ಮೈಸೂರು: ಸೋಸಲೆ ಶ್ರೀಗಳ 8ನೇ ಚಾತುರ್ಮಾಸ್ಯ ವ್ರತ ಆರಂಭ

Upayuktha
0

ಸೋಸಲೆ ಗ್ರಾಮದಲ್ಲಿ ಆ. 1 ರಿಂದ ಸೆ .17 ರವರೆಗೆ ವಿಶೇಷ ಕಾರ್ಯಕ್ರಮ


ಮೈಸೂರು: 
ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಸೋಸಲೆ ಶ್ರೀ ವ್ಯಾಸರಾಜರ ಮಹಾ ಸಂಸ್ಥಾನದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರ 8ನೇ ಚಾತುರ್ಮಾಸ್ಯ ವ್ರತವು ಮೈಸೂರು ಜಿಲ್ಲೆ ತಿ. ನರಸೀಪುರ ಸಮೀಪದ ಸೋಸಲೆ ಗ್ರಾಮದಲ್ಲಿ ಆಗಸ್ಟ್ 2 ರಿಂದ ಚಾಲನೆಗೊಳ್ಳಲಿದೆ. ಇದರ ಅಂಗವಾಗಿ ಆ. 1 ರ ಸಂಜೆ 4:30ಕ್ಕೆ ಬನ್ನೂರು ವೃತದಿಂದ ಸೋಸಲೆ ಗ್ರಾಮದ ಶ್ರೀ ವ್ಯಾಸರಾಜರ ಮಹಾ ಮಠದ ವರೆಗೆ ವೈಭವಯುತ ಮೆರವಣಿಗೆ, ಶ್ರಗಳ ಗಳ ಪುರ ಪ್ರವೇಶ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಮೆರವಣಿಗೆಯಲ್ಲಿ ವಿವಿಧ ಭಜನಾ ಮಂಡಳಿಗಳಿಂದ ದಾಸ ಪದ ಸಂಕೀರ್ತನೆ,  ಕೋಲಾಟ ವಿದ್ವಾಂಸರಿಂದ ವೇದ ಘೋಷ,  ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಮಂತ್ರಘೋಷ , ಜಾನಪದ ಕಲಾತಂಡಗಳ ಪ್ರದರ್ಶನ ಇತ್ಯಾದಿಗಳನ್ನು ಆಯೋಜಿಸಲಾಗಿದೆ.


ಮೆರವಣಿಗೆ ನಂತರ ಸಂಜೆ 6 ಗಂಟೆಗೆ ಸೋಸಲೆ ಗ್ರಾಮದ ವ್ಯಾಸರಾಜರ ಮಠದಲ್ಲಿ ಹಮ್ಮಿಕೊಂಡಿರುವ ಗುರುಗಳ ಸ್ವಾಗತ ಕಾರ್ಯಕ್ರಮದಲ್ಲಿ ಸೋಸಲೆ ಮಠದ ಮುಖ್ಯಸ್ಥರಾದ ಡಿ .ಪಿ.  ಅನಂತಚಾರ್ಯ,  ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ, ಡಾ. ಡಿ.ಪಿ.  ಮಧುಸೂಧನಾಚಾರ್ಯ, ಮಾಜಿ ಎಂ.ಎಲ್.ಸಿ  ಗೋ. ಮಧುಸೂದನ, ತಿ. ನರಸೀಪುರ ತಹಸೀಲ್ದಾರ್ ಸುರೇಶ ಆಚಾರ್ಯ,  ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣ , ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಧನಂಜಯ ಮತ್ತು ಮನೋಜ  ಕುಮಾರ್,  ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚರಿತಾ, ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವೀರೇಶ  ಮತ್ತು ಬನ್ನೂರು ಗ್ರಾಮದ ನಾಡಗೌಡರಾದ ಪಾರ್ಥಸಾರಥಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ನಂತರ ಶ್ರೀ ವಿದ್ಯಾಶ್ರೀಶ  ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ.


ಪ್ರತಿನಿತ್ಯದ ಕಾರ್ಯಕ್ರಮಗಳು:

ಸೋಸಲೆ  ಶ್ರೀಗಳ ಚಾತುರ್ಮಾಸ್ಯ ವ್ರತದ ಅಂಗವಾಗಿ ಆ. 2 ರಿಂದ ಸೆಪ್ಟೆಂಬರ್ 17ರವರೆಗೆ ಪ್ರತಿನಿತ್ಯವೂ ಶ್ರೀ ಮಠದಲ್ಲಿ ನಿತ್ಯ ಜ್ಞಾನ ಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ . ಇದರ ಅಂಗವಾಗಿ ಪ್ರತಿದಿನವೂ ಬೆಳಗ್ಗೆ 7ಕ್ಕೆ ಸ್ವಾಮೀಜಿ ಅವರಿಂದ ಅಣು ಭಾಷ್ಯ  ಶಾಸ್ತ್ರ ಪಾಠ , ವಿದ್ವಾಂಸರಿಂದ ಗೃಹಸ್ಥರಿಗೆ ಸೂತ್ರ ದೀಪಿಕಾ ಗ್ರಂಥದ ಪಾಠ , ಮಾತೆಯರಿಗೆ ಶ್ರೀ ವ್ಯಾಸರಾಜರ ಕೃತಿಗಳ ವಿಶೇಷ ಅಧ್ಯಯನ ಕಾರ್ಯಕ್ರಮಗಳು ನಡೆಯಲಿದೆ .


ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸಂಸ್ಥಾನ ಪ್ರತಿಮಾ ಶ್ರೀ ಗೋಪಾಲಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಚನೆ ಹಾಗೂ ಭವ್ಯ ಮೆರವಣಿಗೆ,  ಉತ್ಸವ ನಡೆಯಲಿದೆ.  ಚಾತುರ್ಮಾಸ್ಯ ಪರ್ಯಂತ ಬರುವ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ , ಶ್ರೀ ಲಕ್ಷ್ಮಿಕಾಂತ ತೀರ್ಥರ ಆರಾಧನೆ , ಶ್ರೀ ಲಕ್ಷ್ಮೀನಾಥ ತೀರ್ಥರ ಆರಾಧನೆ,  ಶ್ರೀ ವಿದ್ಯಾ ಪೂರ್ಣತೀರ್ಥರ ಆರಾಧನೆಗಳನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.

ಇವುಗಳೊಂದಿಗೆ ಪ್ರತಿನಿತ್ಯವೂ ಶಾಸ್ತ್ರಾರ್ಥ ಗೋಷ್ಠಿ,  ವ್ಯಾಸತ್ರಯ ವಿಷಯಗಳಲ್ಲಿ ವಿದ್ವದ್ಗೋಷ್ಠಿ ಹಾಗೂ ಯುವ ಜನರಿಗಾಗಿ ವಿಶೇಷ ಕಾರ್ಯಾಗಾರ ಆಯೋಜನೆಗೊಂಡಿದೆ.


* ಪ್ರವಚನ: ಪ್ರತಿದಿನವೂ ಸಂಜೆ 6ಕ್ಕೆ ನಾಡಿನ ಪ್ರಖ್ಯಾತ ವಿದ್ವಾಂಸರಿಂದ ಹರಿವಂಶ ಗ್ರಂಥದ  ಪ್ರವಚನ,  ಸಮಾಜಕ್ಕೆ ಅಗತ್ಯವೆನಿಸಿದ,  ಧರ್ಮ ಪಾಲನೆಯಲ್ಲಿ ಮುಖ್ಯ ಪಾತ್ರ ವಹಿಸುವ  ವಿಷಯಗಳ ಬಗ್ಗೆ ಕಾರ್ಯಾಗಾರ,  ಎಲ್ಲ ವಯೋಮಾನದವರಿಗೂ ಧಾರ್ಮಿಕ ಮತ್ತು ನೈತಿಕ ಶಿಕ್ಷಣ ಶಿಬಿರ ನೆರವೇರಲಿದೆ.


* ಗೋ ಸೇವೆ:  ಶ್ರೀ ಮಠದಲ್ಲಿರುವ ಗೋಶಾಲೆಗೆ ಭಕ್ತರು ಗೋಗ್ರಾಸ ಮತ್ತು ಗೋದಾನಗಳನ್ನು ನೀಡುವ ಮೂಲಕ ಸಂಸ್ಥಾನ ಪ್ರತಿಮಾ ಶ್ರೀ ಗೋಪಾಲಕೃಷ್ಣನ ಸೇವೆಯನ್ನು ಮಾಡಬಹುದು ಎಂದು ಚಾತುರ್ಮಾಸ ಮುಖ್ಯ ಆಯೋಜಕರಾದ ಡಾ. ಮಧುಸೂದನ ಆಚಾರ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


"ಸೋಸಲೆ ಗ್ರಾಮ ಕುಗ್ರಾಮವಾದರೂ ಅದು ಧಾರ್ಮಿಕ ಪರಂಪರೆಯಲ್ಲಿ ಮಹತ್ವದ ಕ್ಷೇತ್ರವಾಗಿದೆ . ನಮ್ಮ ಪರಂಪರೆಯ ಅನೇಕ ಹಿರಿಯ ಯತಿಗಳು ಇಲ್ಲಿ ಬೃಂದಾವನಸ್ಥರಾಗಿದ್ದಾರೆ. ಇಂತಹ ಕ್ಷೇತ್ರದಲ್ಲಿ ಎಂಟನೇ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲು ನಮಗೆ ಅತೀವ ಸಂತೋಷ ಎನಿಸಿದೆ.  ಭಗವದ್ಭಕ್ತರು ಚಾತುರ್ಮಾಸ್ಯ ಸಂದರ್ಭದಲ್ಲಿ ಬಹುವಿಧವಾದ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಭಾರತೀಯ ಸನಾತನ ಪರಂಪರೆಗೆ ಮತ್ತು ನಮ್ಮ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕು"


ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ,

ಸೋಸಲೆ ವ್ಯಾಸರಾಜರ ಮಹಾ ಸಂಸ್ಥಾನದ ಪೀಠಾಧಿಪತಿ




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top