ಉಜಿರೆ: ಸೋಶಿಯಲ್ ಮೀಡಿಯಾದಲ್ಲಿ ಮನೋರಂಜನೆ ನೀಡುವವರು ಬಹಳಷ್ಟು ಮಂದಿ ಸಿಗುತ್ತಾರೆ. ಆದರೆ, ಹೊಸ ಕಂಟೆಂಟ್ಗಳನ್ನು ಮಾಡುವಾಗ ಜನರಿಗೆ ಜಾಗೃತಿ ಮೂಡಿಸುವಂತಹ ಕಂಟೆಂಟ್ಗಳನ್ನು ಮಾಡುವತ್ತ ಗಮನ ಕೊಡಿ ಎಂದು ಚರಿತ್ರೆ ಯೂಟ್ಯೂಬ್ ಚಾನಲ್ನ ನಿತಿನ್ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಸ್ವಾಯತ್ತ ಕಾಲೇಜಿನ ಬಿ. ವೋಕ್ ಇನ್ ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮ್ ಮೇಕಿಂಗ್ ವಿಭಾಗದ ವಿದ್ಯಾರ್ಥಿ ಸಂಘ ಲುಮೋಸ್ ಇದರ ಶೈಕ್ಷಣಿಕ ವರ್ಷಗಳ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
“ಈವತ್ತು ಯೂಟ್ಯೂಬರ್ ಅನ್ನುವುದೂ ಒಂದು ವೃತ್ತಿಯಾಗಿದೆ. ಆದರೆ, ಇದನ್ನು ಹವ್ಯಾಸವಾಗಿಸದೇ ಫುಲ್ ಟೈಮ್ ಮಾಡುವುದಾದರೆ, ನಮ್ಮಲ್ಲಿ ಸ್ಥಿರತೆ ಇರಬೇಕಾಗಿರುವುದು ಅತ್ಯಗತ್ಯ. ಯಾವ ರೀತಿಯ ಕಂಟೆಂಟ್ಗಳನ್ನು ಡಿಜಿಟಲ್ ಮೀಡಿಯಾದಲ್ಲಿ ಹಾಕಿದರೆ ರೀಚ್ ಆಗುತ್ತದೆ ಅನ್ನುವುದರ ಜೊತೆಗೆ, ಯಾವ ಕಂಟೆಂಟ್ಗಳನ್ನು ಮಾಡಲು ನಮಗೆ ಇಷ್ಟವಿದೆ ಅನ್ನುವುದನ್ನೂ ಮನಗಾಣಬೇಕು. ಇಷ್ಟಪಟ್ಟು ಮಾಡಿದ ಯಾವ ಕೆಲಸಕ್ಕೂ ಯಶಸ್ಸು ಸಿಕ್ಕೇ ಸಿಗುತ್ತದೆ. ಟ್ರೆಂಡಿಂಗ್ ಹಾಡಿಗೆ ಕುಣಿಯುವುದು, ಯಾರೋ ಹೇಳಿದ ಡೈಲಾಗ್ಗೆ ಲಿಪ್ ಸಿಂಕ್ ಮಾಡುವುದು ಅಥವಾ ಯಾರದ್ದೋ ಕಾಮಿಡಿಯನ್ನು ರಿಮೇಕ್ ಮಾಡುವುದನ್ನು ಬಿಟ್ಟು ಜನರಿಗೆ ಸಂದೇಶ ನೀಡುವ ಹೊಸ ಕಂಟೆಂಟ್ಗಳನ್ನು ಮಾಡಬೇಕು ಎಂದು ವಿವರಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಾ, ತಮ್ಮ ಶೈಕ್ಷಣಿಕ ಜೀವನ, ಆರಂಭಿಕ ವೃತ್ತಿಜೀವನ, ಯೂಟ್ಯೂಬ್ ಪಯಣದಲ್ಲಿ ಎದುರಿಸಿದ ಸವಾಲುಗಳು, ಚಾನಲ್ ಬೆಳೆಸುವ ರೀತಿ ಇತ್ಯಾದಿಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ಆರೋಗ್ಯವಾಗಿ ಇದ್ದರೆ ಹೆಚ್ಚು ಸೃಜನಶೀಲವಾಗಿ ಚಿಂತನೆ ಮಾಡಬಹುದು. ಅದೇ ರೀತಿ, ಮಾಧ್ಯಮ ರಂಗದ ಯಾವುದೇ ಅಂಗದಲ್ಲಿ ಕೆಲಸ ಮಾಡಬೇಕು ಎಂಬ ಕನಸು ಹೊತ್ತುಕೊಂಡಿರುವವರಿಗೆ ಓದು ಬಹಳ ಮುಖ್ಯ. ವ್ಯಾಪಕವಾಗಿ ಓದುವ ಹವ್ಯಾಸವನ್ನು ಬೆಳೆಸಿದಷ್ಟು ಜ್ಞಾನವೂ ಹೆಚ್ಚಾಗುತ್ತದೆ ಎಂದು ಹೇಳಿದರು.
ಬಿ. ವೋಕ್ ಇನ್ ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮ್ ಮೇಕಿಂಗ್ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ ಪ್ರಾಸ್ತಾವಿಕ ನುಡಿಗಳನ್ನು ಆಡಿ, 2023-24ನೇ ಸಾಲಿನ ವಿಭಾಗದ ವಾರ್ಷಿಕ ಚಟುವಟಿಕೆಗಳ ವರದಿ ವಾಚಿಸಿದರು.
ವಿದ್ಯಾರ್ಥಿ ಸಂಘದ ಸ್ಟಾಫ್ ಇನ್ಚಾರ್ಜ್ ಅಶ್ವಿನಿ ಜೈನ್, ಸಂಘದ ವಾರ್ಷಿಕ ವರದಿಯನ್ನು ಓದಿ, ಮುಂದಿನ ಒಂದು ವರ್ಷದ ಯೋಜನೆಯನ್ನು ಸಭೆಯ ಮುಂದಿಟ್ಟರು. ಬಳಿಕ, ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಬೋಧಿಸಿದರು. ಸಂಘದ ಅಧ್ಯಕ್ಷರಾಗಿ ತೃತೀಯ ವರ್ಷದ ವಿದ್ಯಾರ್ಥಿ ತರುಣ್ ಶರಣ್, ಕಾರ್ಯದರ್ಶಿಗಳಾಗಿ ತೃತೀಯ ವರ್ಷದ ಪ್ರಜ್ವಲ್ ಗೌಡ, ತರಗತಿ ಪ್ರತಿನಿಧಿಗಳಾಗಿ ದ್ವಿತೀಯ ವರ್ಷದ ಅಕ್ಷಿತಾ ಆಚಾರ್ಯ ಹಾಗೂ ಪ್ರಥಮ ವರ್ಷದ ಆದಿತ್ಯ ಪ್ರಮಾಣ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಬಿ. ವೋಕ್ ವಿಭಾಗದ ಸಂಯೋಜಕ ಸುವೀರ್ ಜೈನ್ಉಪಸ್ಥಿತರಿದ್ದರು. ಕಾರ್ಯಕ್ರಮದ ಅತಿಥಿಗಳನ್ನು ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಇಂದುಧರ್ ಕಿಣಿ ಇವರು ಸ್ವಾಗತಿಸಿದರು. ವಿದ್ಯಾರ್ಥಿ ತರುಣ್ ಶರಣ್ ವಂದನಾರ್ಪಣೆ ಮಾಡಿದರು. ಅಚ್ಯುತ್ ಮತ್ತು ಅಂಕಿತಾ ಪ್ರಾರ್ಥನೆ ಮಾಡಿದರು. ಅಕ್ಷಯ್ ಕಾವಳಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ