'ನಾನು ಅವನ ಪಾಲಿಗೆ ನಾಗರಹಾವೇ ಅದಿನಿ' ಎಂದ ಲಬ್ ಡಬ್
'ಏ ಯಾರ ಪಾಲಿಗಲೇ ನೀ ನಾಗರಹಾವು? ಯಾವ ಪಿಚ್ಚರ್ ಡೈಲಾಗ್ ಹೈ ಏ?' ಕೇಳಿದ ಬಾಶಾ
'ಏ ಇದು ಪಿಚ್ಚರ್ ಡೈಲಾಗ್ ಅಲ್ಲಾ, ಇದು ಲೈವ್ ಡೈಲಾಗ್' ಎಂದ ಲಬ್ ಡಬ್
'ಇಂವಾ ಯಾವಲೆ ಲಬ್ ಡಬ್ ಅಂತ! ಹೆಸರರೇ ಹೆಸರಾ ಅದು? ಎಲ್ಲಿವು ಹಿಡ್ಕೊಂಡ ಬರ್ತಿರಲೇ ಇವ್ನೆಲ್ಲಾ?' ಕಾಳ್ಯಾ ಒದರಿದ
'ಏ ಇಂವಾ ಲಬ್ ಡಬ್ ನಮ್ಮ ಕುಮ್ಮಿ ಪ್ರಾಡೆಕ್ಟ್ ಅದಾನು, ನಹಿ ಬೋಲನಾ ಇನ್ಕೋ ಕ್ಯಾ ಭೀ' ಅಂತ ವಾರ್ನಿಂಗ ಮಾಡಿದ ಬಾಶಾ
'ಏ ಅದು ಕುಮ್ಮಿದೇ ಡೈಲಾಗ್ ಐತಿ' ಎಂದ ಸ್ಟೀಲ್
'ಯಾವುದು ನಾಗರಹಾವಿಂದಾ?' ಎಂದಳು ರಾಣಿ.
'ಹೌದು, ಅದ್ನ ಬಂಡೆನ ವಿರುದ್ಧ ಕುಮ್ಮಿ ಅಬ್ಬರಿಸಿದಾಗ ಮೂಡಿ ಬಂದಿದ್ದು' ಎಂದ ಬಾದಶಾ
'ಇಲ್ಲಿ ಅಬ್ಬರಿಸಿ ಬೊಬ್ಬಿರಿದರೂ ಯಾರೂ ಕೇಳುವವರಿಲ್ಲ ಅಂತ ಬಂಡೆ ತಿರಿಗಿ ಕೊಟ್ಟೇತಿ' ಅಂದ ಶೌರಿ
'ನಾ ರಾಚಯ್ಯ ಪ್ರೊಡಕ್ಟ್ ಅಂತ ಟಗರು ಅಬ್ಬರಸೇತಿ' ಎಂದಳು ರಾಶಿ
'ಇಲ್ಲಿ ಯಾರು ಯಾರ ಪ್ರೊಡಕ್ಟ್ ಅನ್ನೂದ ಗೊತ್ತಾಗವಲ್ತು' ಎಂದ ಕಾಳ್ಯಾ
'ಹೌಂದ ಮತ್ತs, ಸೈನಿಕ ಝಂಡಾ ಏರಸು ಮುಂದ ಬಂಡೆ ಜೊತೆ ಸೇರೈತಿ ಬೊಂಬೆ ಪಟ್ನದಾಗ' ಎಂದ ಕಾಕಾ
'ಅದು ಬ್ಯಾರೇನೆ ಐತಿ,ಅಲ್ಲಿ ಎಲೆಕ್ಷನ್ ಐತ್ಯಾಲಾ ಅದರ ಇಫೆಕ್ಟ್' ಎಂದ ರಬಡ್ಯಾ
'ವೈರಿಯ ವೈರಿ ಸ್ನೇಹಿತ ಅಂತ ಹೌಂದಾ?' ನಕ್ಕ ಕಾಳ್ಯಾ
'ಏ ಭೀ ಬಾತ್ ಸಹಿ ಹೈ,......ಆದ್ರೂ ?' ಎಂದ ಬಾಶಾ
'ಆದ್ರೂ ಇಲ್ಲಾ ಗೀದ್ರೂ ಇಲ್ಲಾ! ಎಲ್ಲಾ ಖುಲ್ಲಂ ಖುಲ್ಲಾ ಐತಲಾ?' ಕೇಳಿದ ಕಾರಬ್ಯಾಳಿ
'ಇಂವಾ ಯಾಂವಲೇ ತಮ್ಮಾ?' ಎಂದ ಕಾಕಾ
'ಕಾಕಾ, ಇಂವಾ ಕಾರಬ್ಯಾಳಿ ಅಂತ ಹೇಳಿ, ನಮ್ಮ ಗುತ್ನಾಳನ ಶಿಷ್ಯ!' ಅಂದ ಸ್ಟೀಲ್
'ಎಲ್ಲೆಲ್ಲಿವರೇ ತರ್ತಿರಲಲೇ? ಗುದ್ನಾಳನ ಶಿಷ್ಯಾನಾ?' ಕೇಳ್ದ ಕಾಕಾ
'ಗುದ್ನಾಳ ಅಲ್ಲೋ ಯಪ್ಪಾ, ಗುತ್ನಾಳಂದು ಶಿಷ್ಯ' ಎಂದ ರಬಡ್ಯಾ
'ಬರಾಬರ ಐತಿ ಬಿಡು, ಗುತ್ನಾಳ ಕಾರಬ್ಯಾಳಿ ಕಾಂಬಿನೇಶನ್ ಬೆಸ್ಟ್ ಐತಿ' ಎಂದು ನಕ್ಕಳು ರಾಣಿ
'ಅದೇ ಸೈನಿಕಗ ಬೈಎಲೆಕ್ಷನ್ದಾಗ ಸೈಡ್ ಕೊಡೊಲ್ರು, ಅದ್ಕs ಅಂವಾ 'ಕೈ' ಇಟ್ಟಾನ ಬಂಡೆ ಮ್ಯಾಗ!' ಎಂದ ಕಾರಬ್ಯಾಳಿ
'ಅಂದ್ರs ಕುಮ್ಮಿಗಿ ಗುಮ್ಮತಾರೇನು ಕ್ಯಾ ದೋನೋ ಮಿಲ್ಕರ್?' ಎಂದ ಬಾಶಾ
'ಏ, ಈ ಮೊದಲೇ ಬಂಡೆಕ್ಕ ಮೈಸೂರಾಗ ಕುಮ್ಮಿ ಭಾರಿ ಗುಮ್ಮೆತಲಾ?' ಎಂದ ಗುಂಡ್ಯಾ
'ಹ್ಯಾಂಗ?' ಕೇಳಿದ ಲಬ್ ಡಬ್
'ಹ್ಯಾಂಗೇನ ಹ್ಯಾಂಗಲೇ, ಕೇಳಿಲ್ಲಿ,... ಈ ಬಂಡೆನ್ನ ನಂಬಿದ್ದೆ ನಾ,ಆದ್ರs ನನ್ನ ತಲಿ ಮ್ಯಾಗ ಬಿತ್ತಿದು. ವಿಗ್ಗೇಶ್ವರ ಸುಪ್ರಭಾತ ಅಳ್ಯಾಂದು ಸಾವು ಯಾರಿಂದ ಆತು? ಜೇಡರಹಳ್ಯಾಗ ಮ್ಯಾನ ಹೋಲ ಮ್ಯಾಗಿಂದ ತಟ್ಟೆ ತುಡಗ ಮಾಡಿ ಗುಜರಿಗಿ ಮಾರ್ತಿದ್ದಿ ನೀನು!' ಅಂತ ಕುಮ್ಮಿ ಗುಮ್ಮೇತಿ' ಎಂದ ಗುಂಡ್ಯಾ
'ಅದಲ್ಲದs ಸದನದಲ್ಲಿ ಉತ್ತರ ಕೊಡ್ಡ ಓಡಿ ಹೋದ ರಣಹೇಡಿ ಅಂತ ಮರಿಸಿಟ್ಟೂರಿ ಟಗರಿಗಿ ಇರದೈತಿ' ಎಂದ ಕಾರಬ್ಯಾಳಿ
'ನೀ ಆರ್ಸಿ ಬರಾಕ ನಾವೇ ಕಾರಣ, ಅದು ನಾವು ಹಾಕ್ದ ಭಿಕ್ಷೆ ಅಂದತಿ ಬಂಡೆ ಮರಿಗೆ' ಎಂದ ಲಬ್ ಡಬ್
'ಇದನ್ನೇ ಹಿಂಹುಲಿ ಇದ್ರs ಏ ನಿಮ್ಮ ಅಡ್ಜಸ್ಟ್ಮಂಟ್ ರಾಜಕಾರಣ ಬಿಡ್ರೊ ಅಂತ ಅಂದತಿ' ಎಂದ ಶೌರಿ
'ಅದ್ಕೆs ಅವರ ಗ್ಯಾಂಗ್ ಪಾದಯಾತ್ರೆಕ್ಕ ತಯಾರ ಆಗೇತೇನು?' ಕೇಳಿದಳು ರಾಶಿ
'ಹೂಂ ಮತ್ತs, ಎಲ್ಲಾ ಬಿಚ್ಚಿಡ್ಬೇಕಲಾ?' ಎಂದ ರಬಡ್ಯಾ
'ಏನು ಬಿಚ್ಚಿಡೂದು ಉಳಿದೈತಿ ಅಲ್ಲಿ?' ಎಂದ ಗುಡುಮ್ಯಾ
'ಏ ನಿಂದೆಲ್ಲಾ ಬಿಚ್ಚಿಡ್ತಿನಿ, ನಿಂದೂ ನಾ ಬಿಚ್ತಿನಿ ಅಂತ ಆಟಾ ಶುರು ಹಚ್ಗೊಂಡಾವು ಎಲ್ಲಾ' ಅಂದ ಕಾಕಾ
'ಬಿಚ್ಚಿ ಇಡ್ಲಿಕ್ಕೆ ಅದೇನೂ ಹೊಲಿಗಿ ಹಾಕಿದ್ದೇನು? ಅದು ನುಂಗಿದ್ದು!' ಎಂದ ಕಾರಬ್ಯಾಳಿ
'ಎಲ್ಲಾ ಬರೇ ಅಂವದ್ದು ಬಿಚ್ತಿನಿ ಇಂವದ್ದು ಬಿಚ್ತಿನಿ ಅಂತಾವು, ಖರೇ ಯಾರ್ದು ಯಾರೂ ಬಿಚ್ಚಂಗಿಲ್ಲ!' ಎಂದು ನಕ್ಕ ಲಬ್ ಡಬ್
'ನಮ್ಮ ಕಡೆ ಹಳ್ಯಾಗ ಹೆಂಗ್ಸೂರು ನೀರು ತುಂಬು ಮುಂದ ಜಗಳಾಡು ಮುಂದs ಇವೇ ಸೇಮ್ ಡೈಲಾಗ್ ಬರ್ತಿದ್ವು ನೋಡಪಾ' ಎಂದ ಕಾಕಾ
'ಎಲ್ಲಾರೂ ಅವ್ರೇ! ಎಲ್ಲಾರ ಮನೆ ದೋಸೆನೂ ತೂತೇ!' ಎಂದ ಸ್ಟೀಲ್
'ಎಲ್ಲಾರೂ ಗಾಜಿನ ಮನ್ಯಾಗೇ ಇದ್ದಾರು, ಆದ್ರೂ ಒಬ್ರಿಗೊಬ್ರು ಕಲ್ಲು ಹೊಡ್ಡಂಗ ಮಾಡ್ತಾರು' ಎಂದಳು ರಾಣಿ
'ಇವ್ರೆಲ್ಲಾದರ ನಡಬರಕ ಜನರಿಗಿ ದಿಕ್ಕ ತಪ್ಪೇತಿ! ಯಾರ ಮಾತ ನಂಬೇಕೂ ಯಾರ ಮಾತ ಬಿಡ್ಬೇಕು ಗೊತ್ತ ಆಗಲಾರದ ಬೆದರಿದಂಗ ಆಗ್ಯಾರು' ಎಂದ ಕಾಳ್ಯಾ
'ಅಂತೂ ಒಂದರೇ ಬೀಜ ಮಾತ ಹೇಳಿದಿ ನೋಡು'' ಎಂದ ಕಾರಬ್ಯಾಳಿ
'ಚಲೋ ಎಲ್ಲಾರೂ ಶ್ರಾವಣದಾಗ ಪುರಾಣ ಕೇಳ್ಲಿಕ್ಕೆ ಗುಡಿಗೆ ಹೋಗಾಮು ಬರ್ರಿ' ಎಂದ ಕಾಕಾ
' ಅಲ್ಲಿನೂ ಇದೇ ಪುರಾಣ ಹಚ್ಗೋಳಿಕ್ಕ ಮತ್ತ ಅವರು ಬಂದರಂದ್ರs ಹ್ಯಾಂಗ?' ನಕ್ಕ ಗುಡುಮ್ಯಾ
'ಅರೇ ಕೇಳಿದಿ ಇಲ್ಲೊ? ಮೊನ್ನೆ ಬಾಂಗ್ಲಾದಾಗ ಏನು ಗದ್ಲ ಆತಲಾ ಆಗ 500 ಜನ ಕೈದಿಗಳು ಇದೇ ಚಾನ್ಸ್ ಅಂತ ಹೇಳಿ ಫರಾರಿ ಆಗ್ಯಾರಂತ' ಎಂದ ಕಾಳ್ಯಾ
'ಮತ್ತ ನೆನ್ನೆ ಟಿವ್ಯಾಗ ತೋರ್ಸಾಕತ್ತಿದ್ರು, ಜಿರಳೆದಾಗ ಪ್ರೋಟೀನ ಅಂಶ ಐತೆಂತ, ಅದ್ಕs ಬಂಗಾರದ ಬೆಲೆ ಬಂದತಿ, ಕೆಜಿಗೆ 498 ರೂಪಾಯಂತ' ಎಂದ ಸ್ಟೀಲ್
'ಎಲ್ಲಾಕ್ಕಿಂತ ಗುಡ್ ನ್ಯೂಜ್ ಅಂದ್ರs.... ಉ.ಕ. ಜಿಲ್ಲೆದಾಗ
ಹೊಸ ಪೋರ್ಟಲ್ ಮಾಡ್ಯಾರಂತ..... ಲಗ್ನ ಆಗಲಾರ್ದ ರೈತರಿಗಿ ಲಗ್ನಾ ಮಾಡ್ಕೊಳ್ಳಕ್ಕ ಅದರಾಗ ಎಲ್ಲಾ ಮಾಹಿತಿ ತುಂಬಬೇಕು,... ಲಗ್ನಾ ಮಾಡಸ್ತಾರಂತಪೋ! ಹೊಡಿರಿ ಚಾನ್ಸ್' ಎಂದ ಯಬರೇಶಿ
'ಅಂದ್ರs ನಮ್ಮ ಶೌರಿಗಿ ಹೊಡಿತು ಲಾಟ್ರಿ' ಅಂದ ಕಾಕಾ
'ಏ ಇಲ್ಲ ಕಾಕಾ ಇದು ಉತ್ತರ ಕನ್ನಡ ಜಿಲ್ಲೆಯವರಿಗಿ ಮಾತ್ರ ಐತಿ' ಎಂದ ಯಬರೇಶಿ
'ಛೇ ಛೇ.... ಹಿಂಗಾಗಬಾರದಿತ್ತು ಅಂತ ಎಲ್ಲಾ ಲೊಚಗುಟ್ಟಿದ್ರು! ..... 'ಇನ್ನಾ ಇವುಂದು ಪುರಾಣ ಕೇಳೂದ ಮುಗ್ದಿಲ್ಲ ತಗೋ' ಎಂದಳು ರಾಶಿ
ಎಲ್ಲರೂ ನಕ್ಕರು.
'ನಾ ಯಾರಿಗೂ ಹೆದರೂ ಮಗಾ ಅಲ್ಲಾ!' ಅಂತ ಶೌರಿ ಬಂಡೆನ ಸ್ಟೈಲ್ದಾಗ ಹೇಳಿ ಹೊಂಟ!
- ಶ್ರೀನಿವಾಸ ಜಾಲವಾದಿ, ಸುರಪುರ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ