ಉಡುಪಿ: ಶ್ರೀ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಉಡುಪಿಯಲ್ಲಿ ಈ ಬಾರಿ ತಾವು ನಡೆಸಿದ ತಮ್ಮ 45ನೇ ಚಾತುರ್ಮಾಸ್ಯ ವ್ರತವನ್ನು ಬುಧವಾರ ಸಂಪನ್ನಗೊಳಿಸಿದರು. ಪಟ್ಟದ ದೇವರ ಪೂಜೆಯ ಬಳಿಕ ವ್ರತದ ಮೃತ್ತಿಕೆಯನ್ನು ಶ್ರೀ ಕೃಷ್ಣಮಠದ ಮಧ್ವ ಸರೋವರದಲ್ಲಿ ವಿಸರ್ಜನೆಗೊಳಿಸಿದರು.
ಮಧ್ಯಾಹ್ನ ಭಿಕ್ಷೆ ಸ್ವೀಕರಿಸಿದ ಬಳಿಕ ಪಟ್ಟದ ದೇವರು ಮತ್ತು ಶಿಷ್ಯರೊಂದಿಗೆ ಉಡುಪಿ ನಗರದ ಸೀಮೆ ಉದ್ಯಾವರದ ಅಘನಾಶಿನಿ ನದೀ ತೀರಕ್ಕೆ ಬಂದರು. ಅಲ್ಲಿ ಅನೇಕ ಭಕ್ತರು ನಾಗರಿಕರು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡ ಬಳಿಕ ಶ್ರೀಗಳು ನದಿಗೆ ಸೀಯಾಳಾಭಿಷೇಕ, ಅರಸಿನ ಕುಂಕುಮ ತಾಂಬೂಲ ದಕ್ಷಿಣೆ, ಸೀರೆ ರವಿಕೆ ಕಣ ಅಕ್ಕಿ ತೆಂಗಿನ ಕಾಯಿ ಫಲವಸ್ತುಗಳುಳ್ಳ ಬಾಗಿನ ಅರ್ಪಿಸಿ ಮಂಗಳಾರತಿ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ದೋಣಿಯ ನಾವಿಕನಿಗೆ ವಸ್ತ್ರ ಫಲ ಸಹಿತಭಾವನೆ ಕೊಟ್ಟು ನದಿಯನ್ಜು ದಾಟಿಸುವಂತೆ ಸೂಚಿಸಿದರು.
ಶ್ರೀಗಳು ಪಟ್ಟದೇವರು ಹಾಗೂ ಕೆಲಶಿಷ್ಯರೊಂದಿಗೆ ದೋಣಿಯಲ್ಲಿ ಕುಳಿತರು. ನಾವಿಕ ಜಯರಾಮ್ ದೋಣಿ ಚಲಾಯಿಸಿ ನದಿ ಆಚೆ ತೀರಕ್ಕೆ ಶ್ರೀಗಳನ್ನು ಬೀಳ್ಕೊಟ್ಟರು. ಈ ಸಂದರ್ಭ ಶಿಷ್ಯರು ಸ್ತೋತ್ರ ಪಠಣಗೈದು ಶ್ರೀ ಕೃಷ್ಣ ಶ್ರೀರಾಮ ಮುಖ್ಯಪ್ರಾಣ ಮಧ್ವಗುರುಗಳು ಹಾಗೂ ಶ್ರೀಗಳಿಗೆ ಜೈಕಾರ ಹಾಕಿದರು.
ಶ್ರೀನಿವಾಸ ಬಾದ್ಯ, ರಾಜೇಶ ಉಪಾಧ್ಯ, ನಾಗೇಂದ್ರಾಚಾರ್ಯ, ಪವನ ಆಚಾರ್ಯ ಚಂದ್ರ ಶೇಖರ ಆಚಾರ್ಯ, ಜಯರಾಮ ಆಚಾರ್ಯ, ಮೊದಲಾದವರು ಉಪಸ್ಥಿತರಿದ್ದರು. ಶ್ರೀನಿವಾಸ ಬಾದ್ಯ ಮತ್ತು ವಾಸುದೇವ ಭಟ್ ಪೆರಂಪಳ್ಳಿ ಸೀಮೋಲ್ಲಂಘನ ವಿಧಿಯನ್ನು ಸಂಯೋಜಿಸಿದರು. ಬಳಿಕ ಶ್ರೀಗಳು ಆಚಾರ್ಯ ಮಧ್ವರ ಜನ್ಮಭೂಮಿ ಪಾಜಕಕ್ಕೆ ತೆರಳಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ