ಸಕಲ ಚರಾಚರ ಜೀವರಾಶಿಗಳಿಗೂ ಒಡೆಯನಾದ.ಈ ಭೂಮಿಯ ಮೇಲೆ ಒಂದು ಹುಲ್ಲು ಕಡ್ಡಿ ಅಳುಗಾಡಬೇಕೆಂದರೂ ಅವನ ಆಜ್ಞೆಯೇ ಬೇಕು, ಅವನ ಕಣ್ಣು ತಪ್ಪಿಸಿ ಯಾವುದೂ ನಡೆಯಲಾರದು. ಆತ ಅಗಾಧ ಅಗೋಚರ,ವಿರಾಟರೂಪಿ ಎಲ್ಲವನ್ನು ತಿಳಿದವನು ಸರ್ವವನ್ನು ಗೆದ್ದವನು ಇದೆಲ್ಲದಕ್ಕೂ ಕಾರಣಿಭೂತನಾದ ಆ ಭಗವಂತನು ಕೆಲವು ಬಾರಿ ಭಕ್ತನ ಎದುರು ಸೋಲಬೇಕಾಗುತ್ತದೆ. ಬರಿ ಸೋಲುವುದಷ್ಟೇ ಅಲ್ಲ ಭಕ್ತನ ಮನೆಯ ಆಳಾಗಿ ದುಡಿಯುತ್ತಾನೆ.
ಒಂದು ಬಾರಿ ಗೋರಾ ಕುಂಬಾರನು ಮಣ್ಣು ತುಳಿಯುತ್ತಾ ವಿಠ್ಠಲನ ಧ್ಯಾನದಲ್ಲಿ ಮೈಮರೆತಾಗ ಅವನ ಪುಟ್ಟಮಗು ಆ ಕೆಸರೊಳಗೆ ಬಂದು ಬಿದ್ದಿರುತ್ತದೆ. ಯಾವುದರ ಅರಿವು ಇಲ್ಲದಂತೆ ದೇವ ಭಜನೆಯಲ್ಲಿ ಮೈಮರೆt ಆ ಗೋರಾ ಕುಂಬಾರನು ತನ್ನ ಮಗನನ್ನೇ ತುಳಿದು ಕೊಲ್ಲುತ್ತಾನೆ. ಆಗ ಆತನ ಹೆಂಡತಿ ಮಗನನ್ನು ಕಳೆದುಕೊಂಡ ದುಃಖದಲ್ಲಿ ನನ್ನನ್ನು ಯಾವತ್ತಿಗೂ ಮುಟ್ಟಬೇಡಿ, ಮುಟ್ಟಿದರೆ ವಿಠ್ಠಲನ ಆಣೆಯಾಯಿತು ಎಂದು ವಿಠ್ಠಲನ ಮೇಲೆ ಆಣೆ ಇಡುತ್ತಾಳೆ.
ಆ ಕ್ಷಣದಿಂದ ಗೋರಾ ಕುಂಬಾರನ್ನು ಯಾವತ್ತಿಗೂ ಅವಳ ಹತ್ತಿರವೂ ಹೋಗುವುದಿಲ್ಲ. ಕೆಲವು ದಿನಗಳ ನಂತರ ದುಃಖ ಮರೆಯಾದಾಗ ಹೆಂಡತಿಗೆ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ಗಂಡ ನನ್ನನ್ನು ಮುಟ್ಟದಿದ್ದರೇ ನಮ್ಮ ವಂಶ ಬೆಳೆಯದು ಎಂದುಕೊಂಡು ತಾನೇ ಒಂದು ದಿನ ಗೋರಾಕುಂಬಾರ ಮಲಗಿದಾಗ ಆತನ ಪಕ್ಕದಲ್ಲಿ ಮಲಗಿದಳು ನಿದ್ದೆಯಲ್ಲಿ ಆತನ ಕೈ ಅವಳನ್ನು ಸ್ಪರ್ಶ ಮಾಡಿದವು. ಆಗ ಗೋರನು ಎಚ್ಚರಗೊಂಡು ನೋಡಿದಾಗ ವಿಠ್ಠಲನ ಆಣೆ ಮೀರಿ ತನ್ನ ಕೈಗಳು ಪಾಪ ಮಾಡಿವೆ. ಈ ಪಾಪದ ಕೈಗಳೇ ನನಗೆ ಬೇಡ ಎಂದು ಎರಡು ಕೈಗಳನ್ನು ಕತ್ತರಿಸಿ ಕೊಂಡಾಗ ಅವನ ಸೇವೆ ಮಾಡಲು ಸಾಕ್ಷಾತ್ ಆ ವಿಠ್ಠಲನೆ ಮನೆಯ ಆಳಿನ ರೂಪದಲ್ಲಿ ಬಂದು ಆತನ ಕಾಯಕ ಮುಂದುವರೆಸಿ ದೇಹದ ಆರೈಕೆ ಮಾಡಿದ. ಭಗವಂತನೇ ಭಕ್ತನ ಸೇವೆಗೆ ಬರುತ್ತಾನೆ ಎಂದರೆ ಭಕ್ತನ ಶಕ್ತಿ ಎಷ್ಟು ಅಗಾಧವಾದದ್ದು ಎನ್ನುವುದು ತಿಳಿಯುತ್ತದೆ.
ಹಾಗೆ ಹರಿಶ್ಚಂದ್ರ ಮಹಾರಾಜನ ಬಾಯಲ್ಲಿ ಸುಳ್ಳು ಹೇಳಿಸಿ ಸೋಲಿಸಬೇಕೆಂದು ಆ ವಿಶ್ವಾಮಿತ್ರನು ಅನೇಕ ಪ್ರಯತ್ನಗಳನ್ನು ಮಾಡುತ್ತಾನೆ. ಆದರೆ ತನ್ನೆಲ್ಲ ಪ್ರಯತ್ನಗಳಲ್ಲೂ ಹರಿಶ್ಚಂದ್ರ ಮಹಾರಾಜನ ಎದುರು ಸೋತು ತಲೆಬಾಗುತ್ತಾನೆ. ಇದರಿಂದ ನಮಗೆ ಅರಿವಾಗುತ್ತದೆ ನಾವು ಭಗವಂತನಿಗೆ ಸಮರ್ಪಿಸುವ ಕಾಣಿಕೆಗಳಿಗಿಂತ ನಮ್ಮ ಶ್ರದ್ದೆಯ ಭಕ್ತಿಯೇ ಅವನಿಗೆ ಮುಖ್ಯವಾಗಿರುತ್ತದೆ. ಇಂದು ನಾವುಗಳು ತೋರಿಕೆಗಾಗಿ ಭಕ್ತಿ ಮಾಡುತ್ತೇವೆ. ಮನದೊಳಗೆ ಒಂದಿಷ್ಟು ಶುದ್ಧತೆಯ ಭಾವ ಇಲ್ಲ.ಅನ್ಯಮಾರ್ಗದಿಂದ ಗಳಿಸಿದ ಒಂದಿಷ್ಟು ಸಂಪತ್ತನ್ನು ದೇವಸ್ಥಾನಕ್ಕೆ ಕೊಟ್ಟು ದೇವರ ಕರುಣೆ ನಮಗಾಗಲಿ ಎಂದರೆ ಅದು ಸಾಧ್ಯವಾಗದ ಮಾತು. ನಾವು ಆತನಿಗೆ ಭ್ರಷ್ಟಮಾರ್ಗದಲ್ಲಿ ಗಳಿಸಿದ ಬಂಗಾರದ ಕಿರೀಟ ತೊಡಸಿದರೂ ಆತನಿಗೆ ಸಂತೋಷವಾಗದು. ಬದಲಿಗೆ ಶುದ್ಧ ಕಾಯಕದಿಂದ ಭಕ್ತಿಯನ್ನು ಮನದೊಳಗೆ ತುಂಬಿಕೊಂಡು ನೀರಪೇಕ್ಷ ಭಾವದಲಿ ಒಂದು ದೀಪ ಬೆಳಗಿದರು ಸಾಕು ಆತ ಸಂತೃಪ್ತನಾಗುವನು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ