ಮತ್ತೊಬ್ಬ ಕೇಜ್ರಿವಾಲ್ ಆಗದಿರಿ: ಛಲವಾದಿ ನಾರಾಯಣಸ್ವಾಮಿ

Upayuktha
0

ಬೀದಿರಂಪ ಬಿಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಲು ಸಿಎಂಗೆ ಸಲಹೆ




ಬೆಂಗಳೂರು: ಸಿದ್ದರಾಮಯ್ಯನವರು ಮತ್ತೊಬ್ಬ ಕೇಜ್ರಿವಾಲ್ ಆಗಲು ಹೋಗದಿರಲಿ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಲಹೆ ನೀಡಿದರು.


ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಒಬ್ಬರು ಕೇಜ್ರಿವಾಲ್ ಅನ್ನು ನಾವು ಈಗಾಗಲೇ ನೋಡಿದ್ದೇವೆ. ಹಲವು ತಿಂಗಳಿಂದ ಅವರು ಜೈಲಿನಿಂದ ರಾಜ್ಯ ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ತಿಳಿಸಿದರು. ಇಂಥ ವ್ಯವಸ್ಥೆ ನಮ್ಮಲ್ಲಿ ಇರಬಾರದು ಎಂದು ನುಡಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಭ್ರಷ್ಟಾಚಾರ ಬಯಲಾಗಿದೆ. ದಲಿತರ ಭೂಮಿಗೆ ಮುಖ್ಯಮಂತ್ರಿಗಳ ಕುಟುಂಬಕ್ಕೆ ಪರಿಹಾರ ಕೊಡುವುದು ಈ ದೇಶದಲ್ಲಿ ಮೊದಲನೇ ಸಾರಿ ಎಂದು ನನಗೆ ಅನಿಸಿದೆ. ಭೂಮಿಯೇ ನಿಮ್ಮದಲ್ಲ; 14 ನಿವೇಶನ ನಿಮಗೆ ಬೇಕೇ? ಇದರಿಂದ ನಿಮ್ಮ ಅಂತರಂಗ ಎಷ್ಟು ಭ್ರಷ್ಟಾಚಾರದಿಂದ ಕೂಡಿದೆ ಎಂಬುದು ತಿಳಿಯುವಂತಾಗಿದೆ. ದಲಿತರಿಗೆ ಮೀಸಲಿಟ್ಟ 25 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಗ್ಯಾರಂಟಿಗಳಿಗೆ ಕೊಟ್ಟಿದ್ದೀರಲ್ಲವೇ? ಇನ್ನೊಂದೆಡೆ ದಲಿತರ ಹಣವನ್ನು ದಲಿತರಿಗೇ ಕೊಡುವುದಾಗಿ ಭಾಷಣ ಮಾಡುತ್ತೀರಲ್ಲವೇ? ದಲಿತರ ಹಣವನ್ನು ಬೇರೆಯವರಿಗೆ ಕೊಡಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.


ರೈಲ್ವೆ ಖಾತೆಯನ್ನು ಹೊಂದಿದ್ದ ಲಾಲ್ ಬಹದ್ದೂರ್ ಶಾಸ್ತಿçಯವರು ಎಲ್ಲೋ ರೈಲು ಅವಘಡದ ಸುದ್ದಿ ಕೇಳಿ ರಾಜೀನಾಮೆ ಕೊಟ್ಟಿದ್ದರು. ಅಂಥ ನಾಯಕರಿದ್ದ ಈ ದೇಶದಲ್ಲಿ ನೀವೇನಾದರೂ ಮಾಡಿ ನಾನು ಜೈಲಿಂದಲೇ ರಾಜ್ಯವಾಳುವೆ ಎಂಬ ಪರಿಸ್ಥಿತಿಗೆ ಹೋಗಬೇಕೇ ಎಂದು ಕೇಳಿದರು.


ಕರ್ನಾಟಕವು ನಾವು ಹಿಂದೆ ತಿಳಿಸಿದ್ದಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡಿನ ಎಟಿಎಂ ಆಗಿದೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಒಂದೇ ಒಂದು ಕಾಮಗಾರಿಯ ಟೇಪ್ ಕಟ್ ಮಾಡಿಲ್ಲ. ಟೇಪ್ ಹಾಳಾಗದಂತೆ, ಕತ್ತರಿಗೂ ರಜೆ ಕೊಟ್ಟಿದ್ದಾರೆ ಎಂದು ಟೀಕಿಸಿದರು.


ರಾಜ್ಯ ಸರಕಾರವು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರಣಿ ಭ್ರಷ್ಟಾಚಾರಗಳು ಹೊರಕ್ಕೆ ಬರುತ್ತಿವೆ. ವಿಪಕ್ಷವಾಗಿ ಬಿಜೆಪಿ ಸೆಟೆದು ನಿಂತು ಈ ಸರಕಾರದ ಭ್ರಷ್ಟಾಚಾರವನ್ನು ಹೊರಕ್ಕೆ ತರುವ ಕೆಲಸ ಮಾಡುತ್ತಿದೆ. ಇವರ ಭ್ರಷ್ಟಾಚಾರ ತಿಳಿಸಲು ಬೆಂಗಳೂರು- ಮೈಸೂರು ಪಾದಯಾತ್ರೆ ನಡೆಸಿದ್ದೇವೆ. ಈಗ ನ್ಯಾಯಾಲಯಕ್ಕೂ ಹೋಗಲಿದ್ದೇವೆ. ನಮ್ಮ ಹೋರಾಟ, ತುಂಬಿದ ಈ ಭ್ರಷ್ಟಾಚಾರವನ್ನು ಮನಗಂಡ ಗವರ್ನರ್ ಅವರು, ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿದ್ದಾರೆ ಎಂದು ವಿವರಿಸಿದರು.


ಇವರು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕೇ ಹೊರತು ಬೀದಿಯಲ್ಲಿ ಹೋರಾಟ ಮಾಡಬಾರದು. ಸಂವಿಧಾನವನ್ನು ಕೈಯಲ್ಲೇ ಹಿಡಿದು ಓಡಾಡುವ ಪಕ್ಷದವರು ನೀವು. ಮಾತೆತ್ತಿದರೆ ಡಾ.ಅಂಬೇಡ್ಕರರ ಕುರಿತು ಭಾಷಣ ಮಾಡುತ್ತೀರಿ. ಪ್ರಜಾಪ್ರಭುತ್ವದ ಕುರಿತು ಹೆಚ್ಚಾಗಿ ಮಾತನಾಡುತ್ತೀರಿ. ಅದರ ಪ್ರಕಾರ ಸಿಎಂ ಅವರು ನಡೆದುಕೊಳ್ಳುತ್ತಾರಾ ಎಂದು ಕೇಳಿದರು.


ಡಾ. ಅಂಬೇಡ್ಕರರ ಕುರಿತು, ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ನೀವು ತಡ ಮಾಡಬಾರದಿತ್ತು. ನಿನ್ನೆಯೇ ರಾಜೀನಾಮೆ ಕೊಡಬೇಕಿತ್ತು. ಒಂದು ದಿನ ತಡವಾಗಿದೆ; ಪರವಾಗಿಲ್ಲ, ಇವತ್ತಾದರೂ ರಾಜೀನಾಮೆ ಕೊಡಿ. ಜನರಿಗೆ ತೊಂದರೆ ಆಗುವ ಬೀದಿ ಹೋರಾಟ, ಬೀದಿರಂಪ ಬಿಟ್ಟು ನ್ಯಾಯಾಲಯದಲ್ಲಿ ನಿಮ್ಮ ಹೋರಾಟ ಮಾಡಿ ಎಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top