ಉಜಿರೆ: ಹಿಂದಿನ ಕಾಲದಲ್ಲಿ ಜನರು ಅನಕ್ಷರಸ್ಥರಾಗಿದ್ದರೂ ಪರಸ್ಪರ ನೋವು- ನಲಿವು, ಕಷ್ಟ – ಸುಖ ಹಂಚಿಕೊಂಡು, ಸ್ಥಳೀಯವಾಗಿ ದೊರೆಯುವ ಆಹಾರ ಪದಾರ್ಥ ಬಳಸುತ್ತ, ಸೀಮಿತ ಸೌಕರ್ಯಗಳ ನಡುವೆಯೂ ಸುಖವಾಗಿ ಬದುಕುತ್ತಿದ್ದರು. ಆದರೆ, ಪ್ರಸ್ತುತ ಜನಜೀವನವು ಹೋಲಿಕೆ, ಸ್ಪರ್ಧೆ, ಅಸೂಯೆಯಿಂದ ಕೂಡಿ ವ್ಯತಿರಿಕ್ತವಾಗಿದೆ ಎಂದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಹೇಳಿದರು.
ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಇತಿಹಾಸ ವಿಭಾಗ ಹಾಗೂ ತುಳು ಸಂಘದ ವತಿಯಿಂದ ಇಂದು (ಆ.10) ಆಯೋಜಿಸಿದ್ದ ‘ತುಳುವೆರ ಆಟಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ನಮ್ಮ ಪೂರ್ವಜರಿಗೆ ಬರೆಯಲು ಓದಲು ಬರದಿದ್ದ ಕಾರಣಕ್ಕೆ ಅವರನ್ನು ಅಜ್ಞಾನಿಗಳು ಎಂದು ಭಾವಿಸಬಾರದು. ಅನ್ನಕ್ಕೆ ಕಷ್ಟವಿದ್ದ ಆಟಿ ತಿಂಗಳಲ್ಲಿ ಬದುಕುವ ಅನಿವಾರ್ಯತೆಯಿಂದ ಅವರು ಆಹಾರ ಪದಾರ್ಥಗಳನ್ನು ಸಂಶೋಧಿಸಿದರು. ಆದರೆ ಈಗ ಜನರು ಅಕ್ಷರಸ್ಥರಾದರೂ ಪರಸ್ಪರ ಬಾಂಧವ್ಯವಿಲ್ಲ. ಹಣದ ಹಿಂದೆ ಓಡುವ, ಒಬ್ಬರನ್ನೊಬ್ಬರು ಕಂಡರೆ ಆಗದು ಎನ್ನುವ ಪರಿಸ್ಥಿತಿ ಇದೆ” ಎಂದು ಅವರು ವಿಶ್ಲೇಷಿಸಿದರು.
“ಮರಿ ತುಚ್ಚಿಂಡ ಮರ್ದುಂಡು, ಅರಿ ತುಚ್ಚಿಂಡ ಮರ್ದಿಜ್ಜಿ (ವಿಷ ಜಂತು ಕಚ್ಚಿದರೆ ಔಷಧಿ ಇದೆ ಆದರೆ ಆಹಾರವಿಲ್ಲದೆ ಜೀವಿಸಲು ಸಾಧ್ಯವಿಲ್ಲ.) ಪ್ರಸ್ತುತ ಆಹಾರವೇ ವಿಷಮಯವಾಗಿದೆ. ಮಕ್ಕಳಿಗೆ ಅನ್ನದ ಬೆಲೆ ತಿಳಿದಿಲ್ಲ. ಮನೋರಂಜನೆಯ ರಾಶಿಯಲ್ಲಿ ನಾವಿದ್ದೇವೆ” ಎಂದು ಅವರು ವಿಷಾದಿಸಿದರು.
“ಹಿಂದೆ ಮನೋರಂಜನೆಗೆಂದು ಯಾವುದೇ ಮಾಧ್ಯಮಗಳಿರಲಿಲ್ಲ. ಅದರಲ್ಲೂ ಆಟಿಯ ಮಳೆಗೆ ಮನೆಯಿಂದ ಹೊರಬರಲು ಆಗುತ್ತಿರಲಿಲ್ಲ. ರೋಗ ರುಜಿನಗಳು ಜಾಸ್ತಿ ಇದ್ದವು. ಆಗ ಧೈರ್ಯವೆಂಬಂತೆ ಆಟಿ ಕಳೆಂಜ ಇದ್ದಿತ್ತು. ಆಟಿ ಕಳೆಂಜ ಶಿವನ ಪ್ರತಿರೂಪ ಎಂದು ನಂಬುತ್ತಾರೆ. ಆಟಿ ಕಳೆಂಜನ ವೇಷಭೂಷಣ ತುಂಬಾ ಸರಳ ಮತ್ತು ಅರ್ಥಪೂರ್ಣವಾಗಿದೆ. ಆಟಿ ಕಳೆಂಜ ಮನೆಗೆ ಬಂದರೆ ಅವರು ರೋಗ ರುಜಿನ, ಮನೆಗೆ ಹಿಡಿದಿದ್ದ ಕೆಟ್ಟ ಶಕ್ತಿಯನ್ನು ಓಡಿಸುತ್ತಾರೆ ಎಂಬ ನಂಬಿಕೆ ಇದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, "ಆಧುನಿಕ ಜನತೆಗೆ ಆಟಿ ಈಗ ಆಡಂಬರವಾಗಿದೆ. ಪ್ರತಿನಿತ್ಯವು ಹಬ್ಬದ ರೀತಿ ಮಾಲ್, ಹೋಟೆಲ್ ಹೀಗೆ ದಿನಚರಿಯಾಗಿದೆ. ಆದರೆ ನಮ್ಮ ಹಿರಿಯರಿಗೆ ಆಟಿ ಎಂದರೆ ಕಷ್ಟದ ತಿಂಗಳು. ಅವರ ಬಳಿ ಈ ಸಂದರ್ಭದಲ್ಲಿ ಅಷ್ಟು ಹಣವೂ ಇರುತ್ತಿರಲಿಲ್ಲ. ಹಾಗಾಗಿ ಈ ಎಲ್ಲಾ ವಿಚಾರಗಳನ್ನು ಯುವ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಉಪಯುಕ್ತ" ಎಂದರು.
ಕೊಯ್ಯೂರಿನ ಅಮ್ಮಿ ನಲಿಕೆ ಮತ್ತು ಬಳಗದ ಆಟಿ ಕಳೆಂಜ ವೇಷ ವಿಶೇಷವಾಗಿತ್ತು. ತುಳು ಸಂಸ್ಕೃತಿಯ ಪುರಾತನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಇತಿಹಾಸ ವಿಭಾಗದ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ದುರ್ಗಾ ಪ್ರಸನ್ನ ಹಾಗೂ ಮಾನಸ ಉಪಸ್ಥಿತರಿದ್ದರು.
ಇತಿಹಾಸ ವಿಭಾಗ ಮುಖ್ಯಸ್ಥ ಡಾ. ಸನ್ಮತಿ ಕುಮಾರ್ ಸ್ವಾಗತಿಸಿದರು. ಉಪನ್ಯಾಸಕಿ ಅಭಿಜ್ಞಾ ಉಪಾಧ್ಯಾಯ ವಂದಿಸಿದರು. ವಿದ್ಯಾರ್ಥಿಗಳಾದ ಶ್ರದ್ಧಾ ಮತ್ತು ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ