ಬಾಂಗ್ಲಾದೇಶದ ರಾಜಕೀಯವೇ ಒಂದು ವಿಚಿತ್ರವಾದ ಬೆಳವಣಿಗೆ. 1971ರಲ್ಲಿ ಪಾಕಿಸ್ತಾನದಿಂದ ಬೇರ್ಪಟ್ಟು ಒಂದು ಸ್ವಾತಂತ್ರ್ಯವಾದ ಸಂದರ್ಭದಲ್ಲಿ ಕೂಡ ಇದರ ಭಾರವನ್ನು ತಕ್ಕಮಟ್ಟಿಗೆ ಭಾರತವು ಹೊರ ಬೇಕಾಯಿತು. ಭಾರತದ ಜೊತೆ ಹೆಚ್ಚು ಗಡಿಯನ್ನು ಹಂಚಿಕೊಂಡಿರುವ ದೇಶವೆಂದರೆ ಅದು ಬಾಂಗ್ಲಾದೇಶ ಅನ್ನುವುದರಲ್ಲಿ ಎರಡು ಮಾತಿಲ್ಲ. ಬಾಂಗ್ಲಾದೇಶದ ನಿರಾಶ್ರಿತರಿಗೆ ಆಸರೆ ಕೊಡ ಬೇಕಾದ ಪರಿಸ್ಥಿತಿ ಅಂದು ಭಾರತಕ್ಕೂ ಬಂದಿತ್ತು. ಭಾರತವನ್ನು ಮುಂದೆ ಕೂಡಾ ಕಾಡಿದ್ದು ಇದೇ ವಲಸಿಗರ ನುಸುಳುವಿಕೆಯ ಸಮಸ್ಯೆ ಅಂದರೂ ತಪ್ಪಾಗಲಾರದು. ಅಂತೂ ಬಾಂಗ್ಲಾದೇಶ ಸ್ಥಾಪನೆಯಿಂದ ಪಾಕಿಸ್ತಾನದ ಶಕ್ತಿ ಬಹಳಷ್ಟು ಕುಂದಿದಂತೂ ನಿಜ. ಈ ವಿಭಜನೆಯ ಹಿಂದೆ ಭಾರತದ ಪಾತ್ರವಿತ್ತು ಅನ್ನುವ ಅಪವಾದವನ್ನು ಪಾಕಿಸ್ತಾನ ಭಾರತದ ಮೇಲೆ ಹಾಕಿದೆ.
ಅದು ಏನೇ ಆಗಲಿ ಬಾಂಗ್ಲಾದೇಶ ಒಂದು ಸರ್ವ ಸ್ವತಂತ್ರ ದೇಶವಾಗಿ ಸ್ವಲ್ಪ ಕಾಲವಾದರೂ ನೆಮ್ಮದಿ ಕಾಣುವ ಬದುಕು ಬಂದಿಂತೂ ಸತ್ಯ.ಆದರೆ ಈಗ ಇದೇ ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಅರಾಜಕತೆ ಬಂದಿರುವುದು ಕೂಡಾ ಭಾರತದ ಮೇಲೆ ಇನ್ನೊಂದಿಷ್ಟು ಸವಾಲು ತಂದು ಹಾಕಿರುವುದಂತೂ ಸತ್ಯ.
ಬಾಂಗ್ಲಾದೇಶದ ರಾಜಕೀಯ ಇತಿಹಾಸ ನೇೂಡಿದಾಗ ಅದೊಂದು ವಿಚಿತ್ರವಾದ ವ್ಯವಸ್ಥೆ ಅನ್ನುವುದು ಎದ್ದು ಕಾಣುವಂತಿದೆ. ಪಾಕಿಸ್ತಾನದ ರಾಜಕೀಯ ಡೊಂಬರಾಟಕ್ಕೂ ಬಾಂಗ್ಲಾ ದೇಶದ ರಾಜಕೀಯಕ್ಕೂ ಹೆಚ್ಚೇನೂ ವ್ಯತ್ಯಾಸ ಕಾಣುವುದಿಲ್ಲ. ಯಾಕೆಂದರೆ ಎರಡು ದೇಶದಲ್ಲಿ ಹರಿಯುವ ರಕ್ತದ ಗುಣ ಒಂದೇ ಅನ್ನುವ ಕಾರಣವಿರ ಬಹುದೊ ಏನೊ ಗೊತ್ತಿಲ್ಲ. ಹೇಳಿಕೊಳ್ಳಲು ಎರಡು ದೇಶಗಳಲ್ಲಿ ಪ್ರಜಾಪ್ರಭುತ್ವ ಸಂವಿಧಾನ ಎಲ್ಲವೂ ಇದೆ. ಆದರೆ ಅಧಿಕಾರ ಬದಲಾಗಬೇಕಾದರೆ ಕೊಲೆ ಸುಲಿಗೆ ದೇಶ ಭ್ರಷ್ಟರಾಗಿ ಓಡಿ ಹೇೂಗುವ ಪರಿಸ್ಥಿತಿ ಮತ್ತೆ ಮಿಲಿಟರಿ ಆಡಳಿತ. ಇಂತಹ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿಯೇ ಮತ್ತೊಂದು ಸರ್ಕಾರ ಸ್ಥಾಪನೆ ಮಾಡ ಬೇಕಾದ ಪರಿಸ್ಥಿತಿ ಕಾಣುವಂತಾಗಿದೆ.
ಇದೇ ಬಾಂಗ್ಲಾದೇಶವನ್ನು ಸುಮಾರು ಮೂರು ದಶಕಗಳ ಕಾಲ ಆಡಳಿತ ನಡೆಸಿದ್ದು ಇಬ್ಬರು ಪ್ರಮುಖ ಮಹಿಳಾ ಮಣಿಗಳು ಅನ್ನುವುದನ್ನು ನಾವು ಪ್ರಮುಖವಾಗಿ ಗಮನಿಸಬಹುದು. ಇಂದಿಗೂ ಬಾಂಗ್ಲಾದೇಶದಲ್ಲಿ ಒಂದು ಪ್ರಚಲಿತವಾದ ಮಾತಿದೆ. "Batting of Begums" ಬೇಗಂ ಅಂದರೆ "ಹೈ ಪ್ರೊಫೈಲ್ ಮುಸ್ಲಿಂ ಲೇಡಿ" ಎಂದರ್ಥ. ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದವರು ಬೇಗಂ ಖಲಿದಾ ಜಿಯಾ (1991) ಈಕೆ ಪ್ರಧಾನಿಯಾಗಿದ್ದು ಕೂಡಾ ಇವರ ಪತಿ ಜಿಯಾವುರ್ ರೆಹಮಾನ್ ಅಧ್ಯಕ್ಷರಾಗಿದ್ದವರು. ಇವರ ಹತ್ಯೆಯ ಅನಂತರ ಇವರೇ 1978ರಲ್ಲಿ ಕಟ್ಟಿದ ಬಾಂಗ್ಲಾ ರಾಷ್ಟ್ರೀಯ ಪಕ್ಷದಿಂದ (ಬಿ.ಎನ್.ಪಿ). ಅದೇ ರೀತಿಯಲ್ಲಿ ಈಗ 15 ವರುಷಗಳ ಕಾಲ ದೇಶದ ಪ್ರಧಾನಿಯಾಗಿದ್ದು ಹುದ್ದೆ ತೊರೆದು ದೇಶದಿಂದ ಪಲಾಯನಗೈದ ಶೇಖ್ ಹಸೀನಾ ಕೂಡಾ ಇವರ ತಂದೆ ಮುಜಿಬುರ್ ರೆಹಮಾನ್ ದೇಶದ ಮೊದಲ ಅಧ್ಯಕ್ಷರಾಗಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ರಾಷ್ಟ್ರಪಿತ ಅನ್ನಿಸಿಕೊಂಡವರ ಮಗಳು. ಇದೇ ಹಸೀನಾ ಕೂಡಾ ಅವರ ತಂದೆಯ ಹತ್ಯೆಯ ಅನಂತರ (1975) ಅವರೇ ಸ್ಥಾಪನೆ ಮಾಡಿದ ರಾಜಕೀಯ ಪಕ್ಷ ಆವಾಮಿ ಲೀಗ್ ಮೂಲಕ 1996ರಲ್ಲಿ ಪ್ರಧಾನಿ ಪಟ್ಟದ ಅಧಿಕಾರಕ್ಕೆ ಏರಿದವರು.
ಅಂತೂ ಬಾಂಗ್ಲಾದೇಶದಲ್ಲಿ ಕೂಡಾ ಅಧಿಕಾರ ಹಸ್ತಾಂತರ ರಕ್ತಪಾತದಿಂದಲೇ ನಡೆದಿದೆ ಬಿಟ್ಟರೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿಲ್ಲ ಅನ್ನುವುದನ್ನು ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿದೆ.
ಈ ಹಸೀನಾ ತಮ್ಮ 15 ವರ್ಷಗಳ ಕಾಲದ ಆಡಳಿತದಲ್ಲಿ ಸಾಕಷ್ಟು ಆಥಿ೯ಕ ಸುಧಾರಣೆ ತಂದಿದ್ದಾರೆ ಅನ್ನುವುದು ಸತ್ಯ. ಭಾರತದ ಜೊತೆ ಕೂಡಾ ಉತ್ತಮ ಭಾಂದವ್ಯ ಇಟ್ಟು ಕೊಂಡಿದ್ದರು ಅನ್ನುವುದು ನಿಜ. ನೀರು ಹಂಚಿಕೆಯ ಸಮಸ್ಯೆ ಗ್ರಾಮಗಳ ವಿಲೀನ ಪ್ರಕಿಯೇ ನಿರಾಶ್ರಿತರ ಸಮಸ್ಯೆ ಇತ್ಯಾದಿ. ಈ ಉತ್ತಮ ಸಂಬಂಧವನ್ನು ಕಂಡು ಹೊಟ್ಥೆ ಉರಿಸಿಕೊಂಡವರಲ್ಲಿ ದೇಶದ ಒಳಗಿನ ಮೂಲ ಭೂತವಾದಿಗಳು ಇದ್ದಾರೆ ಇದರ ಜೊತೆಗೆ ಪಾಕಿಸ್ತಾನ ಮತ್ತು ಚೀನಾ ಕೂಡಾ ಸೇರಿಕೊಂಡಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.
ವಿಶ್ವದ ದೊಡ್ಡಣ್ಣ ಅನ್ನಿಸಿಕೊಂಡ ಅಮೆರಿಕದವರಿಗೂ ಹಸೀನಾರವರನ್ನು ಕಂಡರೆ ಅಷ್ಟಕ್ಕಟ್ಟೆ. ಇದಕ್ಕೂ ಒಂದು ಕಾರಣವಿದೆ. ಈ ಅಮರಿಕದವರಿಗೆ ಬೇರೆಯವರ ಮನೆಯ ಬಾಗಿಲಲ್ಲಿ ತಳವೂರುವ ಅಭ್ಯಾಸ ಆದರೆ ಈ ಹಸೀನಾ ಅದಕ್ಕೆ ಅವಕಾಶ ಮಾಡಿಕೊಡಲೇ ಇಲ್ಲ. ಹಾಗಾಗಿ ಈ ಅಮ್ಮನ ಮೇಲೆ ಈ ದೊಡ್ಡಣ್ಣನಿಗೆ ಸ್ವಲ್ಪ ಮನಸ್ತಾಪ. ಹಾಗಾಗಿಯೇ ಈ ಅಮ್ಮನಿಗೆ ಬ್ರಿಟನ್ ಗೆ ಹೇೂಗುವ ದಾರಿಗೆ ಅಡ್ಡಗಾಲು ಹಾಕುವ ಸಾಧ್ಯತೆಯೂ ಇದೆ.
ಹಸೀನಾ ರವರು ತಮ್ಮ ಸುದೀರ್ಘವಾದ ಆಡಳಿತದ ಕಾಲದಲ್ಲಿ ಭ್ರಷ್ಟಾಚಾರ ಸ್ವಜನ ಪಕ್ಷಪಾತ ವಿಪಕ್ಷದವರನ್ನು ಅನ್ಯಾಯದ ರೀತಿಯಲ್ಲಿ ತುಳಿದಿದ್ದಾರೆ ಮೀಸಲಾತಿ ವಿಚಾರದಲ್ಲಿ ಕಠಿಣ ನಿಧಾ೯ರ ಇವೆಲ್ಲವೂ ಅವರ ಮೇಲಿನ ಅಪವಾದದ ಮಾತುಗಳು ಗಟ್ಟಿಯಾಗಿ ಕೇಳಿ ಬಂದಿದೆ.
ತಮ್ಮ ಆಡಳಿತದ ಕಾಲದಲ್ಲಿ ಭಾರತದ ಜೊತೆಗೆ ಉತ್ತಮ ಸಂಬಂಧ ಬೆಳೆಸಿಕೊಂಡು ಬಂದ ಹಸೀನಾರವರ ಪ್ರಾಣಕ್ಕೆ ಸಂಚಕಾರ ಬರುವ ಹೊತ್ತಿನಲ್ಲಿ ಅಧಿಕಾರ ತೊರೆದು ದೇಶದಿಂದ ಪಲಾಯನಗೈಯುವ ಸಂದರ್ಭದಲ್ಲಿ ಹಸೀನಾವರಿಗೆ ರಕ್ಷಣೆ ನೀಡಿ ಬ್ರಿಟನ್ ಕಡೆ ಮುಖ ಮಾಡಲು ಸಹಕರಿಸಿ ತನ್ನ ಕೃತಜ್ಞತೆಯನ್ನು ತೇೂರಿದೆ ಭಾರತ. ಇದು ಭಾರತದ ತೇೂರಿದ ಸೌಜನ್ಯ ನಡೆ ಎಂದೇ ಭಾವಿಸಬೇಕು.
ಮುಂದಿನ ದಿನಗಳಲ್ಲಿ ನಮ್ಮ ಮನೆಯ ಹತ್ತಿರದ ದೇಶವಾದ ಬಾಂಗ್ಲಾ ದೇಶದಲ್ಲಿ ಯಾವ ರೀತಿಯ ರಾಜಕೀಯ ಬದಲಾವಣೆಗಳು ಆಗ ಬಹುದು ಅನ್ನುವುದನ್ನು ನಾವು ಅತ್ಯಂತ ಜಾಗರೂಕತೆಯಿಂದ ಗಮನಿಸಲೇ ಬೇಕು. ಇಂದಿನ ಆ ದೇಶದ ಅತಂತ್ರ ಪರಿಸ್ಥಿತಿಯನ್ನು ಉಪಯೇೂಗ ಅಸ್ತ್ರವಾಗಿ ಪಾಕಿಸ್ತಾನ ಚೀನಾ ಬಳಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕಲಾರದು.
ಇಂದಿನ ಅರಾಜಕತೆಯ ಪರಿಸ್ಥಿತಿಯಿಂದಾಗಿ ಇನ್ನಷ್ಟು ಮಂದಿ ಭಾರತದ ಕಡೆ ವಲಸಿಗರಾಗಿ ನುಗ್ಗುವ ಸ್ಥಿತಿ ಬರಬಹುದು. ಈ ಕಡೆಗೂ ಕೇಂದ್ರ ಹೆಚ್ಚಿನ ಗಮನ ಹರಿಸಬೇಕು.
ನಮ್ಮ ಹತ್ತಿರದ ಬಾಂಗ್ಲಾ ದೇಶದಲ್ಲಿ ಆರೇೂಗ್ಯ ಉತ್ತಮವಾಗಿದ್ದರೆ ನಮಗೂ ನೆಮ್ಮದಿಯಿಂದ ನಿದ್ರೆ ಮಾಡಬಹುದು ಇಲ್ಲದಿದ್ದರೆ ಇನ್ನೊಂದು ಪಾಕಿಸ್ತಾನದ ದಾಯಾದಿಗಳು ಅಲ್ಲಿ ಹುಟ್ಟಿಕೊಂಡರು ಆಶ್ಚರ್ಯ ಪಡಬೇಕಾಗಿಲ್ಲ.
ದೇಶದ ಒಳಗೂ ಕೂಡಾ ಇಂತಹ ರಾಷ್ಟ್ರ ವಿರೇೂಧಿ ಘಟನೆಗಳು ನಡೆಯದ ಹಾಗೆ ಹೆಚ್ಚಿನ ಕಾಳಜಿ ವಹಿಸಿ ಸಮಚಿತ್ತದಿಂದ ಆಡಳಿತ ನಡೆಸಬೇಕಾದ ಅನಿವಾರ್ಯತೆ ನಮ್ಮ ಸರ್ಕಾರಗಳ ಮುಂದಿದೆ.
- ವಿಶ್ಲೇಷಣೆ: ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ