಶೋಯಕ್ತಿಯೇನಲ್ಲ.
ಪ್ರಾರಂಭದಿಂದ ದೊರೆಯುವ ಕೃತಿಗಳಿಂದ ಹಿಡಿದು ಸಮಕಾಲೀನ ಕೃತಿಗಳವರೆಗೆ ಕನ್ನಡ ಕಾವ್ಯ ಗಣಪತಿಯ ಬಗ್ಗೆ ನಡೆಸಿರುವ ಚಿಂತನೆಯನ್ನು ಅರ್ಥೈಸುವ ಕಾರ್ಯದಲ್ಲಿ ಈಗಾಗಲೇ ನಡೆದಿರುವ ಹಲವು ಪಾರ್ಶ್ವ ಪ್ರಯತ್ನಗಳಿಗಿಂತ ಭಿನ್ನವಾದ ಅಧ್ಯಯನ ವಿಧಾನವನ್ನು ರೂಪಿಸಿರುವುದು ಇಲ್ಲಿ ಗಮನಿಸಬಹುದು.
ಪರಂಪರೆಯ ಅಪಾರ ಅರಿವಿನೊಡನೆ ಬೆರೆತಿರುವ ಪ್ರಯೋಗಶೀಲ ವೈಚಾರಿಕ ಮನೋ ಧರ್ಮ, ಸೂಕ್ಷ್ಮ ಒಳನೋಟನ್ನೊಳಗೊಂಡು ಈ ಕೃತಿ ಜಿಜ್ಞಾಸುಗಳಿಗೆ ಹೆಚ್ಚಿನ ಪ್ರೇರಣೆಯನ್ನು ನೀಡುವ ಅಂತಸತ್ವದಿಂದ ಭಾವುಕ ಭಕ್ತರಿಗಷ್ಟೇ ಅಲ್ಲದೇ ವಿದ್ವಾಂಸರಿಗೂ ಇದೊಂದು ಮೇಲ್ಮಟ್ಟದ ಪರಾಮರ್ಶನ ಗ್ರಂಥವಾಗಿದೆ. ಈ ನಾಡಿನ ಭಕ್ತರ ಬಾಳನ್ನು ಸುಮುಖಗೊಳಿಸಿದ ಬೆಂಗಳೂರಿನ ಜಯನಗರದ ಗಣಪತಿ ದೇಗುಲದ ಕಣ್ಮಣಿ ಎನಿಸಿದ್ದಾನೆ. ಜಯನಗರ ಗಣಪತಿ ದೇವಾಲಯದ ಕಥಾವಸ್ತುವನ್ನೊಳಗೊಂಡ "ಜಗದೇಕ ಸುಮುಖ" ಈ ಕೃತಿಯನ್ನು ಸಾಂಕೇತಿಕ ಅರ್ಥದಲ್ಲಿ ಪಂಚವರ್ಣಗಳಿಂದ ಮುದ್ರಿಸಲಾಗಿದೆ.
ಧರೆಯ ಗರ್ಭ ಹಸಿರಿನಿಂದ ತುಂಬಿ ಸಂವೃದ್ಧವಾಗಿರುವ ಜೀವಜಾಲವು ಸದಾ ಪ್ರಜ್ಞಾಪೂರ್ಣತೆಯಿಂದ ಬಾಳಿಬದುಕಲೆಂಬರ್ಥದಲ್ಲಿ ಪ್ರಜ್ಞಾಕಾರಕನಾದ ಬುಧನ ಹಸಿರು ವರ್ಣದಲ್ಲಿ "ಜ" ಕಾರವನ್ನು, ಗಣಪತಿಯು ಉದಯ ರವಿಯ ತೇಜಸ್ಸನ್ನು ಹೊಂದಿದವನಾಗಿದ್ದು, ಧೈರ್ಯಕಾರಕ ಕುಜನ ಸಿಂಧೂರ ವರ್ಣವನ್ನು ಮಿಳಿತಗೊಳಿಸಿ ಈ ರವಿ ಕುಜರ ಮಿಶ್ರವರ್ಣದಲ್ಲಿ "ಗ" ಕಾರವನ್ನು, ದೇಗುಲವು ಸದಾ ಸತ್ಕರ್ಮನಿರತವಾಗಿ ದೀರ್ಘಾಯುವನ್ನು ಹೊಂದಿ ತನ್ನ ಅನುಭವದರಿವಿನಿಂದ ಸಮಾಜ ಸೇವೆಗೈಯ್ಯಲಿ ಎಂಬರ್ಥದಲ್ಲಿ ಮೃತ್ಯುಂಜಯ ಮಹಾದೇವನ ಪೂಜಕನಾದ ಶನಿಯ ನೀಲವರ್ಣದ ಜೊತೆಗೆ ದೀರ್ಘಾಯು ಸಂಕೇತ ವೃದ್ಧರ ಹಾಗೂ ಸಮಾಜ ಸೇವಾ ಕಾರಕನಾದ ರಾಹುವಿನ ಧೂಮ್ರವರ್ಣವನ್ನು ಮಿಳಿತಗೊಳಿಸಿ "ದೇ" ಅಕ್ಷರವನ್ನು ಈ ಕೃತಿರತ್ನವನ್ನೋದುವ ಸಹೃದಯಿಗಳ ಮನಸ್ಸು ಮತ್ತು ಕಾಮನೆಗಳು ಶುಭ್ರವಾಗಿರಲೆಂಬರ್ಥದಲ್ಲಿ ಮನಃಕಾರಕ ಚಂದ್ರ ಮತ್ತು ಭೋಗಭಾಗ್ಯಕಾರಕ ಶುಕ್ರನನ್ನು ಪ್ರತಿನಿಧಿಸುವ ಹಾಲಿನ ಬಿಳುಪು ಮತ್ತು ವಜ್ರದ ಹೊಳಪನ್ನು ಮಿಳಿತಗೊಳಿಸಿ "ಕ" ಕಾರಕ್ಕೆ ಸಂಕೇತಿಸಲಾಗಿದೆ.
ಸುಮುಖನ ಅನಂತ ಕೋಟಿ ಭಕ್ತರು ಮಾಡುವ ಕಾರ್ಯಗಳಿಗೆ ವಿಘ್ನಗಳು ಬಾರದೆ ಸುಜ್ಞಾನಯುಕ್ತ ಜೀವನ ಸದಾ ಸುಮುಖವಾಗಿರಲೆಂದು ಬುದ್ಧಿಕಾರಕನಾದ ಗುರುಗ್ರಹದ ಹರಿದ್ರಾ (ಹಳದಿ, ಬಂಗಾರ ಬಣ್ಣ) ವರ್ಣವನ್ನು ಸುಮುಖ ಎಂಬ ಶಬ್ಧಕ್ಕೆ ಸಾಂಕೇತಿಸಿದೆ.
ಈ ಮೇಳಿನ ಎಲ್ಲಾ ಗುಣಕರ್ಮಗಳು ವ್ಯಕ್ತಿಯ ಜೀವನದಲ್ಲಿ ಅಳವಟ್ಟು ಆತ ಮುಕ್ತಿಯನ್ನು ಸಾಧಿಸಬೇಕಾದರೆ ಪೂರ್ವಜರ ಮಹೋನ್ನತ ಸುಸಂಸ್ಕೃತಿಯ ತಳಹದಿಯ ಮೇಲೆ ಶುದ್ಧ ವೈರಾಗ್ಯವನ್ನು ಸಾಧಿಸಿದರೆ ಮಾತ್ರ ಸಾಧ್ಯ ಎನ್ನುವರ್ಥದಲ್ಲಿ ಪಿತಾಮಹಕಾರಕನಾಗಿದ್ದು, ವಿನಾಯಕನ್ನು ಅಧಿದೇವತೆಯಾಗಿ ಪೂಜೆಗೈದ ಕೇತು ಗ್ರಹದ ಬಣ್ಣ "ಚಿತ್ರವರ್ಣ"ವನ್ನು ಹಿನ್ನೆಲೆಯಲ್ಲಿ ಮುದ್ರಿಸಿ ಹೀಗೆ ನವಗ್ರಹಗಳಿಗೆ ಹಾಗೂ ಪಂಚತತ್ವಗಳಿಗೆ ಇಲ್ಲಿ ಸಾಂಕೇತಿಸಲಾಗಿದೆ.
ಹೊಸತು ಹಳತುಗಳ ಸಂಗಮದಿಂದ ಅವರ ಬರವಣಿಗೆಗೆ ಹೊಸ ಪಾಕ ಮತ್ತು ಸಮ ತೂಕ ಬಂದಿರುವುದು ಅವಲೋಕನೀಯ ಅಂಶ. ಶ್ರೀಗಳು ನಮ್ಮ ಕಾಲದ ವಾಗಾರ್ಥಗಳ ಪ್ರತಿಪಾದಕರೂ ಹೌದು. ಉಜ್ವಲವಾದ ಪ್ರತಿಭೆ, ಪ್ರಖರ ಪಾಂಡಿತ್ಯ ಹಾಗೂ ಶ್ರದ್ಧಾನ್ವಿತವಾದ ಆಭ್ಯಾಸ ಇವುಗಳ ಸಮುಚಿತವಾದ ಸಮ್ಮಿಲನವನ್ನು ಒಬ್ಬನೇ ವ್ಯಕ್ತಿಯಲ್ಲಿ ಏಕತ್ವ ಕಾಣುವುದು ದುರ್ಲಭ ಎಂದಿದ್ದಾನೆ ರಾಜಶೇಖರ. ಈ ಮೂರು ಅಪೂರ್ವ ಗುಣಗಳ ಸಂಗಮವನ್ನು ನಾವು ಅವರಲ್ಲಿ ಮೂರ್ತಿಮತ್ತಾಗಿ ಕಾಣಬಹುದು.
ಶ್ರೀಗಳ ಸಾಹಿತ್ಯ ಕೈಂಕರ್ಯಕ್ಕೆ ಎರಡು ಮುಖ, ಒಂದು ಸಾಹಿತ್ಯ ಸೃಷ್ಠಿ ಮತ್ತೊಂದು ಸಾಹಿತ್ಯ ಪರಿಚಾರಿಕೆ. ಸಹೃದಯರೂ, ನಿಗರ್ವಿಗಳು ವಿನಯಶೀಲರೂ ಆದ ಶಿವಾಚಾರ್ಯರು ಸ್ನೇಹಪರತೆ, ಶಿಷ್ಯ ವಾತ್ಸಲ್ಯ, ಚಿತ್ತಸಂಯಮದಿಂದ ಕೂಡಿದ ಶ್ರೀಮಂತ ವ್ಯಕ್ತಿತ್ವ. ಅವರ ವೈದುಷ್ಯಕ್ಕೆ ಮತ್ತು ಶ್ರಮ / ಕ್ರಿಯಾಶೀಲತೆಗೆ "ಜಗದೇಕ ಸುಮುಖ" ಸಾಕ್ಷಿಯಾಗಿದೆ.
ಹೀಗೆಯೇ ಗಣೇಶಾಥರ್ವಶೀರ್ಷದ ತಾತ್ಪರ್ಯ ವಿವೇಚನೆ. Science of Religion. ಲಿಪಿಕಾರ ಸುಮುಖ, ಆಯುರ್ವೇದದಲ್ಲಿ ಸುಮುಖ, ಆತ್ಮದರ್ಶನದ ಬೆಳಕಿನಲ್ಲಿ ಅಭಿವೃದ್ಧಿ ಸಾಗಲಿ. ಯೋಗ ಮಾನಸಿಕ ಬೆಳಕಿನಲ್ಲಿ ಅಭಿವೃದ್ಧಿಯ ಪರಿಕಲ್ಪನೆ. ಪತ್ರ ಪುಷ್ಪ ಪ್ರಿಯ ಸುಮುಖ, ನಾ ಕಂಡ ಗಣಪ, ಕೃಷಿಕರ ಸುಮುಖ, ಯೋಗ ಶಾಸ್ತ್ರದಲ್ಲಿ ಗಣಪತಿಯ ಪರಿಕಲ್ಪನೆ. ಋಗ್ವೇದಲ್ಲಿ ಗಣಪತಿ. ಜನಮನದ ಬಹುರೂಪಿ. ಶ್ರೀ ವಿಶ್ವಂಬರ ವಿನಾಯಕ, ಜನಗಣಮನ ಅಧಿನಾಯಕ-ನಮ್ಮ ಗಣನಾಯಕ, ನಾದಪ್ರಿಯ ಸುಮುಖ. ಗಣಪನ ಉಗಮದ ಕಲ್ಪನೆ. ಜನನಿ ಮತ್ತು ಜಾಹ್ನವಿ. ಷಟ್ಚಕ್ರಗಳಲ್ಲಿ ಗಣಪನ ಸ್ಥಾನ, ಸಂಕೀರ್ಣ ಸಂಕೇತ ಗಣಪತಿ, ನವಗ್ರಹಗಳಿಂದ ಕಾಣಬಹುದಾದ ಮಾನವನ ಬದುಕಿನ ಚಿಂತನೆ, ಮಾತೃ ವಾತ್ಸಲ್ಯವೇ ಮಾನವನ ವಿಕಾಸ. ಕುಂಭಾಭಿಷೇಕದ ಮಹತ್ವ, ಸುಮುಖ ಚಿತ್ರ ಸಂಪುಟ, ರಾಶಿ ಗಣಪ ಮತ್ತು ಇವುಗಳ ಚಿತ್ರ ಕಲಾವಿದರ ಪರಿಚಯ ಹೀಗೆ ಎಲ್ಲವೂ ಒಂದಕ್ಕಿಂತ ಒಂದು ಅದ್ಭುತವಾದ ಲೇಖನಗಳೇ ಸರಿ.
ಪುಸ್ತಕ ದೊರೆಯುವ ಸ್ಥಳ :
ಶ್ರೀ ವಿನಾಯಕ ಸೇವಾ ಸಮಿತಿ (ರಿ.)
7ನೇ ಬಿ ಮುಖ್ಯರಸ್ತೆ, ಜಯನಗರ 4ನೇ ಬ್ಲಾಕ್, ಬೆಂಗಳೂರು – 560 011.
ದೂ. : 080-22443255 / 22445499
ವೆಬ್ಸೈಟ್ : rivinayakatemplejayanagar.com
ಬೆಲೆ : ರೂ. 500/-
ಅಲ್ಲದೇ ಇದೇ ಲೇಖಕರ "ಅರಿವಿನ ಆರಾಧನೆ" ಪುಸ್ತಕ ಕೂಡ ಲಭ್ಯವಿದೆ. ಬೆಲೆ ರೂ. 100/-
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ