1) ಒತ್ತುವರಿ ವಿಚಾರದಲ್ಲಿ ಯಾವ ಸ್ಪಷ್ಟತೆಯನ್ನೂ ರೈತರಿಗೆ ತಲುಪಿಸಿಲ್ಲ. ಸ್ಪಷ್ಟ ಆದೇಶಗಳ ಕಾಪಿಗಳು ರೈತರನ್ನು ತಲುಪುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಇಲಾಖೆಗಳು ಮಾಡುತ್ತಿಲ್ಲ.
2) ಒತ್ತುವರಿ ತೆರವು ಮಾಡಲು ಒಂದು SOP ಮಾಡಿದಂತೆ ಕಾಣುತ್ತಿಲ್ಲ ಅಥವಾ ರೈತರಿಗೆ SOP ತಲುಪಿಲ್ಲ.
3) ಫಾರಂ 57 ಅರ್ಜಿ ಪಡೆಯುವಾಗ ಸ್ವಂತ ಹಿಡುವಳಿ ಸೇರಿ, ಒತ್ತುವರಿ ಜಮೀನು 5 ಎಕರೆ ಮೀರುವಂತಿಲ್ಲ ಎಂದು ತಿಳಿಸಲಾಗಿತ್ತು.
4) ಸರಕಾರದ ಭೂ ಕಂದಾಯ ಕಾಯ್ದೆ 1964 ರ ಪ್ರಕಾರವೂ ಒಟ್ಟು ಐದು ಎಕರೆ ಮೀರುವಂತಿಲ್ಲ ಎಂದಿದೆ. ನೋಡಿ ಕೆಳಗಿನ ಲಿಂಕ್: https://kandaya.karnataka.gov.in/info-2/Land+Grants/kn
5) ಅರಣ್ಯ ಭೂಮಿಯ ಒತ್ತುವರಿ ಆಗಿದ್ದರೆ ಈ ಮಿತಿ 3 ಎಕರೆ ಎಂದು ಸಚಿವರು ಹೇಳಿದ್ದು ವರದಿಯಾಗಿರುವುದು. ಇದಕ್ಕೆ ಅಧಿಕೃತ ಆದೇಶ ಕಾಪಿಗಳು ಎಲ್ಲಿವೆ?
6) ಲೀಸ್ಗೆ ಅವಕಾಶ ಕೊಡುವಾಗ ಈ ಮಿತಿಯನ್ನು 25 ಎಕರೆ ಎಂದು ತಿಳಿಸಲಾಗುತ್ತಿದೆ. ಆಗ ಈ ಎಲ್ಲ ಮಿತಿಗಳನ್ನು ಮೀರಿದಂತೆ ಆಗುತ್ತದಲ್ಲಾ? ಈ ಲೀಸ್ ವ್ಯವಹಾರ ಕೇವಲ ಕಾಫಿ ತೋಟಗಳಿಗೆ ಎಂದು ಹೇಳಲಾಗುತ್ತಿದೆ. ಕಾಫಿ ತೋಟಕ್ಕೆ ಕಾಫಿಯನ್ನು ಬೆಳೆದ ಒತ್ತುವರಿ ಜಮೀನನ್ನು ಲೀಸ್ಗೆ ಕೊಡಲಾಗುತ್ತದೆ ಅಂತಾದರೆ, ಲೀಸ್ಗೆ ಅರ್ಜಿ ಪಡೆದು, ಲೀಸ್ ಹಕ್ಕು ಪತ್ರ ಕೊಟ್ಟು, ನಂತರ 25 ಎಕರೆಗಿಂತ ಹೆಚ್ಚಿರುವ ಜಮೀನನ್ನು ಒತ್ತುವರಿ ತೆರವು ಕಾರ್ಯಾಚರಣೆಗೆ ಒಳಪಡಿಸಲಾಗುತ್ತದೆಯಾ?
7) ಕಾಫಿಗೆ ಮಾತ್ರ ಲೀಜ್ ಕೊಡುವುದೇಕೆ? ಟೀ, ಅಡಿಕೆ, ತೆಂಗು, ಜಾಯಿಕಾಯಿ, ಬಿದಿರು ಬೆಳೆಗಳಿಗೂ ಲೀಜ್ ಕೊಡಬಹುದಲ್ಲ? ಕಾಫಿಯನ್ನು ಯಾರೂ ದಟ್ಟವಾದ ಕಾಡನ್ನು ಉಳಿಸಿಕೊಂಡು ಬೆಳೆಯುವುದಿಲ್ಲ, ಬೆಳೆಯಲು ಸಾಧ್ಯವೂ ಇಲ್ಲ. ಅಂದಮೇಲೆ ಅಡಿಕೆ ತೋಟವೂ ಒಂದು ರೀತಿಯಲ್ಲಿ ಡೀಮ್ಡ್ ಫಾರೆಸ್ಟ್ (ಹೊಸ ಅರ್ಥದಲ್ಲಿ!!) ಅಲ್ವಾ? ಲೀಸ್ಗೆ ಕೊಡಬಹುದಲ್ವಾ? ಅದೇ ರೀತಿ ಮುರುಗ, ಜಾಯಿಕಾಯಿ, ಪೇರಲೆ, ತೆಂಗು, ಮೆಣಸು ವಿತ್ ಸಿಲ್ವರ್... ಆಗಲ್ವಾ?
8) ಒತ್ತುವರಿ ಭೂಮಿಯನ್ನು ತೆರವುಗೊಳಿಸಿದ ಮೇಲೆ ಒತ್ತುವರಿ ಅರಣ್ಯ ಬೂಮಿಯನ್ನು ಯಾವ ರೀತಿ ಬಳಸಲಾಗುತ್ತದೆ? ಬೇಲಿ ಹಾಕಲಾಗುತ್ತದೆಯಾ? ಜೆಸಿಬಿಯಿಂದ ಟ್ರೆಂಚ್ ಹೊಡೆದು ವಿಭಾಗ ಮಾಡಲಾಗುತ್ತದೆಯಾ? ಗಡಿ ಮಾಡಲಾಗುತ್ತದೆಯಾ? ಈಗಾಗಲೆ ಅಲ್ಲಿ ದಶಕಗಳಿಂದ ಬೆಳೆದಿರುವ ಕಾಫಿ, ಅಡಿಕೆ, ಮಾವು, ಹಲಸು, ಪೇರಲೆ, ಮುರುಗ, ತೆಂಗುಗಳನ್ನು ಕಡಿದು, ಹೊಸದಾಗಿ ಬೇರೆ ಯಾವುದೋ ಮರಗಳನ್ನು ಬೆಳೆಯಲಾಗುತ್ತದೆಯಾ? ಫಲ ಬಾರದೇ ಇರುವ ವೃಕ್ಷಗಳನ್ನು ಬೆಳೆಯುವ ಯೋಜನೆ ಇರಬಹುದಾ?
9) ಗೋಮಾಳ, ದರಗಿನ ಹಾಡ್ಯ, ಸೊಪ್ಪಿನ ಬೆಟ್ಟ, ಒಳಕಡೆ, ಸರಕಾರಿ ಜಾಗ, ಮನೆದಳ... ಇವುಗಳೆಲ್ಲ ಅರಣ್ಯ ಇಲಾಖೆಯವರ ಸುಪರ್ದಿಯಲ್ಲಿ ಇವೆಯಾ? ಕಂದಾಯ ಇಲಾಖೆಯಲ್ಲಿ ಇವೆಯಾ? ಕಂದಾಯ ಜಾಗ ಆಗಿದ್ದರೆ, ಅರಣ್ಯ ಇಲಾಖೆಯವರು ಒತ್ತುವರಿ ತೆರವು ಕಾರ್ಯ ಮಾಡಲು ಸಾಧ್ಯವೆ?
10) ಗೋಮಾಳ, ದರಗಿನ ಹಾಡ್ಯ, ಸೊಪ್ಪಿನ ಬೆಟ್ಟಗಳನ್ನು ಅರಣ್ಯ ಬೆಳೆಸಲು ಬಳಸಿದರೆ, ಗೋಮಾಳ, ದರಗಿನ ಹಾಡ್ಯ, ಸೊಪ್ಪಿನ ಬೆಟ್ಟಗಳ ಮೂಲ ಉದ್ದೇಶ ಹಾಳಾದಂತಾಗುವುದಿಲ್ಲವೆ? ಹೈನುಗಾರಿಕೆ, ಸಾವಯವಗೊಬ್ಬರಗಳ ಮೇಲೆ ಪ್ರಭಾವ ಬೀರುವುದಿಲ್ಲವೆ?
11) ಪೂಜಾ ಬನ (ನಾಗ ಬನ, ಬ್ರಹ್ಮ ಬನ, ಚೌಡಿ ಬನ) ಗಳನ್ನು ಅರಣ್ಯವಾಗಿಸಿದ ಮೇಲೆ ಸೆಕ್ಷನ್ 17 ಪ್ರಕಾರ ಅಲ್ಲಿಗೆ ಮನುಷ್ಯನ ಪ್ರವೇಶ ನಿಷೇಧ ಮಾಡಲಾಗುತ್ತದಂತೆ? ಹಾಗೆ ಮಾಡಿದರೆ ನಾಗ, ಬ್ರಹ್ಮ, ಚೌಡಿ, ರಣ ದೇವರುಗಳ ಪೂಜೆ ನಿಲ್ಲುವಂತಾದರೆ? ಧಾರ್ಮಿಕ ಸ್ವಾತಂತ್ರ್ಯ ಹರಣ ಆಗುವುದಿಲ್ಲವೆ?
12) ಐದಾರು ವರ್ಷಗಳ ಹಿಂದೆ ಅರಣ್ಯ ಪ್ರದೇಶವನ್ನು ಮನುಷ್ಯರಿಂದ ಬೇರ್ಪಡಿಸುವ, ಮನುಷ್ಯರ ಪ್ರವೇಶ ನಿಷೇಧಿಸುವ ಉದ್ದೇಶದಿಂದ ಟ್ರೆಂಚ್ (ಅಗಳು) ಹೊಡೆಯುವ ಕೆಲಸ ಕೆವು ಕಡೆ ಆಗಿದೆ. ಹಾಗೆ ಮಾಡುವಾಗ ಅನೇಕ ಸಸ್ಯ, ಮರಗಳನ್ನು ಕಡಿದು ಅಗಳು ಮಾಡಲಾಯಿತು. ಅಗಳು ಮಾಡಿದಲ್ಲೂ, ಅದರ ಮಣ್ಣು ಎತ್ತಿ ಹಾಕಿದಲ್ಲೂ ಗಿಡ ಮತ್ತು ಮಧ್ಯಮ ಗಾತ್ರದ ಮರಗಳು ನಾಶವಾದವು. ಇದ್ಯಾವ ವೈಜ್ಞಾನಿಕ ಅರಣ್ಯೀಕರಣ?
13) ಫಿಸಿಕಲ್ ವೆರಿಫಿಕೇಷನ್ ಆಗಬೇಕು ಅಂತಾಗಿತ್ತು. ಅದಾಯ್ತಾ?
14) ಜಾಯಿಂಟ್ ಸರ್ವೆ ಮಾಡಿ (ಅರಣ್ಯ, ಕಂದಾಯಗಳ ಸಹಯೋಗದಲ್ಲಿ ರೈತರ ಉಪಸ್ಥಿತಿಯೊಂದಿಗೆ. ಅದಾಗಿದೆಯಾ?
15) ಅರಣ್ಯ, ಕಂದಾಯ, ಗೋಮಾಳ, ಸೊಪ್ಪಿನ ಬೆಟ್ಟ... ಇತ್ಯಾದಿಗಳನ್ನು ದಾಖಲಿಸಿದ ಒಂದು ಸಿಂಗಲ್ ಮತ್ತು ಸ್ಪಷ್ಟವಾದ ನಕಾಶೆ/ಮ್ಯಾಪ್/ಸ್ಕೆಚ್/ಡ್ರಾಯಿಂಗ್ ಸರಕಾರದ ಬಳಿ ಇದೆಯಾ? ಅದನ್ನು GPS ಡಿಜಿಟಲ್ ಫಾರ್ಮ್ಗೆ ತರಲಾಗಿದೆಯಾ?
16) ಲ್ಯಾಂಡ್ ಬೀಟ್ ಆ್ಯಪ್ ಕತೆ ಏನಾಯ್ತು?
17) ನಿಯಮಾನುಸರ, ವಿಧಾನಸಭೆಯಲ್ಲಿ ಅನುಮೋದನೆ ಆಗಿರುವಂತೆ, ಅದರ ಆಧಾರದ ಮೇಲೆ ಪಡೆದ ಅರ್ಜಿಗಳಾದ 50, 53, 57, 94cಗಳನ್ನು ಕ್ಲಿಯರ್ ಮಾಡಿ, ನಂತರ ಉಳಿದ ಎಲ್ಲ ಒತ್ತುವರಿಗಳನ್ನು ಅರಣ್ಯಕ್ಕೋ, ಕಂದಾಯಕ್ಕೋ ಸೇರಿಸಿ, ಎಲ್ಲವುದನ್ನೂ ಡಿಜಿಟಲೀಕರಣ ಮಾಡಿ, ಡಿಜಿಟಲ್ ಬೇಲಿ ಮಾಡಿ, ಮತ್ತೆ ಒತ್ತುವರಿಗೆ ಅವಕಾಶವಿಲ್ಲದಂತೆ ಶಾಸನ ತಂದು ಎಲ್ಲಾ ಗೊಜಲುಗಳಿಗೂ, ತೋಳ ಬಂತು ತೋಳ ಕತೆಗೂ ಮುಕ್ತಾಯ ಕೊಡಬಹುದಲ್ವಾ?
18) ಅಕೇಶಿಯ ಬೆಳೆಯಲು ಕೊಟ್ಟ ಭೂಮಿಯನ್ನು ಹಿಂಪಡೆದು, ಅಲ್ಲಿ ಸಹಜ ಕಾಡು ಬೆಳೆಸಲು ಏಕೆ ಕ್ರಮ ಕೈಗೊಳ್ಳದೆ, ಪರಿಸರ ಸೂಕ್ಷ್ಮ ಪ್ರದೇಶವನ್ನು ಮತ್ತಷ್ಟು ಹಾಳು ಮಾಡಲಾಗುತ್ತಿದೆ?
19) ನದಿಗಳಿಂದ ಅಕ್ರಮ ಮರಳು ನಿಲ್ಲಿಸಲಾಗುತ್ತಿಲ್ಲ, ರಸ್ತೆ ಅಗಲ ಮಾಡುವಾಗ ವೈಜ್ಞಾನಿಕ ಧರೆ ಕಡಿಯುವ ಕ್ರಮ ಗೊತ್ತಿಲ್ಲ, ವಿಪರೀತವಾಗಿ ಬೆಳೆವಣಿಗೆ ಆಗುತ್ತಿರುವ ಮಂಗಗಳ ಸಂತತಿಗೆ ಒಂದು ಕುಟುಂಬಯೋಜನೆ ತರಲು ಗೊತ್ತಾಗುತ್ತಿಲ್ಲ- ಇದು ವ್ಯವಸ್ಥೆ.
20) ಕಾನೂನಿನ ನಿಷೇಧ ಇದ್ದರೂ ಏಕ ಬಳಕೆ ಪ್ಲಾಸ್ಟಿಕ್, 50 ಮೈಕ್ರಾನ್ ಪ್ಲಾಸ್ಟಿಕೆ ಬಳಕೆ ತಡೆಯಲು ಯೋಜನೆಗಳಿಲ್ಲ, ಪ್ಲಾಸ್ಟಿಕ್ಗಳು ಅರಣ್ಯದಲ್ಲಿ ಒಂದು ಪದರ ನಿರ್ಮಿಸುತ್ತ ಜೀವಜಾಲವನ್ನೂ, ಅರಣ್ಯವನ್ನೂ ನಾಶ ಮಾಡುತ್ತಿದ್ದರೂ, ಗ್ಲೋಬಲ್ ವಾರ್ಮಿಂಗ್ ಏರುತ್ತಿದ್ದರೂ ಪ್ಲಾಸ್ಟಿಕ್ ನಿಯಂತ್ರಣ ಮಾಡಲಾಗುತ್ತಿಲ್ಲ- ಇದು ಪರಿಸ್ಥಿತಿ.
ಒಟ್ಟಿನಲ್ಲಿ ಯಾವ ಮಾಹಿತಿಗಳು ಸ್ಪಷ್ಟವಾಗಿ ಇಲ್ಲ. ಯಾವ ಪ್ರಶ್ನೆಗಳಿಗೂ ಉತ್ತರ ಇಲ್ಲ. ದಿಟ್ಟ ಕ್ರಮಗಳಿಲ್ಲ, ಸ್ಪಷ್ಟತೆ ಇಲ್ಲ. ಕ್ರಮ ಬದ್ದ ಯೋಜನೆಗಳಿಲ್ಲ, SOP ಇಲ್ಲ.
ಮಲೆನಾಡಿನ ಜ್ಞಾನ ಇಲ್ಲದವರು ಮಲೆನಾಡಿನ ಡ್ರೈವ್ ಮಾಡಲಿಕ್ಕೆ ಕೂತಿದಾರೆ!! ಮಲೆನಾಡೆಂಬ ಭೂ ಕುಸಿತ ಆಗ್ತಾ ಇದ್ರೆ ಅದಕ್ಕೆ ಕಾರಣ ಮಲೆನಾಡಿನವರಲ್ಲ, ಚಾಲನೆ ಗೊತ್ತಿಲ್ಲದವರು ಚಾಲಕನ ಸ್ಥಾನದಲ್ಲಿ ಕುಳಿತು ಎಕ್ಸ್ಲೇಟರ್, ಕ್ಲಚ್ಚು ತುಳಿಯುತ್ತ ಆಟ ಆಡುತ್ತಿರುವುದು!!!
ಇಂತಹ ರನ್ನಿಂಗ್ನಲ್ಲಿರುವ ಗಾಡಿಯ ಮುಂದೆ ರೈತ ಸಿಕ್ಕಿ ಹಾಕಿಕೊಂಡಿದ್ದಾನೆ.
ಅಷ್ಟೆ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ