ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಅಧ್ಯಾಪಕರಾಗಿ ಕಳೆದ ಮೂರು ದಶಕಗಳಿಂದ ಸೇವೆಯನ್ನು ಸಲ್ಲಿಸುತ್ತಿರುವ ಡಾ. ಶ್ರೀಧರ ಭಟ್ಟ ಇವರ ಸರ್ವಾಂಗೀಣ ಕೊಡುಗೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯು ಇವರಿಗೆ ವೃತ್ತಿ ಪದೋನ್ನತಿಯನ್ನು ಮಂಜೂರು ಮಾಡಿದೆ.
ಡಾ. ಶ್ರೀಧರ ಭಟ್ಟ ಇವರು ಉಜಿರೆಯ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ತದನಂತರ ಸಹ ಪ್ರಾಧ್ಯಾಪಕರಾಗಿ, ಕಾಲೇಜಿನ ವಿವಿಧ ಹಂತದ ಚಟುವಟಿಕೆಗಳಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿ ಸಂಸ್ಥೆಯ ಏಳಿಗೆಗೆ ಶ್ರದ್ಧೆಯಿಂದ ದುಡಿದವರು. ಇವರು ಕಾಲೇಜಿನ ಪಠ್ಯ ಮತ್ತು ಪಠ್ಯೇತರ ವಿವಿಧ ಸಮಿತಿಗಳಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಜೊತೆಗೆ ಸಂಸ್ಕೃತ ವಿಭಾಗದ ಅಧ್ಯಾಪಕರಾಗಿ, ಸಂಸ್ಕೃತ ಪ್ರಸಾರ ಪ್ರಚಾರದಲ್ಲಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವರು.
ಕಾಲೇಜಿನ ಎನ್ ಸಿ ಸಿ ನೌಕಾ ವಿಭಾಗದ ಅಧಿಕಾರಿಯಾಗಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದನ್ನು ಗುರುತಿಸಿ ಮುಖ್ಯಮಂತ್ರಿಗಳ ಪ್ರಶಂಸಾ ಪತ್ರ ಮತ್ತು ಡೆಪ್ಯೂಟಿ ಡೈರೆಕ್ಟರ್ ಜನರಲ್ ಕರ್ನಾಟಕ & ಗೋವಾ ವಿಭಾಗದ ಅಧಿಕಾರಿಗಳಿಂದ ವಿಶೇಷ ಪ್ರಶಂಸಾಪತ್ರ ದೊರಕಿರುತ್ತದೆ. ಅನೇಕ ಸೆಮಿನಾರು ಗಳನ್ನು ಸಂಯೋಜಿಸಿ, ಹಲವು ಸೆಮಿನಾರುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಹಲವು ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿಯ ಸದಸ್ಯರಾಗಿ, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ.
ಡಾ. ಶ್ರೀಧರ ಭಟ್ಟ ಇವರ ಸಂಶೋಧನಾ ಲೇಖನಗಳ ಪ್ರಕಟಣೆಯನ್ನು, ಹಲವು ಪುಸ್ತಕ ಮತ್ತು ಲೇಖನಗಳ ಕೊಡುಗೆಯನ್ನು, ವಿಶೇಷವಾಗಿ ವಿದ್ಯಾರ್ಥಿಗಳಿಗೆ ನವೀನ ಮಾದರಿಯಲ್ಲಿ ಪಾಠ ಪ್ರವಚನ ಗಳನ್ನು ಮಾಡುವುದನ್ನು, ಹಾಗೆಯೇ ಸಭೆ- ಸಮಾರಂಭಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೈಗೊಂಡ ಜ್ಞಾನ ಪ್ರಸಾರ ಕಾರ್ಯಗಳೆಲ್ಲವನ್ನು ಗುರುತಿಸಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಇವರಿಗೆ ಪ್ರೊಫೆಸರ್ ಎಂಬ ವೃತ್ತಿ ಪದೋನ್ನತಿಯನ್ನು ನೀಡಿ ಅಧಿಕೃತ ಸೂಚನೆ ಹೊರಡಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ