ನ ಚೋರಹಾರ್ಯಂ ನ ಚ ರಾಜಹಾರ್ಯo
ನ ಭ್ರಾತೃ ಭಾಜ್ಯಂ ನ ಚ ಭಾರಕಾರಿ
ವ್ಯಯೇ ಕೃತೇ ವರ್ಧತೆ ಏವ ನಿತ್ಯಂ
ವಿದ್ಯಾ ಧನಂ ಸರ್ವಧನಾತ್ ಪ್ರಧಾನಂ
ಸಂಸ್ಕೃತದ ಒಂದು ಶ್ಲೋಕ ಈ ರೀತಿ ಹೇಳುತ್ತದೆ ಯಾರೂ ಕಳ್ಳತನ ಮಾಡಲು ಸಾಧ್ಯವಿಲ್ಲದ, ಯಾವ ರಾಜನು ಕಸಿದುಕೊಳ್ಳಲಾಗದ, ಅಣ್ಣ ತಮ್ಮಂದಿರು ಪಾಲು ಬೇಡಲಾಗದ, ಸರಕಾರಗಳಿಗೂ ತೆರಿಗೆ ವಿಧಿಸುವುದು ಅಸಾಧ್ಯವಾದ ಹಾಗೂ ನಾವುಗಳಿಸುವ ಎಲ್ಲ ಸಂಪತ್ತಿಗೆ ಪ್ರಧಾನವಾಗಿರುವ ಮಹಾಸಂಪತ್ತು ಎಂದರೆ ಅದು ವಿದ್ಯೆ. ಜ್ಞಾನ ಸಂಪತ್ತಿಗಿಂತ ಮತ್ತೊಂದು ದೊಡ್ಡ ಸಂಪತ್ತು ಇಲ್ಲ ಅದು ಮಾತ್ರ ಯಾವಾಗಲೂ ನಮ್ಮ ಜೊತೆಗೇ ಶಾಶ್ವತವಾಗಿರುವುದು. ಒಬ್ಬ ರಾಜ ಜಗತ್ತನ್ನು ಆಳಬೇಕೆಂದು ನಿರ್ಧರಿಸಿದರೆ ಅವನಿಗೆ ಬಲಾಢ್ಯವಾದ ಸೈನ್ಯ ಬೇಕು ಆದರೂ ಅದು ಕ್ಷಣಿಕ ಆಳ್ವಿಕೆ.
ಆದರೆ ಒಬ್ಬ ಯೋಗಿ ತನ್ನ ಜ್ಞಾನದ ಬಲದಿಂದ ಕ್ಷಣಮಾತ್ರದಲ್ಲೇ ಜಗತ್ತನ್ನು ತನ್ನತ್ತ ಸೆಳೆಯಬಲ್ಲನು ಆತನ ಜ್ಞಾನ ಪ್ರವಾಹಕ್ಕೆ ಸಿಲುಕಿದ ಜಗತ್ತು ಅನೇಕ ಶತಮಾನಗಳ ಕಾಲ ಅದರಲ್ಲಿ ಮುಳುಗಿ ಹೋಗುವುದು . ಒಮ್ಮೆ ಜನಕ ಮಹಾರಾಜನು ಯಾಜ್ಞವಲ್ಕರಿ ಋಷಿಗಳ ಆಶ್ರಮಕ್ಕೆ ಬಂದು ಆತ್ಮಜ್ಞಾನದ ಸಂದೇಶಗಳನ್ನು ಕೇಳುತ್ತಿರುವಾಗ ರಾಜ್ಯದ ದೂತಸೇವಕ ಬಂದು ಮಹಾರಾಜರೇ ಮಿಥಿಲಾ ನಗರದಲ್ಲಿರುವ ಅರಮನೆಗೆ ಬೆಂಕಿ ಬಿದ್ದಿದೆ ಎಂದಾಗ ಎಲ್ಲ ಶಿಷ್ಯರು ಎದ್ದು ಹೊರಟರು ಆದರೆ ಜನಕ ಮಹಾರಾಜ ಮಾತ್ರ ಅಲ್ಲೇ ಕುಳಿತ ಆಗ ಒಬ್ಬ ಸೇವಕ ಕೇಳುತ್ತಾನೆ ಮಹಾರಾಜರೇ ನೀವು ಕಟ್ಟಿದ ಸುಂದರ ಅರಮನೆಗೆ ಬೆಂಕಿ ಬಿದ್ದರೂ ನೀವು ಕುಳಿತಿರುವಿರಲ್ಲ ಎಂದಾಗ ಜನಕ ಮಹಾರಾಜರು ಹೇಳುತ್ತಾರೆ ಆ ಅರಮನೆ ಇಂದಲ್ಲ ನಾಳೆ ನಾಶವಾಗುವ ಸಂಪತ್ತು,
ಆದರೆ ಈಗ ಋಷಿಗಳಿಂದ ಪಡೆಯುತ್ತಿರುವ ಆತ್ಮ ಜ್ಞಾನದ ಸಂಪತ್ತು ಯಾವತ್ತಿಗೂ ನಾಶವಾಗಲಾರದು ಅದು ಸದಾಕಾಲ ನನಗೆ ಆನಂದವನ್ನೇ ನೀಡಬಲ್ಲ ಸಂಪತ್ತು ಈ ಹೊರಗಿನ ಸಂಪತ್ತು ಉರಿದು ಹೋದಾಗ ದುಃಖವಾಗುತ್ತದೆ ಆದರೆ ಈ ಒಳಗಿರುವ ಜ್ಞಾನ ಸಂಪತ್ತು ಯಾವತ್ತಿಗೂ ಉರಿಯಲಾರದ ಕಡಿಮೆಯಾಗಲಾರದ ನನ್ನನ್ನು ಸುಖಿಯನ್ನಾಗಿ ಇಡುವ ಸರ್ವ ಶ್ರೇಷ್ಠ ಸಂಪತ್ತು ಎಂದು ಜನಕ ಮಹಾರಾಜರು ನುಡಿದರು.
ಅವರು ಹೇಳಿದ ಮಾತು ಬಹು ಸತ್ಯವಾದದ್ದು. ಎಷ್ಟೇ ಆಸ್ತಿವಂತನಾಗಿದ್ದರೂ ಜ್ಞಾನಿಯ ಎದುರು ತಲೆಬಾಗಲೇಬೇಕು ಮತ್ತು ಪರಿಪೂರ್ಣ ಜ್ಞಾನವು ಯಾವತ್ತಿಗೂ ಅಹಂಕಾರವನ್ನು ಹುಟ್ಟುಹಾಕಲಾರದು. ಅಲ್ಪಜ್ಞಾನಿಯೇ ಮಹಾಗರ್ವಿಯಾಗುವನು ಜ್ಞಾನಿಯ ಇನ್ನೊಂದು ವಿಶೇಷತೆ ಎಂದರೆ ಯಾವತ್ತಿಗೂ ತನ್ನದು ಮಾತ್ರ ಸತ್ಯ ಇತರರು ಹೇಳುತ್ತಿರುವುದೆಲ್ಲವೂ ಸುಳ್ಳಾಗಿದೆ ಎಂದು ವಿತಂಡವಾದವನ್ನು ಮಾಡಲಾರ. ಇಲ್ಲಿ ಜ್ಞಾನ, ವಿದ್ಯೆ ಎಂದರೆ ನಾವುಗಳಿಸುವ ಪದವಿ ಪುರಸ್ಕಾರಗಳಲ್ಲ. ನಮ್ಮ ಸ್ವಸ್ವರೂಪಾ ಅವಸ್ಥೆಯನ್ನು ಅರಿತು ಆತ್ಮಜ್ಞಾನಿಗಳಾಗಿ ಬದುಕುವುದನ್ನು ಜ್ಞಾನವೆನ್ನುತ್ತಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ