ಗೋಕರ್ಣ: ಒಂದು ಕಾಲದಲ್ಲಿ ದೇಶದ ಗಣಿತಕ್ಷೇತ್ರ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅದನ್ನು ಬಳಸಿಕೊಂಡು ಗ್ರಹಗತಿಗಳ ಚಲನೆಯನ್ನು ನಿಖರವಾಗಿ ಅಳೆಯುವ ವ್ಯವಸ್ಥೆ ನಮ್ಮ ಪೂರ್ವಿಕರಿಗೆ ಸಿದ್ಧಿಸಿತ್ತು. ನಮ್ಮ ಜೌತಿಷಶಾಸ್ತ್ರಕ್ಕೆ ಇದೇ ಆಧಾರವಾಗಿತ್ತು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಸ್ವಾಮೀಜಿಯವರು, 'ಕಾಲ' ಮಾಲಿಕೆಯ ಪ್ರವಚನ ನೀಡಿದರು.
ಆಯಾ ರಾಶಿಗಳು ನಮ್ಮ ಸ್ವಭಾವವನ್ನು ನಿರ್ಧರಿಸುತ್ತವೆ. ಉದಾಹರಣೆಗೆ ಮೇಷರಾಶಿಯವರನ್ನು ಸುಲಭವಾಗಿ ಸಂತಸಪಡಿಸಬಹುದು. ಅಪೇಕ್ಷೆಗಳು ಅಧಿಕ. ಸಂಪತ್ತು ಇವರಿಗೆ ಸ್ಥಿರವಲ್ಲ. ಶೌರ್ಯವಂತರೂ, ಅಂಗನೆಯವರನ್ನು ಅವಲಂಬಿಸಿರುತ್ತಾರೆ. ಸೇವಾಕೌಶಲ ಅಧಿಕ. ಚಪಲ- ಚಾಂಚಲ್ಯ ಬುದ್ಧಿ. ನೀರು ಕಂಡರೆ ಇವರಿಗೆ ಭಯ ಎಂದು ವಿವರಿಸಿದರು. ಇತರ ಗ್ರಹಗಳ ಸ್ಥಾನ ಕೂಡಾ ಪ್ರಭಾವ ಬೀರುವುದರಿಂದ ಒಂದೇ ರಾಶಿಯವರಿಗೆ ಫಲಗಳು ಬದಲಾಗುತ್ತವೆ. ನಾವು ಹುಟ್ಟುವಾಗ ಚಂದ್ರ ಇರುವ ರಾಶಿ ನಮ್ಮ ಮನಸ್ಸಿನಷ್ಟೇ ಮುಖ್ಯ ಎಂದು ವಿಶ್ಲೇಷಿಸಿದರು.
ಮೇಷ ಅರಣ್ಯವನ್ನು ಸೂಚಿಸಿದರೆ, ವೃಷಭ ಗದ್ದೆಯನ್ನು, ಮಿಥುನ ಶಯನಗೃಹವನ್ನು, ಕರ್ಕಾಟಕ ರಾಶಿ ಕೆರೆ ಭಾವಿಯನ್ನು ಸೂಚಿಸಿದರೆ, ಸಿಂಹ ಬೆಟ್ಟವನ್ನು, ಕನ್ಯಾ ರಾಶಿ ಸಸ್ಯಾನ್ವಿತ ಭುವಿಯನ್ನು ಸೂಚಿಸುತ್ತದೆ. ಹೀಗೆ ಪ್ರತಿಯೊಂದು ರಾಶಿಯೂ ಒಂದೊಂದು ಅಂಶವನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಿದರು.
ಕಾಲದ ರೂಪ ಭಗವಂತನಂತೆಯೇ. ಅದು ಕೂಡಾ ಇದೆ ಎಂದು ಗೊತ್ತಾಗುತ್ತದೆ. ಆದರೆ ಹೇಗೆ ಎಂದು ಸ್ವರೂಪವನ್ನು ವಿವರಿಸಲು ಸಾಧ್ಯವಿಲ್ಲ. ಎಲ್ಲರೂ ಕಾಲಕ್ಕೆ ಶರಣಾಗಬೇಕಾಗುತ್ತದೆ ಎಂದರು.
ಹಾಲಕ್ಕಿ ಸಮಾಜದ ಹೆಸರೇ ಸಮಾಜದ ಸ್ವಭಾವವನ್ನು ತಿಳಿಸುವಂಥದ್ದು. ಹಾಲು ಮತ್ತು ಅಕ್ಕಿ ಎರಡೂ ಶ್ರೇಷ್ಠ. ಅಂಥ ಎರಡು ಸಾತ್ವಿಕ ವಸ್ತುಗಳ ಹೆಸರಿನಿಂದ ಸಮಾಜದ ಮನಸ್ಸು ಕೂಡಾ ಹಾಲಿನಂತಿದೆ. ಸರ್ವ ಸಮಾಜಕ್ಕೆ ಹಾಲು ಮತ್ತು ಅಕ್ಕಿ ಕೊಡುವ ಸಮಾಜ ಅದು. ಸಸ್ಯಸೇವೆ ಮತ್ತು ಗೋಸೇವೆಯ ಮೂಲಕ ಸಮಾಜವನ್ನು ಪೋಷಿಸುವವರು. ಪ್ರತಿ ವರ್ಷದಂತೆ ದೊಡ್ಡ ಸಂಖ್ಯೆಯಲ್ಲಿ ಬಂದು ಸುವರ್ಣ ಪಾದುಕಾ ಸೇವೆಯನ್ನು ನೆರವೇರಿಸಿದ್ದು, ಇಡೀ ಸಮಾಜಕ್ಕೆ ಸುವರ್ಣಕಾಲ ಬರಲಿ ಎಂದು ಆಶಿಸಿದರು.
ಸಂಸ್ಕøತ ವಿವಿ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್, ಮರಾಠಾ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಪಾಗೋಜಿ, ವಿವಿವಿ ಗೌರವಾಧ್ಯಕ್ಷ ಡಿ.ಡಿ. ಶರ್ಮಾ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಭಟ್, ಕೆ.ಎನ್.ಭಟ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು.
ರವೀಂದ್ರ ಭಟ್ ಸೂರಿ ಕಾರ್ಯಕ್ರಮ ನಿರೂಪಿಸಿದರು. ಹಾಲಕ್ಕಿ ಸಮಾಜದವರಿಂದ ಸೋಮವಾರ ಸುವರ್ಣ ಪಾದುಕಾಪೂಜೆ ನೆರವೇರಿತು. ವಿನಾಯಕ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಭಕ್ತಮಂಟಪದ ಕೆಳಭಾಗದಲ್ಲಿರುವ ಶಿಲಾಹಾಸಿನ ಅಂಗಳವನ್ನು ವಿನಾಯಕ ಅನಾವರಣಗೊಳಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ