ಕಳೆದ ತಿಂಗಳು ಕಾಳುಮೆಣಸಿಗೆ 720 ರೂ ಎಂದಾದಾಗ ನನಗೆ ಕಾಳುಮೆಣಸು ವ್ಯಾಪಾರಿಗಳೊಬ್ಬರು 675ಕ್ಕೆ ನಾವು ಖರೀದಿಸುತ್ತೇವೆ ಕೊಡ್ತೀರ...? ಅಂತ ಕರೆ ಮಾಡಿ ಕೇಳಿದ್ದರು. ಅವತ್ತು ವಾಟ್ಸಾಪ್ ಗುಂಪೊಂದರಲ್ಲಿ ಈ ಸರ್ತಿ ಎಂಟನೂರು ಒಂಬೈನೂರು ರೂಪಾಯಿ ಆಗಬಹುದು ಎಂಬ ಅಂತರರಾಷ್ಟ್ರೀಯ ಕಾಳುಮೆಣಸಿನ ವ್ಯವಹಾರದ ಡಾಟ ಹಾಕಿ ಲೇಖನವನ್ನು ಪ್ರಕಟಿಸಿದ್ದರು. ಸಹಜವಾಗಿ ಎಲ್ರಿಗೂ ತಮ್ಮ ಉತ್ಪನ್ನದ ಮೇಲೆ ಸ್ವಲ್ಪ ಜಾಸ್ತಿ ಸಿಗುತ್ತದೆ ಎಂದಾದಾಗ ರೈತಾಪಿ ಜೀವನದ ಕೊಳೆ ನಷ್ಟ, ಬೆಳೆ ನಷ್ಟ, ಇಳುವರಿ ನಷ್ಟ, ಮಾರುಕಟ್ಟೆಯ ಇತರೆ ಉತ್ಪನ್ನಗಳ ತುಟ್ಟಿ...!! ಇದೆಲ್ಲಾ ನಷ್ಟ ಖರ್ಚಿನ ಶೇಷವನ್ನು ಇಂತಹ ಬಂಪರ್ ಬೆಲೆ ಸಮತೂಗಿಸಬಹುದು ಎಂಬ ಚಿನ್ನ ಚಿನ್ನ ಆಸೈ.
ಆದರೆ ರೈತರಿಗೆ ಇವತ್ತಿನ ಜಾಗತಿಕ ಮಾರುಕಟ್ಟೆಯ ವ್ಯವಸ್ಥೆ ಯಾವ ಲಾಭವೂ ದೊರಕಲು ಬಿಡುವುದಿಲ್ಲ...! ಈ ಆಮದು ಭೂತ ರೈತರ ಆಶೆಯನ್ನು ನುಚ್ಚು ನೂರು ಮಾಡುತ್ತದೆ.
ಕಾಳುಮೆಣಸಿಗೆ ಈ ವರ್ಷ ಇನ್ನ ಬೆಲೆ ಬರೋಲ್ಲ. ಬೇಕಾದರೆ ಕೋಡಿ ಮಠದವರ ಹತ್ತಿರ ಜ್ಯೋತಿಷ್ಯ ಕೇಳಿಸಿ... ಕಾಳುಮೆಣಸಿಗೆ ಉತ್ತಮ ಬೆಲೆ ಸಿಗಲು ಈ ಧೂರ್ತ ಆಮದುದಾರರು ಬಿಡೋಲ್ಲ...!
ಇದು ಕಾಳುಮೆಣಸು, ಕಾಫಿ ಅಡಿಕೆ ಸೇರಿದಂತೆ ಎಲ್ಲಾ ಬೆಳೆಗಳಿಗೂ ಜಾಗತೀಕರಣದ ನಂತರ ಆಮದು ಮಂತ್ರ ಆಮಂತ್ರಿಸಿ ಬೆಲೆ ಕುಸಿಯುವಂತೆ ಮಾಡುತ್ತಾರೆ. ಈಗ ವಾಣಿಜ್ಯ ಸಚಿವಾಲಯ ಅಡಿಕೆನ ಭೂತಾನ್ ಮೂಲಕ ಮಾತ್ರ ಆಮದು ಮಾಡಿಕೊಳ್ತೇವೆ ಅಂತಾರೆ...!! ಆದರೆ ದೂರ್ತ ಆಮದುದಾರರು ಶ್ರೀಲಂಕಾ, ಮಲೇಷಿಯಾ ಇತರ ದೇಶಗಳ ಅಡಿಕೆಯನ್ನೂ ಭೂತಾನ್ಗೆ ತಂದು ಅದನ್ನು ಭಾರತಕ್ಕೆ ಆಮದು ಮಾಡಿಕೊಳ್ತಾರೆ...!! ವಿಶೇಷ ಏನೆಂದರೆ ಇದು ಅಧಿಕೃತ. ಈ ಅಧಿಕೃತ ಬಿಲ್ಗೆ ಹತ್ತು ನೂರು ಪಟ್ಟು ಒಳದಾರಿಯಲ್ಲ ಕಳ್ಳ ಅಡಿಕೆ ತರುತ್ತಾರೆ...!!!
ಈ ಕಳ್ಳ ಆಮದು ಕಾಯುವವರಾರು...? ಇಲ್ಲಿ ತ್ವಾಟಕ್ಕೆ ಔಷಧ ಹೊಡೆಸೋದು ಬಿಟ್ಟು ಕೊಳೆತೋಟ ಕೃಷ್ಣಮೂರ್ತಣ್ಣ, ಮಕ್ಕಿಬೈಲು ರಮೇಸಣ್ಣ, ಗುಡ್ಡೇ ತೋಟ ರಾಮ ಭಟ್ಟರು, ಕೆಳಗಿನಮನೆ ರಾಘವೇಂದ್ರ ಹೆಗ್ಡೆಯವರು ಎಲ್ಲಾ ಗಡಿಗೆ ಹೋಗಿ ದೊಣ್ಣೆ ಹಿಡಕೊಂಡು ಕಾಯ್ತಾ ಕೂರಕ್ಕೆ ಆಗುತ್ತದಾ...?
ಕಳ್ಳ ಆಮದಿನ ದುಷ್ಪರಿಣಾಮ ದೇಸಿ ಅಡಿಕೆ ಬೆಳೆಗಾರರಿಗೆ ಆಗೋದು. ಅವರು ಗಡಿಯಲ್ಲಿ ಹೋಗಿ ಕಾಯಲು ಆಗೋಲ್ಲ. ಕಾಯುವ ಸರ್ಕಾರದ ವ್ಯವಸ್ಥೆ ಹೆಂಗಿರುತ್ತದೆ ಎಂದು ಮೊನ್ನಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯೊಬ್ಬ ಎಷ್ಟು ಐಷಾರಾಮಿ ಯಾಗಿ ಕಾಲ ಕಳೆಯುತ್ತಿದ್ದಾನೆ ಎಂಬ ಚಿತ್ರವನ್ನು ನೋಡಿ ಅರಿತುಕೊಂಡಿದ್ದೀವಿ.
ಯಾರಿಗೆ ಬೇಕಾಗಿದೆ ಸಾಮಾನ್ಯ ಅಡಿಕೆ ಕಾಫಿ ಕಾಳುಮೆಣಸು ಬೆಳೆಗಾರನ ಹಿತ...?
ಚುನಾವಣೆ ಬಂದಾಗ ಕಣ್ಣು ಮುಚ್ಚಿ ನಾವುಗಳು ಚಾಲ್ತಿ ಸರ್ಕಾರವನ್ನು ಹೃತ್ಪೂರ್ವಕಾಗಿ ಪ್ರೋತ್ಸಾಹಿಸುತ್ತೇವೆ. ನಾವೇನು ಈ ಪಕ್ಷವನ್ನು ಬ್ಲಾಕ್ ಮೇಲ್ ಮಾಡ್ತೀವ? ಹೋಗಿಲಿ ನಮ್ಮ ಅಡಿಕೆ ಬೆಳೆಗಾರರ ಕ್ಷೇತ್ರದ ಸಂಸದರು ಈ ಬಗ್ಗೆ ಸಂಬಂಧಿಸಿದ ಇಲಾಖೆಯನ್ನು ಸಚಿವಾಲಯವನ್ನ ಕೆಚ್ಚೆದೆಯಿಂದ ಪ್ರಶ್ನಿಸುತ್ತಾರ...? ಎಂದಿನಂತೆ ಅವರನ್ನು ನಾವು ಬೆಳೆಗಾರರು ಕೇಳ್ತೇವೆ. ಅವರು (ಸಂಸದರು) ಸರ್ಕಾರ ಅಥವಾ ಸಂಬಂಧಿಸಿದವರನ್ನ ಕೇಳ್ತಾರೆ. ಅವರು "ಈ ಬಗ್ಗೆ ಪರಿಶೀಲಿಸಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬ ಷರಾ ಬರೆದು ಕಳಿಸುತ್ತಾರೆ. ಅಲ್ಲಿಗೆ ಈ ವರ್ಷದ ಸೀಝನ್ ಮುಗೀತದೆ.
ಬಡ ಮಧ್ಯಮ ವರ್ಗದ ರೈತರು ತಮ್ಮ ಉತ್ಪನ್ನವನ್ನು ಬಜಾರು ಧಾರಣೆಗೆ ಮಾರಲೇ ಬೇಕಾಗುತ್ತದೆ. ಮಾರಲ್ಲ ಅಂದರೆ ಅವನ ಬದುಕು ಮುಂದೆ ಸಾಗೋಲ್ಲ...!! ನಿಜಕ್ಕೂ ಈ ದೇಶದಲ್ಲಿ ದುಷ್ಟ ವ್ಯಾಪಾರಿ ವ್ಯವಸ್ಥೆ ಕಳ್ಳ ಆಮದುದಾರರಿಗಿರುವ ಸರ್ಕಾರ ವ್ಯವಸ್ಥೆಯ ಬಗ್ಗಿಸಿ ತಮಗೆ ಬೇಕಾದಂತೆ ಬಳಸಿಕೊಳ್ಳುವ ಶಕ್ತಿ ಕೋಟ್ಯಂತರ ಮತದಾರರಿಗಿಲ್ಲ. ಈ ಬಗ್ಗೆ ತೀವ್ರ ವಿಷಾದಗಳು
-ಪ್ರಬಂಧ ಅಂಬುತೀರ್ಥ.
9481801869
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ