ಶಿವನ ಪತ್ನಿಯಾದ ಪಾರ್ವತಿಯು ಅನೇಕ ಜನ್ಮಗಳಲ್ಲಿಯೂ ಅವನ ಪತ್ನಿಯೇ ಆಗಿದ್ದಾಳೆ. ದಕ್ಷ ಪ್ರಜಾಪತಿ ಮತ್ತು ಪ್ರಸೂತಿಯರ ಮಗಳಾಗಿ ಜನಿಸಿದ ದಾಕ್ಷಾಯಣಿ ಅಥವಾ ಸತೀ ದೇವಿಯು ಶಿವನನ್ನು ವರಿಸಿದ್ದಳು. ರಾಜಕುಮಾರಿಯಾದರೂ ಸ್ಮಶಾನ ವಾಸಿಯಾದ ರುದ್ರದೇವರ ಮನದನ್ನೆಯಾಗಿ ಅವನ ಪ್ರೀತಿಯಲ್ಲಿ ಮತ್ತು ಶಿವಗಣಗಳ ಆದರಕ್ಕೆ ಪಾತ್ರಳಾಗಿ ಸುಖವಾಗಿದ್ದಳು.
ಒಂದು ಬಾರಿ ದಕ್ಷ ಪ್ರಜಾಪತಿಯು ದೊಡ್ಡ ಯಾಗವನ್ನು ಮಾಡುವ ಸಂಕಲ್ಪ ಮಾಡಿದನು. ಎಲ್ಲ ದೇವತೆಗಳನ್ನು ಋಷಿಮುನಿಗಳನ್ನು ಆಹ್ವಾನಿಸಿದನು. ಆದರೆ ಶಿವನ ಮೇಲೆ ಅನಾದರದಿಂದ ಮತ್ತು ತಾನೇ ಶ್ರೇಷ್ಠ ಎಂಬ ಅಹಂಕಾರದಿಂದ ಶಿವನನ್ನು ಮತ್ತು ದಾಕ್ಷಾಯಣಿಯನ್ನು ಯಜ್ಞಕ್ಕೆ ಆಹ್ವಾನ ನೀಡಲಿಲ್ಲ. ಜಗತ್ತಿನ ಎಲ್ಲರೂ ತಂದೆಯ ಮನೆಯಲ್ಲಿ ನಡೆಯುವ ಯಾಗಕ್ಕೆ ಹೋಗುವ ಸಂಭ್ರಮವನ್ನು ನೋಡಿ ಸತೀ ದೇವಿ ಪತಿಯನ್ನು ಯಾಗಕ್ಕೆ ಹೋಗಲು ಅನುಮತಿಯನ್ನು ಕೇಳಿದಳು. ಶಿವನು ಆಹ್ವಾನ ಇಲ್ಲದೇ ಇರುವ ಕಡೆಗೆ ಹೋಗಬಾರದು ಎಂದು ತಿಳಿ ಹೇಳಿದನು.
ತಂದೆಯ ಮನೆಗೆ ಆಹ್ವಾನ ಇಲ್ಲದೇ ಹೋಗಬಹುದು ಎಂದು ಮಡದಿಯು ಹೇಳಿದಾಗ ಶಿವನು ತನ್ನ ಗಣಗಳೊಡನೆ ಸತಿಯನ್ನು ದಕ್ಷ ಯಾಗಕ್ಕೆ ಕಳುಹಿಸಿದನು. ದಾಕ್ಷಾಯಣಿ ಯಾಗ ಮಂಟಪಕ್ಕೆ ಹೋದಾಗ ಅಕ್ಕ ತಂಗಿಯರು ತಾಯಿಯು ಅವಳನ್ನು ಪ್ರೀತಿಯಿಂದ ಸ್ವಾಗತಿಸಿದರು. ಆದರೆ ದಕ್ಷ ಪ್ರಜಾಪತಿಯು ನಿರ್ಲಕ್ಷ್ಯ ಮಾಡಿದನು. ಯಾಗದ ಹವಿಸ್ಸಿನಲ್ಲಿ ಶಿವನಿಗೆ ಪಾಲನ್ನು ಕೋಡದೇ ಹೋದಾಗ ಸತೀ ದೇವಿಗೆ ಪರಿಗೆ ತಂದೆಯು ಮಾಡಿದ ಅವಮಾನ ಸಹಿಸಲು ಆಗಲೇ ಇಲ್ಲ ನಡೆಯತ್ತಿದ್ದ ಯಾಗ ಕುಂಡದಲ್ಲಿ ತನ್ನ ಪ್ರಾಣದ ಆಹುತಿಯನ್ನು ನೀಡಿದಳು.
ದಿಕ್ಕು ಕಾಣದಾಗ ಶಿವಗಣ ರುದ್ರನ ಬಳಿ ಹೋದರು. ನಡೆದ ಘಟನೆಯನ್ನು ತಿಳಿಸಿದರು. ಶಿವನು ವೀರಭದ್ರನ್ನು ನಿರ್ಮಾಣ ಮಾಡಿ ಸಂಹಾರ ಮಾಡಲು ಕಳುಹಿಸಿದನು. ದಕ್ಷನಿಗೆ ಮಾಡಿದ ತಪ್ಪಿಗೆ ಶಿಕ್ಷೆಯಾಗಿ ತಲೆಯನ್ನು ತೆಗೆದರು ಆದರೆ ಅವನ ಪತ್ನಿಯ ಮತ್ತು ದೇವತೆಗಳ ಪ್ರಾರ್ಥನೆಯ ಫಲವಾಗಿ ಅಡಿನ ಮುಖವನ್ನು ನೀಡಿ ರುದ್ರದೇವರು ಪುನಃ ಜೀವನವನ್ನು ಕೊಟ್ಟು ಸ್ವತಃ ಕೈಲಾಸ ಪರ್ವತದಲ್ಲಿ ತಪಸಿಗೆ ಕುಳಿತರು.
ಪರ್ವತ ರಾಜನ ಮಗಳಾಗಿ ಪುನಃ ಜನಸಿದ ಪಾರ್ವತಿಗೆ ಪಾರ್ವತಿ, ಗೌರಿ, ಗಿರಿಜೆ, ಹೈಮವತಿ, ಶಂಕರಿ, ಮಹೇಶ್ವರಿ, ಅಂಬಿಕಾ, ಭವಾನಿ, ಶಿವಾನಿ, ಅಪರ್ಣೆ ಎಂದು ಅನೇಕ ಹೆಸರುಗಳಿವೆ. ಗೌರಿಯ ತಂದೆ ಹೈಮವಾನ್ ಅಥವಾ ಹಿಮವಂತ ರಾಜ ಅವನ ಪತ್ನಿ ಮೈನಾವತಿ. ಗೌರಿಯ ಸಹೋದರ ಮೈನಾಕ ಪರ್ವತ ಮತ್ತು ಸಹೋದರಿ ಗಂಗಾ ದೇವಿಯಾಗಿರುತ್ತಾಳೆ.
ಶಿವನನ್ನೇ ವರಿಸುವುದಾಗಿ ಹಠದಿಂದ ಕಠಿಣ ತಪಸ್ಸನ್ನು ಆಚರಿಸಿ ಶಿವನನ್ನು ಒಲಿಸಿಕೊಂಡು ಅವನನ್ನೇ ಮದುವೆಯಾಗುತ್ತಾಳೆ ಗೌರಿ.
ಸೌಭಾಗ್ಯ ಪ್ರಾಪ್ತಿಗಾಗಿ, ಸುಖ ದಾಂಪತ್ಯಕ್ಕಾಗಿ, ಪತಿಯ ಪುತ್ರರ ದೀರ್ಘ ಆಯಸ್ಸಿಗಾಗಿ ಗೌರಿ ಪೂಜೆಯನ್ನು ಮಾಡಲಾಗುತ್ತದೆ. ಚೃತ್ರ ಗೌರಿ, ವೈಶಾಖದಲ್ಲಿ ಗೌರಿ ತದಿಗೆ, ಆಷಾಢದಲ್ಲಿ ದಿವಶಿ ಗೌರಿ, ಶ್ರಾವಣದಲ್ಲಿ ಮಂಗಳ ಗೌರಿ, ಭಾದ್ರಪದದಲ್ಲಿ ಮಂಗಳ ಗೌರಿ, ನವರಾತ್ರಿಯಲ್ಲಿ ಒಂಭತ್ತು ದಿನದಲ್ಲಿಯೂ ಗೌರಿಯ ವಿವಿಧ ಅವತಾರಗಳ ಪೂಜೆ, ಆಶ್ವಯುಜದಲ್ಲಿ ಉಯ್ಯಾಲೆ ಗೌರಿ ಹೀಗೆ ಪ್ರತಿಯೊಂದು ಸಂದರ್ಭದಲ್ಲಿಯೂ ಗೌರಿಯ ಪೂಜೆಯುನ್ನು ಮಾಡುವುದು ವಿಶೇಷ.
ಮುಂದುವರಿಯುವುದು…
- ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ