ಕೊಪ್ಪ: ಪಶ್ಚಿಮ ಘಟ್ಟದ ಭೂ ಕುಸಿತಕ್ಕೆ ರೈತರೂ ಕಾರಣ ಅಲ್ಲ, ರೈತರ ಕೃಷಿಯೂ ಕಾರಣ ಅಲ್ಲ. ಭೂ ಕುಸಿತಕ್ಕೆ ಕಾರಣ ಅವೈಜ್ಞಾನಿಕವಾಗಿ ಕೇಬಲ್ ಹಾಕಿರುವುದು, ಎತ್ತಿನ ಹೊಳೆ ಯೋಜನೆಗಳ ಪೈಪ್ ಅಳವಡಿಕೆ, ಅಧ್ಯಯನ ಇಲ್ಲದೆ ಮಾಡಿದ ಕಾಡಿನ ಗುಡ್ಡಗಳ ಮೇಲೆ ಮಾಡಿದ ಇಂಗು ಗುಂಡಿ, ಮಣ್ಣು ನೀರುಗಳ ಭಾಷೆ ತಿಳಿಯದೆ ಮಾಡಿದ ರಸ್ತೆ ಅಭಿವೃದ್ದಿ, ಅಸಂಬದ್ದ ಸರಕಾರಿ ಕೆಲಸಗಳು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ನಿಯಂತ್ರಣ ಇಲ್ಲದಿರುವುದು, ಅಕ್ರಮ ಮರಳು ದಂದೆ, ಮಲೆನಾಡಿಗೆ ಮಾರಕವಾಗಿರುವ ಅಕೇಶಿಯಾ ಕಾಡುಗಳಿಂದಾಗಿ ಪರಿಸರದ ವಾತಾವರಣ ಹದಗೆಟ್ಟು, ಉಷ್ಣತೆ ಏರಿಕೆ ಮತ್ತು ವಿಪರೀತ ಮಳೆಗೆ ಕಾರಣವಾಗುತ್ತಿದೆ. ಅದರ ಪರಿಣಾಮ ಭೂ ಕುಸಿತ. ಇದಕ್ಕೆ ರೈತರು ಕಾರಣ ಅಲ್ಲ, ಕೃಷಿಯೂ ಕಾರಣ ಅಲ್ಲ ಎಂದು ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲೆವಾನೆ ಪ್ರಕಾಶ್ ಹೇಳಿದರು.
ನಿನ್ನೆ (08.08.2024) ಕೊಪ್ಪದಲ್ಲಿ ನಡೆದ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತ, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು. 'ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕಿದರು ಎಂಬಂತೆ ಎಲ್ಲ ಸಮಸ್ಯೆಗಳಿಗೂ ಸಂಬಂಧವೇ ಇಲ್ಲದ ರೈತರನ್ನು ಗುರಿ ಮಾಡಲಾಗುತ್ತದೆ. ಈಗ ಜೀವನಾಧಾರಕ್ಕಾಗಿ ಮಾಡಿಕೊಂಡಿರುವ ರೈತನ ತುಂಡು ಹಿಡುವಳಿಯ ಮೇಲೆ ಒತ್ತುವರಿ ತೆರವಿನ ಕತ್ತಿ ಜಳಪಿಸಲಾಗುತ್ತಿದೆ ಎಂದರು.
ತಲವಾನೆ ಪ್ರಕಾಶ್ರವರ ಅಧ್ಯಕ್ಷತೆಯಲ್ಲೇ ನಡೆದ ಸಂಘದ ಸಭೆಯಲ್ಲಿ, ಕೃಷಿ ಭೂಮಿಯ ಜಂಟಿ ಸರ್ವೆ ಮತ್ತು ಪ್ಲಾಂಟೇಷನ್ ಬೆಳೆ ಜಾಗವನ್ನು ಲೀಸ್ಗೆ ಕೊಡುವ ಹಂತಗಳು ಮುಗಿಯುವವರೆಗೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಶಾಸಕರನ್ನು ಒತ್ತಾಯಿಸಿದ್ದು, ಅದಕ್ಕೆ ಪೂರಕ ಕ್ರಮ ಕೈಗೊಳ್ಳಲು ಶಾಸಕರು ಒಪ್ಪಿದ್ದನ್ನು ಸಭೆಗೆ ತಿಳಿಸಿದರು.
ಸಂಘದ ಹೋರಾಟದ ಪರಿಣಾಮ, ಅಡಿಕೆ ಮತ್ತು ಮೆಣಸುಗಳ ಇನ್ಷ್ಯೂರೆನ್ಸ್ ಟರ್ಮ್ಶೀಟ್ ಸಮಸ್ಯೆಗಳು ಚಿಕ್ಕಮಗಳೂರು ಜಿಲ್ಲೆಯಲಗಲಿ ಸರಿ ಪಡಿಸಿ ಒಂದು ಹಂತಕ್ಕೆ ಬಂದಿರುವದನ್ನು ಸಭೆಯ ಗಮನಕ್ಕೆ ತರಲಾಯಿತು.
ಅತಿವೃಷ್ಟಿ ಪರಿಹಾರಕ್ಕೆ ಒತ್ತಾಯ, ಸೊಪ್ಪಿನ ಬೆಟ್ಟ, ಗೋಮಾಳಗಳ ಒತ್ತುವರಿ ಸಕ್ರಮ, ಪಕ್ಕ ಪೋಡಿ ಆಗದಿರುವುದು (ಪೋಡಿ ಮುಕ್ತ ಗ್ರಾಮ ಕೇವಲ ಪ್ರಚಾರ ಮಾತ್ರ ಆಗಿ ಸ್ಥಗಿತಗೊಂಡಿದೆ), ಅರಣ್ಯ ಇಲಾಖೆಯ ಸಮಸ್ಯೆಗಳು, ಫಾರಂ 50, 53, 57, 94c, 94cc ಗಳನ್ನು ಕೂಡಲೆ ಪರಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ, ಬೆಳೆ ಸಮೀಕ್ಷೆಯಲ್ಲಿನ ಸಮಸ್ಯೆಗಳ ಬಗ್ಗೆ, ಅರಣ್ಯ ಇಲಾಖೆಯ ಸೆಕ್ಷನ್ 4 to 17 ವಿಚಾರಗಳ ಬಗ್ಗೆ ಕ್ಷೇತ್ರ ಮಟ್ಟದಲ್ಲಿ ಕಂದಾಯ ಸಚಿವರು, ಅರಣ್ಯ ಸಚಿವರು, DFO, MLA, ಜಿಲ್ಲಾ ಉಸ್ತುವಾರಿ ಸಚಿವರುಗಳೊಂದಿಗೆ ಅತಿ ಶೀಘ್ರದಲ್ಲಿ ಒಂದು ಜನ ಸಂಪರ್ಕ ರೈತ ಸಭೆ ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ, ಸಂಘದ ಸಭೆಯ ನಂತರ, ಕೊಪ್ಪ ತಾಲೂಕು ತಹಸೀಲ್ದಾರರನ್ನು ಭೇಟಿ ಮಾಡಿ, ದೀರ್ಘಾವಧಿ ಅಥವಾ ಬಹು ವಾರ್ಷಿಕ ಬೆಳೆಗಳ ಪ್ರತೀ ವರ್ಷದ ಬೆಳೆ ಸಮೀಕ್ಷೆಯ ಕಾರ್ಯ ಚಟುವಟಿಕೆಯನ್ನು ಕೈ ಬಿಟ್ಟು 5 ವರ್ಷಗಳಿಗೊಮ್ಮೆ ಸರಳವಾಗಿ ಬೆಳೆ ಸಮೀಕ್ಷೆಗೆ ತಂತ್ರಜ್ಞಾನವನ್ನು ಅಳವಡಿಸುವಂತೆ ತೋಟಗಾರಿಕೆ ಇಲಾಖೆಯಲ್ಲಿ ಸೂಕ್ತ ತಿದ್ದುಪಡಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ತರುವಾಯ, ಎಲ್ಲಾ ಪದಾಧಿಕಾರಿಗಳೊಂದಿಗೆ ಕೊಪ್ಪ ಅರಣ್ಯ ಇಲಾಖೆಗೆ ತೆರಳಿ, DCFO ರವರನ್ನು ಭೇಟಿ ಮಾಡಿ, ಒತ್ತುವರಿ ತೆರವು ವಿಚಾರದಲ್ಲಿನ ರೈತರ ಆತಂಕಗಳನ್ನು ವಿವರಿಸಿ ಮಾಹಿತಿ ಕೇಳಲಾಯಿತು.
DCFO ರವರು ನೀಡಿದ ಮಾಹಿತಿ ಪ್ರಕಾರ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ 6 ಅರಣ್ಯ ವಲಯಗಳಿದ್ದು, ಒತ್ತುವರಿ ಸಕ್ರಮಕ್ಕೆ ಸಂಬಂಧಿಸಿದಂತೆ 7,000 ಅರ್ಜಿಗಳಿವೆ. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 10,000 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಇದ್ದು, ಅದನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸುವ ಕೇಸ್ ನ್ಯಾಯಾಲಯದಲ್ಲಿದ್ದು, ಸದ್ಯದಲ್ಲೇ ಒಂದು ಟಾಸ್ಕ್ಫೋರ್ಸ್ ರಚನೆಯೊಂದಿಗೆ ಸರ್ವೆ ಮಾಡಿ ವರದಿ ಕೊಡಬೇಕಿದೆ. ಆ 10,000 ಹೆಕ್ಟೇರ್ ಭೂಮಿ ಅರಣ್ಯ ಖಾತೆಯಿಂದ ತೆರವುಗೊಳಿಸಿ, ಕಂದಾಯ ಇಲಾಖೆಗೆ ವರ್ಗಾಯಿಸಿದರೆ ಒತ್ತುವರಿ ಸಮಸ್ಯೆಯ ಬಹುತೇಕ ಎಲ್ಲಾ ಅರ್ಜಿಗಳು ನಿಯಮಾವಳಿಯ ಪ್ರಕಾರ ಇದ್ದರೆ ಸಕ್ರಮಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಇದರ ಹೊರತಾಗಿ, ಈಗಾಗಲೆ ನ್ಯಾಯಾಲಯದಿಂದ ಆದೇಶವಾಗಿರುವ ಮತ್ತು ಪದೇ ಪದೇ ನ್ಯಾಯಾಲಯ ಆ್ಯಕ್ಷನ್ ವರದಿ ಕೇಳುತ್ತಿರುವ ರಿಸರ್ವ್ ಫಾರೆಸ್ಟ್ ಜಾಗದಲ್ಲಿನ ಒತ್ತುವರಿಯನ್ನು ಮಾತ್ರ ತೆರವುಗೊಳಿಸುವ ಕ್ರಮ ನಡೆಯುತ್ತಿದೆ DCFO ತಿಳಿಸಿದರು. ಅಲ್ಲದೆ ಸ್ವಂತ ಹಿಡುವಳಿ ಮತ್ತು ಒತ್ತುವರಿ ಸೇರಿ ಮೂರು ಎಕರೆ ದಾಟಿದ ರಿಸರ್ವ ಫಾರೆಸ್ಟ್ ಜಾಗದಲ್ಲಿನ ಒತ್ತುವರಿಯನ್ನು ಸದ್ಯದಲ್ಲೇ ತೆರವುಗೊಳಿಸಲಾಗುತ್ತದೆ ಎಂದು DCFO ಸ್ಪಷ್ಟ ಪಡಿಸಿದ್ದಾರೆ. ಮೂರು ಎಕರೆ ಒಳಗಿನ ಭೂಮಿ ಹೊಂದಿರುವ ರೈತರಿಗೆ ಈಗ ಯಾವ ಆತಂಕವೂ ಬೇಡ ಎಂದು DCFO ಭರವಸೆಯನ್ನೂ ಕೊಟ್ಟಿದ್ದಾರೆ.
ಸಭೆ ಮತ್ತು ಭೇಟಿಯಲ್ಲಿ, ಅಧ್ಯಕ್ಷರ ಜೊತೆ ಸಂಘದ ಶೃಂಗೇರಿ ಕ್ಷೇತ್ರ ಮಟ್ಟದ ಕಾರ್ಯದರ್ಶಿ ಸತೀಶ್ ಜೈನ್, ಕಜಾಂಚಿ ಹರ್ಷ ಕೊಪ್ಪ, ತಾಲೂಕು ಮಟ್ಟದ ಪದಾಧಿಕಾರಿಗಳಾದ ಕುಕ್ಕುಡಿಗೆ ರವೀಂದ್ರ, ನಾಗೇಶ್ವರರಾವ್, ಸೂರ್ಯನಾರಾಯಣ್, ಕುಮಾರಸ್ವಾಮಿ, ಸತ್ಯಪ್ರಕಾಶ್, ಸುಧನ್ವ, ಶ್ರೇಯಸ್, ಅರವಿಂದ್ ಮುಂತಾದವರಿದ್ದರು.
ವರದಿ: ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ