ಮೂಲ ತಿಳಿದುಕೊಂಡರೆ ಬದುಕು ಪರಿಪೂರ್ಣ: ರಾಘವೇಶ್ವರ ಶ್ರೀ

Upayuktha
0

ಗೋಕರ್ಣ: ಬದುಕಿನ ಧ್ಯೇಯ ಮೂಲವನ್ನು ತಿಳಿದುಕೊಳ್ಳುವುದು. ನಮ್ಮ ಮೂಲವನ್ನು, ಬದುಕಿನ ಮೂಲವನ್ನು, ಜಗತ್ತಿನ ಮೂಲವನ್ನು ತಿಳಿದುಕೊಂಡಾಗ ಬದುಕು ಪರಿಪೂರ್ಣವಾಗುತ್ತದೆ. ಬದುಕಿನ ಪ್ರತಿ ಹಂತದಲ್ಲೂ ಮೂಲವನ್ನು ತಿಳಿದುಕೊಂಡು ಕೃತಜ್ಞತೆಯಿಂದ ನೆನೆಯುವುದು ಅಗತ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುಮಾಸ್ಯ ಕೈಗೊಂಡಿರುವ ಪರಮಪೂಜ್ಯರು 30ನೇ ದಿನವಾದ ಸೋಮವಾರ 'ಶ್ರೀರಘೂತ್ತಮ ಮಠೋದ್ಧಾರ' ಎಂಬ ಪ್ರಾಚೀನ ತಾಳೇಗರಿ ಗ್ರಂಥದ ಅನಾವರಣ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು.


ರಘೂತ್ತಮ ಮಠೋದ್ಧಾರದಲ್ಲಿ ಶಂಕರರ ಜೀವನದರ್ಶನ, ರಘೂತ್ತಮ ಮಠದ ಆವಿರ್ಭಾವದ ವಿವರಣೆಯಿದೆ. ವರದ ಮುನಿಗಳು- ಶಂಕರಾಚಾರ್ಯರ ಸಮಾಗಮ, ವರದ ಮುನಿಗಳು ರಾಮಾದಿ ವಿಗ್ರಹಗಳನ್ನು ಶಂಕರಾಚಾರ್ಯರಿಗೆ ಹಸ್ತಾಂತರಿಸಿದ್ದು, ತಾಪದಿಂದ ತಂಪಿನೆಡೆಗೆ ವರದ ಮುನಿಗಳು ಪ್ರಯಾಣ ಮಾಡುವ ಮುನ್ನ ಶಂಕರಾಚಾರ್ಯರಿಗೆ ದೇವರ ವಿಗ್ರಹಗಳನ್ನು ನೀಡಿದ ಅಪೂರ್ವ ವಿವರಣೆಯನ್ನು ಒಳಗೊಂಡ ಈ ಮಹತ್ ಗ್ರಂಥ ನಮ್ಮ ಮೂಲವನ್ನು ನಮಗೆ ತಿಳಿಸುತ್ತದೆ ಎಂದು ಹೇಳಿದರು.


ಗೋಕರ್ಣ ಮಂಡಲಕ್ಕೆ ಆಚಾರ್ಯಪೀಠವಾಗಿರಲಿ ಎಂಬ ಶ್ರೀಶಂಕರರ ಸಂಕಲ್ಪದೊಂದಿಗೆ ವಿದ್ಯಾನಂದರನ್ನು ಪ್ರಥಮ ಆಚಾರ್ಯರನ್ನಾಗಿ ನೇಮಕ ಮಾಡಿ ವಿಗ್ರಹವನ್ನು ನೀಡುವ ಮೂಲಕ ಶ್ರೀಮಠದ ಆವೀರ್ಭಾವವಾಯಿತು. ತಾಳೇಗರಿ ಗ್ರಂಥದ ಅನಾವರಣ ಮಠದ ಮೂಲವನ್ನು ನೆನೆಯೋಣ, ನಮ್ಮ ನಮ್ಮ ಮೂಲವನ್ನು, ಪ್ರಪಂಚದ ಮೂಲವನ್ನು ಅರಿಯೋಣ. ಇದರಿಂದ ನಮ್ಮ ಬದುಕಿಗೆ ಅರ್ಥ ಬರುತ್ತದೆ ಎಂದು ಬಣ್ಣಿಸಿದರು.


ಕಾಲ ಪ್ರವಚನ ಸರಣಿ ಮುಂದುವರಿಸಿದ ಶ್ರೀಗಳು, ನಮ್ಮ ದೃಷ್ಟಿಗೆ ಗೋಚರವಾಗುವುದು ಅರ್ಧ ಮಾತ್ರ; ಬಹಿರಂಗ ಕಂಡರೆ ಅಂತರಂಗ ಅದೃಶ್ಯವಾಗಿರುತ್ತದೆ. ಮುಂದಿನ ಭಾಗ ಕಾಣಿಸಿದರೆ, ಹಿಂಭಾಗ ಕಾಣುವುದಿಲ್ಲ. ಅಂತೆಯೇ ಆಕಾಶ ಕೂಡಾ ಅರ್ಧ ಭಾಗ ಮಾತ್ರ ಕಾಣುತ್ತದೆ. ಅಂತೆಯೇ ಭೂಮಿ ಸೂರ್ಯನ ಸುತ್ತ ಸುತ್ತುವಾಗ ಆರು ರಾಶಿಗಳು ಮೇಲ್ಭಾಗದಲ್ಲಿ ಆರು ರಾಶಿಗಳು ಕೆಳಭಾಗದಲ್ಲಿರುತ್ತವೆ. ಪ್ರತಿ ದಿನ ಸರಿಸುಮಾರು ಎರಡು ಗಂಟೆ ಅವಧಿಗೊಮ್ಮೆ ರಾಶಿ ಬದಲಾಗುತ್ತದೆ. ಆ ರಾಶಿ ಬದಲಾದಂತೆ ನಮ್ಮ ಬದುಕು ಕೂಡಾ ಬದಲಾಗುತ್ತದೆ ಎಂದು ವಿವರಿಸಿದರು.


ಪ್ರಕೃತಿ ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳುತ್ತಿರುತ್ತದೆ. ಅದನ್ನು ಕಂಡುಕೊಳ್ಳುವ ಜ್ಞಾನ ನಮಗೆ ಬೇಕು. ಇದಕ್ಕೆ ಕಾಲಜ್ಞಾನ ಅಗತ್ಯವಿದೆ. ಸ್ಥಿತಿ, ಕವಡೆ, ತಾಂಬೂಲ ಹೀಗೆ ಹಲವು ವಿಧಗಳಿಂದ ಆಯಾ ಸಮಯದ ಲಗ್ನ ತಿಳಿದುಕೊಳ್ಳಬಹುದು. ಯಾವುದೇ ಜಾತಕ ಅಥವಾ ಪ್ರಶ್ನೆ ತೆಗೆದುಕೊಂಡರೆ ಅದಕ್ಕೆ ದೈವಾನುಗ್ರಹ ಇದೆಯೇ ಎಂದು ಮೊದಲು ತಿಳಿದುಕೊಳ್ಳಬೇಕು ಎಂದರು.


ದೈವಾನುಗ್ರಹ ಇದೆಯೇ ಎಂದು ತಿಳಿದುಕೊಂಡು, ಪ್ರತಿಕೂಲ ಸ್ಥಿತಿ ಇದ್ದರೆ ಅನುಕೂಲಕರವಾಗಿ ಪರಿವರ್ತಿಸುವ ಕಾರ್ಯಗಳನ್ನು ಮಾಡಬೇಕು. ಗುರುವಿನಲ್ಲಿ ಎಲ್ಲ ದೇವತೆಗಳ ಸಾನ್ನಿಧ್ಯವಿದೆ. ಗುರು ಅನುಕೂಲವಾಗಿದ್ದರೆ ಎಲ್ಲ ದೇವತೆಗಳ ಅನುಗ್ರಹ ಇದೆ ಎಂಬ ಅರ್ಥ. ಪ್ರತಿಕೂಲವಾಗಿ ಬಂದರೆ ದೇವತೆಗಳು ನಮ್ಮ ಜತೆಗಿಲ್ಲ ಎಂಬ ಸಂಕೇತ. ಆಗ ಅನುಕೂಲಕರವಾಗಿ ಪರಿಣಮಿಸಲು ಬೇಕಾದ ಕಾರ್ಯಗಳನ್ನು ಮಾಡಬೇಕು ಎಂದು ವಿಶ್ಲೇಷಿಸಿದರು.


ದೈವಾನುಕೂಲದಿಂದ ಕಾರ್ಯಸಿದ್ಧಿಯಾಗುತ್ತದೆ. ಪ್ರತಿಕೂಲವಿದ್ದರೆ ಎಷ್ಟೇ ಪ್ರಯತ್ನ ಮಾಡಿದರೂ ಕಾರ್ಯ ನಿದ್ಧಿಸುವುದಿಲ್ಲ ಎಂದು ನುಡಿದರು.

ಶ್ರೀ ರಘೂತ್ತಮ ಮಠೋದ್ಧಾರ ಗ್ರಂಥವನ್ನು ದಕ್ಷಿಣ ಬೆಂಗಳೂರು ಮಂಡಲದ ಪ್ರಧಾನ ಗುರಿಕ್ಕಾರ ಜೆಡ್ಡಿ ರಾಮಚಂದ್ರ ಭಟ್ ನೆರವೇರಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷರಾದ ಜಿ.ಜಿ.ಹೆಗಡೆ ತಲೆಕೇರಿ, ದಕ್ಷಿಣ ಬೆಂಗಳೂರು ಮಂಡಲ ಅಧ್ಯಕ್ಷ ಡಾ.ಶ್ರೀಪಾದ ಹೆಗಡೆ, ಕಾರ್ಯದರ್ಶಿ ಶ್ಯಾಂಪ್ರಸಾದ್ ಚೇರಾಲು, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ವಿನಾಯಕ ಶಾಸ್ತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ನಾಗರಾಜ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top