ಈಶ್ವರನ ಕೊರಳನ್ನು ಸುತ್ತಿರ್ದ ನಾಗೇಶ
ಒಂದು ದಿನ ರಜ ಕೇಳಿ ಅರ್ಜಿ ಬರೆದ
ನಾಗರಾ ಪಂಚಮಿಯ ಕಾರಣದ ಉಲ್ಲೇಖ
ನಾಗಭೂಷಣನೊಪ್ಪಿ ರುಜು ಮಾಡಿದ
ಸುರನದಿಗೆ ನಮಿಸುತ್ತ ನಂದಿಯನು ಬೀಳ್ಕೊಂಡು
ಗಣಪತಿಗೆ ಬೈ ಹೇಳಿ ಶೇಷನಿಳಿದ
ನಿತ್ಯ ಕೆಲಸವ ಬಿಟ್ಟು ಊರೂರು ಸುತ್ತುತ್ತ
ಸರಸರನೆ ಸುಬ್ಬಣ್ಣ ಸಂಚರಿಸಿದ
ನಾರು ಮಡಿಯನು ಉಟ್ಟು ನಾಗವೇಣಿಯರೆಲ್ಲ
ಹಾಲನ್ನು ಎರೆದಿಹರು ಮೂರ್ತಿಮೇಲೆ
ಮರದ ಮರೆಯಲಿ ಮಲಗಿ ಮೆಲ್ಲಮೆಲ್ಲನೆ ಇಣುಕಿ
ಕಂಡ ಹರಿವಿನ ಹಿಂದೆ ಭಕ್ತಿ ಲೀಲೆ
ತನ್ನ ಮೂರ್ತಿಯ ಮೇಲೆ ಹಾಲನೆರವರ ಕಂಡು
ನಿಂತಲ್ಲೆ ನಾಗೇಂದ್ರ ಮೈಮರೆತನು
ಶಿಲೆ ಒಳಗೆ ತಾ ಸೇರಿ ಬಲಬದಿಯ ಪುಷ್ಪವನು
ವರನೀಡಿ ಬುಸ್ಸೆಂದು ಬೀಳಿಸಿದನು
ಕಲ್ಕಟ್ಟೆಗಳಲೆಲ್ಲ ಹಾಲಿನಾ ಅಭಿಷೇಕ
ಎಳ್ಳುಂಡೆ ತಂಬಿಟ್ಟು ಕಜ್ಜಾಯವು
ನಾಲಿಗೆಯ ಸವರುತ್ತ ಚಪ್ಪರಿಸಿ ನಾಗ್ರಾಜ
ಹಿಂತಿರಿಗಿ ನೆಡೆಯಲಿಕೆ ಸಜ್ಜಾದನು
ಷಷ್ಠಿಯಾ ದಿದಂದು ನೆಡೆಯುತ್ತ ನೆಡೆಯುತ್ತ
ಹರ್ಷದಲೆ ಚಿಂತಿಸಿದ ನಾಗನಂದು
ಮುಂದಿನಾ ಪಂಚಮಿಗೆ ಬರಯಬೇಕರ್ಜಿಯಲಿ
ಮಂಡಲದ ಕಾಲ ಕೇಳಬೇಕೆಂದು
ಹೆಬ್ಬೆರಳ ಹೆಡೆಯೊಳಗೆ ಅಕ್ಷರವ ಸೇರಿಸುತ
ಕವನ ಮಾಲೆಯನೊಂದು ರಚಿಸು ಹಾಡು
ಪಂಚಮಿಯ ದಿನದಂದು ಪಂಚಮಾತ್ರೆಯ ಬಳಸಿ
ಪಂಚಪಾತ್ರೆಯಲಿ ನೀ ಹಂಚಿ ನೀಡು
ಅವ ಕೊಟ್ಟ ಪದಗಳನು ಅವನಿಗೇ ಅರ್ಪಿಸಲು
ಪದ್ಯ ಪೂಜೆಯ ದೀಕ್ಷೆ ಇಂದು ನನಗೆ
ನಾಗೇಂದ್ರ ನಾಗ್ರಾಜ ನಾಗೇಶ ನಾಗಪ್ಪ
ಪದಪುಷ್ಪ ಪಾದಾರವಿಂದಗಳಿಗೆ
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ