ಗೋಕರ್ಣ: ಧರ್ಮದ ತಕ್ಕಡಿ ಮೇಲಕ್ಕೆದ್ದಾಗ ಮಾತ್ರ ನಮ್ಮ ಜೀವನ ಪಾವನವಾಗುತ್ತದೆ. ಜೀವನದ ಪ್ರತಿ ಹಂತದಲ್ಲಿ ಸಂತುಲನ ಅಗತ್ಯ. ಇದನ್ನು ಸಾಧಿಸಬೇಕೆನ್ನುವುದೇ ತುಲಾಭಾರದ ಸಂದೇಶ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಬುಧವಾರ ತುಲಾಭಾರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ನಾಣ್ಯ, ಜೇನುತುಪ್ಪ, ಅಡಿಕೆ, ಒಣಹಣ್ಣುಗಳು, ದಿನಸಿ ವಸ್ತುಗಳು, ಬೆಲ್ಲ, ನವಧಾನ್ಯ, ತೆಂಗಿನಕಾಯಿ, ಅಕ್ಕಿ, ಒಣದ್ರಾಕ್ಷಿ ಹೀಗೆ ವಿವಿಧ ಬಗೆಯ ಸುವಸ್ತುಗಳಿಂದ ಭಕ್ತರು 126ಕ್ಕೂ ಹೆಚ್ಚು ತುಲಾಭಾರ ಸೇವೆಗಳನ್ನು ನಡೆಸಿಕೊಟ್ಟರು.
"ಜೀವನವೆಂಬ ತಕ್ಕಡಿಯ ಸಂತುಲನದಲ್ಲಿ ಧರ್ಮ ಮಹತ್ ಪ್ರಮಾಣದಲ್ಲಿರಬೇಕು. ಉಳಿದೆಲ್ಲ ಪೂರಕವಾಗಿ ಸೇರಿಕೊಳ್ಳಬೇಕು. ವಿಷಯ ವಸ್ತುಗಳು ಭಾರದಿಂದ ಕೆಳಕ್ಕೆ ಬಂದು ಧರ್ಮ ಮೇಲಕ್ಕೇಳುವುದು ತುಲಾಭಾರದ ಸಂಕೇತ" ಎಂದು ನುಡಿದರು.
ಮನೆಯಲ್ಲಿ ಲಕ್ಷ್ಮಿ ತುಂಬಿ ತುಳುಕಲಿ. ಮನಸ್ಸು, ಹೃದಯದಲ್ಲಿ ಶ್ರೀಮನ್ನಾರಾಯಣ ತುಂಬಲಿ. ಪ್ರತಿಯೊಬ್ಬರ ಬಾಳಿನಲ್ಲಿ ಸಮೃದ್ಧಿ ಮತ್ತು ಧಾರ್ಮಿಕತೆ ತುಂಬಲಿ ಎಂದು ಆಶಿಸಿದರು.
ಶ್ರೀಮಠದ ಪಾರಂಪರಿಕ ಶಿಷ್ಯವರ್ಗಗಳಲ್ಲೊಂದಾದ ನಾಮಧಾರಿ ಸಮಾಜ ಮತ್ತು ಹರಿಕಾಂತ ಸಮಾಜದ ಗಣ್ಯರು ಸ್ವರ್ಣಪಾದುಕೆ ಸೇವೆ ನೆರವೇರಿಸಿದರು. ಯಲ್ಲಾಪುರ ದತ್ತಮಂದಿರದ ಆಡಳಿತ ಸಮಿತಿ ವತಿಯಿಂದ ಪಾದಪೂಜೆ ಸೇವೆ ನಡೆಯಿತು.
ತಕ್ಕಡಿ ಸಂತುಲವನ್ನು ಸೂಚಿಸುತ್ತದೆ. ಗುರುಗಳು ಪರಮಾರ್ಥಕ್ಕೆ ಹತ್ತಿರ; ವ್ಯವಹಾರಕ್ಕೆ ದೂರ ಎಂಬ ಅರ್ಥ. ತಕ್ಕಡಿ ವ್ಯವಹಾರದ ಸಂಕೇತ. ಆದ್ದರಿಂದ ಶ್ರೀಸಂಸ್ಥಾನದವರ ತುಲಾಭಾರದ ಬಗ್ಗೆ ಪ್ರಶ್ನೆ ಉದ್ಭವಿಸಬಹುದು. ನಮ್ಮ ದೇಹ, ಸಮಾಜ ಸುವ್ಯವಸ್ಥಿತವಾಗಿ ನಡೆಯುವುದೇ ಸಂತುಲನದಿಂದ. ಜೀವನದ ಪ್ರತಿ ಹಂತದಲ್ಲೂ ಸಂತುಲನ ಅಗತ್ಯ. ಅದು ತಪ್ಪಿದರೆ ಇಡೀ ಜೀವನವೇ ಬರ್ಬರವಾಗುತ್ತದೆ ಎಂದು ಎಚ್ಚರಿಸಿದರು.
ಅನಾವರಣ
ಗೋಕರ್ಣದ ವರದೇಶ್ವರ ದೇವಾಲಯ ಶ್ರೀಮಠದ ಮೂಲದ ಮೂಲ. ಶ್ರೀಮಠ ಸ್ಥಾಪನೆಗೆ ಮೂಲವಾದದ್ದು ವರದೇಶ್ವರ ಸನ್ನಿಧಿ. ಶಂಕರರು- ವರದ ಮುನಿಗಳು ಸಮಾಗಮಗೊಂಡ ಈ ಕ್ಷೇತ್ರ ಇಂದು ಅವಗಣನೆಗೆ ಒಳಗಾಗಿದೆ. ಶ್ರೀಮಠದ ಮೂಲಚೈತನ್ಯ ಇಲ್ಲಿದೆ. ರಾಮಾದಿ ವಿಗ್ರಹಗಳು ಶಂಕರರ ಕೈಗೆ ಬಂದ ಬಳಿಕ ಇದರ ಪೂಜಾಕೈಂಕರ್ಯ ಮತ್ತು ಸಮಾಜೋದ್ಧಾರಕ್ಕಾಗಿ ಮಠ ಸ್ಥಾಪನೆ ಮಾಡುವ ನಿರ್ಧಾರ ಕೈಗೊಂಡ ಪುಣ್ಯಧಾಮ ಇದು ಎಂದು ಬಣ್ಣಿಸಿದರು. ಶ್ರೀಮಠದ ಶಿಷ್ಯಭಕ್ತರು ವರದೇಶ್ವರನ ಸೇವೆಯನ್ನು ಹೆಚ್ಚು ಹೆಚ್ಚು ಮಾಡುವಂತಾಗಬೇಕು ಎಂದು ಆಶಿಸಿದರು. ವರದೇಶ್ವರ ದೇವಾಲಯದ ಪ್ರಾಚೀನ ಇತಿಹಾಸ ಮತ್ತು ಮಹತಿಯನ್ನು ದತ್ತಾತ್ರೇಯ ನಾರಾಯಣ ಹಿರೇಗಂಗೆ ನೆರವೇರಿಸಿದರು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ತುಲಾಭಾರ ಸೇವೆಯ ನೇತೃತ್ವ ವಹಿಸಿದ್ದ ವಿ.ಡಿ.ಭಟ್, ಮೂರೂರು ರಾಜಾರಾಂ ಭಟ್ಟ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ ಹೊಸಾಕುಳಿ, ಕುಮಟಾ ಮಂಡಲದ ಅಧ್ಯಕ್ಷ ಸುಬ್ರಾಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ