ಅಧ್ಯಾತ್ಮ ರಾಮಾಯಣ- 17: ಹನುಮ ದೌತ್ಯ, ಸುಗ್ರೀವ ಮೈತ್ರಿ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ 



ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ



ಟುವೇಷದ ಹನುಮನು- ನಾನು ವಾಯುಪುತ್ರ, ಅಂಜನಾದೇವಿಯ ಮಗ- ಆಂಜನೇಯ  ಹನುಮಂತನೆಂದು ಪ್ರಸಿದ್ಧ. ಇಲ್ಲೇ, ಆ ಬೆಟ್ಟದ ಮೇಲೆ ಕಪಿರಾಜನಾದ ಸುಗ್ರೀವನಿದ್ದಾನೆ. ನಾನು ಅವನ ಮಂತ್ರಿ. ನಾವು ನಾಲ್ವರು ಮಂತ್ರಿಗಳು ಅವನೊಂದಿಗಿದ್ದೇವೆ. ಸುಗ್ರೀವನು ಕಿಷ್ಕಿಂಧೆಯ ರಾಜ ವಾಲಿಯ ತಮ್ಮ. ಪಾಪಿಷ್ಠ ವಾಲಿಯು ತನ್ನ ತಮ್ಮ ಸುಗ್ರೀವನನ್ನು ರಾಜ್ಯದಿಂದ ಓಡಿಸಿ ಅವನ ಮಡದಿಯನ್ನು ತನ್ನವಳನ್ನಾಗಿರಿಸಿಕೊಂಡಿದ್ದಾನೆ. ಹೇ! ರಾಮ   ನೀನು ಸುಗ್ರೀವನೊಂದಿಗೆ ಗೆಳೆತನವನ್ನು ಬೆಳೆಸಿದರೆ ಅವನು ನಿನ್ನ ಪತ್ನಿಯನ್ನು ಕದ್ದೊಯ್ದವನನ್ನು ಕೊಲ್ಲಲು ನಿನಗೆ ಸಹಾಯಕನಾಗುವನು. ನೀನು ಬಯಸಿದರೆ ಈಗಲೇ ನಿಮ್ಮಿಬ್ಬರನ್ನು ಅವನ ಬಳಿಗೆ ಕರೆದೊಯ್ಯುವೆನು- ಎಂದು ರಾಮನಲ್ಲಿ ಹೇಳಿದ. ರಾಮನು ಹನುಮನ ಮಾತಿಗೆ ಸಮ್ಮತಿಸಿ- ನಾನೂ ಅವನ ಸ್ನೇಹವನ್ನು ಬಯಸುತ್ತಿದ್ದೇನೆ. ಅವನ ಕಾರ್ಯವೇನಿದೆಯೋ ಅದನ್ನು ಖಂಡಿತವಾಗಿಯೂ ನಡೆಸಿಕೊಡುತ್ತೇನೆ. ನಮ್ಮನ್ನು ಅವನ ಬಳಿಗೆ ಕರೆದುಕೊಂಡು ಹೋಗು- ಎಂದನು. ಹನುಮನು ತನ್ನ ನಿಜರೂಪವನ್ನು ತೋರಿಸಿ, ಅವರನ್ನು ತನ್ನ ಭುಜದ ಮೇಲೆ ಕುಳಿತುಕೊಳ್ಳಿಸಿ ಬೆಟ್ಟದ ತುದಿಯನ್ನು ತಲುಪಿದನು.


ರಾಮ- ಲಕ್ಷ್ಮಣ, ಹನುಮ- ಸುಗ್ರೀವರು ಮರದ ಗೆಲ್ಲನ್ನೇ ಮುರಿದು ಉಚಿತವಾದ ಆಸನವನ್ನಾಗಿಸಿ ಅದರಲ್ಲಿ ಕುಳಿತುಕೊಂಡರು. ಸುಗ್ರೀವನು ರಾಮ- ಲಕ್ಷ್ಮಣರನ್ನು ಉಪಚರಿಸಿ ಅವರ ಕುರಿತು ಕೇಳಿದ. ಆಗ ಲಕ್ಷ್ಮಣನು ಅಯೋಧ್ಯೆಯಿಂದ ತೊಡಗಿ ಸೀತಾಪಹರಣದ ವರೆಗೆ ನಡೆದ ಎಲ್ಲ ವೃತ್ತಾಂತವನ್ನು ಸುಗ್ರೀವನಿಗೆ ಹೇಳಿದ. 


ಸುಗ್ರೀವನು ಸೀತೆಯನ್ನು ಮರಳಿ ಪಡೆಯಲು ತಾನು ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಹೇಳಿದನು. ಬಳಿಕ ಸೀತೆಯನ್ನು (ನಾರಿಯನ್ನು) ಆಕಾಶಮಾರ್ಗದಲ್ಲಿ ಒಬ್ಬನು ಸೆಳೆದೊಯ್ಯುತ್ತಿದ್ದುದು, ಅವಳು ರಾಮ ರಾಮ ಎಂದು ಅಳುತ್ತಿದ್ದುದು, ನಮ್ಮನ್ನು ಕಂಡ ಕೂಡಲೇ ತನ್ನ ಒಡವೆಗಳ ಕಳಚಿ, ಬಟ್ಟೆಯಲ್ಲಿ ಸುತ್ತಿ ಕಟ್ಟಿ ನಮ್ಮತ್ತ ಎಸೆದದ್ದು- ಇವುಗಳನ್ನು ಹೇಳಿದ. ಬಳಿಕ ಸುಗ್ರೀವನು ತನಗೆ ಸಿಕ್ಕಿರುವ ಒಡವೆಗಳ ಗಂಟನ್ನು ತಂದು ಅದನ್ನು ಗುರುತಿಸಲು ರಾಮನಿಗೆ ಒಪ್ಪಿಸಿದನು.ಆಭರಣಗಳನ್ನು ಗುರುತಿಸಿದ ರಾಮನು ಅವುಗಳನ್ನು ತನ್ನೆದೆಗೆ ಒತ್ತಿಕೊಂಡು ಸಾಮಾನ್ಯ ಮಾನವನಂತೆ ಅಳತೊಡಗಿದನು. ಲಕ್ಷ್ಮಣ- ಸುಗ್ರೀವರು ರಾಮನನ್ನು ಸಂತೈಸಿದರು. ಸುಗ್ರೀವನು  ರಾವಣನನ್ನು ಕೊಂದು ಸೀತೆಯನ್ನು ಮರಳಿ ತರುವ ಪ್ರತಿಜ್ಞೆಯನ್ನು ಮಾಡಿದನು. ಆಗ ಹನುಮನು ರಾಮ- ಸುಗ್ರೀವರ ನಡುವೆ ಇರುವ ಸ್ಥಳದಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿದನು. ಅಗ್ನಿಸಾಕ್ಷಿಯಾಗಿ ಅವರಿಬ್ಬರು ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಗೆಳೆಯರಾದರು.



ಸುಗ್ರೀವನು ತನ್ನ ನೋವಿನ ಕತೆಯನ್ನು ಹೇಳಿದನು- "ಮಾಯಾವಿ ರಾಕ್ಷಸನು ಮಯನ ಮಗ. ಅವನು ಒಮ್ಮೆ ಕಿಷ್ಕಿಂಧೆಗೆ ಬಂದು ಸಿಂಹನಾದವನ್ನು ಮಾಡಿ ವಾಲಿಗೆ ಯುದ್ಧದ ಆಹ್ವಾನವನ್ನು ನೀಡಿದ. ನಾವಿಬ್ಬರು ಅವನನ್ನು ಬೆನ್ನಟ್ಟಿದೆವು. ಅವನು ಪರ್ವತದ ಗುಹೆಯೊಂದನ್ನು ಹೊಕ್ಕನು. ನನ್ನನ್ನು ಗುಹೆಯ ಬಾಗಿಲಲ್ಲಿ ಕಾವಲಿರಲು ಹೇಳಿ ಅಣ್ಣನು ಅವನೊಡನೆ ಯುದ್ಧ ಮಾಡಲು ಗುಹೆಯನ್ನು ಹೊಕ್ಕನು. ಒಂದು ತಿಂಗಳ ಕಾಲ ಯುದ್ಧ ನಡೆಯಿತು. ಬಳಿಕ ಗುಹೆಯೊಳಗಿನಿಂದ ನೆತ್ತರು ಹರಿದು ಬಂತು. ಅಣ್ಣನ ಸುಳಿವಿಲ್ಲ. ಅವನನ್ನು ರಕ್ಕಸನು ಕೊಂದಿರಬಹುದೆಂದು ಭಾವಿಸಿದೆ. ರಾಕ್ಷಸನು ಗುಹೆಯಿಂದ ಹೊರಬರದಂತೆ ದೊಡ್ಡ ಬಂಡೆಯಿಂದ ಗುಹೆಯ ಬಾಯಿ ಮುಚ್ಚಿ ನಗರಕ್ಕೆ ಬಂದು ಅಣ್ಣನು ಸತ್ತು ಹೋದ ವಿಷಯವನ್ನು ಎಲ್ಲರಿಗೆ ತಿಳಿಸಿದೆ. ಬೇಡಬೇಡವೆಂದರೂ ನನ್ನನ್ನು ಪಟ್ಟದಲ್ಲಿರಿಸಿದರು. ರಾಜ್ಯವನ್ನಾಳುತ್ತಿದ್ದೆ. ಕೆಲವು ಸಮಯದ ಬಳಿಕ ಅಣ್ಣ ಬಂದ,ನಾನು ಮಾಡದ ತಪ್ಪನ್ನು ಮಾಡಿದ್ದೇನೆಂದು ತಪ್ಪಾಗಿ ತಿಳಿದು ನನ್ನನ್ನು ಪ್ರಾಣಹೋಗುವ ರೀತಿಯಲ್ಲಿ ಗುದ್ದಿದ. ಊರೂರು, ಲೋಕ-ಲೋಕಗಳನ್ನು ಸುತ್ತಿದೆ. ಅವನು ಬೆಂಬಿಡಲಿಲ್ಲ. ಕೊನೆಗೆ ಅವನು ಕಾಲಿಡಲು ಸಾಧ್ಯವಿಲ್ಲದ ಈ ಋಷ್ಯಮೂಕ ಪರ್ವತದಲ್ಲಿ ನೆಲೆನಿಂತೆ. ಈ ಪರ್ವತಕ್ಕೆ ಕಾಲಿಡದಂತೆ ಅವನಿಗೆ ಋಷಿಗಳ ಶಾಪವಿದೆ. ನನ್ನ ಹೆಂಡತಿಯನ್ನು ಅವನು ಬಲಾತ್ಕಾರದಿಂದ ಅನುಭವಿಸುತ್ತಿದ್ದಾನೆ. ನಿನ್ನ- ನನ್ನ ಸ್ಥಿತಿಯು ಒಂದೇ ಆಗಿದೆ. ನಾವಿಬ್ಬರು ಸಮಾನ ದುಃಖಿಗಳು" ಎಂದನು.


ಶ್ರೀರಾಮನು ವಾಲಿಯನ್ನು ಸಂಹರಿಸುವುದಾಗಿ ಪ್ರತಿಜ್ಞೆಯನ್ನು ಮಾಡಿದನು. ಸುಗ್ರೀವನಿಗೆ ರಾಮನ ಶಕ್ತಿ-ಸಾಮರ್ಥ್ಯದ ಬಗೆಗೆ ಸಂಶಯ ಮೂಡಿತು. ಋಷ್ಯಮೂಕ ಪರ್ವತಕ್ಕೆ ವಾಲಿಯು ಬರದಂತಾಗಲು ದುಂದುಭಿ ರಾಕ್ಷಸನ್ನು ವಾಲಿಯು ಕೊಂದು ಮತಂಗ ಮುನಿಗಳ ಆಶ್ರಮದ ಪ್ರದೇಶದಲ್ಲಿ ಆತನನ್ನು ಕೊಂದೆಸೆದುದು ಆಗಿತ್ತು. ಇದರಿಂದ ಸಿಟ್ಟಿಗೆದ್ದ ಮುನಿಗಳು- ಒಂದೊಮ್ಮೆ ಆಶ್ರಮವನ್ನು ಅಪವಿತ್ರಗೊಳಿಸಿದ ವಾಲಿಯು ಋಷ್ಯಮೂಕ ಪರ್ವತಪ್ರದೇಶಕ್ಕೆ ಕಾಲಿಟ್ಟಿದ್ದೇ ಆದರೆ ಅವನು ತಲೆಯೊಡೆದು ಸಾಯಲಿ" ಎಂದು ಶಪಿಸಿದರು. ವಾಲಿಗಿತ್ತ ಮುನಿಯ ಶಾಪ ಸುಗ್ರೀವನಿಗೆ ವರವಾಯಿತು, ಸುರಕ್ಷಿತ ನೆಲೆಯಾಯಿತು! ದುಂದುಭಿಯ ದೊಡ್ಡದಾದ ತಲೆಯನ್ನು ತೋರಿಸಿ ಸುಗ್ರೀವನು- ಅದನ್ನೆಸೆಯುವಲ್ಲಿ ನೀನು ಯಶಸ್ವಿಯಾದರೆ; ನೀನು ವಾಲಿಯನ್ನು ವಧಿಸುವಲ್ಲಿ ಯಶಸ್ವಿಯಾಗುವೆ- ಎಂದು ರಾಮನಿಗೆ ಹೇಳಿದ. ರಾಮನು ಏನೇನೂ ಶ್ರಮ ಪಡದೆ ಕೇವಲ ತನ್ನ ಕಾಲಿನ ಹೆಬ್ಬೆರಳಿನ ತುದಿಯಿಂದ ಆ ತಲೆಯನ್ನು ಹಾರಿಸಿ ಹತ್ತು ಯೋಜನ ದೂರಕ್ಕೆಸೆದನು! ಸುಗ್ರೀವನು ಮೂಗಿನ ಮೇಲೆ ಬೆರಳಿಟ್ಟನು!


ಆ ಬಳಿಕ ವಾಲಿಯು ಅಳ್ಳಾಡಿಸಿ ಎಲೆಗಳನ್ನುದುರಿಸುತ್ತಿದ್ಡ ಏಳು ತಾಳೆಯ ಮರಗಳನ್ನು ತೋರಿಸಿ- ಇವನ್ನು ನೀನು ಒಂದೇ ಬಾಣದಿಂದ ಕತ್ತರಿಸಿಹಾಕಬಲ್ಲೆ ಎಂದಾದರೆ ನೀನು ಗೆದ್ದಂತೆಯೇ- ಎಂದು ರಾಮನಿಗೆ ಹೇಳಿದ. ರಾಮನು ಹೂಡಿದ ಬಾಣವು ಏಳು ತಾಳೆಯ ಮರಗಳನ್ನು ಕತ್ತರಿಸಿ, ಭೂಮಿಯನ್ನು ಸೇರಿ ಮತ್ತೆ ಮರಳಿ ಬಂದು ಬತ್ತಳಿಕೆಯನ್ನು ಸೇರಿತು. ರಾಮಸಾಮರ್ಥ್ಯದ ಮೇಲೆ ಸುಗ್ರೀವನಿಗೆ ವಿಶ್ವಾಸ ಮೂಡಿತು. ತನಗೆ ಗೆಲುವು ಶತಸಿದ್ಧವೆಂಬುದನ್ನು ಕಂಡುಕೊಂಡನು. ಸುಗ್ರೀವನ ಕಣ್ಣಿಗೆ ರಾಮನು ದೇವರಾಗಿ ಕಂಡುಬಂದನು. ಸುಗ್ರೀವನು ಭಕ್ತಿಯಿಂದ ರಾಮನನ್ನು ಸ್ತುತಿಸಿ ರಾಮಾಶ್ರಯ- ರಾಮನಸೇವೆಯನ್ನು ಪ್ರಾರ್ಥಿಸಿದನು. ರಾಮನು ಸುಗ್ರೀವನನ್ನು ಹರಸಿದನು.


ಮುಂದುವರಿಯುವುದು....

- ವಿಶ್ವ ಉಂಡೆಮನೆ, ಬೆಳ್ತಂಗಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top